ಮಂಗಳೂರು ( ಸುಳ್ಯ ) : ಬೆಂಗಳೂರಿನಿಂದ ಸುಬ್ರಹ್ಮಣ್ಯ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ ಸರ್ಕಾರಿ ಬಸ್ನಲ್ಲಿ ಯುವಕನೊಬ್ಬ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾನೆ. ಈ ವಿಚಾರ ತಿಳಿದ ವಿದ್ಯಾರ್ಥಿನಿಯ ಸಹಪಾಠಿಗಳು ಯುವಕನನ್ನು ಹಿಡಿದು ಹಲ್ಲೆ ನಡೆಸಿದ ಘಟನೆ ಸುಳ್ಯದಲ್ಲಿ ನಡೆದಿದೆ.
ಸುಬ್ರಹ್ಮಣ್ಯ ಸಮೀಪದ ಬಿಸಲೆ ಘಾಟ್ ಬಳಿ ವಿದ್ಯಾರ್ಥಿನಿ ಬೆಂಗಳೂರಿನಿಂದ ಬಂದಿದ್ದ ಬಸ್ ಹತ್ತಿದ್ದಳು. ಈ ವೇಳೆ ಯುವಕೊನೊಬ್ಬ ಕುಳಿತಿದ್ದ ಸೀಟ್ ಪಕ್ಕದ ಸೀಟ್ ಖಾಲಿ ಇದ್ದ ಕಾರಣ ಆಕೆ ಆತನ ಪಕ್ಕದಲ್ಲೇ ಕುಳಿತಿದ್ದಾಳೆ. ಆದ್ರೆ ವಿದ್ಯಾರ್ಥಿನಿ ಪಕ್ಕದಲ್ಲಿ ಕುಳಿತ ಸ್ವಲ್ಪ ಸಮಯದಲ್ಲೇ ಯುವಕ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದಾನೆ. ಈ ವಿಚಾರವನ್ನು ಬಸ್ ನಿರ್ವಾಹಕನಿಗೆ ತಿಳಿಸಿದಾಗ ನಿರ್ವಾಹಕ ಹಾಗೂ ಬಸ್ ಪ್ರಯಾಣಿಕರು ಆರೋಪಿ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿದ್ಯಾರ್ಥಿನಿ ಈ ವಿಚಾರವನ್ನು ಸುಳ್ಯದ ತನ್ನ ಕಾಲೇಜು ಸಹಪಾಠಿಗಳ ಗಮನಕ್ಕೂ ತಂದಿದ್ದಾಳೆ. ಈ ನಡುವೆ ಯುವಕ ಸುಬ್ರಹ್ಮಣ್ಯದಲ್ಲಿ ಬಸ್ನಿಂದ ಇಳಿದು ಬೇರೆ ಬಸ್ ಮೂಲಕ ಸುಳ್ಯದತ್ತ ಪ್ರಯಾಣ ಮಾಡಿದ್ದಾನೆ. ಬೆಂಗಳೂರಿನ ಬಸ್ನಲ್ಲಿ ಪ್ರಯಾಣಿಸಿ ಸುಳ್ಯ ತಲುಪಿದ್ದ ವಿದ್ಯಾರ್ಥಿನಿ ಈ ವಿಚಾರವನ್ನು ತನ್ನ ಸಹಪಾಠಿಗಳಿಗೆ ತಿಳಿಸಿದ್ದಾಳೆ. ತಕ್ಷಣ ಸುಳ್ಯದ ಪೈಚಾರು ಎಂಬಲ್ಲಿಗೆ ಕಾರಿನಲ್ಲಿ ತೆರಳಿದ ವಿದ್ಯಾರ್ಥಿಗಳು ಅಲ್ಲಿ ಯುವಕ ಪ್ರಯಾಣಿಸುತ್ತಿದ್ದ ಬಸ್ನಿಂದ ಆತನನ್ನು ಇಳಿಸಿದ್ದಾರೆ. ಬಳಿಕ ಆತನನ್ನು ಕಾರಿನಲ್ಲಿ ಸುಳ್ಯ ಬಸ್ ನಿಲ್ದಾಣಕ್ಕೆ ಕರೆತಂದು ಬಸ್ ನಿಲ್ದಾಣದಲ್ಲಿ ಹಿಗ್ಗಾ ಮುಗ್ಗ ಥಳಿಸಿದ್ದಾರೆ.
ವಿದ್ಯಾರ್ಥಿಗೆ ಕಿರುಕುಳ ನೀಡಿದ ಯುವಕ ಕೇರಳ ಮೂಲದವನಾಗಿದ್ದು, ಆತನ ಹೆಸರು ನಿಯಾಜ್ ಎಂದು ಗೊತ್ತಾಗಿದೆ. ಘಟನೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿಗಳಿಂದ ಹಲ್ಲೆಗೊಳಗಾದ ನಿಯಾಜ್ನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಕೆ ನಡೆಸುತ್ತಿದ್ದಾರೆ.