LATEST NEWS
ಸುರತ್ಕಲ್, ನಂತೂರು ಹೆದ್ದಾರಿ ಗುಂಡಿ ಮುಚ್ಚಲು, ಕೂಳೂರು ಹೊಸ ಸೇತುವೆ ಕಾಮಗಾರಿ ಕಾಲಮಿತಿಯೊಳಗಡೆ ಪೂರ್ಣಗೊಳಿಸಲು ಆಗ್ರಹ
ಮಂಗಳೂರು: ಸುರತ್ಕಲ್ – ನಂತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ಬೃಹತ್ ಗಾತ್ರದ ಗುಂಡಿಗಳು ದೊಡ್ಡ ಸಂಖ್ಯೆಯಲ್ಲಿ ಬಿದ್ದಿದ್ದು ವಾಹನ ಸಂಚಾರ ಅಪಾಯಕಾರಿ ಸ್ಥಿತಿಗೆ ತಲುಪಿದೆ. ಈಗಾಗಲೆ ಕಳೆದ ಮೂರು ತಿಂಗಳ ಅವಧಿಯಲ್ಲಿ ಹಲವು ಅಪಘಾತಗಳು ನಡೆದು, ಪ್ರಾಣಹಾನಿಗಳು ಉಂಟಾಗಿವೆ. ಕೆಲವೆಡೆ ರಸ್ತೆ ಪೂರ್ತಿ ಆಳವಾದ ಗುಂಡಿಗಳೇ ತುಂಬಿದ್ದು, ವಾಹನಗಳು ಸರಾಗವಾಗಿ ಚಲಿಸಲಾಗದೆ ಮೈಲುಗಳಷ್ಟು ಉದ್ದಕ್ಕೆ ಪ್ರತಿದಿನ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ.
ಮಳೆಗಾಲಕ್ಕೂ ಮುನ್ನ ಈ ಹೆದ್ದಾರಿಯಲ್ಲಿ ದುರಸ್ತಿ ಕಾಮಗಾರಿ ನಡೆಸದಿರುವುದು, ವರ್ಷಗಳಿಂದ ಸರಿಯಾಗಿ ನಿರ್ವಹಣೆ ಮಾಡದಿರುವುದು ರಸ್ತೆ ಈ ರೀತಿ ಸಂಚಾರಕ್ಕೆ ಆಯೋಗ್ಯಗೊಳ್ಳಲು ಪ್ರಧಾನ ಕಾರಣ. ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಕೇರಳ, ಗೋವಾ, ಮುಂಬೈ ಸಂಪರ್ಕದ ಅತ್ಯಂತ ಪ್ರಮುಖ ಹೆದ್ದಾರಿಯ ಪ್ರಧಾನ ಭಾಗವಾಗಿರುವ, ಅತಿ ಹೆಚ್ಚು ಸಂಚಾರ ದಟ್ಟಣೆಯ ನಂತೂರು, ಸುರತ್ಕಲ್ ಭಾಗವನ್ನು ಕಡೆಗಣಿಸಿರುವುದು ಖೇದಕರ. ಕಳೆದ ನಾಲ್ಕು ತಿಂಗಳುಗಳಲ್ಲಿ ರಸ್ತೆಗುಂಡಿಗಳಿಂದ ಉಂಟಾದ ಅಪಘಾತಗಳಿಗೆ ಹಲವು ಜೀವಗಳು ಬಲಿಯಾಗಿದ್ದರೂ ಸ್ಥಳೀಯ ಶಾಸಕರು, ಸಂಸದರು ಹೆದ್ದಾರಿ ದುರವಸ್ಥೆಯ ಕುರಿತು ಗಮನ ಹರಿಸದಿರುವುದು ಖಂಡನೀಯ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಕ್ಷಣವೇ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಬೇಕು ಹಾಗೂ ನಂತೂರು- ಸುರತ್ಕಲ್ ಹೆದ್ದಾರಿಯನ್ನು ಪೂರ್ಣ ಪ್ರಮಾಣದ ದುರಸ್ತಿಗೆ ಮಳೆಗಾಲದ ತರುವಾಯ ಮುಂದಾಗಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸುತ್ತದೆ.
