DAKSHINA KANNADA
ಖಾಸಗಿ ಬಸ್ ದರ ಏರಿಕೆಗೆ ತೀರ್ಮಾನ: ಡಿವೈಎಫ್ಐ ವಿರೋಧ
ಮಂಗಳೂರು: ಜಿಲ್ಲೆಯ ಖಾಸಗಿ ಬಸ್ಸುಗಳ ಮಾಲಕರ ಒಕ್ಕೂಟಗಳು ಕೊರೋನ ನಿರ್ಬಂಧಗಳ ಪಾಲನೆಯ ನೆಪದಲ್ಲಿ “ಸೆಸ್ ಹಾಕಲು ತಮಗೆ ಸರಕಾರ ಅವಕಾಶ ನೀಡಿದೆ” ಎಂದು ಶೇಕಡಾ ಇಪ್ಪತ್ತೈದರಷ್ಟು ಪ್ರಯಾಣ ದರ ಏಕಪಕ್ಷೀಯವಾಗಿ ಏರಿಸಲು ತೀರ್ಮಾನಿಸಿರುವುದನ್ನು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ವಿರೋಧಿಸಿದೆ.
ಲಾಕ್ ಡೌನ್, ಕೊರೋನಾ ನಿರ್ಬಂಧಗಳನ್ನು ವಿಧಿಸಿರುವ ಸರಕಾರದೊಂದಿಗೆ ತೆರಿಗೆ ವಿನಾಯತಿ ಸಹಿತ ವಿವಿಧ ರಿಯಾಯತಿಗಳಿಗಾಗಿ ಒತ್ತಡ ಹಾಕುವ ಬದಲಿಗೆ ಈಗಾಗಲೆ ದುಡಿಮೆಯಿಲ್ಲದೆ ಬಳಲಿರುವ ಪ್ರಯಾಣಿಕರ ಮೇಲೆ ಹೊರೆ ಹಾಕುವ ಇಂತಹ ಪ್ರಯತ್ನಗಳಿಗೆ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಅವಳಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅವಕಾಶ ನೀಡಬಾರದು ಎಂದು ಡಿವೈಎಫ್ಐ ಆಗ್ರಹಿಸಿದೆ.
ಕೊರೋನ ನಿರ್ಬಂಧ, ಸತತ ಲಾಕ್ ಡೌನ್ ಗಳಿಂದ ಖಾಸಗಿ ಬಸ್ಸು ಮಾಲಕರು ಮಾತ್ರವಲ್ಲದೆ ಜನ ಸಾಮಾನ್ಯರೂ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದಾರೆ. ಅದರಲ್ಲೂ ಖಾಸಗಿ ಬಸ್ಸುಗಳನ್ನು ಪ್ರಯಾಣಕ್ಕಾಗಿ ಬಳಸುವವರು ಬಹುತೇಕರು ಬಡ ವಿಭಾಗಕ್ಕೆ ಸೇರಿದ ಕೂಲಿಕಾರರು, ಸಣ್ಣ ಪುಟ್ಟ ವರ್ಕ್ ಶಾಪ್, ಅಂಗಡಿ, ಕಚೇರಿಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುವಂತವರು. ಅಲ್ಲ ಸ್ವಲ್ಪ ಆದಾಯ ಇರುವವರೂ ಸ್ವಂತ ವಾಹನ ಹೊಂದುವ ಈ ಕಾಲಘಟ್ಟದಲ್ಲಿ ಬಸ್ ಪ್ರಯಾಣ ದರ ತೀರಾ ಕಡಿಮೆ ಸಂಬಳ ಪಡೆಯುವ ಬಡವರ್ಗಕ್ಕೆ ದೊಡ್ಡ ಪೆಟ್ಟು ನೀಡುತ್ತದೆ. ಒಂದೊಂದು ಪೈಸೆಗೂ ಲೆಕ್ಕ ಇಟ್ಟು ಬದುಕು ನಡೆಸಬೇಕಾದ ಈ ಧ್ವನಿರಹಿತ ವಿಭಾಗವನ್ನು ಶೇಕಡಾ ಇಪ್ಪತ್ತೈದರಷ್ಟು ಬಸ್ಸು ಪ್ರಯಾಣ ದರ ಏರಿಕೆ ದೊಡ್ಡದಾಗಿ ಭಾದಿಸಲಿದೆ.
