ಬಂಟ್ವಾಳ: ತೆಂಗಿನಕಾಯಿ ಕೀಳುವ ವೇಳೆ ವ್ಯಕ್ತಿಯೋರ್ವ ಆಯತಪ್ಪಿ ಮರದಿಂದ ಬಿದ್ದು ಸಾವನ್ನಪ್ಪಿದ ದಕ್ಷಿಣ ಕನ್ನಡ ಜಿಲ್ಲೆಯ ಘಟನೆ ಬಂಟ್ವಾಳ ಸಮೀಪದ ನಾವೂರ ಎಂಬಲ್ಲಿ ನಡೆದಿದೆ.
ಇಲ್ಲಿನ ನಾವೂರ ಸೂರ ನಿವಾಸಿ ಸುರೇಶ್ (40) ತೆಂಗಿನ ಮರದಿಂದ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಸುರೇಶ್ ಅವರು ಹಲವಾರು ವರ್ಷಗಳಿಂದ ತೆಂಗಿನಕಾಯಿ, ಅಡಿಕೆ ಮರದಿಂದ ಕಾಯಿ ಕೀಳುವ ಕೂಲಿ ಕೆಲಸ ಮಾಡುತ್ತಿದ್ದರು.
ಎಂದಿನಂತೆ ಶನಿವಾರ ಬೆಳಗ್ಗೆ ಕೂಡ ತೆಂಗಿನಕಾಯಿ ಕೀಳುವುದಕ್ಕೆ ನಾವೂರ ಅದರ್ಕಳ ನಿವಾಸಿಯಾದ ವಸಂತ ಎಂಬವರ ಮನೆಗೆ ಹೋಗಿದ್ದು, ತೆಂಗಿನಕಾಯಿ ಕೀಳುವ ವೇಳೆ ಸುರೇಶ್ ಅವರು ಆಕಸ್ಮಿಕವಾಗಿ ಮರದಿಂದ ಕೆಳಗೆ ಬಿದ್ದಿದ್ದರು.
ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಬಂಟ್ವಾಳ ಆಸ್ಪತ್ರೆಗೆ ತರಲಾಯಿತು. ಅಲ್ಲಿನ ವೈದ್ಯ ರು ಪರೀಕ್ಷೆ ನಡೆಸಿ ಗಂಭೀರವಾದ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದರು.
ಮಂಗಳೂರಿಗೆ ಕರೆದುಕೊಂಡು ಹೋಗುವ ವೇಳೆ ಸುರೇಶ್ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.