ಕೂಳೂರು ಹೊಸ ಸೇತುವೆ ಕಾಮಗಾರಿ ಪೂರ್ತಿಗೊಳಿಸಲು ಒತ್ತಾಯ :
ಇದೇ ಹೆದ್ದಾರಿಯ ಭಾಗವಾಗಿರುವ “ಕೂಳೂರು ಹಳೆಯ ಸೇತುವೆ ಸಂಚಾರಕ್ಕೆ ಅನರ್ಹ ಗೊಂಡು ಕುಸಿಯುವ ಸಾಧ್ಯತೆ ಇದೆ, ಈ ಸೇತುವೆಯ ಮೇಲೆ ವಾಹನ ಸಂಚಾರ ನಿರ್ಬಂಧಿಸಬೇಕು” ಎಂದು ಹೆದ್ದಾರಿ ಪ್ರಾಧಿಕಾರದ ತಜ್ಞರು ವರದಿ ನೀಡಿ ಆರು ವರ್ಷ ದಾಟಿದೆ. ಈ ನಡುವೆ ಹೊಸ ಸೇತುವೆ ನಿರ್ಮಾಣದ ಕಾಮಗಾರಿ ಆರಂಭಗೊಂಡು ನಾಲ್ಕು ವರ್ಷಗಳಾದರೂ ಇನ್ನೂ ಪಿಲ್ಲರ್ ಗಳ ನಿರ್ಮಾಣ ಪೂರ್ಣಗೊಂಡಿಲ್ಲ. ತೀರಾ ಕುಂಟುತ್ತಾ ಸಾಗಿರುವ ಸೇತುವೆ ನಿರ್ಮಾಣ ಕಾಮಗಾರಿ ಈಗ ಪೂರ್ತಿ ಸ್ಥಗಿತಗೊಂಡಿದೆ. ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂಧ ಪಟ್ಟ ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಈ ಸ್ಥಿತಿ ಉಂಟಾಗಿದೆ.
ಆರು ವರ್ಷಗಳ ಹಿಂದೆಯೇ ಹಳೆಯ ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸುವಂತೆ ಜಿಲ್ಲಾಡಳಿತಕ್ಕೆ ಹೆದ್ದಾರಿ ಪ್ರಾಧಿಕಾರ ಪತ್ರ ಬರೆದಿದ್ದರೂ, ಉಡುಪಿ -ಮಂಗಳೂರು ನಡುವೆ ಸಂಚಾರ, ಸಂಪರ್ಕ ಪೂರ್ತಿ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ, ಹಾಗೂ ಹೊಸ ಸೇತುವೆ ನಿರ್ಮಾಣದ ನಂತರವೇ ಹಳೆಯ ಸೇತುವೆ ಮುಚ್ಚಬೇಕು ಎಂಬ ನಾಗರಿಕ ಸಮಾಜದ ಆಗ್ರಹದಿಂದಾಗಿ ಹಳೆಯ ಸೇತುವೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಒದಗಿಸಲಾಗಿದೆ.
ಈಗಂತೂ ಹಳೆಯ ಸೇತುವೆ ಮತ್ತಷ್ಟು ದುರ್ಬಲಗೊಂಡು ಯಾವುದೇ ಕ್ಷಣ ಕುಸಿಯುವ ಭೀತಿ ಎದುರಾಗಿದೆ. ಜಿಲ್ಲಾಡಳಿತ ಸೇತುವೆ ಮುಚ್ಚುವ ಕುರಿತು ಆಲೋಚಿಸುತ್ತಿದೆ. ಈ ರೀತಿ ಹಳೆಯ ಸೇತುವೆ ಮುಚ್ಚಲ್ಪಟ್ಟರೆ ಮಂಗಳೂರು, ಸುರತ್ಕಲ್, ಉಡುಪಿ ನಡುವೆ ಸಂಚಾರ ಅಸ್ತವ್ಯಸ್ತಗೊಳ್ಳಲಿದೆ. ವ್ಯಾಪಾರ, ವ್ಯವಹಾರ, ಆರೋಗ್ಯ, ಶಿಕ್ಷಣ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀಳಲಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಸೇತುವೆ ಕುಸಿದರೆ ಬಹಳ ದೊಡ್ಡ ದುರಂತವನ್ನು ಎದುರುಗೊಳ್ಳಬೇಕಿದೆ.