ಕೇರಳದಂತಹ ಕಡೆ ಸರಕಾರ ಲಾಕ್ ಡೌನ್ ಅವಧಿಯಲ್ಲಿ ರಸ್ತೆ ತೆರಿಗೆ ವಿನಾಯತಿ ನೀಡಿರುವುದನ್ನು ಬಸ್ಸು ಮಾಲಕರ ಒಕ್ಕೂಟಗಳು ಗಮನಿಸಬೇಕು. ಡೀಸೆಲ್ ದರ ಏರಿಕೆ ಮುಂದಿಟ್ಟು ಅಥವಾ ಇನ್ನಿತರ ಯಾವುದೆ ಕಾರಣಗಳಿಗೂ ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆಯ ಅನುಮತಿ ಇಲ್ಲದೆ ಪ್ರಯಾಣ ದರ ಏರಿಕೆಗೆ ನಿಯಗಳು ಅನುಮತಿ ನೀಡುವುದಿಲ್ಲ. ಕೊರೋನ ಪ್ರಥಮ ಅಲೆಯ ಸಂದರ್ಭದಲ್ಲೂ ತಾತ್ಕಾಲಿಕ ನೆಲೆಯಲ್ಲಿ ಏರಿಸಿದ್ದ ಪ್ರಯಾಣ ದರವನ್ನು ಬಸ್ಸು ಮಾಲಕರು ನಂತರ ಇಳಿಸಿರಲಿಲ್ಲ. ಈಗ ಮತ್ತೆ ಏಕಪಕ್ಷೀಯ ದರ ಏರಿಕೆಗೆ ಡಿವೈಎಫ್ಐ ಪ್ರಬಲ ಆಕ್ಷೇಪ ವ್ಯಕ್ತಪಡಿಸುತ್ತದೆ. ಯಾವುದೇ ಕಾರಣಕ್ಕೆ ದರ ಏರಿಕೆಗೆ ಬಸ್ಸು ಮಾಲಕರು ಮನವಿ ಸಲ್ಲಿಸಿದರೆ ಸಾರಿಗೆ ಪ್ರಾಧಿಕಾರದ ಸಭೆ ಕರೆದು ಅಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಅದರ ಆಧಾರದಲ್ಲೇ ನಿರ್ಧಾರವನ್ನು ಕೈಗೊಳ್ಳಬೇಕು. ಅದರ ಹೊರತು ಜಿಲ್ಲಾಡಳಿತ ಏಕಪಕ್ಷೀಯ ಏರಿಕೆಗೆ ಬಸ್ಸು ಮಾಲಕರ ಒಕ್ಕೂಟಗಳಿಗೆ ಅವಕಾಶ ನೀಡಬಾರದು ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸುತ್ತದೆ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
DAKSHINA KANNADA
ಮಂಗಳೂರು: 14.33% ಮತದಾರರಿಂದ ಮತ ಚಲಾವಣೆ
ಮಂಗಳೂರು: 17-ದ.ಕ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ 14.33 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ.
ಸುಳ್ಯದಲ್ಲಿ ಅತಿ ಹೆಚ್ಚು ಮತ ಚಲಾವಣೆಯಾಗಿದ್ದು, 16.46 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಮೂಡುಬಿದಿರೆ ಕ್ಷೇತ್ರದಲ್ಲಿ ಅತಿ ಕನಿಷ್ಠ ಮತ ಚಲಾವಣೆಯಾಗಿದ್ದು, 12.2 ಪ್ರತಿಶತ ಮತದಾರರು ಮತ ಚಲಾಯಿಸಿದ್ದಾರೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ಬೇಗೆಗೆ ಕಾರ್ ಸ್ಟ್ರೀಟ್ ಸರ್ಕಾರಿ ಬಾಲಕಿಯರ ಎಪಿಯು ಕಾಲೇಜಿನಲ್ಲಿ ಮತದಾರರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಛತ್ರಿ ಹಿಡಿದು ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡುಬಂತು.
