ಬೆಂಗಳೂರು: ಪೂರ್ವದಲ್ಲಿ ಸೂರ್ಯ ಉದಯಿಸುತ್ತಿರುವ ಹೊತ್ತಿನಲ್ಲೇ ಗಂಧದ ಗುಡಿಯ ‘ರಾಜಕುಮಾರ’ ಪುನೀತ್, ಭೂಮಿ ತಾಯಿಯ ಮಡಿಲಿನೊಳನೆ ಚಿರನಿದ್ರೆಗೆ ಜಾರಿದರು.
ಮಾನವತೆಯ ಪಡಿಚ್ಚಿನಂತೆ ಬದುಕಿನುದ್ದಕ್ಕೂ ಜೀವಿಸಿದ ನಟ ಪುನೀತ್ ರಾಜ್ಕುಮಾರ್ ಇನ್ನು ನೆನಪು ಮಾತ್ರ. ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದ ಅಪ್ಪು ಭಾನುವಾರ ಬೆಳಿಗ್ಗೆ ಭೂ ತಾಯಿಯ ಗರ್ಭ ಸೇರಿದರು.
ಅಪ್ಪ ಡಾ.ರಾಜ್ಕುಮಾರ್, ಅಮ್ಮ ಪಾರ್ವತಮ್ಮ ರಾಜ್ಕುಮಾರ್ ಅವರ ಮುದ್ದಿನ ಮಗ, ತಂದೆ ತಾಯಿಯೊಂದಿಗೆ ಕಂಠೀರವ ಸ್ಟುಡಿಯೊದಲ್ಲಿ ಚಿರ ನಿದ್ರೆಗೆ ಜಾರಿದರು.
ಸರಳತೆಯ ಪ್ರತಿರೂಪದಂತಿದ್ದ ಪ್ರೀತಿಯ ಅಪ್ಪು, ಶ್ವೇತ ವಸ್ತ್ರಧಾರಿಯಾಗಿ ನಿಸ್ತೇಜವಾಗಿ ಮಲಗಿರುವುದನ್ನು ಕಂಡು ರಾಜ್ ಕುಟುಂಬ ಸದಸ್ಯರಲ್ಲಿ ಮಡುಗಟ್ಟಿದ್ದ ದುಃಖ ಕಣ್ಣೀರ ಧಾರೆಯಾಗಿ ಹರಿಯಿತು.
ಸ್ಟುಡಿಯೊದ ಹೊರಗೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಮಂಗಳವಾರ ಹಾಲು–ತುಪ್ಪ ಬಿಡುವ ಕಾರ್ಯ ನಡೆಸಲು ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ. ಹೀಗಾಗಿ ಅಲ್ಲಿಯವರೆಗೂ ಪುನೀತ್ ಅವರ ಸಮಾಧಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ. ಮಂಗಳವಾರದವರೆಗೂ ಕಂಠೀರವ ಸ್ಟುಡಿಯೋ ಸುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ.