ಉಡುಪಿ: ಮೂರು ವರ್ಷಗಳ ಹಿಂದೆ ಉಡುಪಿಯ ಪುತ್ತೂರಿನಲ್ಲಿ ಒಂಟಿ ವೃದ್ಧೆಯನ್ನು ಭೀಕರವಾಗಿ ಕೊಲೆ ಮಾಡಿದ್ದ ದಂಪತಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಧಾರವಾಡ ತಾಲ್ಲೂಕಿನ ನವಲಗುಂದದ ಅಂಬಣ್ಣ ಅಲಿಯಾಸ್ ಅಂಬರೀಶ್ ಹಾಗೂ ಪತ್ನಿ ರಶೀದಾ ಅಲಿಯಾಸ್ ಜ್ಯೋತಿ ಶಿಕ್ಷೆಗೆ ಗುರಿಯಾದವರು. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯ ಜತೆಗೆ ತಲಾ ರೂ 50,000 ದಂಡ ವಿಧಿಸಲಾಗಿದೆ.
ಶಿಕ್ಷೆಯ ವಿವರ: ಐಪಿಸಿ ಕಲಂ 302 (ಕೊಲೆ) ಅಡಿ ಜೀವಾವಧಿ ಶಿಕ್ಷೆ, 392ರ (ಕಳವು) ಅಡಿ 7 ವರ್ಷ ಕಠಿಣ ಸಜೆ, 397 (ಅಪಾಯಕಾರಿ ಅಸ್ತ್ರಗಳ ಬಳಕೆ) ಅಡಿ 7 ವರ್ಷ ಸಾದಾ ಸಜೆ ಹಾಗೂ 201 (ಸಾಕ್ಷ್ಯಗಳ ನಾಶ) ಅಡಿ 6 ತಿಂಗಳು ಶಿಕ್ಷೆ ವಿಧಿಸಲಾಗಿದ್ದು ಏಕಕಾಲದಲ್ಲಿ ಅನುಭವಿಸುವಂತೆ ಆದೇಶಿಸಲಾಗಿದೆ.
ಪ್ರಕರಣದ ವಿವರ
ರತ್ನಾವತಿ ಶೆಡ್ತಿ (80) ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದರೂ ಪುತ್ತೂರಿನ ಸುಬ್ರಹ್ಮಣ್ಯ ನಗರದಲ್ಲಿ ಒಂಟಿಯಾಗಿ ವಾಸವಾಗಿದ್ದರು. ಮೂರು ಕೊಠಡಿಗಳನ್ನು ಬಾಡಿಗೆ ಕೊಟ್ಟು ಜೀವನ ನಿರ್ವಹಣೆ ಮಾಡುತ್ತಿದ್ದರು.
ಮಕ್ಕಳು ಆಗಾಗ ಬಂದು ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. ಜುಲೈ 5, 2019ರಂದು ಪುತ್ರಿ ತಾಯಿಗೆ ಕರೆ ಮಾಡಿದಾಗ ಸ್ವೀಕರಿಸುವುದಿಲ್ಲ. ಅನುಮಾನಗೊಂಡ ಪುತ್ರಿ ಸಂಜೆ ಮನೆಗೆ ಬಂದು ನೋಡಿದಾಗ ಬೆಡ್ರೂಮಿನಲ್ಲಿ ತಾಯಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆರೋಪಿಗಳು ಬಿಟ್ಟಿದ್ದ ಸುಳಿವಿನ ಜಾಡು ಹಿಡಿದ ಪೊಲೀಸರು ಜುಲೈ 10ರಂದು ಅಂಬರೀಶ್ ಹಾಗೂ ಜ್ಯೋತಿ ದಂಪತಿಯನ್ನು ಬಂಧಿಸಿದ್ದರು.
ಇಬ್ಬರನ್ನೂ ತೀವ್ರ ವಿಚಾರಣೆಗೊಳಪಡಿಸಿದಾಗ ಜುಲೈ 2ರಂದು ಮಧ್ಯಾಹ್ನ ರತ್ನಾವತಿ ಶೇಡ್ತಿ ಮನೆಗೆ ನುಗ್ಗಿ ಆಭರಣಕ್ಕಾಗಿ ಒತ್ತಾಯ ಮಾಡಲಾಗಿತ್ತು. ಕೊಡಲು ನಿರಾಕರಿಸಿದಾಗ ಕತ್ತಿಯಿಂದ ಕೊಲೆ ಮಾಡಿ ಮೈಮೇಲಿದ್ದ ಆಭರಣ ಹಾಗೂ ಮನೆಯಲ್ಲಿದ್ದ ಚಿನ್ನಾಭರಣ, ಮೊಬೈಲ್, ರೂ 5,000 ನಗದು ದೋಚಿ ಪರಾರಿಯಾಗಿದ್ದರು.
ಅಂದಿನ ಉಡುಪಿ ಇನ್ಸ್ಪೆಕ್ಟರ್ ಮಂಜುನಾಥ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸಾಕ್ಷಿದಾರರ ವಿಚಾರಣೆಯನ್ನು ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಶಾಂತಿಬಾಯಿ ನಡೆಸಿದ್ದರು.
ನ್ಯಾಯಾಧೀಶರಾದ ದಿನೇಶ್ ಹೆಗಡೆ ಪ್ರಕರಣದ ವಿಚಾರಣೆ ನಡೆಸಿ ಆರೋಪಿಗಳ ವಿರುದ್ಧದ ಆರೋಪಗಳು ರುಜುವಾತಾದ ಕಾರಣ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ ಎಂದು ಸರ್ಕಾರದ ಪರವಾಗಿ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರಾದ ಜಯರಾಮ ಶೆಟ್ಟಿ ತಿಳಿಸಿದರು.