LATEST NEWS
ಲಾರಿ-ಬೈಕ್ ಅಪಘಾತ: ಸ್ಥಳದಲ್ಲೇ ಪ್ರಾಣ ಬಿಟ್ಟ ಸವಾರ
ಮಂಗಳೂರು: ಲಾರಿ ಹಾಗು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳೂರು ಸಮೀಪದ ಬಿಕರ್ನಕಟ್ಟೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಉಳಾಯಿಬೆಟ್ಟು ನಿವಾಸಿ ದಯಾನಂದ್ ಕೆ. ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಪಡೀಲ್ಗೆ ಹೋಗುವ ಲಾರಿಯನ್ನು ಬೈಕ್ ಸವಾರ ಓವರ್ ಟೇಕ್ ಮಾಡುವ ಭರದಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಮೃತ ದಯಾನಂದ ಮಂಗಳೂರು ನಗರದಲ್ಲಿ ಸಂಚರಿಸುವ ಸಿಟಿ ಬಸ್ ನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಘಟನೆಯಲ್ಲಿ ಸ್ಕೂಟರ್ ಸವಾರ ಲಾರಿಯಡಿಗೆ ಬಿದ್ದಿದ್ದಾರೆ. ಇದರಿಂದಾಗಿ ಸ್ಕೂಟರ್ ಸವಾರನ ದೇಹ ಛಿದ್ರವಾಗಿದೆ. ಸ್ಥಳಕ್ಕೆ ಕದ್ರಿ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆಸಿದ್ದಾರೆ.
LATEST NEWS
ಉಡುಪಿ: ಅನ್ಯಕೋಮಿನವರ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತವೇ ಮುಖ್ಯ ಕಾರಣ : ಸುನಿಲ್ ಕುಮಾರ್
ಉಡುಪಿ : ರಾಜ್ಯದಲ್ಲಿ ಅನ್ಯಕೋಮಿನವರು ದೊಡ್ಡ ಪ್ರಮಾಣದಲ್ಲಿ ವಿಜ್ರಂಭಿಸಲು ಆರಂಭ ಮಾಡಿದ್ದಾರೆ. ರಾಜ್ಯದಲ್ಲಿ ಒಂದಾದ ನಂತರ ಒಂದು ಘಟನೆಗಳು ನಡೆಯುತ್ತಿದೆ. ಅನ್ಯಕೋಮಿನವರ ಈ ಪ್ರಮಾಣದ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತ ಮತ್ತು ಧೋರಣೆಯೇ ಮುಖ್ಯ ಕಾರಣ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿದರು.
ಹುಬ್ಬಳ್ಳಿಯ ನೇಹಾ ಹಿರೇಮಠ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಶನಿವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸಿದ್ದರಾಮಯ್ಯನವರು ನೇಹಾ ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ವೈಯಕ್ತಿಕ ಘಟನೆ ಎಂದು ಹೇಳುತ್ತಾರೆ.
ಇದನ್ನೂ ಓದಿ : ನೇಹಾ ಹ*ತ್ಯೆ ಪ್ರಕರಣ : ಆಕ್ರೋಶ ಹೊರ ಹಾಕಿದ ಸಿನಿತಾರೆಯರು
ಮುಖ್ಯಮಂತ್ರಿಯಾದವರು ಇಂತಹ ಘಟನೆಯಾದಾಗ ಜಾರಿಕೊಂಡರೆ ರಾಜ್ಯದ ರಕ್ಷಣೆ ಯಾರು ಮಾಡಬೇಕು? ರಾಮೇಶ್ವರಂ ಬಾಂಬ್ ಸ್ಫೋಟ, ಪಾಕ್ ಜಿಂದಾಬಾದ್, ಕೊ*ಲೆ ಸಂದರ್ಭದಲ್ಲಿ ಸಿಎಂ ಮಾತನಾಡುವುದಿಲ್ಲ. ಹಾಡು ಹಗಲೇ ಹ*ತ್ಯೆಯಾದಾಗ ಕಠಿಣ ಧೋರಣೆ ವಹಿಸಬೇಕಿತ್ತು. ಲವ್ ಜಿ*ಹಾದ್, ಮತಾಂ*ಧತೆ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಗರಿಗೆದರಿದೆ. ರಾಜ್ಯದ ರಕ್ಷಣೆ ಕಾಂಗ್ರೆಸ್ ನಿಂದ ಅಸಾಧ್ಯ. ಸಮಾಜ ದೊಡ್ಡ ಪ್ರಮಾಣದಲ್ಲಿ ಜಾಗೃತವಾಗ ಬೇಕಾದ ಅನಿವಾರ್ಯತೆ ಇದೆ ಎಂದರು.
