ಬೆಳ್ತಂಗಡಿ: ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡನೊಬ್ಬ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಬೆಳ್ತಂಗಡಿ ಠಾಣೆಗೆ ದೂರು ನೀಡಿದೆ.
ಜೂನ್ 25ರಂದು ಕಾಂಗ್ರೆಸ್ ಪಕ್ಷದ ವಿವಿಧ ವಿಭಾಗಗಳ ಪದಾಧಿಕಾರಿಗಳು ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿ ಸಲೀಂ ಎಂಬವರು ಅನಗತ್ಯವಾಗಿ ಮಾತನಾಡುತ್ತಾ ‘ಕಾಜೂರು ಮಸೀದಿಗೆ ಶಿಲಾನ್ಯಾಸಕ್ಕೆ ಸಚಿವರಿರಲಿ ಬಿಜೆಪಿಯ ನಾಯಕರಾಗಿ ಇರಲಿ ಅಥವಾ ಸಂಘಪರಿವಾರದವರ ಇರಲಿ ಮಸೀದಿಯ ವಠಾರಕ್ಕೆ ಬರುವಾಗ ನೀವು ಬಹಳಷ್ಟು ಜಾಗೃತಿಯನ್ನು ವಹಿಸಬೇಕು.
ಯಾಕೆಂದರೆ ರಾಜೂರಿನ ಮಸೀದಿ ಮತ್ತು ದರ್ಗಾ ವಠಾರದಲ್ಲಿ ಅನೇಕ ವರ್ಷದ ಹಿಂದಿನ ಕಬರ್ ಸ್ಥಾನದ ಕಲ್ಲುಗಳಿವೆ. ಕಬರ್ ಸ್ಥಾನದಲ್ಲಿ ದಫನ ಮಾಡಿದ ನಂತರ 2 ಉರುಟಾದ ಕಲ್ಲುಗಳನ್ನು ತಲೆ ಭಾಗದಲ್ಲಿ ಮತ್ತು ಕಾಲಿನ ಭಾಗದಲ್ಲಿ ಇಡುತ್ತೇವೆ ಅವರು ಬಂದ ಸಂದರ್ಭದಲ್ಲಿ ಈ ಕಲ್ಲುಗಳನ್ನು ನೋಡಿ ಎಲ್ಲಿಯಾದರೂ ಶಿವಲಿಂಗ ಆಗಿರಬಹುದು ಎಂದು ಹೇಳಿ ಈ ಬಗ್ಗೆ ಕಮಿಟಿಯವರು ಎಚ್ಚರಿಕೆಯನ್ನು ವಹಿಸಬೇಕು’ ಎಂದು ಹೇಳಿರುವುದನ್ನು ವಿಹಿಂಪ ಖಂಡಿಸಿದೆ.
ಈ ಬಗ್ಗೆ ಕಿಡಿಕಾರಿರುವ ವಿಶ್ವ ಹಿಂದು ಪರಿಷತ್ ‘ನಮ್ಮ ಹಿಂದೂ ಸಮಾಜದ ನಂಬಿಕೆಗಳನ್ನು ಅತ್ಯಂತ ತುಚ್ಛೀಕರಿಸುವ ರೀತಿಯಲ್ಲಿ ಹಾಗೂ ಅವುಗಳನ್ನು ಹಾಸ್ಯಸ್ಪದ ರೀತಿಯಲ್ಲಿ ಹೇಳಿಕೆ ನೀಡುತ್ತಾರೆ.
