LATEST NEWS
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಹೃದಯಾಘಾತದಿಂದ ನಿಧನ..!
ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಸಂಸದ ಆರ್. ಧ್ರುವ ನಾರಾಯಣ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.
ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಸಂಸದ ಆರ್. ಧ್ರುವ ನಾರಾಯಣ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.
ಹಠಾತ್ ಹೃದಯಾಘಾತ ಸಂಭವಿಸಿದ ಕೂಡಲೇ ಅವರನ್ನು ಮೈಸೂರಿನ ಡಿಆರ್ಎಂಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
1961 ಜುಲೈ 31ರಂದು ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಗ್ರಾಮದಲ್ಲಿ ಜನನಿಸಿದ್ದ ಧ್ರುವನಾರಾಯಣ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಕೃಷಿ ಪದವಿ ಪಡೆದುಕೊಂಡಿದ್ದರು.
ನಂತರ ಸ್ನಾತಕೋತ್ತರ ಪದವಿ ಪಡೆದು, 1983ರಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು. 2004ರಲ್ಲಿ ಸಂತೇಮರಹಳ್ಳಿ ವಿಧಾನ ಸಭಾ ಕ್ಷೇತ್ರ ಹಾಗೂ 2008ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಗಳಿಂದ ಸತತ ಎರಡು ಬಾರಿ ಶಾಸಕರಾಗಿ ಜಯ ಗಳಿಸಿದ್ದರು.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಂಜನಗೂಡು ಕಾಂಗ್ರೆಸ್ ಅಭ್ಯಥಿಯಾಗಿ ಸ್ಪರ್ಧಿಸುವವರಿದ್ದರು. ಈ ಹಿನ್ನೆಲೆಯಲ್ಲಿ ಮತದಾರರನ್ನು ಭೇಟಿ ಮಾಡುವ ಕಾರ್ಯದಲ್ಲಿ ತೊಡಗಿದ್ದರು.
LATEST NEWS
238 ಬಾರಿ ಸೋತ ಅಭ್ಯರ್ಥಿ ಮತ್ತೆ ಲೋಕಸಭಾ ಅಖಾಡಕ್ಕೆ!
ಮಂಗಳೂರು ( ಮೆಟ್ಟೂರು ) : ಚುನಾವಣೆ ಅಂದ ಮೇಲೆ ಅಭ್ಯರ್ಥಿ ಹೇಗಾದ್ರೂ ಗೆಲ್ಲಲೇ ಬೇಕು ಅಂತ ಪ್ರಯತ್ನ ಮಾಡ್ತಾನೆ. ಹಾಗಂತ ಎರಡು ಮೂರು ಸ್ಪರ್ಧೆ ಮಾಡಿ ಗೆಲುವು ಸಿಕ್ಕಿಲ್ಲಾ ಅಂದ್ರೆ ಸುಮ್ಮನೆ ಮನೇಲಿ ಕೂರ್ತಾನೆ. ಆದ್ರೆ ಅದೊಂದು ಅಭ್ಯರ್ಥಿ ಮಾತ್ರ ಚುನಾವಣೆಯಲ್ಲಿ ಬರೋಬ್ಬರಿ 238 ಬಾರಿ ಸ್ಪರ್ಧೆ ಮಾಡಿ ಸೋತರೂ ಮತ್ತೆ ಈ ಬಾರಿ ಲೋಕಸಭಾ ಚುನಾವಣ ಕಣಕ್ಕೆ ಇಳಿದಿದ್ದಾರೆ.
ಚುನಾವಣೆಗೆ ನಿಲ್ಲೋದೇ ಸೋಲೋದಿಕ್ಕೆ ಅನ್ನೋ ರೀತಿ ನಿರಂತರವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮೂಲಕ 65 ವಯಸ್ಸಿನ ಪದ್ಮರಾಜನ್ ಎಂಬವರು ಈ ಭಾರಿ ಮತ್ತೆ ಕಣಕ್ಕಿಳಿದಿದ್ದಾರೆ.
ಚುನಾವಣೆಯಲ್ಲಿ ಭಾಗವಹಿಸುವುದು ಮುಖ್ಯ!