FILM
ಸೂಪರ್ ಹಿಟ್ ಚಿತ್ರ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್ ಡೇಟ್ ಫಿಕ್ಸ್!
ಮಲಯಾಳಂನ ಮಂಜುಮ್ಮೆಲ್ ಬಾಯ್ಸ್ ಭಾರೀ ಯಶಸ್ಸನ್ನು ಗಳಿಸಿದ ಚಿತ್ರ. ಚಿತ್ರ ನೋಡಿ ಮತ್ತೆ ಮತ್ತೆ ವೀಕ್ಷಿಸಲು ಥಿಯೇಟರ್ ಗೆ ಜನ ಲಗ್ಗೆ ಇಡುತ್ತಿದ್ದಾರೆ. ಮಲಯಾಳಂ ಸಿನಿ ಪ್ರಿಯರು ಚಿತ್ರ ನೋಡಿ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಸಿನಿಮಾ ಬಂದ್ರೂ ಅದು ಓಟಿಟಿಯಲ್ಲಿ ಯಾವಾಗ ಬರುತ್ತೆ ಅಂತ ಕಾಯೋದು ಸಹಜ. ಇದೀಗ ‘ಮಂಜುಮ್ಮೆಲ್ ಬಾಯ್ಸ್’ ಸರದಿ.
ಅತಿ ಹೆಚ್ಚು ಗಳಿಕೆ :
‘ಮಂಜುಮ್ಮೆಲ್ ಬಾಯ್ಸ್’ ಸರಳ ಕಥಾಹಂದರ ಹೊಂದಿದ್ದರೂ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಚಿತ್ರವನ್ನು ಚಿದಂಬರಂ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಫೆಬ್ರವರಿ 22 ರಂದು ಈ ಚಿತ್ರ ತೆರೆಕಂಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಗ್ರಾಸ್ ಕಲೆಕ್ಷನ್ 200 ಕೋಟಿ ರೂಪಾಯಿ ದಾಟಿದೆ. ಮಲಯಾಳಂನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಿದೆ.
ಶೌಬಿನ್ ಶಾಹಿರ್, ಶ್ರೀನಾಥ್ ಬಾಸಿ, ಬಾಲು ವರ್ಗೀಸ್, ಗಣಪತಿ ಸೇರಿದಂತೆ ಸಾಕಷ್ಟು ಜನ ಕಲಾವಿದರು ಚಿತ್ರದಲ್ಲಿ ಪಾತ್ರವಾಗಿದ್ದಾರೆ. ಅಂದಾಜು 20 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಸ್ಟಾರ್ ನಟರಿಲ್ಲದ ಈ ಸಿನಿಮಾ 200 ಕೋಟಿ ರೂ. ಕಲೆಕ್ಷನ್ ಮಾಡಿರೋದು ಆಶ್ಚರ್ಯ ಹುಟ್ಟು ಹಾಕಿದೆ.
ಓಟಿಟಿಯಲ್ಲಿ ಯಾವಾಗ ?
‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾವನ್ನು ಥಿಯೇಟರ್ ಅಂಗಳದಲ್ಲಿ ನೋಡಿ ಎಂಜಾಯ್ ಮಾಡಿದವರು ಅನೇಕ ಮಂದಿ ಇದ್ದಾರೆ. ಇದೀಗ ಸಿನಿಮಾ ಓಟಿಟಿಯಲ್ಲಿ ಯಾವಾಗ ಅನ್ನೋ ಪ್ರಶ್ನೆ ಹುಟ್ಟಿತ್ತು. ಇದಕ್ಕೆ ಉತ್ತರವೂ ಸಿಕ್ಕಿದೆ.
