DAKSHINA KANNADA
ಸಂಘಪರಿವಾರದ ನೆತ್ತರ ದಾಹಕ್ಕೆ ಅಮಾಯಕರು ಬಲಿ: SDPI
ಮಂಗಳೂರು: ಕಳೆದ ರಾತ್ರಿ ಮಂಗಳೂರಿನ ಸುರತ್ಕಲ್ನಲ್ಲಿ ದುಷ್ಕರ್ಮಿಗಳು ಅತ್ಯಂತ ಕ್ರೂರವಾಗಿ ನಡೆಸಿದ ಮುಸ್ಲಿಂ ಯುವಕ ಫಾಝಿಲ್ ಹತ್ಯೆಯನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಟು ಶಬ್ಧಗಳಲ್ಲಿ ಖಂಡಿಸುತ್ತಿದೆ.
ಫಾಝಿಲ್ ಕೊಲೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನೇರ ಹೊಣೆ. ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ಈ ಹಿಂದೆ ಮಂಗಳೂರಿನಲ್ಲಿ ಹಿಂಸೆಗೆ ಪ್ರಚೋದಿಸುವ ಹೇಳಿಕೆ ನೀಡಿದ್ದ ಸಿಎಂ ಬೊಮ್ಮಾಯಿ ಅವರು ದಕ್ಷಿಣ ಕನ್ನಡದಲ್ಲಿ ನಡೆದ ಮೂರು ಕೊಲೆಗಳಿಗೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು SDPI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ ಒತ್ತಾಯಿಸಿದರು.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇತ್ತೀಚೆಗೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ವಾರದ ಅಂತರದಲ್ಲಿ ಎರಡು ಸಮುದಾಯದ ಎರಡು ಯುವಕರ ಕೊಲೆ ನಡೆದಿತ್ತು. ಬಿಜೆಪಿ ಮುಖಂಡ ಪ್ರವೀಣ್ ಹತ್ಯೆಗೂ ಮುನ್ನ ಆರ್ಎಸ್ಎಸ್ ಸಹ ಸಂಘಟನೆಯ ಸದಸ್ಯರು ಬಡಪಾಯಿ ಮುಸ್ಲಿಂ ಯುವಕ ಮಸೂದ್ ಎಂಬಾತನ ಕೊಲೆ ಮಾಡಿದ್ದರು.
ಆದರೆ ಸಿಎಂ ಅವರು ಕೇವಲ ಬಿಜೆಪಿ ಕಾರ್ಯಕರ್ತನ ಹತ್ಯೆಗೆ ಮೊಸಳೆ ಕಣ್ಣೀರು ಸುರಿಸಿದ್ದರು. ಮುಸ್ಲಿಂ ಯುವಕನ ಹತ್ಯೆ ಬಗ್ಗೆ ಬಾಯಿ ತೆರೆಯದ ಸಿಎಂ ಅವರು ಕೇವಲ ಪ್ರವೀಣ್ ಹತ್ಯೆ ಮಾಡಿದವರನ್ನು ಮಾತ್ರ ಸದೆ ಬಡಿಯುವುದಾಗಿ ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದರು.
ತನಿಖೆ ನಡೆದು ಆರೋಪಿಗಳು ಪತ್ತೆಯಾಗುವ ಮುನ್ನವೇ ಮತಾಂಧರು ಕೊಲೆ ಮಾಡಿದ್ದಾರೆ ಎಂದು ಹೇಳುವ ಮೂಲಕ ಒಂದು ಸಮುದಾಯವನ್ನು ಪರೋಕ್ಷವಾಗಿ ಗುರಿ ಮಾಡಿದ್ದರು.
ಮಸೂದ್ ಹತ್ಯೆ ಮಾಡಿರುವ ಬಿಜೆಪಿಯ ಬೆಂಬಲಿಗರಾದ ಆರೋಪಿಗಳ ಬಗ್ಗೆ ಮೌನವಾಗಿರುವ ಸಿಎಂ, ಕೇವಲ ಪ್ರವೀಣ್ ಹತ್ಯೆ ಸಂಬಂಧ ಆವೇಶಗೊಂಡಿದ್ದು ಅವರ ತಾರತಮ್ಯ ನೀತಿಗೆ ಹಿಡಿದ ಕೈಗನ್ನಡಿ. ಸಿಎಂ ಬೊಮ್ಮಾಯಿಯವರು ಎಷ್ಟೊಂದು ಪಕ್ಷಪಾತಿ ಅಂದರೆ
ಬೆಳ್ಳಾರೆಗೆ ಬಂದು ಕೇವಲ ಪ್ರವೀಣ್ ಮನೆಗೆ ಭೇಟಿಕೊಟ್ಟು ಸಾಂತ್ವನ ಹೇಳಿ ಸರ್ಕಾರದ ಕಡೆಯಿಂದ 25 ಲಕ್ಷ ರೂಪಾಯಿ ಪರಿಹಾರ ಕೊಟ್ಟು ಹೋಗಿದ್ದಾರೆ. ಸಾಂತ್ವನ ಮತ್ತು ಪರಿಹಾರದ ವಿಚಾರದಲ್ಲಿ ತಾರತಮ್ಯ ಮಾಡಿರುವ ಮುಖ್ಯಮಂತ್ರಿಗಳು, ಪ್ರವೀಣ್ ಹತ್ಯೆಗೂ ಮುನ್ನ ಕೊಲೆಯಾಗಿದ್ದ ಮಸೂದ್ ಅವರ ಕುಟುಂಬವನ್ನು ನಿರ್ಲಕ್ಷ್ಯ ಮಾಡಿದ್ದಾರೆ.
ಬೆಳ್ಳಾರೆಗೆ ಬಂದಿದ್ದ ಸಿಎಂ, ಬೆಳ್ಳಾರೆ ಗ್ರಾಮದಲ್ಲೇ ಇರುವ ಮಸೂದ್ ಮನೆಗೆ ಹೋಗದೆ, ಮಸೂದ್ ಕುಟುಂಬಕ್ಕೆ ಸಾಂತ್ವನ ಹೇಳದೆ, ಅವರಿಗೆ ಪರಿಹಾರ ನೀಡದೆ ಪಕ್ಷಪಾತ ಮಾಡುವ ಮೂಲಕ ಸಂವಿಧಾನದ ಹೆಸರಲ್ಲಿ ಮಾಡಿರುವ ಪ್ರಮಾಣ ವಚನಕ್ಕೆ ದ್ರೋಹ ಮಾಡಿದ್ದಾರೆ.
ತಾನು ಕೇವಲ ಒಂದು ಪಕ್ಷಕ್ಕೆ ಮತ್ತು ಒಂದು ಸಮುದಾಯಕ್ಕೆ ಮಾತ್ರ ಸಿಎಂ ಎಂಬಂತೆ ಬೊಮ್ಮಾಯಿಯವರು ನಡೆದುಕೊಂಡಿರುವುದರಿಂದ ಸಂಘಪರಿವಾರದ ಕಾರ್ಯಕರ್ತರಿಗೆ ಇನ್ನಷ್ಟು ಮುಸ್ಲಿಮರ ಕೊಲೆ ಮಾಡುವ ಧೈರ್ಯ ಬಂದಂತಿದೆ.
ನಾವು ಕೊಲೆ ಮಾಡಿದರೂ ಸಿಎಂ ಮತ್ತು ಬಿಜೆಪಿ ಸರ್ಕಾರ ನಮ್ಮ ಜೊತೆಗಿರುತ್ತದೆ, ನಮ್ಮನ್ನು ರಕ್ಷಣೆ ಮಾಡುತ್ತಾರೆ ಎಂಬ ಧೈರ್ಯ ಬಂದಿರುವ ಕಾರಣಕ್ಕೆ ಆರ್ಎಸ್ಸ್ ಪರಿವಾರದ ಕಾರ್ಯಕರ್ತರು ಸಾರ್ವಜನಿಕ ಸ್ಥಳದಲ್ಲೇ ಎಲ್ಲರ ಕಣ್ಣೆದುರಲ್ಲೇ ಸುರತ್ಕಲ್ನಲ್ಲಿ ಫಾಝಿಲ್ ಎಂಬ ಯುವಕನನ್ನು ಕೊಲೆ ಮಾಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿ, ಗ್ರಹ ಸಚಿವರು, ಕ್ಯಾಬಿನೆಟ್ ಸಚಿವರು ಸೇರಿದಂತೆ ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಮಂಗಳೂರಿನಲ್ಲಿರುವಾಗಲೇ ಪಕ್ಕದ ಸುರತ್ಕಲ್ನಲ್ಲಿ ಈ ಕೊಲೆ ನಡೆದಿದೆ ಎಂದರೆ ರಾಜ್ಯದ ಕಾನೂನು ಸುವ್ಯವಸ್ಥೆ ಸಂಘ ಪರಿವಾರಕ್ಕೆ ಹೊರಗುತ್ತಿಗೆ ಕೊಡಲಾಗಿದೆಯೇ ಎಂದು ಅಬೂಬಕ್ಕರ್ ರವರು ಆಕ್ರೋಶ ವ್ಯಕ್ತಪಡಿಸಿದರು.
