LATEST NEWS
ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗನೆ ಖಾಲಿ ಆಗುತ್ತಾ? ಹೀಗೆ ಮಾಡಿ
ಮಂಗಳೂರು: ಗ್ಯಾಸ್ ಸಿಲಿಂಡರ್ ಅನ್ನು ಇಂದಿನ ದಿನಗಳಲ್ಲಿ ಎಲ್ಲರೂ ಬಳಸುತ್ತಾರೆ. ಪ್ರತಿಯೊಬ್ಬರ ಬಳಿಯೂ ಅಡುಗೆ ಅನಿಲ ಸಿಲಿಂಡರ್ ಇದ್ದೇ ಇರುತ್ತದೆ. ಕೇಂದ್ರ ಸರ್ಕಾರ ಉಜ್ವಲ ಯೋಜನೆ ಜಾರಿಗೆ ತಂದ ನಂತರ ಸೌದೆ ಒಲೆಯಲ್ಲಿ ಅಡುಗೆ ಕಾಲ ಮರೆಯಾಗಿದ್ದು, ಗ್ಯಾಸ್ ಅನ್ನೇ ಬಳಸುತ್ತಿದ್ದಾರೆ. ಆದರೆ ಗ್ಯಾಸ್ ಸಿಲಿಂಡರ್ ಬೇಗನೇ ಖಾಲಿಯಾಗುವ ಸಮಸ್ಯೆ ಹೆಚ್ಚಿನವರು ಎದುರಿಸುತ್ತಿದ್ದಾರೆ. ನಿಮಗು ಕೂಡ ಇದೇ ಸಮಸ್ಯೆ ಆಗುತ್ತಿದ್ದರೆ ಕೆಲವು ತಂತ್ರಗಳನ್ನು ಅನುಸರಿಸಿ ಅನಿಲವನ್ನು ಹೆಚ್ಚು ಕಾಲ ಉಳಿಯುವಂತೆ ಮಾಡಬಹುದು. ಅದು ಹೇಗೆ?, ನೋಡೋಣ.
1. ಬರ್ನರ್: ಅಡುಗೆ ಮಾಡುವಾಗ ಹಲವರಿಗೆ ಬರ್ನರ್ ಅನ್ನು ಮೇಲಕ್ಕೆ ತಿರುಗಿಸುವ ಅಭ್ಯಾಸವಿರುತ್ತದೆ. ಇದರಿಂದಾಗಿ ನಿಮ್ಮ ಗ್ಯಾಸ್ ಬೇಗನೆ ಖಾಲಿಯಾಗುವ ಸಾಧ್ಯತೆ ಇದೆ. ಅದಕ್ಕಾಗಿಯೇ ನೀವು ಏನನ್ನಾದರೂ ಬಿಸಿಮಾಡಲು ಅಥವಾ ಬೇಯಿಸಲು ಬಯಸಿದರೆ, ಕೆಳಭಾಗವು ಸುಡುವಂತೆ ಬರ್ನರ್ ಅನ್ನು ತಿರುಗಿಸಿ. ಇದರಿಂದ ಎಲ್ ಪಿಜಿ ಸಿಲಿಂಡರ್ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ.
2. ಸ್ಟವ್ ಬರ್ನರ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದು: ನಿಮ್ಮ ಸ್ಟವ್ ಬರ್ನರ್ ಅನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಸಹ ಮುಖ್ಯವಾಗಿದೆ. ಕಾಲಕಾಲಕ್ಕೆ ಬರ್ನರ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಗ್ಯಾಸ್ ಹೆಚ್ಚು ಕಾಲ ಉಳಿಯುವಂತೆ ಮಾಡಬಹುದು. ಇದಕ್ಕಾಗಿ ನಿಮ್ಮ ಅನಿಲದ ಬೆಂಕಿಯ ಬಣ್ಣವನ್ನು ಗಮನಿಸುವುದರ ಮೂಲಕ ತಿಳಿಯಬಹುದು. ಅನಿಲ ಜ್ವಾಲೆಯು ನೀಲಿ ಬಣ್ಣಕ್ಕೆ ತಿರುಗಿದರೆ ನಿಮ್ಮ ಬರ್ನರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲದಿದ್ದರೆ ಕೆಂಪು/ಹಳದಿ/ಕಿತ್ತಳೆ ಬಣ್ಣ ಬಂದರೆ ನಿಮ್ಮ ಬರ್ನರ್ ಸ್ವಚ್ಛವಾಗಿಲ್ಲ ಎಂದರ್ಥ.
