ತೂತುಕುಡಿ: ಗಂಟೆಗಟ್ಟಲೆ ಮೊಬೈಲ್ ಬಳಕೆ ಮಾಡುತ್ತಿದ್ದ ತಂಗಿಯನ್ನು ಅಣ್ಣನೊಬ್ಬ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತೂತುಕುಡಿಯ ವಾಸವಪ್ಪಪುರಂ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
ಕವಿತಾ ಹಾಗೂ ಅಣ್ಣ ಮಲೈರಾಜ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕವಿತಾ ಪ್ರತಿದಿನ ಸಹೋದರನ ಮೊಬೈಲ್ನಲ್ಲಿ ಫೇಸ್ಬುಕ್, ವಾಟ್ಸ್ಆ್ಯಪ್ ಬಳಕೆ ಮಾಡುತ್ತಿದ್ದಳು. ಜತೆಗೆ ರಾತ್ರಿಯಿಡೀ ಗೇಮ್ ಆಡುತ್ತಿದ್ದಳು. ಸಹೋದರಿಯ ಈ ವರ್ತನೆಯಿಂದ ಮಲೈರಾಜ ಆಕ್ರೋಶಗೊಂಡಿದ್ದನು. ತಂಗಿಗೆ ಮೊಬೈಲ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದ್ದನು. ಅಣ್ಣನ ಮಾತು ಕೇಳದ ಕವಿತಾ ತನ್ನ ಕೆಲಸ ಮುಂದುವರೆಸಿದ್ದಳು. ನಿನ್ನೆ ಸಂಜೆ ಕೂಡ ಮಲೈರಾಜ್ ಸಹೋದರಿಗೆ ಎಚ್ಚರಿಕೆ ನೀಡಿದ್ದು, ಈ ನಡುವೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಈ ವೇಳೆ ಕುಪಿತಗೊಂಡ ಮಲೈರಾಜ ಕುಡುಗೋಲಿನಿಂದ ಸಹೋದರಿ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನಾ ಸ್ಥಳಕ್ಕೆ ಮುರಪ್ಪನಾಡು ಪೊಲೀಸರು ಬಂದು ಮೃತದೇಹ ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮಲೈರಾಜನನ್ನ ಬಂಧಿಸಿದ್ದಾರೆ.