ಉಡುಪಿ: ಈ ಬಾರಿ ಅರ್ಹರನ್ನು ರಾಜ್ಯೋತ್ಸವ ಪ್ರಶಸ್ತಿ ಅರಸಿಕೊಂಡು ಬಂದಿದೆ ಎಂಬ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಡುವೆ ಉಡುಪಿ ಜಿಲ್ಲೆಯ ರಿಯಲ್ ಕಾಂತರಾಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ರಾಜ್ಯ ಸರಕಾರ ಗೌರವಿಸಿದೆ. ಅಪರೂಪದ ದೈವ ನರ್ತಕ ಉಡುಪಿ ಜಿಲ್ಲೆಯ ಕಾಪುವಿನ ಗುಡ್ಡ ಪಾಣಾರ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮುಖ್ಯವಾಹಿನಿಯಲ್ಲಿ ಇರದ ಈ ಜನಪದ ಪ್ರತಿಭೆಗೆ ಸೂಕ್ತ ಮನ್ನಣೆ ದೊರೆತಂತಾಗಿದೆ. ಪಿಲಿಕೋಲದಲ್ಲಿ ದೈವ ನರ್ತಕ ರಾಗಿ ಸೇವೆ ಸಲ್ಲಿಸುತ್ತಿರುವ ಗುಡ್ಡ ಪಾಣರರಿಗೆ ಜಾನಪದ ವಿಭಾಗದಲ್ಲಿ ಈ ಮನ್ನಣೆ ದೊರಕಿದೆ.
ಉಡುಪಿ ಜಿಲ್ಲೆಯ ಕಾಪು ಹಳೆ ಮಾರಿಗುಡಿ ಪರಿಸರದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಪಿಲಿಕೋಲ ತುಳುನಾಡಿನ ಭಕ್ತಿ, ಶೃದ್ದೆ, ನಂಬಿಕೆಗಳ ಆಗರವಾಗಿದೆ. 68 ವರ್ಷದ ಗುಡ್ಡ ಪಾಣಾರ ಉಡುಪಿ ಜಿಲ್ಲೆಯ ಕಾಪು ಸಮೀಪದ ಮೂಳೂರಿನವರು.
ನಾಣು ಪಾಣಾರ ಮತ್ತು ರುಕ್ಕುಪಾಣಾರ್ತಿ ಎಂಬ ವರಪುತ್ರ. ತನ್ನ 25ನೇ ವಯಸ್ಸಿನಿಂದ ದೈವ ನರ್ತಕ ರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕಾಪುವಿನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ವಿಶಿಷ್ಟ ಪಿಲಿಕೋಲದಲ್ಲಿ ಪಿಲಿ ಪಾತ್ರಧಾರಿ ಆಗಿ ಜನರ ಗಮನ ಸೆಳೆದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ನಾನೊಬ್ಬ ಹಳ್ಳಿಯವ, ಬಡವ .ಆದರೆ ಈ ಬಾರಿ ರಾಜ್ಯ ಪ್ರಶಸ್ತಿ ನೀಡುತ್ತಿರುವುದು ಖುಷಿಯಾಗಿದೆ.
ನಮ್ಮ ಗ್ರಾಮದವರೆಲ್ಲಾ ಸಹಕಾರ ನೀಡಿ ಈ ಪ್ರಶಸ್ತಿ ಬಂದಿದೆ. ಇದು ನನಗೆ ದೇವರು ಕೊಟ್ಟ ಪ್ರಶಸ್ತಿ. ಭಕ್ತರು ನನಗೆ ಈ ದಾರಿಯನ್ನು ತೋರಿಸಿದ್ದಾರೆ. ಈ ಆರಾಧನೆಯೇ ನನ್ನ ಧರ್ಮ.
ನಾನು 38 ವರ್ಷಗಳಿಂದ ದೈವಾರಧಕನಾಗಿ ಸೇವೆ ಮಾಡುತ್ತಿದ್ದೇನೆ. ಬಹಳ ಭಕ್ತಿಯಿಂದ ನೇಮ ನಡೆಸಿಕೊಂಡು ಬಂದಿದ್ದೇನೆ.
ಈ ಧರ್ಮ ಕಾರ್ಯವನ್ನು ಮಾಡುವ ಶಕ್ತಿಯನ್ನು ದೇವರು ನನಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.