DAKSHINA KANNADA
ಬಂಟ – ಬಿಲ್ಲವರ ನಡುವೆ ಫೈಟ್…! ಜಾತಿ ಲೆಕ್ಕಾಚಾರ ಯಾರಿಗೆಷ್ಟು ಲಾಭ..?
ಮಂಗಳೂರು : ಕಳೆದ ಮುವತ್ತ ಮೂರು ವರ್ಷಗಳಲ್ಲಿ ( 1991 ರಿಂದ 2024 ) ರವರಗೆ ದಕ್ಷಿಣ ಕನ್ನಡ ( ಮಂಗಳೂರು ) ಲೋಕಸಭಾ ಕ್ಷೇತ್ರವನ್ನು ಬಿಜೆಪಿ ತನ್ನ ಹಿಡಿತದಲ್ಲೇ ಇಟ್ಟುಕೊಂಡಿದೆ. ದನಂಜಯ ಕುಮಾರ್ ಅವರಿಂದ ಆರಂಭಗೊಂಡಿದ್ದ ಬಿಜೆಪಿಯ ಜೈತ್ರಯಾತ್ರೆ ಸಂಸದ ನಳಿನ್ ಕುಮಾರ್ ಕಟೀಲ್ ವರೆಗೂ ತಲುಪಿದೆ. ಆದ್ರೆ ಬಿಜೆಪಿಯ ಈ ಜೈತ್ರಯಾತ್ರೆ ಈ ಚುನಾವಣೆಯಲ್ಲಿ ಕೊನೆಯಾಗಲಿದೆಯಾ ಅನ್ನೋ ಬಲವಾದ ಅನುಮಾನ ಮೂಡಿಸಿದೆ. ಇದಕ್ಕೆ ಕಾರಣ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಆರಂಭವಾಗಿರೋ ಬಿಲ್ಲವ – ಬಂಟ ಸಮೂದಾಯದ ಫೈಟ್.
ಒಂದು ಲೈಟ್ ಕಂಬ ನಿಲ್ಲಿಸಿದ್ರೂ ಬಿಜೆಪಿಗೆ ಜನ ಮತ ಹಾಕ್ತಾರೆ ಅಂತ ಹೇಳುತ್ತಿದ್ದ ಬಿಜೆಪಿ ಪಕ್ಷಕ್ಕೆ ಈ ಬಾರಿ ಗೆಲುವು ಅಷ್ಟೊಂದು ಸಲೀಸಲ್ಲ ಅನ್ನೋದು ಪಕ್ಕಾ ಆಗಿದೆ. ಸದಾ ಸೋಲನ್ನೇ ಸೆರಗಲ್ಲಿ ಕಟ್ಟಿಕೊಂಡು ಕಳೆದ 8 ಲೋಕಸಭಾ ಚುನಾವಣೆಯನ್ನು ಸೋತಿರುವ ಕಾಂಗ್ರೆಸ್ಗೆ ಈಗಿನ ಅಭ್ಯರ್ಥಿ ಪದ್ಮರಾಜ್ ಪೂಜಾರಿ ವರದಾನವಾಗಿದ್ದಾರೆ. ಒಂದು ಕಡೆ ಕಾಂಗ್ರೆಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿದ್ರೆ, ಮತ್ತೊಂದು ಕಡೆ ಯಾವುದೇ ಕಪ್ಪು ಚುಕ್ಕಿ ಇಲ್ಲದ ಪ್ರಭಲ ಬಿಲ್ಲವ ನಾಯಕ ಪದ್ಮರಾಜ್ ಪೂಜಾರಿ. ಪದ್ಮರಾಜ್ ಪೂಜಾರಿ ಅವರಿಗೆ ಟಿಕೆಟ್ ಕೊಟ್ಟಿರೋದು ಬಹುತೇಕ ಬಿಲ್ಲವ ಸಮಾಜದ ಯುವಕರಲ್ಲೇ ಸಂಚಲನ ಮೂಡಿಸಿದ್ದು , ಈ ಬಾರಿ ಎಲ್ಲವನ್ನೂ ಮರೆತು ತಮ್ಮ ಸಮಾಜದ ಅಭ್ಯರ್ಥಿಯನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ.
