DAKSHINA KANNADA
ಹರುಷದ ಹೊನಲಿಗೆ ಯುಗಾದಿಯ ಬೇವು-ಬೆಲ್ಲ…
ಪ್ರಕೃತಿಯ ಸಿರಿಮುಡಿಗೆ ಕಳೆ ಕಟ್ಟಿದೆ. ಹಸುರಿತ್ತಲ್, ಹಸುರತ್ತಲ್ ಎಂಬ ಭಾವ ಮೈ ಮನಗಳಲ್ಲಿ ಹಚ್ಚಹಸಿರಾಗಿದೆ. ನವೋಲ್ಲಾಸ, ನವ ಚೈತನ್ಯ ತುಂಬಿಕೊಂಡಿದೆ.ಇದಕ್ಕೆಲ್ಲಾ ಕಾರಣ ಹಬ್ಬಗಳ ರಾಜ ಯುಗಾದಿಯ ಆಗಮನ.
ಎತ್ತನೋಡಿದರತ್ತ ಮಾವು ಬೇವುಗಳು ಹಚ್ಚ ಹಸಿರನ್ನು ಹೊತ್ತು ಸ್ವಾಗತ ಕೂರುತಿವೆ. ನವ ವಸಂತನ ಆಗಮನಕ್ಕೆ ದುಂಬಿಯು ಝೇಂಕಾರಗೈಯುತಿದೆ. ಪ್ರಕೃತಿಯೇ ತೋರಣ ಕಟ್ಟಿ ಸಜ್ಜಾಗಿ ನಿಂತಿದೆ… ಇದುವೇ ವಸಂತ ಋತುವಿನಲ್ಲಿ ಹೊಸತನ್ನು ತರುವ ಸಂಭ್ರಮದ ಹಬ್ಬ.. ಹೊಸ ವರುಷ.. ಅದುವೇ “ಸಂಭ್ರಮದ ಯುಗಾದಿ” ಹೊಸ ಯುಗದ ಆರಂಭವಾಗುವುದೇ ಯುಗಾದಿ ಹಬ್ಬದಿಂದ.. ಇದು ಚೈತ್ರ ಮಾಸದಲ್ಲಿ ಬರುವ ಮೊದಲ ಹಬ್ಬ.. ಪ್ರಕೃತಿಯ ಮಡಿಲಲ್ಲಿ ಮೂಡುವ ಹೊಸ ಚಿಗುರು ಮನುಷ್ಯರಲ್ಲಿ ಹೊಸ ಹುರುಪನ್ನು ತರಿಸುತ್ತದೆ. ಮನೆಯಲ್ಲಿ ಎಲ್ಲರೂ ಒಟ್ಟಾಗಿ ಹರಿ ಧ್ಯಾನವನ್ನು ಮಾಡಿ, ಬೇವು-ಬೆಲ್ಲ ತಿಂದು ಯುಗಾದಿ ಹಬ್ಬವನ್ನು ಆರಂಭಿಸುತ್ತಾರೆ.
ಸಿಹಿ-ಕಹಿಯ ಸಮ್ಮಿಲನದ ಹಬ್ಬ:
ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸವರುಷಕೆ-ಹೊಸಹರುಷವ ಹೊಸತು ಹೊಸತು ತರುತಿದೆ’ ಅನ್ನೋ ದ.ರಾ.ಬೇಂದ್ರೆಯವರ ಹಾಡಿನ ಸಾಲಿನಂತೆ ಪ್ರತೀ ವರ್ಷದಂತೆ ಮತ್ತೆ ಸಿಹಿ-ಕಹಿ ಸಮ್ಮಿಲನದ ಯುಗಾದಿ ಹಬ್ಬ ಮತ್ತೆ ಬಂದಿದೆ. ವಸಂತ ಋತುವಿನ ಚೆಲುವು, ಮೋಹಕತೆಗೆ ಜನತೆ ಪುಳಕಿತರಾಗಿದ್ದಾರೆ. ಇದರ ನಡುವೆ ಬಿಸಿಲ ಬೇಗೆಯ ನಿವಾರಣೆಗೆ ಮದ್ದೆಂಬಂತೆ ಹೊಂಗೆಯ ನೆರಳು, ತುಂಗೆಯ ಕಂಪು, ಬೇವು-ಮಾವುಗಳ ಗೊಂಚಲು- ಗೊಂಚಲುಗಳ ತೊನೆದಾಟ ಬಸವಳಿದ ಮನಕ್ಕೆ ಉಲ್ಲಾಸ ನೀಡುವಂತಿದೆ..ಯುಗಗಳಲ್ಲಿ ಮೊದಲ ಯುಗ ಸತ್ಯಯುಗ. ಇಂತಹ ಮೊದಲ ಯುಗದ ಆರಂಭದ ದಿನವೇ ಯುಗಾದಿ. ಚೈತ್ರ ಮಾಸದ ಮೊದಲ ದಿನದಂದು ಯುಗಾದಿಯನ್ನು ಆಚರಿಸ್ತಾರೆ. ಈ ಹಬ್ಬದ ಸಮಯದಲ್ಲಿ ವಸಂತ ಋತುವು ಆರಂಭವಾಗೋದ್ರಿಂದ ತಂಪಾದ ವಾತಾವರಣದ ಜೊತೆಗೆ ಎಲೆ ಹಸಿರು ಮೂಡುವ ಕ್ಷಣ. ಚಿಗುರಿದ ಎಲೆಗಳು ಹಚ್ಚ ಹಸಿರು ಸೀರೆಯುಟ್ಟು ಮದುವಣಗಿತ್ತಿಯಂತೆ ಕಂಗೊಳಿಸುವ ಪ್ರಕೃತಿ.., ತೂಗಾಡುವ ಬಣ್ಣ ಬಣ್ಣದ ಹೂಗಳಿಂದ ತುಂಬಿ ತುಳುಕುವ ಉದ್ಯಾನ, ತೋಟಗಳು, ಸುಗಂಧಭರಿತ ಆಹ್ಲಾದಕರ ಗಾಳಿ, ಕಂಪು ಬೀರುವ ಹೂವಿನ ಮಕರಂದಕ್ಕೆ ಮುತ್ತಿಡೋ ದುಂಬಿಗಳು, ಚಿಟ್ಟೆಗಳ ನರ್ತನ, ಹೂದೋಟದ ತುಂಬ ಕಲರವದಲ್ಲಿ ತಲ್ಲೀನವಾಗಿರುವ ಅದೆಲ್ಲಿಂದಲೋ ವಲಸೆ ಬಂದ ಬಣ್ಣ ಬಣ್ಣದ ಹಕ್ಕಿಗಳು… ಇವೆಲ್ಲವುಗಳ ಜೊತೆ ಮೈಮನದಲ್ಲಿ ನವೋಲ್ಲಾಸ, ನವ ಚೈತನ್ಯದ ಸಂಚಲನ ಮೂಡಿಸಿ ಕಚಗುಳಿಯ ಅನುಭವವಾಗುತ್ತಿದ್ದರೆ ಅದುವೇ ನೂತನ ವರ್ಷಾದ ಆರಂಭ …
ಅದೃಷ್ಟ ಹೊತ್ತು ತರುವ ನವ ಯುಗಾದಿ
ಯುಗದ ಆದಿ ಎಂದು ಕರೆಯುವ ಈ ಹಬ್ಬವನ್ನು ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಅದ್ದೂರಿಯಾಗಿ ಆಚರಣೆ ಮಾಡ್ತಾರೆ. ಯುಗ ಎಂದರೆ ಹೊಸ, ಆದಿ ಎಂದರೆ ಆರಂಭ. ಒಂದು ಹೊಸ ಪರ್ವದ ಆರಂಭ ಅಂತಾನೂ ಈ ಹಬ್ಬವನ್ನು ಕರೀತಾರೆ. ಧಾರ್ಮಿಕ ಆಚರಣೆಯ ಪ್ರಕಾರ ಸೌರಮಾನ ಯುಗಾದಿ ಆಚರಣೆ ಹಿಂದೂಗಳ ಪವಿತ್ರ ಆಚರಣೆಯಲ್ಲಿ ಒಂದು.. ಕೆಲವೆಡೆ ಚಾಂದ್ರಮಾನ ಯುಗಾದಿಯನ್ನು ಆಚರಿಸಿದ್ರೆ ಕೆಲವೆಡೆ ಸೌರಮಾನ ಯುಗಾದಿಯನ್ನು ಆಚರಿಸ್ತಾರೆ. ಯುಗಾದಿ ಹಬ್ಬ ನಮ್ಮೆಲ್ಲರಿಗೂ ಅದೃಷ್ಟದ ಹಬ್ಬ.. ಸಂಪತ್ತು ಮತ್ತು ಸಮೃದ್ಧಿಯನ್ನು ಹೊತ್ತು ತರುತ್ತದೆ ಎನ್ನುವ ನಂಬಿಕೆಯಿದೆ. ಯುಗಾದಿ ಹಬ್ಬವನ್ನು ಮಂಗಳಕರವೆಂದೂ ಹೇಳ್ತಾರೆ. ಹೀಗಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಯುಗಾದಿಯ ದಿನದಂದು ನೂತನ ಅಂಗಡಿಗಳ ಶುಭಾರಂಭ, ಕಟ್ಟಡ ನಿರ್ಮಾಣದ ಕೆಲಸ ಕಾರ್ಯಗಳನ್ನು ಆರಂಭ ಮಾಡ್ತಾರೆ.
ಐತಿಹಾಸಿಕ ಪುರಾಣವೇನು..?
ಹಿಂದೂ ಪುರಾಣಗಳ ಪ್ರಕಾರ, ಇಂದು ಬ್ರಹ್ಮ ದೇವ ಬ್ರಹ್ಮಾಂಡವನ್ನು ಸೃಷ್ಠಿಸಿರುವುದರಿಂದ ಈ ದಿನವನ್ನು ಹೊಸತನದ ಯುಗಾದಿ ಹಬ್ಬ ಎಂದು ಆಚರಣೆ ಮಾಡಲಾಗ್ತಿದೆ ಅಂತೆ.. ವೇದಗಳ, ಧರ್ಮಗ್ರಂಥಗಳ ಪ್ರಕಾರ ಯುಗಾದಿ ಹಬ್ಬ ಹಲವು ಮಹತ್ತರಗಳಿಗೆ ಸಾಕ್ಷಿ ಕೂಡ ಹೌದು.
