ಮಂಗಳೂರು: ಭೋಪಾಲ್ನಲ್ಲಿ ಕರ್ತವ್ಯದ ವೇಳೆ ಸೋಮವಾರ ಹೃದಯಾಘಾತದಿಂದ ಮೃತಪಟ್ಟ ನಗರದ ಯೋಧ ಮುರಳೀಧರ್ ಬಿ.ಎಸ್. (37) ಅವರ ಪಾರ್ಥಿವ ಶರೀರ ವಿಮಾನದ ಮೂಲಕ ಮಂಗಳೂರಿಗೆ ತರಲಾಗಿದೆ.
ವಿಮಾನ ನಿಲ್ದಾಣದ ಹುತಾತ್ಮ ಸ್ಮಾರಕದಲ್ಲಿ ಯೋಧ ಮುರಳೀಧರ್ರ ಪಾರ್ಥೀವ ಶರೀರಕ್ಕೆ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ದ.ಕ.ಜಿಪಂ ಸಿಇಒ ಡಾ.ಕುಮಾರ್, ಮಂಗಳೂರು ಉಪವಿಭಾಗಾಧಿಕಾರಿ ಮದನ್ಮೋಹನ್, ಅಧಿಕಾರಿ ವರ್ಗ ಜಿಲ್ಲಾಡಳಿತ ವತಿಯಿಂದ ಗೌರವ ಸಲ್ಲಿಸಿದರು.
ಮೃತ ಯೋಧ ಮುರಳಿಧರ ಪತ್ನಿ ಮತ್ತು ಮಗು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ನಗರದ ಪದವು ಗ್ರಾಮದ ಶಕ್ತಿನಗರ ಮೊಗರೋಡಿ ನಿವಾಸಿಯಾಗಿದ್ದ ಮುರಳೀಧರ್ 2007ರಲ್ಲಿ ಸಶಸ್ತ್ರ ಸೀಮಾ ಪಡೆಗೆ ಸೇರಿದ್ದರು.
ಆರು ತಿಂಗಳ ಹಿಂದೆ ಊರಿಗೆ ಬಂದಿದ್ದ ಅವರು ವರ್ಷದ ಹಿಂದೆ ಅಗಲಿದ್ದ ತನ್ನ ತಾಯಿಯ ಮೊದಲ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೆಲವೇ ದಿನಗಳಲ್ಲಿ ಊರಿಗೆ ಮರಳುವವರಿದ್ದರು.
ಅದಕ್ಕಾಗಿ 20 ದಿನಗಳ ರಜೆಯೂ ಮಂಜೂರಾಗಿತ್ತು. ಊರಿಗೆ ಮರಳಲು ತಯಾರಿ ನಡೆಸುತ್ತಿದ್ದಾಗಲೇ ಹೃದಯಾಘಾತವಾಗಿದೆ ಎಂದು ಮುರಳೀಧರರ ಕುಟುಂಬದ ಮೂಲಗಳು ತಿಳಿಸಿವೆ.
ಇಂದು ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.