ಇದೇ ಮೊದಲ ಬಾರಿಗೆ ದ.ಕ.ಲೋಕಸಭಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ.
ರಾಜ್ಯದಲ್ಲಿ ಹಲವು ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳು ಜಾತಿ ಆದಾರದಲ್ಲೇ ಚುನಾವಣೆ ನಡೆಸುತ್ತದೆಯಾದ್ರೂ ದಕ್ಷಿಣ ಕನ್ನಡ ಜಿಲ್ಲೆ ಅದಕ್ಕೆ ಹೊರತಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಹ ಜಾತಿ ರಾಜಕೀಯಕ್ಕೆ ಜನರು ಇದುವರೆಗೂ ಮಣೆ ಹಾಕಿರಲಿಲ್ಲ. ಹಿಂದುತ್ವದ ಜೊತೆಗೆ ಕೆಲವೊಂದು ಬಾರಿ ಅಭಿವೃದ್ದಿಯ ಬಗ್ಗೆಯೂ ಮತ ಹಾಕಿದ ಕಾರಣ ಜಿಲ್ಲೆಯನ್ನು ಬುದ್ದಿವಂತರ ಜಿಲ್ಲೆ ಅಂತಾನೆ ರಾಜ್ಯದ ಎಲ್ಲಾ ಜನರು ಗುರುತಿಸಿದ್ದರು. ಆದ್ರೆ ಈ ಬಾರಿ ಮಾತ್ರ ಜಾತಿ ಲೆಕ್ಕಾಚಾರ ಜೋರಾಗಿ ನಡೆಯಲು ಆರಂಭಿಸಿದ್ದು, ಇದುವೆರೆಗೂ ಹಿಂದುತ್ವ… ಬಿಜೆಪಿ ಅಂತಿದ್ದ ಬಿಲ್ಲವ ಸಮೂದಾಯದ ಯುವಕರು ಪದ್ಮರಾಜ್ ಪರ ಒಲವು ತೋರಿಸ್ತಾ ಇದ್ದಾರೆ. ಹಾಗಂತ ಕ್ಷೇತ್ರದಲ್ಲಿ ಎಲ್ಲಾ ಬಿಲ್ಲವರು ಬದಲಾಗಿದ್ದಾರೆ ಅಂತ ಅಲ್ಲ… ಒಂದಷ್ಟು ಬದಲಾವಣೆ ಆಗಿದೆ ಅನ್ನೋದು ಖಚಿತ. ಆದ್ರೆ ಆ ಬದಲಾವಣೆ ಬಿಜೆಪಿ ಪಾಳಯದಲ್ಲಿ ನಡುಕ ಹುಟ್ಟಿಸಿದೆ ಅನ್ನೋ ವಿಚಾರ ಭಾರಿ ಚರ್ಚೆಯಲ್ಲಿದೆ.
