Connect with us

    DAKSHINA KANNADA

    ವೆನ್ಲಾಕ್ ನ ಜನರಲ್ ವಾರ್ಡಿನ ಮಂಚದಡಿ ಒಂದು ತಿಂಗಳು ಅಂಗಾತ ಮಲಗಿದ್ದರು ಆ ಅಗರ್ಭ ಶ್ರೀಮಂತ..!

    Published

    on

    ಮಂಗಳೂರು : 35 ವರ್ಷಗಳ ಹಿಂದಿನ ಮಾತು. ತನ್ನ ಅಣ್ಣನಿಗೆ ಅವಘಡ ಉಂಟಾಗಿ ಸೊಂಟ, ಕಾಲಿಗೆ ಗಂಭೀರ ಗಾಯವಾಗಿತ್ತು. ಆ ಸಂದರ್ಭ ಬಡವರ ಆಶಾಕಿರಣವಾಗಿದ್ದ ಮಂಗಳೂರಿನ ಸರಕಾರಿ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.

    ಒಂದು ತಿಂಗಳ ಸುದೀರ್ಘ ಚಿಕಿತ್ಸೆ ನಡೆಯಿತು. ರೋಗಿ ಅಣ್ಣನಿಗೆ ಸಹಾಯಕರಾಗಿ ತಮ್ಮ ಆಸ್ಪತ್ರೆಯಲ್ಲಿ ನಿಂತಿದ್ದರು.

    ಅಣ್ಣ ಜನರಲ್ ವಾರ್ಡಿನ ಹಾಸಿಗೆಯಲ್ಲಿ ಮಲಗಿದ್ದಾಗ ತಮ್ಮ ಆ ಹಾಸಿಗೆಯ ಕೆಳಗೆ ಖಾಲಿ ನೆಲದಲ್ಲಿ ಒಂದು ತುಂಡು ಬೆಡ್ ಶೀಟ್, ತಲೆದಿಂಬು ಇಲ್ಲದೇ ಅಂಗಾತ ಮಲಗಿ ಒಂದು ತಿಂಗಳನ್ನು ಶೋಚನೀಯವಾಗಿ ಕಳೆದಿದ್ದರು..!

    ಆ ತಮ್ಮ ಬೇರೆ ಯಾರೂ ಅಲ್ಲ. ಇಂದು ಇಡೀ ಸಮಾಜ ಗುರುತಿಸಿರುವ, ಬಡವರ ಬಗ್ಗೆ ಅಪಾರ ಕಾಳಜಿ ವಹಿಸುವ ಆಗರ್ಭ ಶ್ರೀಮಂತ, ಮಂಗಳೂರಿನ ಹೆಸರಾಂತ ಬಿಲ್ಡರ್ ರೋಹನ್ ಕಾರ್ಪೊರೇಶನ್ ಲಿಮಿಟೆಡ್ ಮಾಲಕರಾದ ರೋಹನ್ ಮೊಂತೇರೋ ಅವರು.

    ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಕಾರುಣ್ಯ ಯೋಜನೆಯ ಮೂಲಕ ಕಳೆದ ನಾಲ್ಕೂವರೆ ವರ್ಷಗಳಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ರಾತ್ರಿಯ ಭೋಜನವನ್ನು ಉಚಿತವಾಗಿ ವಿತರಿಸುತ್ತಿದೆ.

    ಪ್ರತಿನಿತ್ಯ ನೂರಾರು ಜನರು ಇದರ ಸದುಪಯೋಗ ಪಡೆಯುತ್ತಾರೆ. ಇದನ್ನು ಗಮನಿಸಿ ಆಸಕ್ತರಾದ ಉದ್ಯಮಿ ರೋಹನ್ ಮೊಂತೇರೋ ಆಗಸ್ಟ್ ಒಂದು ತಿಂಗಳು ತಾನು ಪ್ರಾಯೋಜಿಸುವ ಇರಾದೆ ವ್ಯಕ್ತಪಡಿಸಿ ಒಂದು ತಿಂಗಳ ಮೊತ್ತ ರೂ. 2,25,000/- ವನ್ನು ಎಂ.ಫ್ರೆಂಡ್ಸ್ ಖಾತೆಗೆ ಜಮೆ ಮಾಡಿದರು.