DAKSHINA KANNADA
ಮಂಗಳೂರು: ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿ; ಪೊಲೀಸ್ ಅಧಿಕಾರಿಗಳ ಜೊತೆಯಲ್ಲೇ ಅನುಚಿತ ವರ್ತನೆ
ಮಂಗಳೂರು: ನಗರದ ಕಪಿತಾನಿಯೋ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ ಚಲಾಯಿಸಿದ ಬಳಿಕ ಮಾಧ್ಯಮ ಪ್ರತಿನಿಧಿ ಜೊತೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತನೊಬ್ಬ ಪೊಲೀಸ್ ಹಾಗೂ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿ ವಾಗ್ವಾದವುಂಟಾದ ಘಟನೆ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್. ಆರ್ ಪೂಜಾರಿಯವರು ಮತದಾನ ಮಾಡಿ ಹೊರಬಂದಾಗ ಮಾಧ್ಯಮದವರು ಗೇಟಿನ ಹೊರಭಾಗದಲ್ಲಿ ಅವರ ಹೇಳಿಕೆ ತೆಗೆದುಕೊಳ್ಳುತ್ತಿದ್ದರು. ಆಗ “ಎಷ್ಟು ಹೊತ್ತು ಪ್ರತಿಕ್ರಿಯೆ ಪಡೆಯುವುದು”ಎಂದು ಸಂದೀಪ್ ಎಕ್ಕೂರು ಎಂಬಾತ ಕ್ಯಾತೆ ತೆಗೆದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಸೇರಿದಂತೆ ಇತರ ಪೊಲೀಸರು ಆತನನ್ನು ತಳ್ಳಿಕೊಂಡು ಒಂದಷ್ಟು ದೂರ ಹೋಗಿದ್ದಾರೆ. ಈ ವೇಳೆ ಆತನೊಂದಿಗೆ ಇದ್ದವರು ಸಮಾಧಾನ ಮಾಡಲು ಯತ್ನಿಸಿದರೂ, ಆತ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ, ವಾಗ್ವಾದ ನಡೆಸಿದ್ದಾನೆ. ಆಗ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಪೊಲೀಸರು ಅಲ್ಲಿಂದ ಹಿಂದಿರುಗಿದ ಬಳಿಕ ತಂಡದಲ್ಲಿದ್ದ ಮತ್ತೊಬ್ಬ ಘಟನೆಯ ದೃಶ್ಯ ಚಿತ್ರೀಕರಿಸುತ್ತಿದ್ದ ಮಾಧ್ಯಮ ವರದಿಗಾರರ ಮೇಲೆ ಹರಿಹಾಯ್ದಿದ್ದಾನೆ. ಈ ವೇಳೆ ಪತ್ರಕರ್ತರೊಂದಿಗೂ ತಂಡದಿಂದ ವಾಗ್ವಾದ ನಡೆದಿದೆ. ಈ ವೇಳೆ ಸ್ಥಳದಲ್ಲಿ ಸ್ವಲ್ಪ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ ವೇಳೆ ಆತನ ಮೇಲೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡುತ್ತೇನೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿದ ಬಳಿಕ ಪರಿಸ್ಥಿತಿ ಶಾಂತವಾಯಿತು.
DAKSHINA KANNADA
ಪತ್ನಿ ಮಗಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಪದ್ಮರಾಜ್ ಪೂಜಾರಿ
ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಮಂಗಳೂರಿನಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ಮಂಗಳೂರಿನ ಕಪಿತಾನಿಯೋ ಶಾಲೆಯ ಮತಗಟ್ಟೆಗೆ ತನ್ನ ಪತ್ನಿ ಹಾಗೂ ಮಗಳ ಜೊತೆ ಆಗಮಿಸಿ ಮತ ಚಲಾಯಿಸಿದ್ದಾರೆ.
ಮುಂಜಾನೆ ಏಳುಗಂಟೆಗೆ ಮತಗಟ್ಟೆಗೆ ಆಗಮಿಸಿದ ಪದ್ಮರಾಜ್ ಅವರು ಬರುವ ವೇಳೆಗೆ ಜನರು ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದರು. ಹೀಗಾಗಿ ಪದ್ಮರಾಜ್ ಹಾಗೂ ಅವರ ಪತ್ನಿ ಮತ್ತು ಮಗಳು ಸರತಿ ಸಾಲಿನಲ್ಲಿ ನಿಂತೇ ಮತ ಚಲಾಯಿಸಿದ್ದಾರೆ. ಪದ್ಮರಾಜ್ ಆಗಮಿಸುವ ವೇಳೆ ಅವರ ಸಾಕಷ್ಟು ಅಭಿಮಾನಿಗಳು ಮತಗಟ್ಟೆಯ ಹೊರಗೆ ನಿಂತು ಅವರಿಗೆ ಶುಭ ಕೋರಿದ್ದಾರೆ.
ಮತದಾನ ಮಾಡಿದ ಪದ್ಮರಾಜ್ ಬಳಿಕ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ವೀಕ್ಷಣೆಗೆ ತೆರಳಿದ್ದಾರೆ.