ಸಂಬಂಧ ಪಟ್ಟವರ ತೀರಾ ಬೇಜವಾಬ್ದಾರಿತನದಿಂದ ನಾಲ್ಕು ವರ್ಷಗಳಿಂದ ತೆವಳುತ್ತಾ ಸಾಗಿರುವ ಕೂಳೂರು ಹೊಸ ಸೇತುವೆಯ ಕಾಮಗಾರಿಯನ್ನು ಈ ವರ್ಷಾಂತ್ಯದ ಗಡುವನ್ನು ನಿರ್ಧರಿಸಿ ಪೂರ್ಣಗೊಳಿಸಬೇಕು, ಅಲ್ಲಿಯವರಗೆ ಹಳೆಯ ಸೇತುವೆ ಮುಚ್ಚಬಾರದು ಹಾಗೂ ನಂತೂರು – ಸುರತ್ಕಲ್ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳನ್ನು ತಕ್ಷಣವೇ ಮುಚ್ಚಿ ದುರಸ್ತಿಗೊಳಿಸಬೇಕು ಎಂದು ಹೆದ್ದಾರಿ ಪ್ರಾಧಿಕಾರವನ್ನು ಹೋರಾಟ ಸಮಿತಿ ಬಲವಾಗಿ ಆಗ್ರಹಿಸುತ್ತದೆ. ಈ ಬೇಡಿಕೆಗಳ ಮೇಲೆ ಸರಣಿ ಪ್ರತಿಭಟನೆಗಳನ್ನು ಸಂಘಟಿಸುವುದಾಗಿ ಸಮಿತಿ ಎಚ್ಚರಿಸಿದೆ.
DAKSHINA KANNADA
300 ಕೋಟಿ ವಂಚನೆ..!ಮಥುರಾ ಕೃಷ್ಣ ದೇವಸ್ಥಾನದಲ್ಲಿದ್ದ ಆರೋಪಿಯ ಬಂಧನ..!
ಮಂಗಳೂರು/ಮುಂಬೈ : ಮಥುರಾ ಕೃಷ್ಣ ಗೋಪಾಲ ದೇವಸ್ಥಾನದ ವೃಂದಾವನದ ಮಹಾಂತ ಎಂದು ಜನರನ್ನು ವಂಚಿಸಿ 300 ಕೋಟಿ ರೂಪಾಯಿ ಪಂಗನಾಮ ಹಾಕಿದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮಥುರಾ ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆಯಲ್ಲಿ ಮಂಹಾಂತನ ಸೋಗಿನಲ್ಲಿದ್ದ ಆರೋಪಿ ವಿಶ್ವನಾಥ ಶಿಂಧೆಯನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ನಿವಾಸಿಯಾಗಿದ್ದ ವಿಶ್ವನಾಥ ಶಿಂಧೆ, ಜಿಜಾವು ಮಾಸಾಹೇಬ್ ಮಲ್ಟಿ ಸ್ಟೇಟ್ ಬ್ಯಾಂಕ್ ನ ಠೇವಣಿದಾರರಿಗೆ 300 ಕೋಟಿ ವಂಚಿಸಿ ತಲೆಮರೆಸಿಕೊಂಡಿದ್ದ. ಈ ನಕಲಿ ಮಹಾಂತ ಶಿಂಧೆಗಾಗಿ ಅನೇಖ ದಿನದಿಂದ ಬೀಡ್ ಪೊಲೀಸರು ಹುಡುಕಾಟ ನಡೆಸಿದ್ದರು. ಈ ವೇಳೆ ಉತ್ತರ ಪ್ರದೇಶದ ಮಥುರಾ ಕೃಷ್ಣ ಗೋಪಾಲ ದೇವಸ್ಥಾನದಲ್ಲಿ ಇದ್ದಾನೆ ಎಂಬ ಸುಳಿವು ಸಿಕ್ಕಿತ್ತು. ಮಥುರಾದ ಶಿವಾಜಿನಗರ ಪೊಲೀಸರ ಸಹಾಯ ಪಡೆದ ಬೀಡ್ ಪೊಲೀಸರು ದೇವಸ್ಥಾನಕ್ಕೆ ದಾಳಿ ನಡೆಸಿದ್ದು ಈ ವೇಳೆ ಕೊಠಡಿಯೊಂದರಲ್ಲಿ ವಿಶ್ವನಾಥ ಶಿಂಧೆ ಅಡಗಿ ಕುಳಿತಿದ್ದ. ಆತ ಬಂಧನದ ಬಳಿಕ ಮಥುರಾ ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ ಟ್ರಾನ್ಸಿಟ್ ವಾರೆಂಟ್ ಪಡೆದುಕೊಂಡು ಆರೋಪಿಯನ್ನು ಮುಂಬೈಗೆ ಕರೆತರಲಾಗಿದೆ. ಆರೋಪಿಯು ಈ ಹಿಂದೆ ಕೂಡಾ ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
LATEST NEWS
ಯುರೋಪ್ ದೇಶಕ್ಕೂ ಕಾಲಿಟ್ಟ ಯಕ್ಷಧ್ರುವ ಪಟ್ಲ ಫೌಂಡೇಶನ್
ಮಂಗಳೂರು: ಇತ್ತೀಚೆಗೆ ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಅಮೆರಿಕಾದಲ್ಲಿ ಪಸರಿಸಿ ಅಲ್ಲಿನ ಜನರಿಗೆ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಾಡಿತ್ತು. ಪಟ್ಲ ಸತೀಶ್ ಸೇರಿದಂತೆ ತಂಡದ 9 ಕಲಾವಿದರು ಸುಮಾರು 75 ದಿನಗಳ ಕಾಲ ಅಮೆರಿಕಾದ ವಿವಿಧ ರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನದ ಜೊತೆ ಕಾರ್ಯಾಗಾರ ನಡೆಸಿದ್ದರು.