ನಿರಂತರವಾಗಿ ಮುಸ್ಲಿಂ ವಿರೋಧಿ ನೀತಿ ಅನುಸರಿಸುತ್ತಿರುವ ಸಿಎಂ ಬೊಮ್ಮಾಯಿಯವರ ಕಾಲ ಬುಡದಲ್ಲೇ ಈ ಹತ್ಯೆ ನಡೆದಿರುವಾಗ ಹಲವು ಅನುಮಾನಗಳು ಸಹಜವಾಗಿ ಮೂಡುತ್ತಿದೆ. ಸಿಎಂ ಅವರು ಮಂಗಳೂರಿನಲ್ಲಿ ಬಂದು ಕೂತು ಸಂಘಪರಿವಾರದ ದುಷ್ಟರಿಗೆ ಧೈರ್ಯ ಕೊಟ್ಟು ಈ ಕೊಲೆ ಮಾಡಿಸಿದ್ದರೂ ಮಾಡಿಸಿರಬಹುದು ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ.
ಬೆಳ್ಳಾರೆಯಲ್ಲಿ ನಡೆದ ಎರಡು ಹತ್ಯೆ ಪ್ರಕರಣದಲ್ಲಿ ಅನೀತಿ, ಅನ್ಯಾಯ, ತಾರತಮ್ಯ, ಪಕ್ಷಪಾತ ಮಾಡಿರುವ ಸಿಎಂ ಬಸವರಾಜು ಬೊಮ್ಮಾಯಿ ಅವರು ಸುರತ್ಕಲ್ನಲ್ಲಿ ಫಾಝಿಲ್ ಹತ್ಯೆಗೆ ಕಾರಣಕರ್ತರು ಎಂದರೆ ತಪ್ಪಾಗಲ್ಲ.
ಮುಖ್ಯಮಂತ್ರಿಗಳು ಸಂವಿಧಾನಕ್ಕೆ ಬದ್ಧರಾಗಿದ್ದರೆ ಪ್ರವೀಣ್ ಮನೆಗೆ ಹೋದಂತೆ ಫಾಝಿಲ್ ಮನೆಗೂ ಹೋಗಬೇಕು, ಫಾಝಿಲ್ ಕುಟುಂಬಕ್ಕೂ 25 ಲಕ್ಷ ಪರಿಹಾರ ನೀಡಬೇಕು.
ಮತ್ತೊಮ್ಮೆ ಬೆಳ್ಳಾರೆಗೆ ಹೋಗಿ ಮಸೂದ್ ಕುಟುಂಬಕ್ಕೆ ಸಾಂತ್ವನ ಹೇಳಿ 25 ಲಕ್ಷ ಪರಿಹಾರವನ್ನು ಕೊಟ್ಟು ಬರಬೇಕು.
ಇಲ್ಲದಿದ್ದರೆ ನಿಮ್ಮನ್ನು ಈ ರಾಜ್ಯದ ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಫಾಝಿಲ್ ಹತ್ಯೆಗೆ ಸಿಎಂ ಬೊಮ್ಮಾಯಿ ಅವರ ಪಕ್ಷಪಾತ ನೀತಿ ಹೇಗೆ ಕಾರಣ ಆಗಿದೆಯೋ, ಅದೇ ರೀತಿ ಬಿಜೆಪಿ ನಾಯಕರು ಮತ್ತು ಕೆಲವು ಮಾಧ್ಯಮಗಳ ಪ್ರಚೋದನೆಯೂ ಕಾರಣ ಆಗಿದೆ ಎನ್ನಬಹುದು.