3. ಪಾತ್ರೆ ಒದ್ದೆಯಾಗಿರಬಾರದು: ಅಡುಗೆ ಮಾಡಲು ಪಾತ್ರೆಯನ್ನು ಬರ್ನರ್ನಲ್ಲಿ ಇರಿಸುವಾಗ ಒಣಗಿರಬೇಕು. ಅದರಲ್ಲಿ ನೀರಿನ ಅಂಶ ಇದ್ದರೆ ಆವಿಯಾಗಲು ಸಮಯ ತೆಗೆದುಕೊಳ್ಳಬಹುದು. ಇದು ಅನಿಲವನ್ನು ವ್ಯರ್ಥ ಮಾಡುತ್ತದೆ. ಸಂದರ್ಭಕ್ಕೆ ತಕ್ಕಂತೆ ನೀವು ಬೆಂಕಿಯನ್ನು ಕಡಿಮೆ ಮಾಡಬಹುದು. ಹೆಚ್ಚಿನ ಬೆಂಕಿ ಹೆಚ್ಚು ಅನಿಲವನ್ನು ಬಳಸುತ್ತದೆ.
4. ಪ್ರೆಶರ್ ಕುಕ್ಕರ್: ಪ್ರೆಶರ್ ಕುಕ್ಕರ್ ಬಳಸುವುದರಿಂದ ಗ್ಯಾಸ್ ಉಳಿತಾಯ ಮಾಡಬಹುದು. ಓಪನ್-ಪಾಸ್ ಅಡುಗೆಗೆ ಹೋಲಿಸಿದರೆ ಒತ್ತಡದ ಸ್ಟೀಮ್ ಆಹಾರವು ವೇಗವಾಗಿ ಬೇಯಿತ್ತದೆ. ಇದರಿಂದ ಗ್ಯಾಸ್ ಉಳಿತಾಯವೂ ಆಗುತ್ತದೆ.
5. ಗ್ಯಾಸ್ ಲೀಕ್: ಸಾಮಾನ್ಯವಾಗಿ ಕೆಲವು ಸಿಲಿಂಡರ್ನಲ್ಲಿ ಸಣ್ಣ ಪ್ರಮಾಣದ ಗ್ಯಾಸ್ ಲೀಕ್ ಆಗಿರುತ್ತದೆ. ಗ್ಯಾಸ್ ರೆಗ್ಯುಲೇಟರ್, ಪೈಪ್, ಬರ್ನರ್ ಪರಿಶೀಲಿಸಬೇಕು. ಹಾನಿಗೊಳಗಾದ ಗ್ಯಾಸ್ ಲೈನ್ ನೀವು ಅಡುಗೆ ಮಾಡದಿದ್ದರೂ ಸಹ ಅನಿಲವನ್ನು ವ್ಯರ್ಥ ಮಾಡಬಹುದು. ಇದು ಅಪಘಾತಗಳಿಗೂ ಕಾರಣವಾಗಬಹುದು.
6. ನೆನೆಸುವುದು: ಅಕ್ಕಿ ಮತ್ತು ಬೇಳೆಕಾಳುಗಳನ್ನು ಬೇಯಿಸುವ ಮೊದಲು ನೆನೆಸಿಡಬೇಕು. ಹಾಗೆ ನೆನೆಸಿಟ್ಟು ಬೇಯಿಸಿದರೆ ಬೇಗ ಬೇಯುತ್ತದೆ. ಇದು ಸಿಲಿಂಡರ್ ಅನ್ನು ಉಳಿಸುತ್ತದೆ.