ಯುಗಾದಿ ಹಬ್ಬ ನಮ್ಮೆಲ್ಲರಿಗೂ ಹೊಸ ವರ್ಷದ ಆರಂಭ. ಇದಕ್ಕೆ ತನ್ನದೇ ಆದ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ… ಸಂಸ್ಕೃತದ ‘ಯುಗ’ ಮತ್ತು ‘ಆದಿ’ ಶಬ್ದಗಳಿಂದ ಯುಗಾದಿ ಎಂಬುದು ಆರಂಭಗೊಂಡಿದೆ. ಚೈತ್ರಶುದ್ಧ ಪಾಡ್ಯದ ಸೂರ್ಯೋದಯ ಸಮಯಕ್ಕೆ ಬ್ರಹ್ಮ ವಿಶ್ವವನ್ನು ಸೃಷ್ಟಿ ಮಾಡ್ತಾನೆ, ಅಂದೇ ಸತ್ಯ ಯುಗವೂ ಆರಂಭವಾಯಿತು. ರಾವಣನನ್ನು ಸಂಹರಿಸಿ ವಿಜಯಿಯಾಗಿ ಹಿಂದಿರುಗಿದ ಶ್ರೀರಾಮನ ಪಟ್ಟಾಭಿಷೇಕದ ದಿನವೆಂದೂ ಪುರಾಣವಿದೆ. ರವಿಯ ಮೊದಲ ಕಿರಣ ಭುವಿಯನ್ನು ಸ್ಪರ್ಶಿಸಿದ ದಿನವೆಂತಲೂ ಪ್ರತೀತಿ ಇದೆ. ಹಾಗೆನೆ ರಾಮನು ವಾಲಿಯನ್ನು ವಧಿಸಿದ ದಿನವೆಂದೂ, ಮಹಾ ವಿಷ್ಣು ಮತ್ಸ್ಯಾವತಾರ ತಾಳಿದ ದಿನವೆಂದೂ ಹೇಳುತ್ತದೆ ಪುರಾಣ. ಅಂದೇ ಶಾಲಿವಾಹನ ಶಕೆ ಆರಂಭಗೊಂಡಿತೆಂಬ ಒಂದು ಕತೆಯೂ ಇದೆ. ಇಂತಹ ಹಲವು ಶುಭ ಘಟನೆಗಳು ಸಂಭವಿಸಿದ ದಿನದಂದು ಚಂದ್ರಮಾನ ‘ಯುಗಾದಿ’ ಆಚರಣೆಗೆ ಬಂದಿದೆ.
ಹಿಂದೂಗಳಿಗೆ ವರ್ಷದಲ್ಲಿ ಬರುವ ಮೂರುವರೆ ದಿನಗಳು ಬಹಳ ಮುಖ್ಯವಾದ ದಿನವಿದೆ. ಅದು ಯುಗಾದಿ, ದೀಪಾವಳಿ, ವಿಜಯದಶಮಿ, ಮತ್ತು ಅಕ್ಷಯ ತದಿಗೆಯ ಅರ್ಧ ದಿನ ಈ ಮೂರುವರೆ ದಿನಗಳು ಮೂರುವರೆ ವಜ್ರದಷ್ಟೇ ಪವಿತ್ರವಾದ ದಿನವಂತೆ. ದಕ್ಷಿಣ ಭಾರತದಲ್ಲಿ ಚಂದ್ರನ ಚಲನೆಯನ್ನು ಗುರುತಿಸಿ ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ. ಹಾಗೆನೆ ಸೂರ್ಯ ದೇವ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿ ಆಚರಿಸುತ್ತಾರೆ. ಇನ್ನೂ ಉಡುಪಿ, ಮಂಗಳೂರು ಕಡೆ, ಉತ್ತರ ಭಾರತದ ಹಲವು ಕಡೆಗಳಲ್ಲಿ ಸೌರಮಾನ ಯುಗಾದಿ ಅಂದ್ರೆ ‘ಬಿಸು’ ಹಬ್ಬವನ್ನು ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ ಎಂದು, ಪಂಜಾಬ್ನಲ್ಲಿ ಬೈಸಾಖಿ ಎಂದು, ಸಿಂಧಿಗಳಲ್ಲಿ ಚೈತಿ ಚಂದ್ ಎಂದು, ತಮಿಳುನಾಡಿನಲ್ಲಿ ಪುತಾಂಡು ಮತ್ತು ರಾಜಸ್ಥಾನದಲ್ಲಿ ಥಾಪನಾ ಎಂಬ ಹೆಸರಿನಿಂದ ಯುಗಾದಿ ಹಬ್ಬವನ್ನು ಆಚರಿಸ್ತಾರೆ.
ರೈತರಿಗೆ ಎಷ್ಟು ವಿಶೇಷ ಈ ಹಬ್ಬ..!
“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಈ ಹಾಡನ್ನು ಕೇಳಿದ್ದೀರಿ ಅಲ್ವಾ..ಯುಗಾದಿ ಬಂತು ಅಂದ್ರೆನೇ ನಮ್ಮೆಲ್ಲರ ತುಟಿಯಂಚಿನಲ್ಲಿ ಈ ಹಾಡನ್ನು ಗುಣುಗುಟ್ತೇವೆ… ಹಬ್ಬ ಅಂದ್ರೇನೆ ಖುಷಿ ಅದರಲ್ಲೂ ಹೊಸ ವರುಷವನ್ನು ಹೊತ್ತು ತರುವ ಯುಗಾದಿ ಯಂದಂತೂ ಎಲ್ಲಿಲ್ಲದ ಸಂಭ್ರಮ ಸಡಗರ. ಈ ಹಬ್ಬ ರೈತರ ಪಾಲಿಗೂ ವಿಶೇಷ ದಿನ. ಹೊಸ ಬೆಳೆಯ ಖುಷಿಯಲ್ಲಿಯೂ ಈ ಹಬ್ಬದ ಸಂಭ್ರಮ ರೈತಾಪಿ ವರ್ಗದಲ್ಲಿ ಇಮ್ಮಡಿಯಾಗಿರುತ್ತದೆ. ರೈತರು ತಾವು ಬೆಳೆದಿರುವ ಮೊದಲ ಬೆಳೆಯ ಕಟಾವು ಮಾಡಿ ಯುಗಾದಿ ಹಬ್ಬಂದು ವಿಶೇಷ ಪೂಜೆಯನ್ನು ಮಾಡ್ತಾರೆ.
ಯುಗಾದಿ ಬಂತೆಂದರೆ ಪ್ರಕೃತಿಯಲ್ಲಿ ನವೋಲ್ಲಾಸದ ಸಡಗರ. ಹಾಗೆನೇ ರೈತರು ಸಡಗರದಿಂದ ಕೃಷಿ ಚಟುವಟಿಕೆ ಆರಂಭಿಸುವ ಮೊದಲ ಹೆಜ್ಜೆಯೂ ಹೌದು,, ಯುಗಾದಿಯಂದು ಭೂಮಿಯನ್ನು ಉಳುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಇನ್ನೂ ನಾಗರಿಕತೆ ಬೆಳೆದಂತೆ ಗ್ರಾಮೀಣ ಪ್ರದೇಶಗಳಲ್ಲಿನ ಅದೆಷ್ಟೋ ಸಂಪ್ರದಾಯಗಳು ಕಣ್ಮರೆಯಾಗಿದೆ. ಅದರಲ್ಲೂ ದೇಶಕ್ಕೆ ಅನ್ನ ನೀಡುವ ರೈತರು ಯುಗಾದಿ ಹಬ್ಬದ ದಿನ ನಡೆಸುವ ರಾಶಿಪೂಜೆ, ಭೂಮಿ ಪೂಜೆ, ಕಾಣಲು ಸಿಗುವುದು ಇತ್ತೀಚೆಗೆ ಬಲು ಅಪರೂಪ… ಹಳ್ಳಿಗಳಲ್ಲಿ ಯುಗಾದಿ ಹಬ್ಬವನ್ನ ಹೊಸ ವರ್ಷದ ಜೊತೆಗೆ ಕೃಷಿ ಚಟುವಟಿಕೆಗೆ ಮುನ್ನುಡಿ ಬರೆಯುವ ದಿನ ಅಂತಾನೂ ಹೇಳ್ತಾ ಇದ್ರು..
ಸೂರ್ಯೋದಯಕ್ಕೂ ಮುನ್ನವೇ ರೈತರು ಹೊನ್ನೇರನ್ನು ಕಟ್ಟಿ ಹೊಸ ಬಟ್ಟೆಗಳನ್ನು ಧರಿಸಿಕೊಂಡು ಜಮೀನುಗಳಿಗೆ ಹೊರಡ್ತಾರೆ. ಬ್ರಾಹ್ಮಿ ಮುಹೂರ್ತದಲ್ಲಿ ಎತ್ತುಗಳನ್ನು ತೊಳೆದು ಕೊಂಬುಗಳಿಗೆ ಹೊಂಬಾಳೆ, ಕೊರಳಿಗೆ ಬಿಳಿಕಣಗಿಲೆ ಹೂವು, ಮಂಡೆ ಹುರಿ ಕಟ್ಟುತ್ತಾರೆ. ಜೊತೆಗೆ ಎತ್ತಿನಗಾಡಿಯನ್ನು ಬಾಳೆಕಂದು, ಮಾವಿನ ಸೊಪ್ಪಿನಿಂದ ಅಲಂಕರಿಸುತ್ತಾರೆ. ಗದ್ದೆಗೆ ಗೊಬ್ಬರ ಸಿಂಪಡಿಸಿ, ಹೊಸ ವರ್ಷದ ಮೊದಲ ದಿನ ಕೃಷಿಯನ್ನು ಆರಂಭಿಸಿ ಕಾಲ ಕಾಲಕ್ಕೆ ಮಳೆ ಬೆಲೆ ಚೆನ್ನಾಗಿ ಬರಲಿ.. ರೋಗ-ರುಜಿನ ಮಾಯವಾಗಿ ನೆಮ್ಮದಿಯ ಜೀವನ ಸಿಗಲೆಂದು ಬೇಡಿಕೊಳ್ತಾರೆ. ಯುಗಾದಿ ಆರಂಭವಾಗುತ್ತಿದ್ದಂತೆ ಮಳೆಯ ಸಿಂಚನ ಭುವಿಯನ್ನು ತಂಪೆರೆಯಲು ಆರಂಭವಾಗುತ್ತೆ.. ಇದು ತಲೆತಲಾಂತರದಿಂದ ನಡೆದುಕೊಂಡು ಬಂದಿದ್ದು ಗ್ರಾಮೀಣ ಭಾಗದಲ್ಲಿ ಈ ವಿಶೇಷ ಆಚರಣೆ ಇಂದಿಗೂ ಕೆಲವೆಡೆ ಜೀವಂತವಾಗಿದೆ.