ಪ್ರವೀಣ್ ಹತ್ಯೆ ನಡೆದಾಗ ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದನಕಾರಿ ಹೇಳಿಕೆ ಕೊಟ್ಟಿರುವ ಬಿಜೆಪಿ ಮತ್ತು ಸಂಘಪರಿವಾರದ ನಾಯಕರ ದ್ವೇಷದ ಮಾತುಗಳು, ಕೆಲವೊಂದು ಮಾಧ್ಯಮಗಳು ಮಾಡಿರುವ ಪ್ರಚೋದನೆಗಳು ದಕ್ಷಿಣ ಕನ್ನಡದಲ್ಲಿ ಅಶಾಂತಿ ಸೃಷ್ಟಿಸಿದೆ. ಸಂಘಪರಿವಾರ ಮತ್ತು ಅವರ ಕೃಪಾಪೋಷಿತ ಕೆಲವು ಮಾಧ್ಯಮಗಳ ಹರಡಿರುವ ದ್ವೇಷವೇ ಫಾಝಿಲ್ನನ್ನು ಬಲಿ ಪಡೆದಿದೆ ಎಂದು SDPI ನೇರವಾಗಿ ಆರೋಪ ಮಾಡುತ್ತಿದೆ.
ಫಾಝಿಲ್ ಹತ್ಯೆ ಸಂಬಂಧ ಬೊಮ್ಮಾಯಿ ಸರ್ಕಾರದ ಪೊಲೀಸರ ಮೇಲೆ ನಂಬಿಕೆ ಇಲ್ಲದಿರುವುದರಿಂದ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು, ಹಾಲಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸುರತ್ಕಲ್ನ ಫಾಝಿಲ್ ಕೊಲೆ ಪ್ರಕರಣದ ತನಿಖೆಗೆ ನಡೆಸಬೇಕು.
ಬಿಜೆಪಿ ಸರ್ಕಾರದ ಒತ್ತಡದ ಹಿನ್ನಲೆಯಲ್ಲಿ ಪ್ರವೀಣ್ ಕೊಲೆ ಪ್ರಕರಣದಲ್ಲಿ ಪೊಲೀಸರು ಅಮಾಯಕರನ್ನು ಆರೋಪಿಗಳು ಎಂದು ಫಿಕ್ಸ್ ಮಾಡಿರುವುದರಿಂದ ಬೆಳ್ಳಾರೆಯ ಮಸೂದ್ ಮತ್ತು ಪ್ರವೀಣ್ ಕೊಲೆ ಪ್ರಕರಣವನ್ನು ಸಹ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು SDPI ಆಗ್ರಹಿಸುತ್ತಿದೆ.
ಅದಲ್ಲದೇ ಇದೇ ರೀತಿಯ ದುರಹಂಕಾರ ಮತ್ತು ಸ್ವಜನ ಪಕ್ಷಪಾತದ ಆಡಳಿತ ನಡೆಸಿದರೆ ತೀವ್ರ ರೀತಿಯ ಪ್ರತಿರೋದ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
DAKSHINA KANNADA
ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ‘ಬಿಗ್ ಬಾಸ್’ ರೂಪೇಶ್ ಶೆಟ್ಟಿ
ಮಂಗಳೂರು : ಬಿಗ್ಬಾಸ್ ಮುಖೇನ ರಾಜ್ಯದಲ್ಲಿ ಹೆಸರು ಪಡೆದಿರುವ ಕರಾವಳಿಯಲ್ಲಿ ಸ್ಟಾರ್ ರೂಪೇಶ್ ಶೆಟ್ಟಿ. ತುಳುನಾಡಿನ ಹುಲಿವೇಷ ಕುಣಿತವನ್ನು ಬಿಗ್ಬಾಸ್ ನಲ್ಲಿ ಪರಿಚಯಿಸಿದ್ದು ಅಲ್ಲದೆ ವೇಷದಾರಿಗಳ ಜೊತೆ ಹೆಜ್ಜೆ ಕೂಡಾ ಹಾಕಿದ್ದಾರೆ. ಅಲ್ಲದೇ ರೂಪೇಶ್ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ವಿನ್ನರ್ ಕೂಡ ಹೌದು. ತುಳು ಸಿನಿಮಾದಲ್ಲಿ ಮಿಂಚಿದ್ದ ರೂಪೇಶ್ ಶೆಟ್ಟಿಗೆ ಬಿಗ್ ಬಾಸ್ ಬಳಿಕ ಕನ್ನಡ ಚಿತ್ರರಂಗದಲ್ಲೂ ಅವಕಾಶ ಸಿಕ್ಕಿತ್ತು. ಇದೀಗ ತಮಿಳು ಚಿತ್ರರಂಗಕ್ಕೂ ರೂಪೇಶ್ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ.
