ಮಂಗಳೂರು:ಕೇರಳದಲ್ಲಿ ಕೊರೋನಾ ತೀವ್ರಗೊಂಡ ಹಿನ್ನೆಲೆ ಮಂಗಳೂರು ವಿವಿಯ ಎಲ್ಲಾ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ ರದ್ದುಗೊಳಿಸಿದ ಪರೀಕ್ಷೆಯನ್ನು ನಡೆಸುವಂತೆ ಸಿಂಡಿಕೇಟ್ ಸದಸ್ಯ ರಮೇಶ್ ಕೆ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಕಳೆದ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಸುಮಾರು 80% ಪರೀಕ್ಷೆ ಪೂರ್ಣಗೊಂಡಿದ್ದು, ಕೇವಲ 20% ಪರೀಕ್ಷೆ ಮಾತ್ರ ಮುಗಿಯಬೇಕಿತ್ತು, ಪದವಿಯ ಎಲ್ಲಾ ವಿದ್ಯಾರ್ಥಿಗಳು ಒಂದು ಡೋಸ್ ಲಸಿಕೆಯನ್ನು ಪಡೆದಿರುತ್ತಾರೆ. ಜಿಲ್ಲೆಯಲ್ಲಿ ಈಗಾಗಲೇ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದಾರೆ.
ಜೊತೆಗೆ ಕೇರಳದಲ್ಲಿ ಕೋವಿಡ್ ಪಾಸಿಟಿವಿಟಿಯು ಹೆಚ್ಚಳವಿರುವುದನ್ನು ಮನಗಂಡು ಮಂಗಳೂರು ವಿವಿಯು ಕೇರಳದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಶೇಷ ಪರೀಕ್ಷೆಯನ್ನು ನಡೆಸುವುದಾಗಿ ತಿಳಿಸಿರುತ್ತದೆ. ಇದನ್ನು ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕೇರಳ ಹಾಗೂ ದೇಶದ ಇತರ ರಾಜ್ಯಗಳ ವಿದ್ಯಾರ್ಥಿಗಳ ಗಮನಕ್ಕೆ ತರಲಾಗಿದೆ. ಈ ಹಿಂದೆ ಮಾರ್ಚ್, ಏಪ್ರಿಲ್ನಲ್ಲಿ ನಡೆಸಿರುವ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ನಡೆಸಲು ವಿಶ್ವವಿದ್ಯಾಲಯಕ್ಕೆ ಅವಕಾಶ ನೀಡಬೇಕು.
ಯುಜಿಸಿಯ ನಿಯಮಾವಳಿಯ ಪ್ರಕಾರ ಸಪ್ಟೆಂಬರ್ ತಿಂಗಳೊಳಗಡೆ ಈಗಿನ ಸೆಮಿಸ್ಟರನ್ನು ಮುಗಿಸುವಂತೆ ಆದೇಶಿಸಿದೆ. ವಿದ್ಯಾರ್ಥಿಗಳು ಈಗಾಗಲೇ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಗೆ ಪರೀಕ್ಷೆ ನಡೆಸುವಂತೆ ಒತ್ತಾಯಿಸಿರುವುದರಿಂದ ಇದನ್ನು ಮರು ಪರಿಶೀಲಿಸಬೇಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಆದ್ದರಿಂದ ಇನ್ನುಳಿದಿರುವ 1, 3, 5ನೇ ಸೆಮಿಸ್ಟರ್ನ 20% ಪರೀಕ್ಷೆಯನ್ನು ವಿವಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ಕಟ್ಟುನಿಟ್ಟಾದ ಕೋವಿಡ್ ನಿಯಮಾವಳಿಯನ್ನು ಪಾಲಿಸುವ ಷರತ್ತಿನೊಂದಿಗೆ ಮರು ಪರಿಶೀಲಿಸಿ ಪರೀಕ್ಷೆ ನಡೆಸುವಂತೆ ಪತ್ರ ಬರೆದಿದ್ದಾರೆ.