7. ಫ್ರಿಡ್ಜ್ ನಲ್ಲಿರುವ ಸಾಮಾಗ್ರಿಗಳು: ನಮ್ಮಲ್ಲಿರುವ ದೊಡ್ಡ ಅಭ್ಯಾಸವೆಂದರೆ ಎಲ್ಲವನ್ನೂ ಫ್ರಿಜ್ ನಲ್ಲಿಡುವುದು. ಉದಾಹರಣೆಗೆ ಹಾಲು. ಅದನ್ನು ಫ್ರಿಡ್ಜ್ನಿಂದ ತೆಗೆದು ನೇರವಾಗಿ ಕುದಿಸಲು ಇಡಬೇಡಿ. ಆಗ ಅದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಡುಗೆಗೆ ಬೇಕಾದ ಸಾಮಾಗ್ರಿಗಳು ಫ್ರಿಡ್ಜ್ ನಲ್ಲಿದ್ದರೆ ಮೊದಲು ಹೊರ ತೆಗೆಯಬೇಕು. ಕೂಲಿಂಗ್ ಕಡಿಮೆಯಾಗುವವರೆಗೆ ಸಮಯ ತೆಗೆದುಕೊಂಡು ನಂತರ ಬೆಚ್ಚಗಾಗಲು ಇಟ್ಟರೆ ಬೇಗನೆ ಕುದಿಯುತ್ತದೆ.
LATEST NEWS
ಸಾಲು ಸಾಲು ರಜೆ; ನವರಾತ್ರಿಗೆ ಬಸ್ ಟಿಕೆಟ್ ದರ ಬಲು ದುಬಾರಿ..!
ಮಂಗಳೂರು: ನವರಾತ್ರಿ ಹಬ್ಬ ಸನ್ನಿಹಿತವಾಗುತ್ತಿರುವಂತೆ ಖಾಸಗಿ ಬಸ್ಗಳ ಪ್ರಯಾಣ ದರ ದುಪ್ಪಟ್ಟಾಗಿದೆ. ಹಬ್ಬಕ್ಕಾಗಿ ದೂರದೂರಿನಿಂದ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ಅದರಲ್ಲೂ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸು ವವರಿಗೆ ಖಾಸಗಿ ಬಸ್ನಲ್ಲಿ ಅತೀ ಹೆಚ್ಚಿನ ದರ 3,500 ರೂ. ಇದೆ.
ಪ್ರತಿ ಬಾರಿ ಹಬ್ಬದ ಸಮಯದಲ್ಲಿ ಟಿಕೆಟ್ ದರ ಏರಿಕೆ ಮಾಮೂಲಿಯಾಗಿದೆ. ಈ ಹಿಂದೆ ಗೌರಿ-ಗಣಪತಿ ಹಬ್ಬದ ಸಮಯದಲ್ಲೂ ಬಸ್ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಇದೀಗ ನವರಾತ್ರಿ ಹಬ್ಬಕ್ಕೂ ದರ ಏರಿಕೆ ಮುಂದುವರಿದಿದೆ.
ವಾರಾಂತ್ಯ ದಲ್ಲಿ ಬಂದಿರುವು ದರಿಂದ ಬೆಂಗಳೂರಿನಿಂದ ವಿವಿಧೆಡೆಗೆ ಪ್ರಯಾಣ ಬೆಳೆಸುವವರ ಸಂಖ್ಯೆಯೂ ಅಧಿಕವಾಗಿದೆ. ಇದು ಕೂಡ ಟಿಕೆಟ್ ದರ ಹೆಚ್ಚಳಕ್ಕೆ ಕಾರಣವಾಗಿದೆ. ಅ.10ರಿಂದಲೇ ಕೆಲ ಖಾಸಗಿ ಬಸ್ಗಳ ಟಿಕೆಟ್ ದರಲ್ಲಿ ಏರಿಕೆಯಾಗಿದ್ದು ಹಬ್ಬ ಮುಗಿದು ವಾಪಸ್ ಬರುವವರೆಗೂ ದರ ಏರಿಕೆ ಬಿಸಿ ಮುಟ್ಟಲಿದೆ.