ಅಮೃತ ಸಾರಥಿ ಎಂಬುವವರು ನಿರ್ದೇಶನ ಮಾಡುತ್ತಿರುವ ತಮಿಳು ಚಿತ್ರದಲ್ಲಿ ರೂಪೇಶ್ ಶೆಟ್ಟಿ ನಟಿಸುತ್ತಿದ್ದಾರೆ. ಯೋಗಿ ಬಾಬು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಪ್ರಮೋದ್ ಶೆಟ್ಟಿ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋದು ವಿಶೇಷ. ‘ಸನ್ನಿಧಾನಂ PO’ ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ರೂಪೇಶ್ ಶೆಟ್ಟಿ, “ನನ್ನ ಮೊದಲ ತಮಿಳು ಚಿತ್ರ ಸನ್ನಿಧಾನಮ್ PO ಇದರ ಶೂಟಿಂಗ್ ನಿಮ್ಮೆಲ್ಲರ ಆಶೀರ್ವಾದದಿಂದ ಭರದಿಂದ ಸಾಗುತ್ತಿದೆ. ಯೋಗಿ ಬಾಬು ಅವರ ಜತೆ ನಟಿಸುವುದೇ ನನ್ನ ಪಾಲಿನ ಅದೃಷ್ಟ. ನನ್ನ ಸಿನಿ ಪಯಣ ಈ ರೀತಿಯಾಗಿ ಸಾಗಲು ನೀವೇ ಮೊದಲ ಕಾರಣ. ನಿಮ್ಮ ಪ್ರೀತಿ ಪ್ರೋತ್ಸಾಹ ಎಂದೂ ಹೀಗೆ ಇರಲಿ. ದೇವರಿಗೆ ಧನ್ಯವಾದಗಳು” ಎಂದು ಅವರು ಬರೆದುಕೊಂಡಿದ್ದಾರೆ.
2023ರ ನವೆಂಬರ್ ತಿಂಗಳಲ್ಲಿ ಸಿನಿಮಾ ಘೋಷಿಸಲಾಗಿದೆ. ಈ ಚಿತ್ರದ ಮೂರನೇ ಹಂತದ ಶೂಟಿಂಗ್ ಈಗ ನಡೆಯುತ್ತಿದೆ. ಈ ಸಿನಿಮಾ ರಿಲೀಸ್ ದಿನಾಂಕವನ್ನು ರೂಪೇಶ್ ಶೆಟ್ಟಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ರೂಪೇಶ್ ಶೆಟ್ಟಿ ಅವರು ತುಳು ಸಿನಿಮಾಗಳಿಂದ ಬಣ್ಣದ ಬದುಕು ಆರಂಭಿಸಿದರು. 2015ರಲ್ಲಿ ರಿಲೀಸ್ ಆದ ‘ಐಸ್ ಕ್ರೀಮ್’ ಹೆಸರಿನ ತುಳು ಚಿತ್ರದ ಮೂಲಕ ಅವರು ಹೀರೋ ಆದರು. 2023ರಲ್ಲಿ ಅವರ ನಟನೆಯ ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾ ರಿಲೀಸ್ ಆಯಿತು. ಅವರು ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಒಟಿಟಿ’ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 9’ ವಿನ್ನರ್ ಆಗಿದ್ದಾರೆ.
DAKSHINA KANNADA
ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ನಿಯಮಿತ ಇದರ 31ನೇ ನೂತನ ಎಲ್ಯಾರ್ ಪದವು ಶಾಖೆ ಶುಭಾರಂಭ
ಮಂಗಳೂರು : ಸಹಕಾರಿ ಕ್ಷೇತ್ರದ ಅಗ್ರಗಣ್ಯ ಸಹಕಾರಿ ಸಂಘ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಮತ್ತು ರಾಷ್ಟ್ರೀಯ ಪುರಸ್ಕಾರ ಪಡೆದಿರುವ ಮಂಗಳೂರು ಪಡೀಲ್ನ ಆತ್ಮಶಕ್ತಿ ಸೌಧದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ನಿಯಮಿತ ಇದರ 31ನೇ ನೂತನ ಎಲ್ಯಾರ್ ಪದವು ಶಾಖೆ ಹೋಲಿಕ್ರಾಸ್ ಚರ್ಚ್ ನ ಬಳಿಯಿರುವ ಶರೂನ್ ಸ್ಟ್ರಕ್ಟರ್ ನ ಮೊದಲನೇ ಮಹಡಿಯಲ್ಲಿ ಬುಧವಾರ ಶುಭಾರಂಭಗೊಂಡಿತು.
ಸಾಮಾಜಿಕ ಕಳಕಳಿ ಶ್ಲಾಘನೀಯ : ಯು.ಟಿ.ಖಾದರ್
ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಶ್ರೀಮಂತ ವರ್ಗದವರಿಗೆ ನಗರಪ್ರದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡುತ್ತದೆ. ಆದರೆ, ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಸಹಕಾರಿ ಸಂಘಗಳ ಸ್ಥಾಪನೆಗೆ ಆದ್ಯತೆ ನೀಡಿದ್ದು, ಇದೀಗ ಎಲ್ಯಾರ್ ಪದವಿನಂತಹ ಹಿಂದುಳಿದ ಪ್ರದೇಶದಲ್ಲಿ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ನೂತನ ಶಾಖೆಯನ್ನು ಆರಂಭಿಸುವ ಮೂಲಕ ಸಹಕಾರಿ ಕ್ಷೇತ್ರದ ನಿಜವಾದ ಧ್ಯೇಯ ಉದ್ಧೇಶವನ್ನು ಈ ಸಂಘ ಮಾಡಿ ತೋರಿಸಿದೆ. ಮೂರು ಗ್ರಾಮಗಳ ಸಮ್ಮಿಲನದ ಈ ಪ್ರದೇಶ ವಾಣಿಜ್ಯವಾಗಿ ಅಭಿವೃದ್ಧಿ ಹೊಂದಿಲ್ಲ. ಇಂತಹ ಪ್ರದೇಶದಲ್ಲಿ ಜನರಿಗೆ ಸಹಕಾರಿ ಸೇವೆಯನ್ನು ನೀಡುವ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದ್ದು, ಈ ಪ್ರದೇಶದ ಜನರ ಆರ್ಥಿಕ ಕಾರ್ಯಕ್ಕೆ ಬೆಂಬಲ ನೀಡುವ ಮೂಲಕ ಉತ್ತಮ ಗ್ರಾಹಕ ಸೇವೆಯೊಂದಿಗೆ ಪ್ರದೇಶದ ಅಭಿವೃದ್ಧಿಗೂ ಕೊಡುಗೆ ನೀಡಲಿ ಎಂದರು.’
ಲಾಭದಾಯಕವಾಗಿ ನಡೆಯುತ್ತಿರುವ ಸಂಸ್ಥೆ : ಚಿತ್ತರಂಜನ್ ಬೋಳಾರ್
ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ ಮಾತನಾಡಿ, ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘದ ಎರಡನೇ ಶಾಖೆ ಆರಂಭಗೊಂಡಿದ್ದು, ಉಳ್ಳಾಲದ ಮಾಡೂರಿನಲ್ಲಿ ಅಂದಿನಿಂದ ಇಂದಿನವರೆಗೆ ಯು.ಟಿ.ಖಾದರ್ ಅವರು ಸಂಘದ ಶಾಖೆಯನ್ನು ಉದ್ಘಾಟಿಸಿದ್ದು ಲಾಭದಾಯಕವಾಗಿ ನಡೆಯುತ್ತಿದೆ. ಸಂಘ ಯಶಸ್ವಿಯಾಗಿ ಇಷ್ಟು ಶಾಖೆಗಳು ಆರಂಭಗೊಳ್ಳಲು ಮತ್ತು ಹತ್ತನೇ ವರ್ಷದಲ್ಲಿ ಸ್ವಂತ ಪ್ರಧಾನ ಕಚೇರಿ ನಿರ್ಮಾಣಕ್ಕೆ ಮುಖ್ಯ ಕಾರಣ ಸಂಘದ ಗ್ರಾಹಕರು, ಸದಸ್ಯರು ಮತ್ತು ಸಂಘದ ಆಡಳಿತ ಮಂಡಳಿಯೊಂದಿಗೆ ಸಿಬಂದಿ ವರ್ಗ ಕಾರಣವಾಗಿದ್ದಾರೆ ಎಂದರು.