    ಕಳೆದ ಆಗಸ್ಟ್ 15 ರಂದು ವೆನ್ಲಾಕ್ ಆಸ್ಪತ್ರೆಗೆ ಆಗಮಿಸಿ ಅಸಹಾಯಕರಿಗೆ ಸ್ವತಃ ತನ್ನ ಕೈಯ್ಯಾರೆ ಭೋಜನ ಬಡಿಸಿದರು. ಅಶಕ್ತರ ನೋವಿಗೆ ಸ್ಪಂದಿಸಿದರು.

    ರೋಗಿಗಳೊಂದಿಗೆ ಉಭಯ ಕುಶಲೋಪರಿ ಮಾತನಾಡಿದರು. ಈ ಸಂದರ್ಭ ರೋಗಿಗಳ ಜೊತೆಗಾರರಿಗೆ ಧೈರ್ಯ ಸ್ಥೈರ್ಯ ತುಂಬುವ ಸಲುವಾಗಿ ತಾನು ವೆನ್ಲಾಕ್ ಆಸ್ಪತ್ರೆಯ ಹಾಸಿಗೆಯಡಿ ಒಂದು ತಿಂಗಳು ಮಲಗಿರುವ ಅನುಭವವನ್ನು ಹಂಚಿಕೊಂಡರು.

    ಆ ಸಂದರ್ಭ ರೋಹನ್ ಕುಟುಂಬ ಬಡತನದಲ್ಲಿತ್ತು. ಅವರ ಒಳ್ಳೆಯ ಗುಣಕ್ಕೆ ಭಗವಂತನು ಶ್ರೀಮಂತಿಕೆ ನೀಡಿರಬಹುದು.

    ಏನೇ ಸಮಸ್ಯೆಗಳು ಎದುರಾದರೂ ಒಂದು ದಿನವೂ ನಿಲ್ಲಿಸದೇ ಸದಾ ಅನ್ನದಾನ ಮಾಡುತ್ತಿರುವ ಎಂ.ಫ್ರೆಂಡ್ಸ್ ಟ್ರಸ್ಟಿಗೆ ಪ್ರತಿ ವರ್ಷ ಆಗಸ್ಟ್ ತಿಂಗಳ ಪ್ರಾಯೋಜಕತ್ವ ನೀಡುವ ಜೊತೆಗೆ ಈ ನಡುವೆ ಕಾರುಣ್ಯಕ್ಕೆ ಆರ್ಥಿಕ ಸಮಸ್ಯೆ ಎದುರಾದರೆ ರೋಹನ್ ಕಾರ್ಪೊರೇಶನ್ ಎಂ.ಫ್ರೆಂಡ್ಸ್ ಜೊತೆಗಿದೆ ಎಂದು ರೋಹನ್ ಭರವಸೆ ನೀಡಿದರು.

    ರೋಹನ್ ಅವರ ಈ ವರ್ಷದ ಪ್ರಾಯೋಜಕತ್ವ ಆಗಸ್ಟ್ ತಿಂಗಳು ನಿನ್ನೆಗೆ (01-08-2022 ರಿಂದ 31-08-2022) ಪೂರ್ತಿಗೊಂಡರೂ ಅವರ ಸಹಕಾರದ ಕಾರಣದಿಂದಾಗಿ ಹಸಿವಿನ ಹೊಟ್ಟೆ ತಣಿಸಿದ ಸುಮಾರು ಹನ್ನೊಂದು ಸಾವಿರ ಅಶಕ್ತರ ತುಟಿಗಳ ಪ್ರಾರ್ಥನೆ ರೋಹನ್ ಮೊಂತೇರೋ ಅವರಿಗಿದೆ. ಅವರ ದಾನಕ್ಕೆ ಸೃಷ್ಟಿಕರ್ತನು ಪ್ರತಿಫಲ ನೀಡಲಿ. ಅವರ ಉದ್ಯಮ ಯಶಸ್ವಿಯಾಗಲಿ.

    DAKSHINA KANNADA

    ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ

    Published

    on

    ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.


    ಉತ್ತರದ ಬ್ರೇಕ್ ವಾಟರ್ 831 ಮೀಟ‌ರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.

    ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
    ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್‌ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್‌ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್‌ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.

    Continue Reading

    DAKSHINA KANNADA

    ವಿದೇಶಿ ಹಡಗಿನಲ್ಲಿ ಬೆಂಕಿ ಅವಘಡ; ಕರ್ನಾಟಕ ಕರಾವಳಿಯಲ್ಲಿ ಲಂಗರು ಹಾಕಿದ ಕಾರ್ಗೋ ಹಡಗು

    Published

    on

    ಮಂಗಳೂರು: ಗುಜರಾತ್‌ನಿಂದ ಕೊಲಂಬೋಕ್ಕೆ ವಿವಿಧ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ವಿದೇಶಿ ಮೂಲದ ಸರಕು ಸಾಗಾಟ ಹಡಗಿನಲ್ಲಿ ಅಗ್ನಿ ಆಕಸ್ಮಿಕ ನಡೆದ ಘಟನೆ ಬೆಳಕಿಗೆ ಬಂದಿದೆ.

     

     

    ಜುಲೈ 19 ರಂದು ಕರ್ನಾಟಕ ಕರಾವಳಿಯ ಸಮುದ್ರದಲ್ಲಿ ಈ ದುರ್ಘಟನೆ ನಡೆದಿದ್ದು, ಕೋಸ್ಟ್‌ ಗಾರ್ಡ್‌ ತಂಡ ಹೆಲಿಕಾಪ್ಟರ್‌ ಹಾಗೂ ರಕ್ಷಣಾ ಹಡಗಿನ ಮೂಲಕ ಸತತ ನಲುವತ್ತು ಘಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ. ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದು ಒಬ್ಬ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಹಡಗಿನ ಬೆಂಕಿ ನಂದಿಸಿ ಸಿಬ್ಬಂದಿಗಳ ರಕ್ಷಣೆ ಮಾಡಿದ ಬಳಿಕ ಹಡಗನ್ನು ಕರ್ನಾಟಕ ಕರಾವಳಿ ಭಾಗಕ್ಕೆ ತೆಗೆದುಕೊಂಡು ಬರಲಾಗಿದೆ. ಸದ್ಯ ಸುರತ್ಕಲ್ ಕಡಲ ಕಿನಾರೆಯಿಂದ ಸುಮಾರು 33 ನಾಟಿಕಲ್ ಮೈಲ್‌ ದೂರದಲ್ಲಿ ಹಡಗು ಲಂಗರು ಹಾಕಲಾಗಿದೆ. ಗುಜಾರಾತ್‌ನ ಮುಂದ್ರಾ ಬಂದರಿನಿಂದ ಹೊರಟಿದ್ದ ಈ ಹಡಗು ಪನಾಮ ದೇಶಕ್ಕೆ ಸೇರಿದ್ದಾಗಿ ಮಾಹಿತಿ ಲಭ್ಯವಾಗಿದೆ.

    ಬೆಂಕಿ ಅವಘಡದಿಂದ ಸಂಪೂರ್ಣ ಹಾನಿಯಾಗಿರುವ ಹಡಗು ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು, ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ಹಡಗಿನ ಮೇಲೆ ನಿಗಾ ಇರಿಸಿದ್ದಾರೆ. ಹಡಗು ಮುಳುಗಡೆಯಾಗುವ ಸಾದ್ಯತೆಯ ಜೊತೆಗೆ ಹಡಗಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಂಭವ ಕೂಡಾ ಇದೆ. ಹೀಗಾಗಿ ಹಡಗು ಮುಳುಗಡೆಯಾದಲ್ಲಿ ಸಮುದ್ರಕ್ಕೆ ತೈಲ ಸೋರಿಕೆಯ ಆತಂಕ ಕೂಡಾ ಎದುರಾಗಿದೆ. ಹೀಗಾಗಿ ಹಡಗಿನ ಮೇಲೆ ನಿಗಾ ವಹಿಸಿರುವ ಕೋಸ್ಟ್‌ ಗಾರ್ಡ್‌ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

    Continue Reading

    DAKSHINA KANNADA

    ದಕ್ಷಿಣ ಕನ್ನಡ ಜಿಲ್ಲೆಯ ಮಹಾಪ್ರವಾಹಕ್ಕೆ 50 ವರ್ಷ; ಮರುಕಳಿಸದಿರಲಿ ‘ಆ ಶುಕ್ರವಾರ’ ಎನ್ನುತ್ತಿದ್ದಾರೆ ಕರಾವಳಿಗರು!

