ಭಟ್ಕಳ: ಮಹಿಳೆಯೋರ್ವರಿಗೆ ನಿಯಂತ್ರಣ ತಪ್ಪಿದ ಪೊಲೀಸ್ ಜೀಪ್ ಢಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಭಟ್ಕಳದ ಶಿರಾಲಿಯಲ್ಲಿ ನಡೆದಿದೆ.
ವೆಂಕಟಾಪುರ ಹಿಂದೂ ಕಾಲೋನಿ ನಿವಾಸಿ ವಿಜಯ ರಘು ಹೊನ್ನಾವರಕರ ಮೃತ ದುರ್ದೈವಿ.
ಬೆಳಕೆ ಕಡೆಯಿಂದ ಶಿರಾಲಿ ಕಡೆಗೆ ಹೋಗುತ್ತಿದ್ದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಪೈಲಟ್ ಮಾಡುವ ಸಲುವಾಗಿ ಬೆಳಕೆ ಕಡೆಯಿಂದ ಸಾರದಹೊಳೆ ಕಡೆಗೆ ಸೈರನ್ ಹಾಕಿಕೊಂಡು ಹೋಗುತ್ತಿರುವಾಗ ಈ ದುರ್ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 66 ಶಿರಾಲಿಯ ಶ್ರೀ ಕೃಷ್ಣ ಪ್ರಸಾದ ಹೋಟೆಲ್ ಹತ್ತಿರ ಪೊಲೀಸ್ ವಾಹನ ತಲುಪುತ್ತಿದ್ದಂತೆಯೇ ಹೋಟೆಲ್ ಕಡೆಯಿಂದ ಹಾದಿಮಾಸ್ತಿ ದೇವಸ್ಥಾನದ ಕಡೆಗೆ ಹೋಗಲು ರಸ್ತೆ ದಾಟುತ್ತಿದ್ದ ಮಹಿಳೆಯನ್ನು ಗಮನಿಸಿದ ವಾಹನ ಚಾಲಕ ಒಮ್ಮೆಲೆ ಜೀಪ್ ಬ್ರೇಕ್ ಹಾಕಿದ್ದಾನೆ.
ಆದರೆ, ಪೊಲೀಸ್ ಜೀಪ್ ನಿಯಂತ್ರಣ ತಪ್ಪಿ ರಸ್ತೆ ದಾಟುತ್ತಿದ್ದ ಮಹಿಳೆ ಡಿಕ್ಕಿಹೊಡೆದಿದೆ. ಅಪಘಾತದ ಪರಿಣಾಮ ಮಹಿಳೆ ರಸ್ತೆ ಮೇಲೆ ಬಿದ್ದು ಬಲಗಾಲಿಗೆ ತೀವ್ರ ಪೆಟ್ಟಾಗಿದ್ದು, ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಆಂಬ್ಯುಲೆನ್ಸ್ ಮೂಲಕ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಪೂರ್ವದಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.
ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.