ಹೊಸ ಉಡುಪು.. ಘಮ-ಘಮಿಸುವ ಖಾದ್ಯ..!!
ಉಳಿದೆಲ್ಲ ಹಬ್ಬಗಳಿಗಿಂತ ಯುಗಾದಿ ಆಚರಣೆ ಕೊಂಚ ಬೇರೆ. ಹೊಸ ವರ್ಷದ ಹಬ್ಬವೆಂದರೆ ಹೊಸತನ ಇರಲೇಬೇಕಲ್ವಾ… ಈ ದಿನ ಮನೆಯವರೆಲ್ಲರಿಗೂ ಧರಿಸಲು ಹೊಸ ಉಡುಪುಗಳು.. ಅಡುಗೆ ಕೋಣೆಯಲ್ಲಿ ಘಮ ಘಮಿಸುವ ತರತರದ ಯುಗಾದಿ ಸ್ಪೆಷಲ್ ಖಾದ್ಯಗಳು.. ಅಬ್ಬಾ ಯಾರಿಗೆ ಇಷ್ಟ ಇಲ್ಲಾ ಹೇಳಿ ಈ ಹಬ್ಬ.. ಹಬ್ಬ ಹರಿದನಗಳಲ್ಲಿ ತಯಾರಿಸುವ ತಿಂಡಿ ತಿನಿಸುಗಳ ಬಗ್ಗೆ ಮಾತೇ ಇಲ್ಲ.., ಹಬ್ಬ ಅಂದ್ರೇನೆ ಬಗೆಬಗೆಯ ತಿಂಡಿ ತಿನಿಸುಗಳು ತಯಾರಾಗುತ್ತೆ. ಯುಗಾದಿಗೆ ಕರ್ನಾಟಕದಲ್ಲಿ ಹೋಳಿಗೆ ಅಂದಿನ ವಿಶೇಷ ಖಾದ್ಯ.. ಬೆಲ್ಲದ ಪಾನಕ, ಶಾವಿಗೆ ಕೂಡ ಅಂದಿನ ಸ್ಪೆಷಲ್.. ಮಹಾರಾಷ್ಟ್ರದಲ್ಲಿ ಹೋಳಿಗೆಯನ್ನೇ ಹೋಲುವ ಪೂರಣ್ ಪೋಳಿ ತಯಾರಿಸುತ್ತಾರೆ. ಆಂಧ್ರ, ತೆಲಂಗಾಣದಲ್ಲಿ ಬೇವು- ಬೆಲ್ಲ, ಮಾವಿನ ಕಾಯಿ, ಉಪ್ಪು, ಮೆಣಸು, ಹುಣಸೆ ಹಣ್ಣುಗಳ ಮಿಶ್ರಣ ಮಾಡಿ ‘ಪಚ್ಚಡಿ’ಯನ್ನ ತಯಾರಿಸುತ್ತಾರೆ. ಈ ಆರೂ ಪದಾರ್ಥಗಳು ಆರು ಗುಣಗಳನ್ನು ಸಾರುತ್ತವೆ ಎಂಬುದು ಅಲ್ಲಿಯವರ ನಂಬಿಕೆ. ಬೆಲ್ಲ ಸುಖ-ಸಂತೋಷಕ್ಕೆ, ಬೇವು ದುಃಖ ಮತ್ತು ನೋವನ್ನು ಸಹಜತೆಯಿಂದ ಸ್ವೀಕರಿಸಲು, ಮಾವು -ಉತ್ಸಾಹಕ್ಕೆ, ಕಾಳುಮೆಣಸು ಕೋಪ ನಿಗ್ರಹಕ್ಕೆ, ಉಪ್ಪು- ನಮ್ರತಾ ಭಾವಕ್ಕೆ, ಹುಣಸೆ – ಸ್ವೀಕರಣಾ ಭಾವದ ಸಂಕೇತವಾಗಿದೆ. ಹಲವು ಪ್ರಾಂತ್ಯಗಳಲ್ಲಿ, ಹೊಸ ಮಾವಿನ ಮಿಡಿಯ ಉಪ್ಪಿನ ಕಾಯಿ ತಯರಿಸುವುದೂ ಇದೆ.
ಯುಗಾದಿಯನ್ನು ಹೇಗೆ ಆಚರಣೆ ಮಾಡ್ತಾರೆ?
ಈ ಹೊಸ ವರ್ಷವನ್ನು ಹೊಸತಾಗಿ ಆರಂಭಿಸಲು ನಾನಾ ಯೋಜನೆಗಳನ್ನು ಹಾಕುತ್ತಾರೆ. ಇನ್ನೂ ಕೆಲವರು ದೇವಾಲಯಗಳಿಗೆ ಭೇಟಿ ನೀಡಿ ಭಗವಂತನ ಆಶೀರ್ವಾದವನ್ನು ಪಡಿತಾರೆ. ಈ ದಿನ ಬಡವರಿಗೆ ದಾನ ಧರ್ಮವನ್ನು ಮಾಡಿದರೆ ಲಕ್ಷ್ಮೀ ದೇವಿ ಒಲಿಯುತ್ತಾಳೆ ಎಂಬ ನಂಬಿಕೆಯೂ ಇದೆ. ಈ ವರ್ಷವನ್ನು ಸ್ವಾಗತಿಸಲು ಮನೆಯನ್ನು ಸ್ವಚ್ಛವಾಗಿಟ್ಟು, ಮನೆಯ ಮುಂದೆ ಬಣ್ಣ-ಬಣ್ಣದ ಕಣ್ಮನ ಸೆಳೆಯುವ ರಂಗೋಲಿಯನ್ನು ಹಾಕ್ತಾರೆ. ಯುಗಾದಿಯ ದಿನ ಬೆಳ್ಳಂಬೆಳಿಗ್ಗೆ, ಮನೆಯವರೆಲ್ಲಾ ಅಭ್ಯಂಜನ ಸ್ನಾನ ಮಾಡಿ, ನವ ವಸ್ತ್ರ ಧರಿಸಿ ಹೊಸ ವರ್ಷ ಸ್ವಾಗತಿಸುವ ಸಂಭ್ರಮ. ಮಾವಿನ ಎಲೆಗಳನ್ನು ದೇವರ ಮನೆಯ ಕಲಶದಲ್ಲಿ ಅದ್ದಿ, ಮನೆಯ ಮೂಲೆ ಮೂಲೆಗೂ ನೀರನ್ನು ಸಿಂಪಡಿಸಿ, ಮನೆಯ ಶುಚೀಕರಣ ಮಾಡಿ ,ಮನೆ ದೇವರ ಪೂಜೆಯನ್ನು ಮಾಡಲಾಗುತ್ತದೆ. ಬೇಯಿಸಿದ ಕಡಲೆ ಕಾಳುಗಳ ಪ್ರಸಾದ ತಯಾರಾಗುತ್ತದೆ. ಹಿರಿಯರನ್ನು ನಮಸ್ಕರಿಸಿ, ಆಶೀರ್ವಾದ ಪಡೆಯುವಾಗ ಕಿರಿಯರಲ್ಲಿ ಧನ್ಯತಾಭಾವ. ವರ್ಷವಿಡೀ ನೋವು, ನಲಿವನ್ನು ಸಮನಾಗಿ ಸ್ವೀಕರಿಸೋಣ ಎನ್ನುತ್ತಾ ಬೇವು ಬೆಲ್ಲ ಹಂಚಿ ನಲಿಯುವುದು ಯುಗಾದಿ ಆಚರಣೆಯ ಇನ್ನೊಂದು ವಿಶೇಷನೇ ಸರಿ…
ಯುಗಾದಿ ಹಬ್ಬ ಸಮೀಪಿಸುತ್ತಿರುವಾಗಲೇ ಪ್ರಕೃತಿಯ ಮಡಿಲಲ್ಲಿ ಗಿಡ-ಮರಗಳು ಹಣ್ಣೆಲೆಯನ್ನು ಕಳಚಿಕೊಂಡು, ಹೊಸ ಚಿಗುರುಗಳಿಂದ ಕಂಗೊಳಿಸುತ್ತವೆ. ಹಾಗೆನೇ ನಮ್ಮ ಜೀವನದಲ್ಲೂ ಹೊಸತನವನ್ನು ಆರಂಭಿಸಲು ಹೊಸ ವರುಷವನ್ನು ಸ್ವಾಗತಿಸಲಾಗುವುದು. ಯುಗಾದಿ ಹಬ್ಬದಂದು ವಿಶೇಷವಾಗಿ ಸೇವಿಸುವ ಬೇವು – ಬೆಲ್ಲ ನಮ್ಮ ಜೀವನದ ಸುಖ- ದುಃಖ ಹಾಗೂ ನೋವು-ನಲಿವಿನ ಸಮತೋಲನವನ್ನು ಸೂಚಿಸುತ್ತದೆ. ಯುಗಾದಿ ದಿನ ನಾವು ಬೇವು ಬೆಲ್ಲವನ್ನು ಸೇವಿಸುವುದರಿಂದ ನಮ್ಮ ಜೀವನದ ಸುಖ – ದುಃಖ ಸಮಾನಾಗಿ ಹಂಚಿಹೋಗಬೇಕು. ವೈಜ್ಞಾನಿಕವಾಗಿ ಹೇಳ್ಬೇಕಂದ್ರೆ ಬೇವು ತಿನ್ನುವುದರಿಂದ ಮನುಷ್ಯನ ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ವ್ಯಕ್ತಿಯ ದೇಹವನ್ನು ಬಲಪಡಿಸುತ್ತದೆ ಎನ್ನುವ ನಂಬಿಕೆಯಿದೆ. ಬೆಲ್ಲವನ್ನು ಸೇವಿಸುವುದರಿಂದ ಚಯಾಪಚಯ ಕ್ರಿಯೆಯು ಸಮತೋಲನವಾಗುತ್ತದೆ ಮತ್ತು ದೇಹದಲ್ಲಿರುವ ಕೆಟ್ಟ ಕೊಬ್ಬನ್ನು ಕೂಡ ಕರಗಿಸುತ್ತದೆ ಎಂದು ಹೇಳಲಾಗುತ್ತೆ. ವರ್ಷದ ಮೊದಲ ದಿನದಂದು ನಾವು ಜೀವನದ ಕಹಿಯನ್ನು ಸ್ವೀಕರಿಸಬೇಕು ಅಂತ ಹೇಳ್ತಾರೆ. ಯಾಕಂದ್ರೆ ವರ್ಷದ ಆರಂಭದಲ್ಲಿ ಕೇವಲ ಸಿಹಿಯಿದ್ದರೆ ಮುಂದೆ ಕಹಿಯನ್ನು ಎದುರಿಸುವ ಶಕ್ತಿ ಸಿಗುವುದಿಲ್ಲ. ಸಿಹಿ-ಕಹಿ ಅಂದರೆ.. ಬೇವು-ಬೆಲ್ಲ ಎರಡೂ ಸಮಾನವಾದರೆ ಜೀವನದಲ್ಲಿ ಎಷ್ಟೇ ತೊಂದರೆಗಳು, ಕಷ್ಟಗಳು ಇದ್ದರೂ ನಾವು ಅದನ್ನು ಗಾಢವಾಗಿ ತೆಗೆದುಕೊಳ್ಳದೆ ಸಮಸ್ಯೆಗಳನ್ನು ಎದುರಿಸುವ ಶಕ್ತಿ ನಮ್ಮದಾಗುತ್ತೆ.
DAKSHINA KANNADA
ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ
ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.
ಉತ್ತರದ ಬ್ರೇಕ್ ವಾಟರ್ 831 ಮೀಟರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.
ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.
DAKSHINA KANNADA
ವಿದೇಶಿ ಹಡಗಿನಲ್ಲಿ ಬೆಂಕಿ ಅವಘಡ; ಕರ್ನಾಟಕ ಕರಾವಳಿಯಲ್ಲಿ ಲಂಗರು ಹಾಕಿದ ಕಾರ್ಗೋ ಹಡಗು
ಮಂಗಳೂರು: ಗುಜರಾತ್ನಿಂದ ಕೊಲಂಬೋಕ್ಕೆ ವಿವಿಧ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ವಿದೇಶಿ ಮೂಲದ ಸರಕು ಸಾಗಾಟ ಹಡಗಿನಲ್ಲಿ ಅಗ್ನಿ ಆಕಸ್ಮಿಕ ನಡೆದ ಘಟನೆ ಬೆಳಕಿಗೆ ಬಂದಿದೆ.
ಜುಲೈ 19 ರಂದು ಕರ್ನಾಟಕ ಕರಾವಳಿಯ ಸಮುದ್ರದಲ್ಲಿ ಈ ದುರ್ಘಟನೆ ನಡೆದಿದ್ದು, ಕೋಸ್ಟ್ ಗಾರ್ಡ್ ತಂಡ ಹೆಲಿಕಾಪ್ಟರ್ ಹಾಗೂ ರಕ್ಷಣಾ ಹಡಗಿನ ಮೂಲಕ ಸತತ ನಲುವತ್ತು ಘಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ. ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದು ಒಬ್ಬ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಹಡಗಿನ ಬೆಂಕಿ ನಂದಿಸಿ ಸಿಬ್ಬಂದಿಗಳ ರಕ್ಷಣೆ ಮಾಡಿದ ಬಳಿಕ ಹಡಗನ್ನು ಕರ್ನಾಟಕ ಕರಾವಳಿ ಭಾಗಕ್ಕೆ ತೆಗೆದುಕೊಂಡು ಬರಲಾಗಿದೆ. ಸದ್ಯ ಸುರತ್ಕಲ್ ಕಡಲ ಕಿನಾರೆಯಿಂದ ಸುಮಾರು 33 ನಾಟಿಕಲ್ ಮೈಲ್ ದೂರದಲ್ಲಿ ಹಡಗು ಲಂಗರು ಹಾಕಲಾಗಿದೆ. ಗುಜಾರಾತ್ನ ಮುಂದ್ರಾ ಬಂದರಿನಿಂದ ಹೊರಟಿದ್ದ ಈ ಹಡಗು ಪನಾಮ ದೇಶಕ್ಕೆ ಸೇರಿದ್ದಾಗಿ ಮಾಹಿತಿ ಲಭ್ಯವಾಗಿದೆ.
ಬೆಂಕಿ ಅವಘಡದಿಂದ ಸಂಪೂರ್ಣ ಹಾನಿಯಾಗಿರುವ ಹಡಗು ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು, ಕೋಸ್ಟ್ ಗಾರ್ಡ್ ಸಿಬ್ಬಂದಿ ಹಡಗಿನ ಮೇಲೆ ನಿಗಾ ಇರಿಸಿದ್ದಾರೆ. ಹಡಗು ಮುಳುಗಡೆಯಾಗುವ ಸಾದ್ಯತೆಯ ಜೊತೆಗೆ ಹಡಗಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಂಭವ ಕೂಡಾ ಇದೆ. ಹೀಗಾಗಿ ಹಡಗು ಮುಳುಗಡೆಯಾದಲ್ಲಿ ಸಮುದ್ರಕ್ಕೆ ತೈಲ ಸೋರಿಕೆಯ ಆತಂಕ ಕೂಡಾ ಎದುರಾಗಿದೆ. ಹೀಗಾಗಿ ಹಡಗಿನ ಮೇಲೆ ನಿಗಾ ವಹಿಸಿರುವ ಕೋಸ್ಟ್ ಗಾರ್ಡ್ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.