    Published

    on

    ಮಂಗಳೂರು: 1974 ಜುಲೈ 26ರ ಶುಕ್ರವಾರ ರಾತ್ರಿ ಇಡೀ ಸುರಿದ ಭಾರೀ ಮಳೆ ಮುಂಜಾನೆಯ ವೇಳೆಗೆ ನೆರೆ ರೌದ್ರಾವತಾರ ತಾಳಿತ್ತು.

    ಹಿಂದೆ ಎಂದೂ ಕಾಣದ ರೀತಿ ನೇತ್ರಾವತಿ ನದಿ ಉಕ್ಕಿ ಹರಿದಿತ್ತು. ನಸುಕಿನ ಜಾವ ನೇತ್ರಾವತಿ ನದಿ ಮನೆಯೊಳಗೆಯೇ ಪ್ರವೇಶಿಸಿತ್ತು.

    ಬಂಟ್ವಾಳ ಪೇಟೆ, ಪಕ್ಕದೂರುಗಳಿಗೆ ಸಂಪರ್ಕಿಸುವ ರಸ್ತೆಗಳೆಲ್ಲವೂ ಕ್ಷಣಮಾತ್ರದಲ್ಲೆ ಜಲಮಯ. ಎಲ್ಲಿಗೆ ಹೋಗೋದು? ಏನು ಮಾಡೋದು ಅನ್ನೋದನ್ನು ಯೋಚಿಸುವಷ್ಟರಲ್ಲೇ ಊರಿಗೆ ಊರೇ ಮುಳುಗಿತ್ತು. ಬಂಟ್ವಾಳ ಮತ್ತು ಉಪ್ಪಿನಂಗಡಿ ಪೇಟೆಯಲ್ಲಿ ವಾಹನಗಳ ಬದಲು ದೋಣಿಗಳು ಸಂಚರಿಸಿದ್ದವು. ಆ ಕಾಲದಲ್ಲಿಯೇ ಐವತ್ತು ಲಕ್ಷ ರೂಪಾಯಿ ನಷ್ಟ ಉಂಟಾಗಿತ್ತು.

    ಆ ಸಮಯದಲ್ಲಿ ಜಿಲ್ಲೆಯ ಬಹುತೇಕ ಪ್ರದೇಶಗಳು ನೆರೆ ನೀರಿನಿಂದ ಆವರಿಸಿದ್ದವು, ಆವತ್ತಿನ ಕಾಲದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ ನೂರಾರು ಮನೆ ಅಂಗಡಿ ನೆರೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದವು. ಈಗಲೂ ಕೂಡಾ ಆ ಭೀಕರ ನೆರೆಯು ನಮ್ಮ ಹಿರಿಯರ ಬಾಯಲ್ಲಿ (ಎಲ್ಪತ್ತ ನಾಲೆತ್ತ ಬೊಲ್ಲ) ಎಂದು ಪ್ರಖ್ಯಾತಿ ಹೊಂದಿದೆ.

    ಕಾಕತಾಳೀಯ ಎಂಬಂತೇ ಪ್ರವಾಹದ ಆ ದಿನ, ವಾರ ಎಲ್ಲವೂ ಸೇಮ್ ಆಗಿದ್ದು, ಮತ್ತೆ ಅದೇ ರೀತಿಯ ಪ್ರವಾಹ ಪರಿಸ್ಥಿತಿಯೂ ನೇತ್ರಾವತಿ ತಟದಲ್ಲಿದೆ. ಈಗಾಗಲೇ ನೇತ್ರಾವತಿ ಅಪಾಯ ಮಟ್ಟ ಮೀರಿದ್ದು, ಈ ಆತಂಕಕ್ಕೆ ಕಾರಣವೂ ಆಗಿದೆ.

    Continue Reading

    LATEST NEWS

    Trending