ಮಧ್ಯಪ್ರದೇಶ: ವರದಕ್ಷಿಣೆ ತರುವಂತೆ ಪತ್ನಿಗೆ ಘೋರ ಕಿರುಕುಳ ನೀಡಿ ಬಳಿಕ ಪಾಪಿ ಗಂಡನೋರ್ವ ಆಕೆಗೆ ಆ್ಯಸಿಡ್ ಕುಡಿಸಿದ ಅಮಾನವೀಯ ದಾರುಣ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ.
ಆರೋಪಿ ಗಂಡನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್ನ ಡಾಬ್ರಾ ಎಂಬಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ಆರೋಪಿ ವಿರೇಂದ್ರ ಕುಮಾರ್ ಜಾತ್ವಾ ವಿರುದ್ದ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ಕಲಹದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಪತ್ನಿ ಶಶಿಗೆ ತವರು ಮನೆಯಿಂದ 3 ಲಕ್ಷ ರೂ. ಹಣ ತೆಗೆದುಕೊಂಡು ಬರುವಂತೆ ಚಿತ್ರಹಿಂಸೆ ನೀಡುತ್ತಿದ್ದನಂತೆ. ಈ ವಿಷಯವಾಗಿ ಮಹಿಳೆ ಪೋಷಕರೊಂದಿಗೆ ಮಾತನಾಡಲು ನಿರಾಕರಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಷ್ಟೇ ಅಲ್ಲದೇ, ಆ್ಯಸಿಡ್ ಕುಡಿಸಿ ಕ್ರೌರ್ಯ ಮೆರೆದಿದ್ದಾನೆ.
ಇದರಿಂದಾಗಿ ತೀವ್ರವಾಗಿ ಅಸ್ವಸ್ಥರಾಗಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ದೇಹದೊಳಗಿನ ಕೆಲವೊಂದು ಅಂಗಗಳು ಆ್ಯಸಿಡ್ನಿಂದಾಗಿ ಹಾನಿಗೊಳಗಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಈಗಾಗಲೇ ಮಹಿಳೆ ತನ್ನ ಹೇಳಿಕೆ ನೀಡಿದ್ದು, ಕುಟುಂಬಸ್ಥರು ಮದುವೆ ಸಂದರ್ಭದಲ್ಲಿ 10 ಲಕ್ಷ ರೂ. ಗಂಡನ ಮನೆಯವರಿಗೆ ನೀಡಿದ್ದಾರೆಂದು ಹೇಳಿಕೊಂಡಿದ್ದಾಳೆ.
ಈ ಘಟನೆ ಬಗ್ಗೆ ಮಹಿಳಾ ಆಯೋಗದ ಮುಖ್ಯಸ್ಥೆ ದೆಹಲಿ ವಿಭಾಗದ ಸ್ವಾತಿ ಮಲಿವಾಲ್ ಗ್ವಾಲಿಯಾರ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಪ್ರಕರಣದ ಬಗ್ಗೆ ನಿರಾಸಕ್ತಿ ತೋರಿಸಿದ್ದಕ್ಕಾಗಿ ಇದೀಗ ಪೊಲಿಸ್ ಅಧಿಕಾರಿ ಅಮಾನತಾಗಿದ್ದಾರೆ.