ಮಂಗಳೂರು: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವೈದ್ಯೆ ಸಹಿತ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಮಂಗಳವಾರ ದೇರಳಕಟ್ಟೆಯಲ್ಲಿ ಬಂಧಿಸಿ, ಇಕೊನಾಮಿಕ್ ಮತ್ತು ನಾರ್ಕೊಟಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಂಧಿತ ಆರೋಪಿಗಳನ್ನು ಕಾಸರಗೋಡಿನ ಮಂಗಲ್ಪಾಡಿಯ ಅಜ್ಮಲ್ ಟಿ. ಮತ್ತು ತಮಿಳ್ನಾಡು ಮೂಲದ ಸದ್ಯ ಸುರತ್ಕಲ್ನಲ್ಲಿ ವಾಸವಾಗಿರುವ ಮಿನು ರಶ್ಮಿ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು 30 ಲಕ್ಷ ರೂ.ನಿಂದ 1 ಕೋ.ರೂ.ವರೆಗಿನ ಮೌಲ್ಯದ ಹೈಡ್ರೋವೀಡ್ ಗಾಂಜಾ, 1 ಸ್ಯಾಂಟ್ರೋ ಕಾರು, 2 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಕಾಸರಗೋಡು ಮೂಲದ ಡಾ. ನದೀರ್ ಈ ದಂಧೆಯ ಪ್ರಮುಖ ಆರೋಪಿಯಾಗಿದ್ದಾನೆ. ವೈದ್ಯನಾಗಿರುವ ಈತ ವಿದೇಶದಲ್ಲಿದ್ದು, ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಡಾ. ನದೀರ್ ಸೂಚನೆಯ ಮೇರೆಗೆ ಕೇರಳದ ಕಾಂಞಂಗಾಡ್ನ ಹರಿಮಲ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಮಿನು ರಶ್ಮಿ ಮತ್ತು ಅಜ್ಮಲ್ ಎಂಬವರು ಮಂಗಳೂರು, ಉಳ್ಳಾಲ, ಕೊಣಾಜೆ, ಉಪ್ಪಳ ಪರಿಸರದ ಮಾದಕ ವ್ಯಸನಿಗಳಿಗೆ ಹೈಡ್ರೋವೀಡ್ ಗಾಂಜಾವನ್ನು ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ. ಜೂ.29ರಂದು ಆರೋಪಿಗಳಾದ ಅಜ್ಮಲ್ ಮತ್ತು ಮಿನು ರಶ್ಮಿ ಕಾಂಞಗಾಡ್ನಿಂದ ರೈಲಿನ ಮೂಲಕ ಮಂಗಳೂರಿಗೆ ಆಗಮಿಸಿದ್ದರು. ಬಳಿಕ ಕಾರಿನಲ್ಲಿ ದೇರಳಕಟ್ಟೆಗೆ ತೆರಳಿ ಮಾರಾಟಕ್ಕೆ ಸಜ್ಜಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ 1.236 ಕೆ.ಜಿ ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ.