ಬಂಟ್ವಾಳ: ಒಣಗಲು ಹಾಕಿದ್ದ ಅಡಿಕೆಯನ್ನು ಕಳವುಗೈದ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪಾಣೆಮಂಗಳೂರು ಸಮೀಪದ ಬೋಳಂಗಡಿ ಎಂಬಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಬಾಳ್ತಿಲ ಗ್ರಾಮದ ಕಸೆಕೋಡಿ ಮನೆ ನಿವಾಸಿ ಮಂಜುನಾಥ ಭೋವಿ (50) ಬಂಧಿತ ಆರೋಪಿಯಾಗಿದ್ದಾನೆ.
ಬೋಳಂಗಡಿ ನಿವಾಸಿಯಾಗಿರುವ ಐವನ್ ಥೋರಸ್ ಎಂಬವರು ತನ್ನ ಅಡಿಕೆ ತೋಟದ ಮಧ್ಯೆದಲ್ಲಿರುವ ಅಂಗಳದಲ್ಲಿ ಅಡಿಕೆ ಒಣಗಲು ಹಾಕಿದ್ದರು.
ಡಿಸೆಂಬರ್ 24 ಮತ್ತು ಡಿಸೆಂಬರ್ 29ರ ಮಧ್ಯದ ಅವಧಿಯಲ್ಲಿ ಸುಮಾರು 100 ರಿಂದ 120 ಕೆ.ಜಿ ಅಡಿಕೆಯನ್ನು ಕಳವು ಗೈಲಾಗಿದೆ ಎಂದು ಅಡಿಕೆ ಕಳೆದುಕೊಂಡ ಮನೆ ಮಾಲಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬಂಟ್ವಾಳ ನಗರ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನು ಅಡಿಕೆ ಕಳವು ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಮಂಜುನಾಥ ಭೋವಿ ವಿರುದ್ಧ ಕೊಣಾಜೆ, ಉಳ್ಳಾಲ ಪೊಲೀಸ್ ಠಾಣೆಗಳಲ್ಲಿ ಅಲ್ಲದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕಾರವಾರ, ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ ಬಗ್ಗೆ ಪ್ರಕರಣಗಳು ದಾಖಲಾಗಿವೆ.
ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಮಂಜುನಾಥನಿಗೆ ನ್ಯಾಯಾಂಗ ಬಂಧನ ವಿಧಿಸಿದೆ .