ಭದ್ರತಾಕೋಶ ಉದ್ಘಾಟನೆ :
ಎಲ್ಯಾರ್ ಪದವು ಹೊಲಿ ಕ್ರಾಸ್ ಚರ್ಚ್ನ ಧರ್ಮಗುರು ಎಫ್.ಆರ್.ಜಾನ್ ಡಿ’ಸೋಜ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುತ್ತಾರು ಶ್ರೀ ಪಂಜದಾಯ ಬಂಟ ದೈವಗಳ ಆದಿ ಕೊರಗತನಿಯ ಸೇವಾ ಟ್ರಸ್ಟ್ನ ಉಪಾಧ್ಯಕ್ಷ ದೆಬ್ಬೇಲಿ ಮಹಾಬಲ ಹೆಗ್ಡೆ ಮಾಗಣ್ತಡಿ ಭದ್ರತಾಕೋಶ ಉದ್ಘಾಟಿಸಿದರು.
ಕೊಣಾಜೆ ಬೆಳ್ಮ ಸಿಎಸ್ಐ ಬೆತಾನೀಯ ಚರ್ಚ್ನ ಧರ್ಮಗುರು ರೆ| ವಿನಯಲಾಲ್ ಬಂಗೇರ ನಿರಖು ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಕೊಣಾಜೆ ಗ್ರಾ. ಪಂ. ಅಧ್ಯಕ್ಷೆ ಗೀತಾ ದಾಮೋದರ ಗಣಕೀಕೃತ ಬ್ಯಾಂಕಿಂಗ್ಗೆ ಚಾಲನೆ ನೀಡಿದರು. ಅಂಬ್ಲಮೊಗರು ಗ್ರಾ. ಪಂ. ಎಸ್.ಮಹಮ್ಮದ್ ಇಕ್ಬಾಲ್ ಇ ಮುದ್ರಾಂಕ ಸೇವೆಗೆ ಚಾಲನೆ ನೀಡಿದರು.
ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ರವೀಂದ್ರ ಬಂಗೇರ ಆವರ್ತನ ಠೇವಣಿಗೆ ಚಾಲನೆ ನೀಡಿದರು. ಶ್ರೀ ಆದಿಮಾಯೆ ರಾಮ ದತ್ತಾಂಜನೇಯ ಭಜನಾ ಮಂದಿರದ ಅಧ್ಯಕ್ಷ ಚಂದ್ರಹಾಸ್ ನಾಯ್ಕ ಉಳಿತಾಯ ಖಾತೆಗೆ ಚಾಲನೆ ನೀಡಿದರು.
ಇದನ್ನೂ ಓದಿ : ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು
ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರು, ಎಲ್ಯಾರ್ ಪದವು ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಎಡ್ಲೈನ್ ಐಮನ್, ಕಟ್ಟಡದ ಮಾಲಕ ರೆನೋಲ್ಡ್ ಜಿ ಅಮ್ಮಣ್ಣ .ಪಜೀರ್ ಗೋಶಾಲೆಯ ಟ್ರಸ್ಟಿ ಶಿವಪ್ರಸಾದ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿರ್ದೇಶಕರಾದ ಪಿ. ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ಚಂದ್ರಹಾಸ ಮರೋಳಿ, ಗೋಪಾಲ್ ಎಂ. ಸಲಹೆಗಾರರಾದ ಅಶೋಕ್ ಕುಮಾರ್ ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯವಿಜಯ್ ಸ್ವಾಗತಿಸಿದರು. ಉಪಾಧ್ಯಕ್ಷ ನೇಮಿರಾಜ್ ಪಿ. ವಂದಿಸಿದರು. ಸಿಬ್ಬಂದಿ ಹರ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.
