ಕೋಯಮತ್ತೂರು: ಕೊವಿಡ್ 19 ನಿವಾರಣೆಯ ಮಾತ್ರೆ ಎಂದು ಹೇಳಿ ವಿಷದ ಮಾತ್ರೆ ಕೊಟ್ಟು ಒಂದೇ ಕುಟುಂಬ ಮೂವರನ್ನು ಹತ್ಯೆ ನಡೆಸಿದ ಘಟನೆ ತಮಿಳುನಾಡಿನ ಎರೋಡ್ ನಲ್ಲಿ ನಡೆದಿದೆ. ಕೃತ್ಯಕ್ಕೆ ಆರೋಗ್ಯ ಕಾರ್ಯಕರ್ತೆಯೊಬ್ಬರ ಸಹಾಯವನ್ನೂ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಆರ್. ಕಲ್ಯಾಣಸುಂದರಂ (43) ಹಾಗೂ ಆರೋಗ್ಯ ಇಲಾಖೆ ಕಾರ್ಯಕರ್ತೆಯಾಗಿದ್ದ ಸಬರಿ (25) ಬಂಧಿತರು. ಆರೋಪಿ ಕಲ್ಯಾಣಸುಂದರಂ ವೈಯುಕ್ತಿಕ ಕಾರಣಕ್ಕೆ ಕರುಪ್ಪನಕೌಂದರ್ ಎಂಬುವರಿಂದ ಕೆಲವು ತಿಂಗಳುಗಳ ಹಿಂದೆ 15 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಆದರೆ ಸಾಲ ಹಿಂದಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಮಧ್ಯ ಹಣ ವಾಪಸ್ ಕೊಡುವಂತೆ ಕರುಪ್ಪನಕೌಂದರ್ ಒತ್ತಡ ಹಾಕುತ್ತಲೇ ಇದ್ದರು. ಈ ಒತ್ತಡವನ್ನು ತಾಳಿಕೊಳ್ಳಲು ಸಾಧ್ಯವಾಗದೆ ಕೆ.ಕಲ್ಯಾಣಸುಂದರಂ ಆರೋಗ್ಯ ಇಲಾಖೆ ಕಾರ್ಯಕರ್ತೆಯಾಗಿದ್ದ ಸಬರಿ ಎಂಬಾಕೆಯ ಸಹಾಯದಿಂದ ಕರುಪ್ಪನಕೌಂದರ್ ಕುಟುಂಬಕ್ಕೆ ಮಾತ್ರೆ ರೂಪದಲ್ಲಿ ವಿಷವುಣಿಸಿದ.
ಘಟನೆ ವಿವರ
ಆರೋಗ್ಯ ಇಲಾಖೆ ಕಾರ್ಯಕರ್ತೆ ಸಬರಿ ಗ್ರಾಮದ ಮನೆಮನೆಗೆ ತೆರಳಿ ಕೊರೊನಾ ಸೋಂಕಿನ ಬಗ್ಗೆ ಅರಿವು ಮೂಡಿಸುತ್ತಿದ್ದೇನೆ ಎಂದು ಹೇಳುತ್ತ ಜೂ. 26ರಂದು ಕುರುಪ್ಪನಕೌಂದರ್ ಮನೆಗೂ ಹೋದಳು. ಅಲ್ಲಿ ಹೋಗಿ ಕುರುಪ್ಪನಕೌಂದರ್ ಮತ್ತು ಅವರ ಕುಟುಂಬದವರ ಬಳಿ, ನಿಮಗೆ ಜ್ವರ, ಕೆಮ್ಮು ಏನಾದರೂ ಇದೆಯಾ ಎಂದು ಪ್ರಶ್ನಿಸಿದಳು. ನಂತರ ಒಂದಷ್ಟು ಮಾತ್ರೆಗಳನ್ನು ಕೊಟ್ಟು, ಇದು ಕೊವಿಡ್ 19 ನಿವಾರಣೆ ಮಾತ್ರೆಯಾಗಿದೆ. ನೀವು ತೆಗೆದುಕೊಳ್ಳಲು ಪ್ರಾರಂಭಿಸಿ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದೂ ಹೇಳಿದಳು. ಸಬರಿಯ ಅಣತಿಯಂತೆ ಕರುಪ್ಪನಕೌಂದರ್, ಪತ್ನಿ ಮಲ್ಲಿಕಾ, ಮಗಳು ದೀಪಾ ಮತ್ತು ಮನೆಕೆಲಸದಾಕೆ ಕುಪ್ಪಲ್ ಮಾತ್ರೆ ಸೇವಿಸಿದ ತಕ್ಷಣ ತೀವ್ರ ಅಸ್ವಸ್ಥರಾದರು. ಇದನ್ನು ಗಮನಿಸಿದ ನೆರೆಮನೆಯವರು ಇವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಿದರು.
ಪತ್ನಿ ಮಲ್ಲಿಕಾ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲೇ ಮೃತಪಟ್ಟಿದ್ದಾರೆ. ಅದಾದ ಮರುದಿನ ದೀಪಾ ಮತ್ತು ಕುಪ್ಪಲ್ ಸಾವನ್ನಪ್ಪಿದ್ದಾರೆ. ಸದ್ಯ ಕರುಪ್ಪನ್ಕೌಂದರ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಭಾನುವಾರ ಕಲ್ಯಾಣಸುಂದರಂ ಮತ್ತು ಸಬರಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.