ಇದೀಗ ಯಕ್ಷಧ್ರುವ ಪಟ್ಲ ಫೌಂಡೇಶನ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದ್ದು, ಯುರೋಪ್ ದೇಶದಲ್ಲಿ ತನ್ನ ಘಟಕವನ್ನು ಆರಂಭಿಸುತ್ತಿದೆ. ಅಕ್ಟೋಬರ್ 3 ರಂದು ಜರ್ಮನಿಯ ಮ್ಯೂನಿಕ್ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ನ ಯೂರೋಪ್ ಘಟಕ ಉದ್ಘಾಟನೆಗೊಳ್ಳಲಿದೆ.
ಮ್ಯೂನಿಕ್ನ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ರಾಜೀವ್ ಚಿತ್ಕರ್, ನಿವೃತ್ತ ಎಮಿನೆಂಟ್ ಇಂಡೋಲಜಿಯ ಪ್ರೋಫೆಸರ್ ಡಾ.ರೋಬಾರ್ಟ್, ಸನಾತನ ಅಕಾಡೆಮಿಯ ಸಂಸ್ಥಾಪಕರಾದ ಡಾ.ಅನೂಷ್ ನಾಗರಾಜ್ ಶಾಸ್ತ್ರಿ , ಸಿರಿಗನ್ನಡ ಕೂಟ ಮ್ಯೂನಿಕ್ ಇದರ ಅಧ್ಯಕ್ಷರಾದ ಶ್ರೀಧರ್ ಲಕ್ಷ್ಮಾಪುರ್, ಹಾಗೂ ರೈನ್ ಮೈನ್ ಕನ್ನಡ ಸಂಘ ಜರ್ಮನಿ ಇದರ ಅಧ್ಯಕ್ಷರಾದ ವೇದಮೂರ್ತಿ ಕುಮಾರ್ ಅವರು ಈ ಜರ್ಮನಿ ಘಟಕದ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಕ್ಕಳ ತಂಡದಿಂದ ಮಾಯಾಮೃಗ ಎಂಬ ಕಥಾ ಪ್ರಸಂಗದ ಪ್ರದರ್ಶನ ಕೂಡಾ ಆಯೋಜಿಸಲಾಗಿದೆ. ಜೊತೆಗೆ ಯಕ್ಷಗಾನದ ಬಣ್ಣಗಾರಿಕೆ, ನೃತ್ಯ, ಹಿಮ್ಮೇಳದ ಬಗ್ಗೆ ಪ್ರಾತಿಕ್ಷಿಕೆ ಕೂಡಾ ನಡೆಸಲಾಗುವುದು.
LATEST NEWS
35 ರ ಆಸುಪಾಸಿನವರೇ ಈತನ ಟಾರ್ಗೆಟ್; 17 ಮಹಿಳೆಯರಿಗೆ ವಂಚಿಸಿದಾತ ಪೊಲೀಸ್ ಬಲೆಗೆ!