ಮಂಗಳೂರು ದಸರಾ ಕಣ್ತುಂಬಿಕೊಳ್ಳಲು ಸಾಮಾನ್ಯವಾಗಿ ದೂರ ದೂರಿನಿಂದ ಸಾರ್ವಜನಿಕರು ಆಗಮಿಸುತ್ತಾರೆ. ಈ ಬಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅ. 3ರಿಂದ 14ರ ವರೆಗೆ ಮಂಗಳೂರು ದಸರಾ ನಡೆಯಲಿದೆ. ಅ. 13ರಂದು ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ಜರಗಲಿದೆ. ಈ ಬಾರಿ ಅ. 12 ಎರಡನೇ ಶನಿವಾರ ಮತ್ತು ಅ.13 ರವಿವಾರ ಇದ್ದ ಕಾರಣ ಅ.11ರಂದೇ ಬೆಂಗಳೂರು, ಮೈಸೂರು ಸಹಿತ ವಿವಿಧ ಕಡೆಗಳಿಂದ ಊರಿಗೆ ಜನ ಹೊರಡುತ್ತಾರೆ. ಇದನ್ನೇ ಬಂಡವಾಳವಾಗಿರಿಸಿದ ಖಾಸಗಿ ಬಸ್ಗಳು ಟಿಕೆಟ್ ದರ ಮೂರು ಪಟ್ಟು ಹೆಚ್ಚಿಸಿದೆ.
ಎಲ್ಲಿಗೆ ಎಷ್ಟು ದರ ಏರಿಕೆ?
ಖಾಸಗಿ ಬಸ್ಗಳಲ್ಲಿ ಅ. 11ರಂದು ಬೆಂಗಳೂರಿನಿಂದ ಮಂಗಳೂರಿಗೆ ಅತೀ ಹೆಚ್ಚಿನ ದರ 3,500 ರೂ. ಇದೆ. ಅದೇ ರೀತಿ, ಮಂಗಳೂರಿನಿಂದ ಮೈಸೂರಿಗೆ 1,200 ರೂ., ಬಳ್ಳಾರಿಗೆ 950 ರೂ., ಬಾಗಲಕೋಟೆ 1,500 ರೂ., ಕೊಪ್ಪಳ 2,600 ರೂ., ವಿಜಯಪುರ 1,500 ರೂ. ಇದೆ. ಹಬ್ಬಕ್ಕೆ ಕೆಲ ದಿನ ಬಾಕಿ ಇರುವಾಗಿನಿಂದಲೇ ಏರುಗತಿಯಲ್ಲಿ ಸಾಗಿರುವ ಬಸ್ ಪ್ರಯಾಣ ದರ ಮುಂದಿನ ದಿನಗಳಲ್ಲಿ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಆದರೆ ಕೆಎಸ್ಸಾರ್ಟಿಸಿಯಲ್ಲಿ ಪ್ರಯಾಣ ದರ ಸದ್ಯಕ್ಕೆ ಏರಿಕೆಯಾಗಿಲ್ಲ. ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಕಾರ್ಯಾಚರಿಸುವ ಹೆಚ್ಚುವರಿ ಬಸ್ಗಳಿಗೆ ಮಾಮೂಲಿ ದರಕ್ಕಿಂತ ಹೆಚ್ಚಿನ ದರ ಇರುತ್ತದೆ.
ವಿಮಾನ ಟಿಕೆಟ್ ದರದಲ್ಲಿ ತುಸು ಹೆಚ್ಚಳ
ನವರಾತ್ರಿ ಸಮಯದಲ್ಲಿ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಹೋಲಿಕೆ ಮಾಡಿದರೆ, ವಿಮಾನ ಟಿಕೆಟ್ ದರದಲ್ಲಿ ಭಾರೀ ಏರಿಕೆ ಕಂಡುಬಂದಿಲ್ಲ. ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ 2,999 ರೂ. ಇದ್ದು ಅ. 11ರಂದು 3,239 ರೂ.ಗೆ ಏರಿಕೆ ಕಂಡಿದೆ. ರೈಲು ಪ್ರಯಾಣದಲ್ಲಿ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ, ಈಗಾಗಲೇ ಟಿಕೆಟ್ ಭರ್ತಿಯಾಗಿದ್ದು, ಅನೇಕ ಮಂದಿ ವೈಟಿಂಗ್ ಲಿಸ್ಟ್ನಲ್ಲಿ ಇದ್ದಾರೆ.
