9.42 ಕೋಟಿ ರೂಪಾಯಿ ವೆಚ್ಚದ ನೂತನ ಸೇತುವೆ ಉದ್ಘಾಟಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ..
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಫಲ್ಗುಣಿ ನದಿಗೆ ನಿರ್ಮಾಣಗೊಂಡ 39.42 ಕೋಟಿ ರೂಪಾಯಿ ವೆಚ್ಚದ,
ನೂತನ ಸೇತುವೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ (ಜೂನ್ 12) ದಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಉತ್ತರ ಶಾಸಕ ಭರತ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಗುರುಪುರ ಸೇತುವೆಯ ಕಾಮಗಾರಿ ಕಾಲಾವಧಿಗಿಂತ ಮೊದಲೇ ಒಂದೇ ವರ್ಷದಲ್ಲಿ ಪೂರ್ಣಗೊಂಡು ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಈ ರೀತಿಯ ಕೆಲಸ ಗ್ರಾಮಸ್ವರಾಜ್ಯದ ಕಲ್ಪನೆಗೆ, ರಾಮರಾಜ್ಯದ ಕಲ್ಪನೆಗೆ ಪೂರಕವಾಗಿದೆ ಎಂದು ಕಾಮಗಾರಿ ಪೂರ್ಣಗೊಳಿಸಲು ಕಾರಣರಾದ ಸಂಸದರು, ಸಚಿವರು, ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
2019ರ ಫೆಬ್ರವರಿಯಲ್ಲಿ ಶಿಲಾನ್ಯಾಸ ಮಾಡಲಾಗಿದ್ದ ಈ ಸೇತುವೆ ಗುತ್ತಿಗೆ ಕಾಮಗಾರಿಯನ್ನು ಮುಗೆರೋಡಿ ಕನ್ಸಟ್ರಕ್ಷನ್,
2021ರ ಫೆಬ್ರವರಿಗೆ ಪೂರ್ಣಗೊಳಿಸಿ ನೀಡಬೇಕಾಗಿದ್ದರೂ 8 ತಿಂಗಳ ಮುಂಚಿತವಾಗಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ ಬಿಟ್ಟುಕೊಟ್ಟಿದೆ.
175 ಮೀಟರ್ ಉದ್ದ, 16 ಮೀಟರ್ ಅಗಲವನ್ನು ಈ ನೂತನ ಸೇತುವೆ ಹೊಂದಿದೆ.
ಪಾದಚಾರಿ ಮಾರ್ಗ 2.50 ಮೀಟರ್ ಅಗಲ ಹೊಂದಿದ್ದು, 11 ಮೀಟರ್ ಅಗಲದ ಸಂಪರ್ಕ ರಸ್ತೆಯನ್ನು ಹೊಂದಿದೆ.
ಇಲ್ಲಿದ್ದ ಹಳೆ ಸೇತುವೆಯನ್ನು 1923ರಲ್ಲಿ ನಿರ್ಮಾಣ ಮಾಡಲಾಗಿತ್ತು. ಒಂದೂವರೆ ದಶಕದಿಂದೀಚೆಗೆ ಅದು ಶಿಥಿಲಗೊಂಡ ಕಾರಣ,
ನಿತ್ಯ ಗುರುಪುರ ಸೇರಿದಂತೆ ಸುತ್ತಮುತ್ತಲ ಸಾವಿರಾರು ಪ್ರಯಾಣಿಕರು ಆತಂಕದಲ್ಲೇ ತೆರಳಬೇಕಾಗಿತ್ತು.
ನೂತನ ಸೇತುವೆ ಫೆ. 21, 2019ರಲ್ಲಿ ಪ್ರಾರಂಭಗೊಂಡ ಕಾಮಗಾರಿ ಒಂದು ವರ್ಷದಲ್ಲಿ ಪೂರ್ಣಗೊಂಡಿದೆ.