ಹಿಂದುತ್ವದ ಭದ್ರಕೋಟೆಯಲ್ಲಿ ಬಿಜೆಪಿಯ ಏಳುಬೀಳು…
ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಭದ್ರಕೋಟೆ ಅನ್ನೋದು ಎಷ್ಟು ನಿಜವೋ ಆ ಭದ್ರ ಕೋಟೆಯಲ್ಲಿ ಒಂದೊಮ್ಮೆ ಕಾಂಗ್ರೆಸ್ ಏಳು ವಿಧಾನ ಸಭಾ ಕ್ಷೇತ್ರವನ್ನು ಗೆದ್ದುಕೊಂಡಿತ್ತು ಅನ್ನೋದು ಕೂಡಾ ಅಷ್ಟೇ ನಿಜ. 2004 ರಲ್ಲಿ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಏಳು ಕ್ಷೇತ್ರ ಬಿಜೆಪಿಯ ತೆಕ್ಕೆಯಲ್ಲಿತ್ತು. 2008 ಕ್ಕೆ ಈ ಸಂಖ್ಯೆ 4ಕ್ಕೆ ಇಳಿದಿದ್ದು 2013 ರಲ್ಲಿ ಬಿಜೆಪಿ ಸಂಪೂರ್ಣ ನೆಲಕಚ್ಚಿ ಕೇವಲ ಸುಳ್ಯ ಒಂದು ಕ್ಷೇತ್ರ ಮಾತ್ರ ಉಳಿಸಿಕೊಂಡಿತ್ತು. ಇದಾದ ಬಳಿಕ 2018 ರ ಚುನಾವಣೆಯಲ್ಲಿ ಮತ್ತೆ ಮೈ ಕೊಡವಿ ಮೇಲೆದ್ದ ಬಿಜೆಪಿ ಮತ್ತೆ 7 ಕ್ಷೇತ್ರ ಗೆದ್ದುಕೊಂಡಿತ್ತು. ಇನ್ನು ಇತ್ತೀಚೆಗೆ ನಡೆದ 2023 ರ ಚುನಾವಣೆಯಲ್ಲಿ ಭಿನ್ನಮತದ ಕಾರಣ ಪುತ್ತೂರು ಕ್ಷೇತ್ರವನ್ನು ಕೈ ಚೆಲ್ಲಿ 6 ಕ್ಷೇತ್ರಕ್ಕೆ ತೃಪ್ತಿ ಪಟ್ಟುಕೊಂಡಿದೆ. ಆದ್ರೆ 2023 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಮತಗಳಿಕೆಯ ಅಂತರ ಕೇವಲ ಶೇಖಡ 10.35% .
ಪ್ರತಿ ಚುನಾವಣೆಯಲ್ಲೂ ಮತ ಹಂಚಿಕೆಯಲ್ಲಿ ಬಿಜೆಪಿ ಪ್ರಾಭಲ್ಯ
ಇನ್ನು 2009 ರ ಲೋಕಸಭಾ ಚುನಾವಣೆಯಿಂದ 2019 ರ ಚುನಾವಣೆಯ ತನಕ ಎಲ್ಲಾ ಹಂತದಲ್ಲೂ ಬಿಜೆಪಿ ಮತಗಳಿಕೆಯಲ್ಲಿ ಗಣನೀಯವಾಗಿ ಏರಿಕೆ ಆಗಿದೆ.
* 2009 ರಲ್ಲಿ 13,46,662 ಮತದಾರರ ಪೈಕಿ 10,15,992 ಮತ ಚಲಾವಣೆ ಆಗಿತ್ತು. ಕೇವಲ 40,420 (3.98%) ಮತಗಳ ಅಂತರದಿಂದ ನಳಿನ್ ಕುಮಾರ್ ಮೊದಲ ಗೆಲುವು ಕಂಡಿದ್ದರು.
*2014 ಚುನಾವಣೆಯಲ್ಲಿ ಮೋದಿ ಹವಾ ಒಂದೆಡೆಯಾದ್ರೆ ಜಿಲ್ಲೆಯಲ್ಲಿ ಮತದಾರ ಸಂಖ್ಯೆ 15,65,240 ( 2,18,578 ಹೊಸ ಮತದಾರರು) ಏರಿಕೆಯಾಗಿದ್ದು, 12,07,583 ( 1,91,661 ಹೆಚ್ಚುವರಿ ) ಮತ ಚಲಾವಣೆ ಆಗಿತ್ತು. ಈ ಬಾರಿ ನಳಿನ್ ಕುಮಾರ್ ಕಟೀಲ್ ಗೆಲವಿನ ಅಂತರ 1,43,709 (11.90%)ಹೆಚ್ಚಾಗಿತ್ತು.
*2019 ರ ಚುನಾವಣೆಯಲ್ಲಿ ಮತದಾರರ ಸಂಖ್ಯೆ 17,24,458 (1,59,218 ಹೊಸ ಮತದಾರರು ) ಏರಿಕೆಯಾಗಿದ್ದು, 13,75,699 (1,37,456 ಹೆಚ್ಚುವರಿ ) ಮತ ಚಲಾವಣೆ ಆಗಿದೆ. ಈ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಗೆಲುವಿನ ಅಂತರ 2,75 255 ( 20%) ಆಗಿತ್ತು.