LATEST NEWS
ಮದುವೆ ನಿರಾಕರಣೆ; ಕಿರುತೆರೆ ನಟಿ ಮನೆಯಲ್ಲೇ ಯುವಕ ಆತ್ಮ*ಹತ್ಯೆಗೆ ಶರಣು
ಮಂಗಳೂರು/ಬೆಂಗಳೂರು: ಮದುವೆಯಾಗಲು ಕಿರುತರೆ ನಟಿಯೊಬ್ಬಳು ನಿರಾಕರಿಸಿದ ಕಾರಣಕ್ಕೆ ಯುವಕನೊಬ್ಬ ಮನನೊಂದು ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಈವೆಂಟ್ ಮ್ಯಾನೇಜ್ ಮೆಂಟ್ನಲ್ಲಿ ಡೆಕೊರೇಟ್ ಕೆಲಸ ಮಾಡುತ್ತಿದ್ದ ಮದನ್ (25) ಮೃ*ತಪಟ್ಟ ಯುವಕ ಎಂದು ಗುರುತಿಸಲಾಗಿದೆ.
ಕಿರುತೆರೆಯಲ್ಲಿ ಸಹನಟಿಯಾಗಿ ವೀಣಾ ಕೆಲಸ ಮಾಡುತ್ತಿದ್ದು, ಸೀರಿಯಲ್ ಸೆಟ್ನಲ್ಲೇ ಇಬ್ಬರ ಪರಿಚಯವಾಗಿತ್ತು. ಅವರ ಸ್ನೇಹ ಮುಂದುವರೆಯುತ್ತಿದ್ದಂತೆ ಸಲುಗೆ ಬೆಳೆಸಿಕೊಂಡು ಇಬ್ಬರು ಲೀವಿಂಗ್ ರಿಲೇಶನ್ ಬೆಳೆಸಿಕೊಂಡಿದ್ದರು.
ಕೆಲ ಸಮಯದ ಬಳಿಕ, ಮದುವೆಯಾಗುವಂತೆ ಮದನ್ ಬಳಿ ಒತ್ತಾಯಿಸಿದ್ದಳು. ಬೇರೆ ಹುಡುಗರ ಜೊತೆಯೂ ಅವಳು ಆತ್ಮೀಯಳಾಗಿದ್ದಳು ಎಂಬ ಕಾರಣಕ್ಕೆ ಅವನು ನಿರಾಕರಿಸಿದ್ದ.
ಆದರೆ, ನಿನ್ನೆ (ಅ.1) ವೀಣಾ ಮದನ್ನ್ನು ಮನೆಗೆ ಬರ ಮಾಡಿಸಿ ಇಬ್ಬರೂ ಚೆನ್ನಾಗಿ ಕುಡಿದು ಪಾರ್ಟಿ ಮಾಡಿದ್ದಾರೆ. ಆ ಮಧ್ಯೆ ಮದುವೆ ಪ್ರಸ್ತಾಪವಾಗಿತ್ತು. ಮದನ್ ಸ್ವತಃ ಮದುವೆಯಾಗುವಂತೆ ಕೇಳಿದಾಗ, ವೀಣಾ ‘ಆಗುವುದಿಲ್ಲ’ ಎಂದು ಖಡಕ್ಕಾಗಿ ಹೇಳಿದ್ದಾಳೆ.
ಇದರಿಂದ ಮನನೊಂದ ಮದನ್ ವಾಶ್ ರೂಮಿಗೆ ಹೋಗಿಬರುವೆ ಎಂದು ಹೇಳಿ , ಅಲ್ಲಿಯೇ ನೇ*ಣು ಬಿಗಿ*ದು ಆತ್ಮ*ಹತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.
ಹುಲಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೀಣಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
LATEST NEWS
ಅಪ್ಪನ ಚಿತೆಗೆ ಕೊಳ್ಳಿ ಇಡೋಕೆ ಎರಡೂವರೆ ಲಕ್ಷ ಕೇಳಿದ ಮಗ
ಭೋಪಾಲ್: ಮಧ್ಯಪ್ರದೇಶದ ಶಾದೋಲ್ ಎಂಬಲ್ಲಿ ಪುತ್ರನೋರ್ವ ತಂದೆಯ ಚಿತೆಗೆ ಬೆಂಕಿ ಇಡಲು ನಿರಾಕರಿಸಿದ್ದಾನೆ. ತಂದೆಯ ಚಿತೆಗೆ ಕೊಳ್ಳಿ ಇಡಬೇಕಾದರೆ 2.5 ಲಕ್ಷ ರೂಪಾಯಿ ನೀಡಬೇಕೆಂದು ಮಗ ಡಿಮ್ಯಾಂಡ್ ಮಾಡಿದ್ದನು. ಊರಿಗೆ ಬಂದು ತಂದೆಯ ಅಂತಿಮ ವಿಧಿವಿಧಾನಗಳನ್ನು ಪೂರ್ಣಗೊಳಿಸು ಎಂದು ತಾಯಿ ಫೋನ್ನಲ್ಲಿ ಗೊಗರೆದು ಕೇಳಿಕೊಂಡರೂ ಮಗ ಕೇಳಿಲ್ಲ. ಎಷ್ಟೇ ಮನವಿ ಮಾಡಿಕೊಂಡರೂ ಮಗ ಬರಲು ಒಪ್ಪದಿದ್ದಾಗ ಪತ್ನಿಯೇ ಚಿತೆಗೆ ಬೆಂಕಿ ಇರಿಸಿದ್ದಾರೆ.
ಮಧ್ಯಪ್ರದೇಶದ ಬ್ಯೌಹಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಛಿಯಾನಾ ಟೋಲಾ 11ನೇ ವಾರ್ಡ್ನಲ್ಲಿ ಘಟನೆ ನಡೆದಿದೆ. 10 ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 10 ದಿನದ ಹಿಂದೆ ರಾಮ್ ಸ್ವರೂಪ್ ಬರ್ಮನ್ ಎಂಬವರು ಸಾ*ವನ್ನಪ್ಪಿದ್ದರು. ಮಗನಿಗೆ ಕರೆ ಮಾಡಿದ ತಾಯಿ, ನಿಮ್ಮ ತಂದೆ ಮೃ*ತರಾಗಿದ್ದು, ಬಂದು ಅಂತ್ಯಕ್ರಿಯೆ ನೆರವೇರಿಸು ಎಂದು ಹೇಳಿದ್ದರು. ಇದಕ್ಕೆ ಊರಿನಲ್ಲಿರುವ ಮನೆ ಮಾರಾಟ ಮಾಡಿ, ಎರಡೂವರೆ ಲಕ್ಷ ಹಣ ಖಾತೆಗೆ ಜಮೆ ಮಾಡಿದ ನಂತರವೇ ಅಲ್ಲಿಗೆ ಬರುವೆ ಎಂದು ಹೇಳಿದ್ದಾನೆ. ತಾಯಿ, ಕುಟುಂಬಸ್ಥರು ಮತ್ತು ಗ್ರಾಮದ ಹಿರಿಯರು ಎಷ್ಟೇ ಬುದ್ಧಿವಾದ ಹೇಳಿದರೂ ಮಗ ಯಾರ ಮಾತನ್ನೂ ಕೇಳಿಲ್ಲ.
