ದುಬೈ: ಯುಗಾದಿ ಹಬ್ಬದ ಪ್ರಯುಕ್ತ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ಸಂಯುಕ್ತ ಅರಬ್ ಸಂಸ್ಥಾನದ ಕನ್ನಡ ಮಕ್ಕಳಿಗಾಗಿ ವಿವಿಧ ರೀತಿಯ ಕಲಾ ಪ್ರತಿಭಾ ಸ್ಪರ್ಧೆಯ ಗ್ರಾಂಡ್ ಫೈನಲ್ ಕಾರ್ಯಕ್ರಮ ಜೊತೆಗೆ ಹೆಚ್ಚು ಅಂಕ ಗಳಿಸಿದ ಯುಎಇ ಕನ್ನಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಅಬು ಹೈಲ್ನಲ್ಲಿರುವ ಪರ್ಲ್ ವಿಸ್ದಮ್ ಶಾಲಾ ಸಭಾಂಗಣದಲ್ಲಿ ಜೂ. 18ರಂದು ನಡೆಯಿತು.
ಕನ್ನಡದ ಹಿರಿಯ ಸಂಗೀತ ನಿರ್ದೇಶಕ ಹಾಗೂ ಸಾಹಿತ್ಯಗಾರ ಕೆ. ಕಲ್ಯಾಣ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇದೇ ವೇಳೆ ಇತ್ತೀಚೆಗೆ ಅಗಲಿದ ಯುಎಇ ರಾಷ್ಟ್ರಾಧ್ಯಕ್ಷ ಶೇಕ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಯುಎಇ ಕನ್ನಡ ಮಕ್ಕಳ ನೃತ್ಯ ಸ್ಪರ್ಧೆ, ಗಾಯನ ಸ್ಪರ್ಧೆ, ಡ್ರಾಯಿಂಗ್ ಸ್ಪರ್ಧೆ ಮತ್ತು ಮಕ್ಕಳ ಫ್ಯಾಷನ್ ಶೋ ನಡೆಯಿತು.
ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಆಗಮಿಸಿದ ಕನ್ನಡದ ಹಿರಿಯ ಸಂಗೀತ ನಿರ್ದೇಶಕ ಹಾಗೂ ಸಾಹಿತ್ಯಗಾರ ಕೆ.ಕಲ್ಯಾಣ್ ಹಾಗೂ ಖ್ಯಾತ ಗಾಯಕರಾದ ರಮೇಶ್ ಚಂದ್ರ,
ಕು.ಶ್ವೇತಾ ದೇವನಹಳ್ಳಿ, ಅರ್ಫಾಝ್ ಉಳ್ಳಾಲ, ಕನ್ನಡ ಡ್ಯಾನ್ಸಿಂಗ್ ಚಾಂಪಿಯನ್ಸ್ ವಿಜೇತ ಆದಿತ್ಯ ಭರಮಪ್ಪ,
ಕೊರಿಯೋಗ್ರಾಫರ್ ರಾಜಶೇಖರ ಮತ್ತು ಬೆಂಗಳೂರಿನ ನೃತ್ಯ ತಂಡದವರಾದ ನಿತಿನ್ ಕುಮಾರ, ಅಶ್ವಿನಿ ಶೇಷಪ್ಪ, ಔಚಿತ್ಯ ಜೊಶೀಲ್ ಮುಂತಾದವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಯುಎಇಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಸಕ್ತ ಶೆಕ್ಷಣಿಕ ವರ್ಷದಲ್ಲಿ ಎಸ್ಎಸ್ ಎಲ್ ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಮತ್ತು ಶೇಕ್ ಹಂದಾನ್,
ಶೇಕ್ ಸುಲ್ತಾನ್ ಪ್ರಶಸ್ತಿ ಪಡೆದ ಕನ್ನಡ ವಿದ್ಯಾರ್ಥಿಗಳಿಗೆ ರಾಘವೇಂದ್ರ ಮಂಬೋಲ್ ಪ್ರತಿಭಾ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಯುಎಇ ಕೆ ಎನ್ ಆರ್ ಐ ಫೋರಮ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅತಿಥಿಯಾಗಿ ಆಗಮಿಸಿದ್ದರು.
ಅಧ್ಯಕ್ಷತೆಯನ್ನು ಹೆಮ್ಮೆಯ ಕನ್ನಡಿಗರು ತಂಡದ ಅಧ್ಯಕ್ಷ ಸುದೀಪ್ ದಾವಣಗೆರೆ ವಹಿಸಿಕೊಂಡಿದ್ದರು.
ಇದೇ ವೇಳೆ ಹೆಮ್ಮೆಯ ಕನ್ನಡಿಗರು ಸಂಘದ ಅರಬಿಕ್ ಲೋಗೋ ಅನಾವರಣ ಮಾಡಲಾಯಿತು.
ಮಾಜಿ ಅಧ್ಯಕ್ಷರಾದ ಮಮತಾ ಮೈಸೂರು, ಮುಖ್ಯ ಕಾರ್ಯದರ್ಶಿ ಶಂಕರ್ ಬೆಳಗಾವಿ, ಮುಖ್ಯ ಸಂಚಾಲಕ ರಫೀಕಲಿ ಕೊಡಗು, ಮತ್ತು ಸಮಿತಿ ಸದಸ್ಯರಾದ ವಿಷ್ಣುಮೂರ್ತಿ ಮೈಸೂರು, ಪಲ್ಲವಿ ದಾವಣಗೆರೆ, ಹಾದಿಯ ಮಂಡ್ಯ, ಡಾ.ಸವಿತಾ ಮೈಸೂರು, ಅನಿತಾ ಬೆಂಗಳೂರು, ವರದರಾಜ್ ಕೋಲಾರ, ಮೊಹೀನುದ್ದೀನ್ ಹುಬ್ಬಳ್ಳಿ,ಮಧು ದಾವಣಗೆರೆ, ಮತ್ತು ನವೀನ್ ಬೆಂಗಳೂರು ಅವರು ಇದ್ದರು.
ನವೀನ್ ಬೆಂಗಳೂರು, ಆಶಾ ಕುಂದಾಪುರ ಮತ್ತು ದುಬೈ ಕನ್ನಡ ರೇಡಿಯೋ ಆರ್.ಜೆ ಕೃತಿಕಾ ಬೆಂಗಳೂರು ನಿರೂಪಿಸಿದರು. ಡಾ. ಸವಿತಾ ಮೈಸೂರು ವಂದನಾರ್ಪಣೆಗೈದರು.