ಹೊಸ ಮತದಾರನ ಒಲವು ಬಿಜೆಪಿ ಕಡೆಗೆ…ಸಾಂಪ್ರದಾಯಿಕ ಮತ ಉಳಿಸಿಕೊಂಡ ಕಾಂಗ್ರೆಸ್
ಹೊಸ ಮತದಾರರು ಬಿಜೆಪಿ ಮತ ಹಾಕಿದ್ದಾರೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಆದರೆ 2009 ರಿಂದ 2019 ರ ಚುನಾವಣೆ ತನಕವೂ ಕಾಂಗ್ರೆಸ್ ಸಾಂಪ್ರದಾಯಿಕ ಮತಗಳು ಬಿಟ್ಟು ಹೋಗಿಲ್ಲ.
* 2009 ರಲ್ಲಿ ಕಾಂಗ್ರೆಸ್ ಗಳಿಸಿದ ಮತ 4,58,965
* 2014 ರಲ್ಲಿ ಕಾಂಗ್ರೆಸ್ ಗಳಿಸಿದ ಮತ 4,99,030
*2019 ರಲ್ಲಿ ಕಾಂಗ್ರೆಸ್ ಗಳಿಸಿದ ಮತ 4,99,664
ಈ ಎಲ್ಲಾ ಅಂಕಿ ಅಂಶಗಳನ್ನು ನೋಡಿದ್ರೆ ಬಿಜೆಪಿ ಇಲ್ಲಿ ಗೆಲ್ಲುವ ಫೇವರೆಟ್ ಪಕ್ಷ ಅನ್ನೋದ್ರಲ್ಲಿ ಎರಡು ಮಾತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಮರ್ಥ ಅಭ್ಯರ್ಥಿ ಆಗಿದ್ರೂ, ಹಿಂದುತ್ವ , ದೇಶ ಪ್ರೇಮದ ಭಾಷಣ ಮಾಡಿದ್ರೂ ಬಿಜೆಪಿ ಬೆಂಬಲಿಸುತ್ತಿದ್ದ ಬಿಲ್ಲವ ಸಮೂದಾಯದ ಒಂದಷ್ಟು ಯುವಕರು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದು ಗೆಲುವಿಗೆ ಅಡ್ಡಿ ಆಗುವ ಸಾಧ್ಯತೆ ಇದೆ.
1991 ರಿಂದ ಹಿಂದುತ್ವದ ಆದಾರದಲ್ಲೇ ಗೆಲುವು
1991 -1996- 1998- 1999 ರಾಷ್ಟ್ರ ರಾಜಕಾರಣದಲ್ಲಿ ನಡೆದ ರಾಜಕೀಯ ದ್ರುವೀಕರಣದಿಂದಾಗಿ ದನಂಜಯ ಕುಮಾರ್ 9 ವರ್ಷದಲ್ಲಿ ನಾಲ್ಕು ಚುನಾವಣೆಯನ್ನು ಎದುರಿಸಿ ಗೆದ್ದಿದ್ದರು. ಜಿಲ್ಲೆಯಲ್ಲಿ ಸಣ್ಣ ಸಂಖ್ಯೆಯಲ್ಲಿರುವ ಜೈನ ಧರ್ಮದವರಾಗಿದ್ದ ದನಂಜಯ ಕುಮಾರ್ ಅವರಿಗೆ ಧರ್ಮ ಜಾತಿ ನೋಡದೆ ಹಿಂದುತ್ವದ ಮತಗಳೇ ಗೆಲುವು ತಂದು ಕೊಟ್ಟಿತ್ತು.
