ಮಂಗಳೂರು: ಐವರು ವಿದ್ಯಾರ್ಥಿಗಳು ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದು, ಸರ್ಫಿಂಗ್ ತರಬೇತಿ ನೀಡುತ್ತಿದ್ದವರು ಅವರನ್ನು ರಕ್ಷಿಸಿ ಸುರಕ್ಷಿತವಾಗಿ ದಡಕ್ಕೆ ಕರೆ ತಂದ ಘಟನೆ ನಗರದ ತಣ್ಣೀರುಬಾವಿ ಬೀಚ್ನಲ್ಲಿ ನಿನ್ನೆ ನಡೆದಿದೆ.
ವಿದ್ಯಾರ್ಥಿಗಳು ಫಾತಿಮಾ ಚರ್ಚ್ ಸಮೀಪ ಕಡಲಲ್ಲಿ ಈಜುತ್ತಿದ್ದರು. ಅಲೆಗಳ ಅಬ್ಬರ ಜೋರಾಗಿದ್ದ ಕಾರಣ ದಡದತ್ತ ಈಜಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಗೆ ತಲುಪಿದ್ದರು.
ಆಗ ಸ್ಥಳದಲ್ಲಿದ್ದ ರಾಷ್ಟ್ರೀಯ ಈಜುಪಟುಗಳಾದ ಸಂಕೇತ್ ಬೆಂಗ್ರೆ, ಶಿಲ್ಪಾ ಬೆಂಗ್ರೆ ಧಾವಿಸಿ ಬಂದು ಇಬ್ಬರನ್ನು ರಕ್ಷಿಸಿದ್ದಾರೆ. ಇದರಿಂದ ಭಾರೀ ಅಪಾಯವೊಂದು ತಪ್ಪಿ ಹೋಗಿದೆ.
ಉಳಿದ ಮೂವರೂ ಕೂಡ ಅಪಾಯದಲ್ಲಿದ್ದು, ರಕ್ಷಣೆಗೆ ಕೂಗಿಕೊಂಡದ್ದನ್ನು ಗಮನಿಸಿದ ತೇಜಸ್ ಮತ್ತು ಇತರ ಸರ್ಫ್ ತರಬೇತುದಾರರು ಸ್ಥಳಕ್ಕೆ ಧಾವಿಸಿ ಅವರನ್ನು ಸರ್ಫ್ ಬೋರ್ಡ್ ಮೂಲಕ ದಡಕ್ಕೆ ಕರೆತಂದರು. ಹಾಗೂ ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿ ಕಳುಹಿಸಿಕೊಟ್ಟಿದ್ದಾರೆ.
ತೇಜಸ್ ಜೀವರಕ್ಷಣೆಯ ತರಬೇತಿ ಪಡೆದವರಾಗಿದ್ದಾರೆ. ಐವರ ಜೀವ ಉಳಿಸಿದ ಈಜುಪಟುಗಳ ಕಾರ್ಯ ಭಾರೀ ಶ್ಲಾಘನೆಗೆ ಪಾತ್ರವಾಗಿದೆ. ವಿದ್ಯಾರ್ಥಿಗಳನ್ನು ಮೂಡುಬಿದಿರೆಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.