ಈ ರೀತಿ ಆತ ಹೇಳಿಕೆ ನೀಡುತ್ತಿರುವಾಗ ಪತ್ರಿಕಾಗೋಷ್ಠಿಯಲ್ಲಿ ಅವರು ನೀಡಿದ ಹೇಳಿಕೆ ಹಾಗೂ ಇತರ ಪ್ರಮುಖರು ಅಲ್ಲಿ ಕುಳಿತಿದ್ದು ಅವರ ಮಾತುಗಳಿಗೆ ಸಹಮತ ವ್ಯಕ್ತಪಡಿಸುತ್ತಿರುವ ಸಂದರ್ಭದ ವಿಡಿಯೋ ಚಿತ್ರೀಕರಣ ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದಲ್ಲಿ ಪ್ರಸಾರವಾಗುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ರೀತಿಯ ಅಸಂಬದ್ಧ ಅವಹೇಳನಕಾರಿ ಹಾಗೂ ಹಿಂದೂ ಧರ್ಮದ ಧಾರ್ಮಿಕ ನಂಬಿಕೆಗಳಿಗೆ ಘಾಸಿಯಾಗುವ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ರೀತಿಯ ಧಕ್ಕೆಯನ್ನುಂಟು ಮಾಡಿದ್ದಾರೆ.
ಅಲ್ಲದೇ ಹಿಂದೂಗಳಲ್ಲಿ ದೇವರ ಮೇಲಿರುವ ಭಕ್ತಿ, ಭಾವನೆಗಳನ್ನು ವಿಚಲಿತಗೊಳಿಸಿ ಸಮಾಜದಲ್ಲಿ ಕೋಮುಗಲಭೆಯನ್ನು ಉಂಟು ಮಾಡುವ ಉದ್ದೇಶದಿಂದ ಈ ರೀತಿಯ ಹೇಳಿಕೆ ನೀಡಿದ್ದಾರೆ. ಕಾಜೂರು ಪರಿಸರದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದು ಅವರ ನಂಬಿಕೆಗೆ ಘಾಸಿಯನ್ನುಂಟುಮಾಡಿದೆ.
ಅವರ ಮೇಲೆ ದಬ್ಬಾಳಿಕೆ ಮಾಡುವ ಹುನ್ನಾರವನ್ನು ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದಾರೆ ಮತ್ತು ಅಲ್ಲಿ ಜನಪ್ರತಿನಿಧಿಗಳು ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಬರುವ ಸಂದರ್ಭದಲ್ಲಿ ಗೊಂದಲಗಳನ್ನು ಗಲಭೆಗಳನ್ನು ಸೃಷ್ಟಿಸುವ ಸಂಚು ಮಾಡಿದ್ದಾರೆ ಎಂಬ ಅನುಮಾನ ಇದೆ.
ಅವರುಗಳ ಈ ಕೃತ್ಯವು ಕಾನೂನು ಪ್ರಕಾರ ಅಪರಾಧವಾಗಿದ್ದು ಜೊತೆಗೆ ಸಮಾಜದ ಶಾಂತಿ ಕದಡಿ ಕೋಮುಗಲಭೆಗಳನ್ನು ಸೃಷ್ಟಿಸುವ ಎಲ್ಲಾ ಸಾಧ್ಯತೆಗಳು ಇರುವುದರಿಂದ ಅವರುಗಳ ವಿರುದ್ಧ ವಿಶ್ವ ಹಿಂದು ಪರಿಷತ್ ಈಗಾಗಲೇ ಪೊಲೀಸ್ ಇಲಾಖೆಗೆ ಲಿಖಿತ ದೂರನ್ನು ಸಲ್ಲಿಸುತ್ತದೆ.
ಒಂದು ವೇಳೆ ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡು ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ವಿಶ್ವಹಿಂದು ಪರಿಷತ್ ವತಿಯಿಂದ ತೀವ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ದೂರು ನೀಡುವ ಸಂದರ್ಭದಲ್ಲಿ ವಿ.ಹಿ.ಪರಿಷತ್ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷ ದಿನೇಶ್ ಚಾರ್ಮಾಡಿ, ಪುತ್ತೂರು ಜಿಲ್ಲಾ ಸಹಕಾರ್ಯದರ್ಶಿ ನವೀನ್ ನೆರಿಯ,ವಿ.ಹಿ.ಪರಿತ್ ಬೆಳ್ತಂಗಡಿ ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.