”ಕೊರೊನಾ ಸಂದರ್ಭದಲ್ಲಿ 10 ಕೋಟಿ ಇದ್ದ ಚಿನ್ನಾಭರಣ ಸಾಲ ಒಮ್ಮೆಲೇ 90 ಕೋಟಿ ರೂ.ವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿತ್ತು. ಸಂಘ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದೆ. ನೂತನ ಶಾಖೆಯಿಂದ ಬೇರೆ ಬ್ಯಾಂಕ್ಗಳಿಗೆ ಡಿಪಾಸಿಟ್ ಮಾಡಲು ಆರ್ ಟಇ ಜಿ ಎಸ್ ಸೌಲಭ್ಯ, ಇ ಮುದ್ರಾಂಕ, ಆರೋಗ್ಯ ವಿಮೆ, ಸಾಲ ವಿಮಾ ಭದ್ರತೆ ಸೇರಿದಂತೆ ವಿವಿಧ ಬ್ಯಾಂಕಿಂಗ್ ಸವಲತ್ತುಗಳನ್ನು ಗ್ರಾಹಕರು ಪಡೆದುಕೊಳ್ಳಬಹುದು.”
ಸಹಕಾರ ರತ್ನ ಚಿತ್ತರಂಜನ್ ಬೋಳಾರ, ಅಧ್ಯಕ್ಷರು, ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ನಿಯಮಿತ ಮಂಗಳೂರು
BELTHANGADY
ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು(59 ವ) ಅವರು ಹೃದಯಾಘಾತದಿಂದ ಮೇ.1ರಂದು ರಾತ್ರಿ ನಿಧನರಾಗಿದ್ದಾರೆ.
ಮುಂದೆ ಓದಿ..;ಭರತನಾಟ್ಯದಂತೆ ಯಕ್ಷಗಾನಕ್ಕೂ ಪರೀಕ್ಷೆ..! ಪಟ್ಲ ಸತೀಶ್ ಶೆಟ್ಟಿ
ಕೋಟದಲ್ಲಿ ಮೇ.1ರಂದು ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಕುಕ್ಕಿತ್ತಾಯನ ವೇಷ ಹಾಕಿದ್ದರು. ಮೇಳದ ಬಳಿಕ ಚೌಕಿಯಲ್ಲಿ ಬಣ್ಣ ತೆಗೆಯುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.
ನಾರಾಯಣ ಮಯ್ಯು ಹಾಗೂ ಲಕ್ಷ್ಮೀ ದಂಪತಿ ಪುತ್ರನಾಗಿದ್ದು 1964ರಲ್ಲಿ ಪುತ್ತೂರಿನ ಸೇಡಿಯಾಪಿನಲ್ಲಿ ಜನಿಸಿದರು. ತನ್ನ 18 ನೇ ವಯಸ್ಸಿನಲ್ಲಿ ಯಕ್ಷಗಾನದಲ್ಲಿ ಬಣ್ಣ ಹಚ್ಚಲು ಆರಂಭಿಸಿದ ಇವರು ಸ್ತ್ರೀ ವೇಷ, ರಾಜ ವೇಷ, ಪುಂಡು ವೇಷಗಳಲ್ಲಿ ನಿಸ್ಸೀಮರಾಗಿದ್ದರು. ಇನ್ನು ಮಾಲಿನಿ, ಚಿತ್ರಾಂಗದೆ, ಮೋಹಿನಿ, ದಾಕ್ಷಾಯಿನಿ, ಪ್ರಮೀಳೆ, ಶ್ರೀ ದೇವಿ, ಸೀತೆ, ದೇವೆಂದ್ರ, ದುಶ್ಯಾಸನ ಮೊದಲಾದ ಪಾತ್ರಗಳ ಅಭಿನಯದಲ್ಲಿಯೂ ಸೈ ಎನಿಸಿಕೊಂಡಿದ್ದರು. ಮೃತರು ಆರೋಗ್ಯ ಸಹಾಯಕಿಯಾಗಿರುವ ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
- DAKSHINA KANNADA6 days ago
ಪತ್ನಿ ಮಗಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಪದ್ಮರಾಜ್ ಪೂಜಾರಿ
- FILM6 days ago
ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
- DAKSHINA KANNADA6 days ago
ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ
- FILM6 days ago
ಮತ್ತೆ ಬಾಯ್ ಫ್ರೆಂಡ್ ಬದಲಾಯಿಸಿದ ಶೃತಿ ಹಾಸನ್..!