ಮಂಗಳೂರು/ನೋಯ್ಡಾ : ದುಡಿದು ತಿನ್ನುವ ವಯಸ್ಸಿನಲ್ಲೂ ಕುಳಿತು ತಿನ್ನಲು ಬಹಳ ಜನ ನಾನಾ ರೀತಿಯ ಸಂಚು ಮಾಡುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೈ ತುಂಬಾ ಸಂಬಳ ಬರುವ ಕೆಲಸವಿದ್ದರೂ ಸಲ್ಲದ ಅನ್ಯ ಮಾರ್ಗವನ್ನು ಹುಡುಕುವವರ ಸಂಖ್ಯೆ ಬೆಳೆಯುತ್ತಿದೆ. ಇಲ್ಲೊಬ್ಬ ವ್ಯಕ್ತಿ ಲಕ್ಷ ಲಕ್ಷ ಸಂಬಳ ಬರೋ ಕೆಲಸ ಕಳೆದುಕೊಂಡ ಬಳಿಕ ಸುಲಭದಲ್ಲಿ ಹಣ ಮಾಡಬೇಕೆಂದು ಮ್ಯಾಟ್ರಿಮೋನಿ ಸೈಟ್ಗಳಲ್ಲಿ ಮಹಿಳೆಯರನ್ನು ಬಲೆಗೆ ಬೀಳಿಸಿ ಹಣ ದೋಚುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ವಿಪ್ರೋ ಕಂಪೆನಿಯಲ್ಲಿ 1.37 ಲಕ್ಷ ಸಂಬಳ ಬರುವ ಕೆಲಸ ಮಾಡ್ತಿದ್ದ ರಾಹುಲ್ ಚತುರ್ವೇದಿ ಎಂಬ ಖತರ್ನಾಕ್ ಖಿಲಾಡಿ ಕೆಲಸ ಕಳೆದುಕೊಂಡ ಬಳಿಕ ಸುಲಭ ದಾರಿಯಲ್ಲಿ ಹಣ ಗಳಿಸಲು ಮ್ಯಾಟ್ರಿಮೋನಿ ಸೈಟ್ಗಳಲ್ಲಿ ನಕಲಿ ಖಾತೆ ತೆರೆದಿದ್ದಾನೆ. 35 ರ ಆಸುಪಾಸಿನ ವಯಸ್ಸಿನ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಅವರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ದೋಚುತ್ತಿದ್ದ. ಈವರೆಗೆ ಈತ ಮದುವೆಯಾಗುವುದಾಗಿ ನಂಬಿಸಿ ಸುಮಾರು 17 ಮಹಿಳೆಯರಿಗೆ ವಂಚನೆ ಮಾಡಿದ್ದಾನೆ ಎಂದು ವರದಿಯಾಗಿದೆ.
ವಂಚನೆಗೊಳಗಾದ ಮಹಿಳೆಯೊಬ್ಬಳು ದೂರು ನೀಡಿದ ಆಧಾರದ ಮೇಲೆ ಈ ಖದೀಮನನ್ನು ಬಂಧಿಸಲಾಗಿದೆ. ʼ39 ವರ್ಷದ ರಾಹುಲ್ ಚತುರ್ವೇದಿ ವಿವಿಧ ಮ್ಯಾಟ್ರಿಮೋನಿ ವೆಬ್ಸೈಟ್ಗಳಲ್ಲಿ ನಕಲಿ ಖಾತೆಯನ್ನು ತೆರೆದು ಸುಮಾರು 35 ರ ಆಸುಪಾಸಿನ ಮಹಿಳೆಯರನ್ನು ಟಾರ್ಗೆಟ್ ಮಾಡಿ ಬಲೆಗೆ ಬೀಳಸಿ ಮದುವೆಯಾಗುತ್ತೇನೆಂದು ನಂಬಿಸಿ ಸ್ನೇಹ ಬೆಳೆಸಿ ಕೊನೆಗೆ ವಿವಿಧ ಆಮಿಷವೊಡ್ಡಿ ಆ ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿದ್ದ’ ಎಂಬುವುದಾಗಿ ನೋಯ್ಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- FILM6 days ago
ಕನ್ನಡದ ಸೀರಿಯಲ್ನಲ್ಲಿ ಮಿಂಚುತ್ತಿರುವ ಉಡುಪಿಯ ಬೆಡಗಿ
- DAKSHINA KANNADA6 days ago
ಕನ್ನಡದಲ್ಲಿ ಔಷಧ ಚೀಟಿ ಬರೆದು ಗಮನ ಸೆಳೆದ ಕಾಸರಗೋಡು ಜಿಲ್ಲೆಯ ದಂತ ವೈದ್ಯ..!
- LATEST NEWS5 days ago
ವೃಶ್ಚಿಕದಲ್ಲಿ ಬುಧ-ಶುಕ್ರ ಯುತಿ; ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ
- LATEST NEWS3 days ago
ಸೆಪ್ಟಂಬರ್ 29 ರಿಂದ ಆಕಾಶದಲ್ಲಿ ಎರಡು ಚಂದ್ರ ಗೋಚರ..! ಏನಿದು ವಿಸ್ಮಯ..?