ಡಿಸ್ನಿ ಪ್ಲಸ್ ಹಾಟ್ಸ್ಟರ್ನಲ್ಲಿ ಮೇ 3 ರಂದು ಸ್ಟ್ರೀಮಿಂಗ್ ಆಗುವುದು ಬಹುತೇಕ ಖಚಿತವಾಗಿದೆ. ಫೆಬ್ರವರಿ 22 ರಂದು ತೆರೆಗೆ ಬಂದಿದ್ದ ಸಿನಿಮಾ ಈಗಾಗಲೇ 50 ದಿನ ಪೂರೈಸಿದೆ. ಸದ್ಯ ತೆಲುಗು, ತಮಿಳು, ಕನ್ನಡಕ್ಕೂ ಸಿನಿಮಾ ಡಬ್ ಆಗಿದ್ದು, ಏಕಕಾಲಕ್ಕೆ ಓಟಿಟಿಯಲ್ಲಿ ಸ್ಕ್ರೀಮಿಂಗ್ ಆಗಲಿದೆಯಾ ಎಂಬುದು ತಿಳಿದು ಬಂದಿಲ್ಲ.
BELTHANGADY
ಸೈಕಲ್ ರಿಪೇರಿ ವಿಚಾರಕ್ಕೆ ಜೀ*ವಾಂತ್ಯಗೊಳಿಸಿದ ಬಾಲಕ..!
ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕೆ 8 ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಎಂಬಲ್ಲಿ ಏ.19ರಂದು ನಡೆದಿದೆ. ಉಪ್ಪಿನಂಗಡಿಯ ಖಾಸಗಿ ಶಾಲೆಯ ಮುಂದಿನ ಅವಧಿಯಲ್ಲಿ 8 ನೇ ತರಗತಿ ವಿದ್ಯಾರ್ಥಿಯಾಗಿದ್ದ ನಂದನ್ (13) ಎಂಬಾತ ಆತ್ಮಹತ್ಯೆಗೆ ಶರಣಾದ ಬಾಲಕ.
Read More..; ನಗರ ಸಭೆ ಉಪಾಧ್ಯಕ್ಷೆ ಮಗ ಸೇರಿ ನಾಲ್ವರ ಹ*ತ್ಯೆ! ಹಂ*ತಕರ ಪತ್ತೆಗೆ ವಿಶೇಷ ತಂಡ ರಚನೆ
ಪಂಜದ ದಿವಂಗತ ರೋಹಿತ್ ಗೌಡ ಎಂಬವರ ಮಗನಾಗಿದ್ದ ಈತ ತನ್ನ ತಂದೆಯ ನಿಧನದ ನಂತರ ದುಗಲಾಡಿಯ ಮಾವನ ಮನೆಯಲ್ಲಿದ್ದ. ಅಲ್ಲಿಂದಲೆ ಉಪ್ಪಿನಂಗಡಿಯ ಖಾಸಗಿ ಶಾಲೆಗೆ ಹೋಗುತ್ತಿದ್ದ. ಈತ ಈ ಬಾರಿ ಏಳನೇ ತರಗತಿ ಉತ್ತೀರ್ಣನಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ 8 ನೇ ತರಗತಿಗೆ ತೇರ್ಗಡೆ ಹೊಂದಿದ್ದ. ಏ.19ರಂದು ತನ್ನ ಕೆಟ್ಟು ಹೋಗಿದ್ದ ಸೈಕಲ್ ಅನ್ನು ರಿಪೇರಿ ಮಾಡಿಕೊಡಬೇಕೆಂದು ಮನೆಯಲ್ಲಿ ಒತ್ತಾಯಿಸಿದ್ದ. ಮನೆಯ ಇನ್ವಾರ್ಟರ್ ರಿಪೇರಿಗೆ ಬಂದಿರುವುದರಿಂದ ಇವತ್ತು ಬೇಡ ನಾಳೆ ಸೈಕಲ್ ರಿಪೇರಿ ಮಾಡಿಕೊಡಲಾಗುವುದೆಂದು ಮನೆಯವರು ಹೇಳಿದ್ದಾರೆ ಎನ್ನಲಾಗಿದೆ. ಇದೇ ನೆಪವನ್ನು ಇಟ್ಟುಕೊಂಡು ಮನನೊಂದ ಬಾಲಕ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಎಲ್ಲಾ ವಿಚಾರವನ್ನು ಮನೆಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.