ತಮಿಳುನಾಡಿನ ಮೆಟ್ಟೂರು ವಿಧಾನಸಭಾ ಕ್ಷೇತ್ರದಿಂದ 1988 ರಲ್ಲಿ ಚುನಾವಣೆಯಲ್ಲಿ ಪದ್ಮರಾಜನ್ ತಮ್ಮ ಮೊದಲ ಸ್ಪರ್ಧೆ ಆರಂಭಿಸಿದ್ದಾರೆ. ಸಾಮಾನ್ಯ ಟೈರ್ ರಿಪೇರಿ ಅಂಗಡಿ ಮಾಲೀಕರಾಗಿರುವ ಕೆ. ಪದ್ಮರಾಜನ್ ಅಂದಿನಿಂದ ಇಂದಿನವರೆಗೆ ಸರಿ ಸುಮಾರು 238 ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಚುನಾವಣೆಯ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಕಟ್ಟಿದ ಲಕ್ಷಾಂತರ ರೂಪಾಯಿ ಠೇವಣಿಯನ್ನೇ ಇವರು ಕಳೆದುಕೊಂಡಿದ್ದಾರೆ. ಆದರೆ ಅದೆಷ್ಟೇ ಸಲ ಸೋತರು.. ಠೇವಣಿ ಕಳೆದುಕೊಂಡರು ಕೂಡ ಇವರ ತಲೆ ಕೆಡಿಸಿಕೊಂಡಿಲ್ಲ.
ಎಲ್ಲಾ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವನ್ನು ಬಯಸುತ್ತಾರೆ. ಆದರೆ ನಾನು ಹಾಗೆ ಅಲ್ಲ ನನಗೆ ಚುನಾವಣೆಯಲ್ಲಿ ಭಾಗವಹಿಸುವುದೇ ಮುಖ್ಯ ಅಂತಾರೆ ಪದ್ಮರಾಜನ್. ಏಪ್ರಿಲ್ 19 ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸಂಸದೀಯ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.
ಕಿಂಗ್ ಆಫ್ ದಿ ಎಲೆಕ್ಷನ್ ಬಿರುದು :
ಸ್ಥಳೀಯಾಡಳಿತದ ಚುನಾವಣೆಯಿಂದ ಹಿಡಿದು ರಾಷ್ಟ್ರಪತಿ ಚುನಾವಣೆಗೂ ಇವರು ಸ್ಪರ್ಧೆ ಮಾಡಿದ್ದಾರೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಘಟಾನುಘಟಿ ನಾಯಕರುಗಳಾದ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ, ರಾಹುಲ್ ಗಾಂಧಿ ಹೀಗೆ ಅನೇಕರ ವಿರುದ್ಧ ಇವರು ಸ್ಪರ್ಧೆ ಮಾಡಿ ಸೋತಿದ್ದಾರೆ. ಹೀಗಾಗಿ ಇವರಿಗೆ ಕಿಂಗ್ ಆಪ್ ದಿ ಎಲೆಕ್ಷನ್ ಅಂತಾನೂ ಬಿರುದು ಸಿಕ್ಕಿದೆ.
ಸೋತರೂ ಗೆಲುವು :
ನಿರಂತರ ಚುನಾವಣೆಯಲ್ಲಿ ಸೋತಿರುವ ಪದ್ಮರಾಜನ್ ಅವರು ಒಂದು ವಿಚಾರದಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ಮೂವತ್ತೈದು ವರ್ಷಗಳಿಂದ ಸೋಲುವ ಮೂಲಕ ಈ ಗೆಲುವು ತಂದುಕೊಂಡಿದ್ದಾರೆ. ಸೋಲಿನ ಮೂಲಕವೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ಸೇರಿಸಿಕೊಳ್ಳುವ ಮೂಲಕ ಆ ಗೆಲುವು ಇವರಿಗೆ ಸಿಕ್ಕಿದೆ.
ಈ ಬಾರಿ ಮತ್ತೆ ಲೊಕಸಭಾ ಚುನಾವಣೆಯ ಕಣಕ್ಕಿಳಿದಿರುವ ಪದ್ಮರಾಜನ್ ಅವರು ನನಗೆ ಸೋಲಿನಲ್ಲೇ ಖುಷಿ ಇದೆ. ಹಾಗೊಂದು ವೇಳೆ ಎಲ್ಲಿಯಾದ್ರೂ ಜನ ನನ್ನನ್ನು ಗೆಲ್ಲಿಸಿದ್ರೆ ಹೃದಯಾಘಾತವಾಗಿ ಉಸಿರೇ ನಿಂತು ಹೋಗಬಹುದು ಎಂದು ತಮಾಷೆಯಾಗಿ ಹೇಳುತ್ತಾರೆ. ಹೀಗಾಗಿ ನನ್ನ ಉಸಿರು ಇರಬೇಕು ಅಂದ್ರೆ ನಾನು ಸದಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಹಾಗೂ ಸೋಲಬೇಕು ಅಂತಾರೆ.
