ಬಂಟ್ವಾಳ: ಸ್ನಾನಕ್ಕೆಂದು ಬಿಸಿ ನೀರು ಕಾಯಿಸುತ್ತಿದ್ದ ವೇಳೆ ಸೀರೆಗೆ ಬೆಂಕಿ ತಗುಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಂಟ್ವಾಳದ ಅಮ್ಮುಂಜೆಯಲ್ಲಿ ನಡೆದಿದೆ.
ಬಂಟ್ವಾಳದ ಅಮ್ಮುಂಜೆ ನಿವಾಸಿ ರವೀಂದ್ರ ಅವರ ತಾಯಿ ಮೃತ ದುರ್ದೈವಿ.
ರವೀಂದ್ರ ಅವರು ತನ್ನ ತಾಯಿ ಜೊತೆಯಲ್ಲಿ ಮನೆಯಲ್ಲಿ ವಾಸವಾಗಿದ್ದು ಇವರು ಕೆಲಸಕ್ಕೆ ಹೋಗಿದ್ದ ಸಂದರ್ಭ ತಾಯಿ ಒಬ್ಬರೇ ಇದ್ದರು.
ಸಂಜೆ ವೇಳೆ ಸ್ನಾನಕ್ಕೆಂದು ಬಿಸಿ ನೀರು ಕಾಯಿಸುವ ಸಂದರ್ಭ ಒಲೆಗೆ ತೆಂಗಿನ ಗರಿಯಿಂದ ಬೆಂಕಿ ಮಾಡುತ್ತಿದ್ದು ಏಕಾಏಕಿ ಬೆಂಕಿ ಸೀರೆಗೆ ತಗುಲಿದಾಗ ಇವರು ಬೊಬ್ಬೆಯಿಟ್ಟಿದ್ದರು.
ಆಗ ನೆರೆಹೊರೆಯವರಾದ ಗಗನ್ ಮತ್ತು ಸವಿತಾ ಎಂಬವರು ಸಹಾಯಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಮಗ ರವೀಂದ್ರ ಅವರಿಗೆ ಕರೆ ಮಾಡಿ ಕೂಡಲೇ ತಾಯಿಯನ್ನು ಆಂಬ್ಯುಲೆನ್ಸ್ ನಲ್ಲಿ ಮಂಗಳೂರು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯರಾತ್ರಿ ಮಹಿಳೆ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.