80 ರ ದಶಕದಲ್ಲಿ ಸುಳ್ಯದಲ್ಲಿ ನಡೆದಿದ್ದ ಕೋಮುಗಲಭೆಯಲ್ಲಿ ಹಿಂದೂ ಯುವಕರ ಪರ ಉಚಿತವಾಗಿ ವಾದ ಮಾಡಿದ್ದ ಡಿ.ವಿ.ಸದಾನಂದ ಗೌಡರು ಕೂಡಾ ಪುತ್ತೂರಿನಲ್ಲಿ ಎರಡು ಅವಧಿಗೆ ಶಾಸಕರಾಗಿ , 2004 ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿದ್ರು. ಕೊಡಗು ಜಿಲ್ಲೆಯನ್ನು ಒಳಗೊಂಡಿದ್ದ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಸದನಾಂದ ಗೌಡರಿಗೂ ಕೈ ಹಿಡಿದಿದ್ದು, ಇದೇ ಹಿಂದುತ್ವವಾಗಿತ್ತು.
ಇನ್ನು 2009 ರಲ್ಲಿ ಸಾಮಾನ್ಯ ಸಂಘದ ಕಾರ್ಯಕರ್ತನಾಗಿ ದುಡಿಯುತ್ತಿದ್ದ ನಳಿನ್ ಕುಮಾರ್ ಕಟೀಲ್ ಹೆಸರನ್ನು ಸಂಸತ್ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು ಹಿಂದುತ್ವದ ಹೆಡ್ಕ್ವಾರ್ಟರ್ಸ್ ಆಗಿದ್ದ ಕಲ್ಲಡ್ಕದಲ್ಲಿ. ಅಲ್ಲಿವರೆಗೂ ಹಿಂದುತ್ವದ ಕೆಲಸದಲ್ಲೇ ತೊಡಗಿಸಿಕೊಂಡಿದ್ದ ನಳಿನ್ ಕುಮಾರ್ ಕಟೀಲ್ ಧಿಡೀರ್ ಸಂಸದರಾಗಿದ್ರು. 2009 ರಿಂದ 2019 ರ ಮೂರು ಬಾರಿ ನಳಿನ್ ಸಂಸದರಾಗಲು ಕಾರಣವಾಗಿದ್ದು ಕೂಡಾ ಹಿಂದುತ್ವದ ಜೊತೆಗೆ ಮೋದಿ ಅನ್ನೋ ನಾಯಕನ ಹೆಸರು ಕಾರಣ ಅನ್ನೋದು ಅಲ್ಲಗಳೆಯುವಂತಿಲ್ಲ. ಇದಕ್ಕೆ ಬೆಂಬಲವಾಗಿ ನಿಂತಿದ್ದು ಬಿಲ್ಲವ ಸಮೂದಾಯ ಅನ್ನೋದು ಕೂಡಾ ಹಿಂದುತ್ವದ ಹೋರಾಟಗಾರರ ಅಂಕಿ ಅಂಶಗಳನ್ನು ಲೆಕ್ಕ ಹಾಕಿದ್ರೆ ಗೊತ್ತಾಗುತ್ತದೆ.
ಈ ಬಾರಿ ದ.ಕ ಜಿಲ್ಲೆಯಲ್ಲಿರುವ ಮತದಾರರ ವಿವರ ಇಂತಿದೆ ( MARCH 2024 ರ ವರೆಗೆ)
ಒಟ್ಟು ಮತದಾರರ ಸಂಖ್ಯೆ – 17,96,826
ಪುರುಷರು – 8,77,438
ಮಹಿಳೆಯರು – 9,19,321
ತೃತೀಯ ಲಿಂಗಿ : 67
ಧರ್ಮದ ಆಧಾರದಲ್ಲಿ ಮತದಾರರ ಸಂಖ್ಯೆ ( ಸರಿಸುಮಾರು )
ಹಿಂದೂ – 11,12,803
ಮುಸ್ಲಿಂ – 4,90,368
ಕ್ರೈಸ್ತ : 1,74,327
ಇತರ : 19328
ಮತದಾರರ ಸರಿಯಾದ ಜಾತಿ ಲೆಕ್ಕಾಚಾರ ಯಾರಲ್ಲೂ ಇಲ್ಲ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತಿ ಆಧಾರಿತ ಚುನಾವಣೆ ನಡೆಯದೇ ಇದ್ದ ಹಿನ್ನಲೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳೂ ಜಾತಿ ಲೆಕ್ಕಾಚಾರ ಇಟ್ಟುಕೊಂಡಿಲ್ಲ. ಆದ್ರೆ ಜಾತಿ ಸಂಘಟನೆಗಳು ಘೋಷಣೆ ಮಾಡಿಕೊಂಡಂತೆ ಆ ಪಕ್ಷಗಳ ಮತದಾರರ ಪೈಕಿ ಬಿಲ್ಲವ ಸಮೂದಾಯದ ಸಂಖ್ಯೆ ಸರಿ ಸುಮಾರು 4.5 ಲಕ್ಷಕ್ಕೂ ಹೆಚ್ಚಿದೆ ಅಂತ ಹೇಳಲಾಗುತ್ತಿದೆ. ಇನ್ನು ಬಂಟ ಸಮೂದಾಯದ ಮತದಾರರು 3.5 ಲಕ್ಷಕ್ಕೂ ಅಧಿಕ ಇದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಬ್ರಾಹ್ಮಣ, ಒಕ್ಕಲಿಗ, ದಲಿತ, ಮತಗಳು ಸುಮಾರು 3.5 ಲಕ್ಷದ ಆಸುಪಾಸಿನಲ್ಲಿ ಇದೆ.ಇದಲ್ಲದೇ ಮೊಗವೀರರು,ಸೇರಿದಂತೆ ಹಲವು ಜಾತಿಗಳ ಜನರು ಲಕ್ಷಕ್ಕೂ ಹೆಚ್ಚಿದ್ದಾರೆ. ಆದ್ರೆ ಇದ್ಯಾವುದೂ ಸರಿಯಾದ ಲೆಕ್ಕಾಚಾರ ಅಲ್ಲದೇ ಇದ್ರೂ ಜಿಲ್ಲೆಯಲ್ಲಿ ಬಿಲ್ಲವರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದಂತು ನಿಜ. ಹೀಗಾಗಿ ಜಾತಿ ಲೆಕ್ಕಾಚಾರದಲ್ಲಿ ಬಿಲ್ಲವರು ಒಟ್ಟಾದ್ರೆ ಯಾವುದೇ ಅಭ್ಯರ್ಥಿಯ ಸೋಲು ಗೆಲುವಿನಿಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದೀಗ ಬಿಜೆಪಿಯ ಕಟ್ಟಾಳುಗಳಾಗಿದ್ದ ಬಿಲ್ಲವ ಯುವಕರೇ ಪದ್ಮರಾಜ್ ಪರವಾಗಿ ಮತ ಯಾಚಿಸ್ತಾ ಇದ್ದಾರೆ ಅನ್ನೋದೇ ಈ ಬಾರಿಯ ಚುನಾವಣೆಯ ವಿಶೇಷ. ಹೀಗಾಗಿ ಯಾರು ಎಷ್ಟು ಮತಗಳಿಂದ ಗೆಲ್ಲಬಹುದು ಅನ್ನೋದು ಮತದಾರನ ತೀರ್ಪಿನ ಬಳಿಕವಷ್ಟೇ ಗೊತ್ತಾಗಬಹುದು.
DAKSHINA KANNADA
ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ
ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.
ಉತ್ತರದ ಬ್ರೇಕ್ ವಾಟರ್ 831 ಮೀಟರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.
ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.
DAKSHINA KANNADA
ವಿದೇಶಿ ಹಡಗಿನಲ್ಲಿ ಬೆಂಕಿ ಅವಘಡ; ಕರ್ನಾಟಕ ಕರಾವಳಿಯಲ್ಲಿ ಲಂಗರು ಹಾಕಿದ ಕಾರ್ಗೋ ಹಡಗು
ಮಂಗಳೂರು: ಗುಜರಾತ್ನಿಂದ ಕೊಲಂಬೋಕ್ಕೆ ವಿವಿಧ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ವಿದೇಶಿ ಮೂಲದ ಸರಕು ಸಾಗಾಟ ಹಡಗಿನಲ್ಲಿ ಅಗ್ನಿ ಆಕಸ್ಮಿಕ ನಡೆದ ಘಟನೆ ಬೆಳಕಿಗೆ ಬಂದಿದೆ.
ಜುಲೈ 19 ರಂದು ಕರ್ನಾಟಕ ಕರಾವಳಿಯ ಸಮುದ್ರದಲ್ಲಿ ಈ ದುರ್ಘಟನೆ ನಡೆದಿದ್ದು, ಕೋಸ್ಟ್ ಗಾರ್ಡ್ ತಂಡ ಹೆಲಿಕಾಪ್ಟರ್ ಹಾಗೂ ರಕ್ಷಣಾ ಹಡಗಿನ ಮೂಲಕ ಸತತ ನಲುವತ್ತು ಘಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ. ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದು ಒಬ್ಬ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಹಡಗಿನ ಬೆಂಕಿ ನಂದಿಸಿ ಸಿಬ್ಬಂದಿಗಳ ರಕ್ಷಣೆ ಮಾಡಿದ ಬಳಿಕ ಹಡಗನ್ನು ಕರ್ನಾಟಕ ಕರಾವಳಿ ಭಾಗಕ್ಕೆ ತೆಗೆದುಕೊಂಡು ಬರಲಾಗಿದೆ. ಸದ್ಯ ಸುರತ್ಕಲ್ ಕಡಲ ಕಿನಾರೆಯಿಂದ ಸುಮಾರು 33 ನಾಟಿಕಲ್ ಮೈಲ್ ದೂರದಲ್ಲಿ ಹಡಗು ಲಂಗರು ಹಾಕಲಾಗಿದೆ. ಗುಜಾರಾತ್ನ ಮುಂದ್ರಾ ಬಂದರಿನಿಂದ ಹೊರಟಿದ್ದ ಈ ಹಡಗು ಪನಾಮ ದೇಶಕ್ಕೆ ಸೇರಿದ್ದಾಗಿ ಮಾಹಿತಿ ಲಭ್ಯವಾಗಿದೆ.
ಬೆಂಕಿ ಅವಘಡದಿಂದ ಸಂಪೂರ್ಣ ಹಾನಿಯಾಗಿರುವ ಹಡಗು ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು, ಕೋಸ್ಟ್ ಗಾರ್ಡ್ ಸಿಬ್ಬಂದಿ ಹಡಗಿನ ಮೇಲೆ ನಿಗಾ ಇರಿಸಿದ್ದಾರೆ. ಹಡಗು ಮುಳುಗಡೆಯಾಗುವ ಸಾದ್ಯತೆಯ ಜೊತೆಗೆ ಹಡಗಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಂಭವ ಕೂಡಾ ಇದೆ. ಹೀಗಾಗಿ ಹಡಗು ಮುಳುಗಡೆಯಾದಲ್ಲಿ ಸಮುದ್ರಕ್ಕೆ ತೈಲ ಸೋರಿಕೆಯ ಆತಂಕ ಕೂಡಾ ಎದುರಾಗಿದೆ. ಹೀಗಾಗಿ ಹಡಗಿನ ಮೇಲೆ ನಿಗಾ ವಹಿಸಿರುವ ಕೋಸ್ಟ್ ಗಾರ್ಡ್ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.
DAKSHINA KANNADA
ದಕ್ಷಿಣ ಕನ್ನಡ ಜಿಲ್ಲೆಯ ಮಹಾಪ್ರವಾಹಕ್ಕೆ 50 ವರ್ಷ; ಮರುಕಳಿಸದಿರಲಿ ‘ಆ ಶುಕ್ರವಾರ’ ಎನ್ನುತ್ತಿದ್ದಾರೆ ಕರಾವಳಿಗರು!
ಮಂಗಳೂರು: 1974 ಜುಲೈ 26ರ ಶುಕ್ರವಾರ ರಾತ್ರಿ ಇಡೀ ಸುರಿದ ಭಾರೀ ಮಳೆ ಮುಂಜಾನೆಯ ವೇಳೆಗೆ ನೆರೆ ರೌದ್ರಾವತಾರ ತಾಳಿತ್ತು.