LATEST NEWS
ಪ್ರಧಾನಿ ಕಾರಿನ ನೋಂದಣಿಯನ್ನು ವಿಸ್ತರಿಸಲು ಅಸಾಧ್ಯ ಎಂದ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ; ಕಾರಣ ಏನು?
ನವದೆಹಲಿ : ಪ್ರಧಾನಿ ಕಾರಿನ ನೋಂದಣಿಯನ್ನು ವಿಸ್ತರಿಸಲು ಅಸಾಧ್ಯ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ( NGT ) ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಮೂರು ಡಿಸೇಲ್ ಕಾರುಗಳ ನೋಂದಣಿ ವಿಸ್ತರಿಸುವಂತೆ ಎಸ್ಪಿಜಿ (SPG) ಮನವಿ ಸಲ್ಲಿಸಿತ್ತು.
ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಹೇಳಿದ್ದೇನು?
“ಈ ಮೂರು ಕಾರುಗಳು ಸಾಮಾನ್ಯವಾಗಿ ಬಳಸಲ್ಪಡದ ವಿಶೇಷ ಉದ್ದೇಶದ ವಾಹನಗಳಾಗಿವೆ. ಈ ವಾಹನಗಳು ಹತ್ತು ವರ್ಷಗಳಲ್ಲಿ ಬಹಳ ಕಡಿಮೆ ಚಲಿಸಿವೆ ಮತ್ತು ಪ್ರಧಾನಿ ಅವರ ಭದ್ರತೆಯ ನಿರ್ದಿಷ್ಟ ಉದ್ದೇಶಕ್ಕಾಗಿ ಅಗತ್ಯವಾಗಿವೆ. ಆದರೆ ಸುಪ್ರೀಂ ಕೋರ್ಟ್ 2018ರ ಅಕ್ಟೋಬರ್ 29ರಂದು ನೀಡಿದ ಆದೇಶದಂತೆ ಆ ವಾಹನಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಮನವಿಯನ್ನು ತಿರಸ್ಕರಿಸಲಾಗಿದೆ” ಎಂದು ಎನ್ಜಿಟಿ ಹೇಳಿದೆ.
ಎಸ್ಪಿಜಿ ಈ ಕಾರುಗಳಿಗೆ ಅನುಮತಿ ಕೇಳಿದ್ಯಾಕೆ?
ಈ ವಾಹನಗಳ ವಿನ್ಯಾಸ ಮತ್ತು ತಾಂತ್ರಿಕ ಹಾಗೂ ಕಾರ್ಯತಂತ್ರಗಳು ಬಹಳಷ್ಟು ವಿಶೇಷವಾಗಿದೆ. ಇಂತಹ ವಾಹನಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುವುದಿಲ್ಲ. ಭದ್ರತೆಯ ದೃಷ್ಟಿಯಲ್ಲಿ ವಿಶೇಷವಾಗಿ ವಿನ್ಯಾಸ ಮಾಡಿರುವ ಕಾರಣ ಈ ಕಾರುಗಳಿಗೆ ಇನ್ನೂ ಐದು ವರ್ಷಗಳ ಕಾಲ ನೊಂದಣಿಯನ್ನು ವಿಸ್ತರಿಸಿ ಎಂದು ಎಸ್ಪಿಜಿ ಕೋರಿಕೆ ಸಲ್ಲಿಸಿತ್ತು.
ದೆಹಲಿ ಎನ್ಸಿಆರ್ನಲ್ಲಿನ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಕ್ರಮವಾಗಿ ಎನ್ಜಿಟಿ ಮತ್ತು ಸುಪ್ರೀಂ ಕೋರ್ಟ್ ಈ ಆದೇಶಗಳನ್ನು ಹೊರಡಿಸಿದ್ದವು. ಎನ್ಜಿಟಿ 2015ರ ಏಪ್ರಿಲ್ನಲ್ಲಿ ದೆಹಲಿ ಎನ್ಸಿಆರ್ ರಸ್ತೆಗಳಲ್ಲಿ 10 ವರ್ಷಕ್ಕಿಂತ ಹಳೆಯದಾದ ಎಲ್ಲ ಡೀಸೆಲ್ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. 10 ವರ್ಷಕ್ಕಿಂತ ಹಳೆಯದಾದ ಯಾವುದೇ ಡೀಸೆಲ್ ವಾಹನವನ್ನು ನೋಂದಾಯಿಸದಂತೆ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಇದನ್ನೂ ಓದಿ…238 ಬಾರಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಮತ್ತೆ ಲೋಕಸಭಾ ಅಖಾಡಕ್ಕೆ…!