DAKSHINA KANNADA
ದಕ್ಷಿಣ ಕನ್ನಡ ಜಿಲ್ಲೆಯ ಮಹಾಪ್ರವಾಹಕ್ಕೆ 50 ವರ್ಷ; ಮರುಕಳಿಸದಿರಲಿ ‘ಆ ಶುಕ್ರವಾರ’ ಎನ್ನುತ್ತಿದ್ದಾರೆ ಕರಾವಳಿಗರು!
ಮಂಗಳೂರು: 1974 ಜುಲೈ 26ರ ಶುಕ್ರವಾರ ರಾತ್ರಿ ಇಡೀ ಸುರಿದ ಭಾರೀ ಮಳೆ ಮುಂಜಾನೆಯ ವೇಳೆಗೆ ನೆರೆ ರೌದ್ರಾವತಾರ ತಾಳಿತ್ತು.
ಹಿಂದೆ ಎಂದೂ ಕಾಣದ ರೀತಿ ನೇತ್ರಾವತಿ ನದಿ ಉಕ್ಕಿ ಹರಿದಿತ್ತು. ನಸುಕಿನ ಜಾವ ನೇತ್ರಾವತಿ ನದಿ ಮನೆಯೊಳಗೆಯೇ ಪ್ರವೇಶಿಸಿತ್ತು.
ಬಂಟ್ವಾಳ ಪೇಟೆ, ಪಕ್ಕದೂರುಗಳಿಗೆ ಸಂಪರ್ಕಿಸುವ ರಸ್ತೆಗಳೆಲ್ಲವೂ ಕ್ಷಣಮಾತ್ರದಲ್ಲೆ ಜಲಮಯ. ಎಲ್ಲಿಗೆ ಹೋಗೋದು? ಏನು ಮಾಡೋದು ಅನ್ನೋದನ್ನು ಯೋಚಿಸುವಷ್ಟರಲ್ಲೇ ಊರಿಗೆ ಊರೇ ಮುಳುಗಿತ್ತು. ಬಂಟ್ವಾಳ ಮತ್ತು ಉಪ್ಪಿನಂಗಡಿ ಪೇಟೆಯಲ್ಲಿ ವಾಹನಗಳ ಬದಲು ದೋಣಿಗಳು ಸಂಚರಿಸಿದ್ದವು. ಆ ಕಾಲದಲ್ಲಿಯೇ ಐವತ್ತು ಲಕ್ಷ ರೂಪಾಯಿ ನಷ್ಟ ಉಂಟಾಗಿತ್ತು.
ಆ ಸಮಯದಲ್ಲಿ ಜಿಲ್ಲೆಯ ಬಹುತೇಕ ಪ್ರದೇಶಗಳು ನೆರೆ ನೀರಿನಿಂದ ಆವರಿಸಿದ್ದವು, ಆವತ್ತಿನ ಕಾಲದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ ನೂರಾರು ಮನೆ ಅಂಗಡಿ ನೆರೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದವು. ಈಗಲೂ ಕೂಡಾ ಆ ಭೀಕರ ನೆರೆಯು ನಮ್ಮ ಹಿರಿಯರ ಬಾಯಲ್ಲಿ (ಎಲ್ಪತ್ತ ನಾಲೆತ್ತ ಬೊಲ್ಲ) ಎಂದು ಪ್ರಖ್ಯಾತಿ ಹೊಂದಿದೆ.
ಕಾಕತಾಳೀಯ ಎಂಬಂತೇ ಪ್ರವಾಹದ ಆ ದಿನ, ವಾರ ಎಲ್ಲವೂ ಸೇಮ್ ಆಗಿದ್ದು, ಮತ್ತೆ ಅದೇ ರೀತಿಯ ಪ್ರವಾಹ ಪರಿಸ್ಥಿತಿಯೂ ನೇತ್ರಾವತಿ ತಟದಲ್ಲಿದೆ. ಈಗಾಗಲೇ ನೇತ್ರಾವತಿ ಅಪಾಯ ಮಟ್ಟ ಮೀರಿದ್ದು, ಈ ಆತಂಕಕ್ಕೆ ಕಾರಣವೂ ಆಗಿದೆ.
- LATEST NEWS5 days ago
ಗೀಸರ್ನಿಂದ ವಿಷಾನಿಲ ಸೋರಿಕೆ; ಇಹಲೋಕ ತ್ಯಜಿಸಿದ ತಾಯಿ, ಮಗ
- LATEST NEWS5 days ago
ಕಸದ ತೊಟ್ಟಿಯಲ್ಲಿ ಪತ್ತೆಯಾಯ್ತು ಲಕ್ಷಾಂತರ ರೂ. ಬೆಲೆ ಬಾಳುವ ವಜ್ರದ ನೆಕ್ಲೇಸ್
- LATEST NEWS7 days ago
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಕ್ರಿಕೆಟಿಗ
- DAKSHINA KANNADA2 days ago
ವಿಟ್ಲದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅನೈತಿಕ ಚಟುವಟಿಕೆ; ಸಾರ್ವಜನಿಕರನ್ನು ನೋಡಿ ಕಾಲ್ಕಿತ್ತ ಜೋಡಿ