ಅಂತ್ಯಕ್ರಿಯೆ ನಡೆಸಲು ಒಪ್ಪದಿದ್ದಾಗ ಮೃ*ತ ವ್ಯಕ್ತಿಯ ಮಡದಿ ಪಾರ್ವತಿ ತಾವೇ ಎಲ್ಲಾ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ನಿರ್ಧರಿಸಿದರು. ಶವ ಸಾಗುವ ಮಾರ್ಗದಲ್ಲಿ ತಾವೇ ಮುಂದೆ ಕೊಳ್ಳಿ ಹಿಡಿದುಕೊಂಡು ಸ್ಮಶಾನದವರೆಗೆ ಬಂದಿದ್ದಾರೆ. ಸ್ಮಶಾನಕ್ಕೆ ಬಂದ್ಮೇಲೆಯೂ ತುಂಬಾ ಸಮಯದವರೆಗೆ ಮಗನ ಆಗಮನಕ್ಕಾಗಿ ಇಡೀ ಊರು ಕಾದಿತ್ತು. ಕೊನೆಗೆ ತಾವೇ ಎಲ್ಲಾ ವಿಧಿವಿಧಾನ ಪೂರೈಸಿ ಗಂಡನ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ. ಇಡೀ ಗ್ರಾಮ ಪಾರ್ವತಿ ಅವರಿಗೆ ಸಾಥ್ ನೀಡಿತ್ತು.
ಅಂತ್ಯಕ್ರಿಯೆ ಮುಗಿಸಿದ ಬಳಿಕ 10ನೇ ದಿನದ ಕಾರ್ಯವರೆಗೂ ಮಗ ಆಗಮಿಸುವ ನಿರೀಕ್ಷೆಯುಲ್ಲಿ ಮಹಿಳೆ ಇದ್ದರು. 10ನೇ ದಿನದ ಕಾರ್ಯಕ್ರಮ ಮುಗಿಸಿದ ನಂತರ ಹೆಣ್ಣು ಮಕ್ಕಳೊಂದಿಗೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ ಪಾರ್ವತಿ ಅವರು, ಮಗನ ವಿರುದ್ಧ ದೂರು ದಾಖಲಿಸಿ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಾಮ್ ಸ್ವರೂಪ್ ಬರ್ಮನ್ ಮತ್ತು ಪಾರ್ವತಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಮಗನಿದ್ದಾನೆ. ಮದುವೆ ಬಳಿಕ ತಂದೆ-ತಾಯಿ ಜೊತೆ ಹಣಕಾಸಿನ ವಿಚಾರವಾಗಿ ಮಗ ಮನೋಜ್ ಜಗಳ ಮಾಡುತ್ತಿದ್ದನು. ನಂತರ ಪೋಷಕರಿಂದ ದೂರವಾಗಿ ಬ್ಯೌಹಾರಿಯ ಬಾಡಿಗೆ ಮನೆಯಲ್ಲಿ ಪತ್ನಿ ಜೊತೆ ಮನೋಜ್ ವಾಸವಾಗಿದ್ದನು. ಊರಿಗೆ ಬಂದಾಗಲೂ ಹಣದ ವಿಷಯಕ್ಕಾಗಿಯೇ ಪೋಷಕರ ಜೊತೆ ಮನೋಜ್ ಜಗಳ ಮಾಡುತ್ತಿದ್ದನು ಎಂದು ವರದಿಯಾಗಿದೆ.
- DAKSHINA KANNADA6 days ago
ಮಂಗಳೂರು : ಪಾನಿಪುರಿ ಸವಿಯುತ್ತಿದ್ದ ವಿದ್ಯಾರ್ಥಿನಿಯ ಮೊಬೈಲ್ ಎಗರಿಸಿದ ಭೂಪ!
- DAKSHINA KANNADA5 days ago
ಕೆಬಿಬಿಯಲ್ಲಿ ಮಿಂಚಿದ ಮಂಗಳೂರು ಬೆಡಗಿ; ಕೊನೆಗೂ ನನಸಾದ ಅಪೂರ್ವ ಶೆಟ್ಟಿ ಕನಸು
- DAKSHINA KANNADA6 days ago
ಮೂಡುಬಿದಿರೆ: ಕಾರು ಢಿಕ್ಕಿ ಹೊಡೆದು ವಿದ್ಯಾರ್ಥಿ ಸಾ*ವು
- LATEST NEWS5 days ago
ಪುತ್ತೂರು: ಸಾಲ ವಸೂಲಿಗೆಂದು ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ ತಂದೆ ಮಗ