ಹಿಂದೆ ಎಂದೂ ಕಾಣದ ರೀತಿ ನೇತ್ರಾವತಿ ನದಿ ಉಕ್ಕಿ ಹರಿದಿತ್ತು. ನಸುಕಿನ ಜಾವ ನೇತ್ರಾವತಿ ನದಿ ಮನೆಯೊಳಗೆಯೇ ಪ್ರವೇಶಿಸಿತ್ತು.
ಬಂಟ್ವಾಳ ಪೇಟೆ, ಪಕ್ಕದೂರುಗಳಿಗೆ ಸಂಪರ್ಕಿಸುವ ರಸ್ತೆಗಳೆಲ್ಲವೂ ಕ್ಷಣಮಾತ್ರದಲ್ಲೆ ಜಲಮಯ. ಎಲ್ಲಿಗೆ ಹೋಗೋದು? ಏನು ಮಾಡೋದು ಅನ್ನೋದನ್ನು ಯೋಚಿಸುವಷ್ಟರಲ್ಲೇ ಊರಿಗೆ ಊರೇ ಮುಳುಗಿತ್ತು. ಬಂಟ್ವಾಳ ಮತ್ತು ಉಪ್ಪಿನಂಗಡಿ ಪೇಟೆಯಲ್ಲಿ ವಾಹನಗಳ ಬದಲು ದೋಣಿಗಳು ಸಂಚರಿಸಿದ್ದವು. ಆ ಕಾಲದಲ್ಲಿಯೇ ಐವತ್ತು ಲಕ್ಷ ರೂಪಾಯಿ ನಷ್ಟ ಉಂಟಾಗಿತ್ತು.
ಆ ಸಮಯದಲ್ಲಿ ಜಿಲ್ಲೆಯ ಬಹುತೇಕ ಪ್ರದೇಶಗಳು ನೆರೆ ನೀರಿನಿಂದ ಆವರಿಸಿದ್ದವು, ಆವತ್ತಿನ ಕಾಲದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ ನೂರಾರು ಮನೆ ಅಂಗಡಿ ನೆರೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದವು. ಈಗಲೂ ಕೂಡಾ ಆ ಭೀಕರ ನೆರೆಯು ನಮ್ಮ ಹಿರಿಯರ ಬಾಯಲ್ಲಿ (ಎಲ್ಪತ್ತ ನಾಲೆತ್ತ ಬೊಲ್ಲ) ಎಂದು ಪ್ರಖ್ಯಾತಿ ಹೊಂದಿದೆ.
ಕಾಕತಾಳೀಯ ಎಂಬಂತೇ ಪ್ರವಾಹದ ಆ ದಿನ, ವಾರ ಎಲ್ಲವೂ ಸೇಮ್ ಆಗಿದ್ದು, ಮತ್ತೆ ಅದೇ ರೀತಿಯ ಪ್ರವಾಹ ಪರಿಸ್ಥಿತಿಯೂ ನೇತ್ರಾವತಿ ತಟದಲ್ಲಿದೆ. ಈಗಾಗಲೇ ನೇತ್ರಾವತಿ ಅಪಾಯ ಮಟ್ಟ ಮೀರಿದ್ದು, ಈ ಆತಂಕಕ್ಕೆ ಕಾರಣವೂ ಆಗಿದೆ.
- LATEST NEWS5 days ago
ಗೀಸರ್ನಿಂದ ವಿಷಾನಿಲ ಸೋರಿಕೆ; ಇಹಲೋಕ ತ್ಯಜಿಸಿದ ತಾಯಿ, ಮಗ
- LATEST NEWS5 days ago
ಕಸದ ತೊಟ್ಟಿಯಲ್ಲಿ ಪತ್ತೆಯಾಯ್ತು ಲಕ್ಷಾಂತರ ರೂ. ಬೆಲೆ ಬಾಳುವ ವಜ್ರದ ನೆಕ್ಲೇಸ್
- LATEST NEWS7 days ago
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಕ್ರಿಕೆಟಿಗ
- DAKSHINA KANNADA2 days ago
ವಿಟ್ಲದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅನೈತಿಕ ಚಟುವಟಿಕೆ; ಸಾರ್ವಜನಿಕರನ್ನು ನೋಡಿ ಕಾಲ್ಕಿತ್ತ ಜೋಡಿ