2013ರಲ್ಲಿ ತಯಾರಿಸಿದ ಮತ್ತು 2014ರ ಡಿಸೆಂಬರ್ನಲ್ಲಿ ನೋಂದಾಯಿಸಲಾದ ಮೂರು ರೆನಾಲ್ಟ್ ಎಂಡಿ -5 (Renault MD-5) ವಿಶೇಷ ಶಸ್ತ್ರಸಜ್ಜಿತ ವಾಹನಗಳು 9 ವರ್ಷಗಳಲ್ಲಿ ಕ್ರಮವಾಗಿ ಸುಮಾರು 6,000 ಕಿ.ಮೀ., 9,500 ಕಿ.ಮೀ. ಮತ್ತು 15,000 ಕಿ.ಮೀ. ಕ್ರಮಿಸಿವೆ.
bengaluru
ಚುನಾವಣೆ ಗೆಲ್ಲೋಕೆ ನನ್ನ ಹೆ*ಣ ಬೀಳಿಸೋಕು ಬಿಜೆಪಿಯವ್ರು ಸಿದ್ಧರಿದ್ದಾರೆ; ಜೀವ ಬೆದರಿಕೆ ಪತ್ರ ಹಿಡಿದು ಕಿಡಿಕಾರಿದ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಸದ್ಯ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈ ನಡುವೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆ*ದರಿಕೆ ಪತ್ರ ಬಂದಿದೆ. ಸ್ವತ: ಈ ಬಗ್ಗೆ ಪ್ರಿಯಾಂಕ ಖರ್ಗೆ ಅವರೇ ಹೇಳಿದ್ದಾರೆ.
ಎನ್ ಕೌಂಟರ್ ಬೆ*ದರಿಕೆ:
ಭಾರತೀಯ ಜನತಾ ಪಾರ್ಟಿಯವರು ಗಲಭೆ ಸೃಷ್ಟಿ ಮಾಡಿ ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆ*ಣ ಬೀಳಿಸಿಯಾದರೂ ಚುನಾವಣೆ ಗೆಲ್ಲುವ ಯೋಜನೆಯಲ್ಲಿದ್ದಾರೆ. ಅಲ್ಲದೆ, ತನಗೆ ಮತ್ತೊಂದು ಜೀವ ಬೆ*ದರಿಕೆ ಪತ್ರ ಬಂದಿದೆ. ಅದರಲ್ಲಿ ತನ್ನನ್ನು ಎನ್ಕೌಂಟರ್ ಮಾಡುವುದಾಗಿ ಬೆ*ದರಿಕೆ ಹಾಕಲಾಗಿದೆ. ಫಿನ್ಲ್ಯಾಂಡ್ನಿಂದ ಪತ್ರ ಬಂದಿದೆ ಎಂದು ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮಗೆ ಬಂದಿರುವ ಜೀವ ಬೆದರಿಕೆ ಪತ್ರ ಓದಿದರು.
“ಪಂಚಾಮೃತದಿಂದ ಪೂಜೆ ಮಾಡಿದರೂ ನಿನ್ನ ಜಾತಿ ಬೇರೆಯಾಗುವುದಿಲ್ಲ. ಎಂತ ವೇಷ ಭೂಷಣ ಹಾಕಿದರೂ ನಿನ್ನ ಜಾತಿ ಬದಲಾಗುವುದಿಲ್ಲ. ಮಂತ್ರಿಯಾಗು, ರಾಜನಾಗೂ, ನಿನ್ನ ಸೊಕ್ಕು ಹೊಲೆಯ-ಮಾದಿಗ ಓಣಿಯಲ್ಲಿ ನಡೆಯುತ್ತೆ” ಎಂದು ಪತ್ರದಲ್ಲಿ ಅಶ್ಲೀಲ ಪದ ಬಳಸಿದ್ದಾರೆ. ಖಾಕಿಯಾದರೂ, ಖಾದಿಯಾದರೂ, ಯಾರಿಂದಲಾದರೂ ನಿನ್ನನ್ನು ಎನ್ಕೌಂ*ಟರ್ ಮಾಡುವುದು ಸತ್ಯ ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದರು.
ಬೆದರಿಕೆ ಸಂಬಂಧ ಮಾರ್ಚ್ 13 ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದೇನೆ. ವಿಕಾಸೌಧದಲ್ಲಿರುವ ನನ್ನ ಕಚೇರಿಗೆ ಕಲಬುರಗಿಯಿಂದಲೇ ಪತ್ರ ಬಂದಿದೆ. ಹೆದರಿಸುವುದು ಅಥವಾ ಬೆದರಿಸಲು ಬಂದರೆ ಅದಕ್ಕೆಲ್ಲ ನಾವು ಹೆದರುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.