ಮುಂಬೈ:ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಸಂಪೂರ್ಣ ಒಡೆತನದ ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ (RNESL) ಚೀನಾ ನ್ಯಾಷನಲ್ ಬ್ಲೂಸ್ಟಾರ್ ಸಮೂಹದ ಆರ್ಇಸಿ ಸೋಲಾರ್ ಹೋಲ್ಡಿಂಗ್ಸ್ನ 100% ಪಾಲನ್ನು ಖರೀದಿಸಿರುವುದಾಗಿ ಘೋಷಿಸಿದೆ. ಈ ಒಪ್ಪಂದವನ್ನು 771 ಮಿಲಿಯನ್ ಡಾಲರ್ ಮೌಲ್ಯಕ್ಕೆ ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಂಗಸಂಸ್ಥೆಯಾದ ರಿಲಯನ್ ನ್ಯೂ ಎನರ್ಜಿ ಲಿಮಿಟೆಡ್ ಚೀನಾ ನ್ಯಾಷನಲ್ ಬ್ಲೂಸ್ಟಾರ್ ಕಂಪನಿಯಲ್ಲಿದ್ದ ಆರ್ಇಸಿ ಕಂಪನಿಯ ಶೇ.100 ರಷ್ಟು ಷೇರುಗಳನ್ನು ಖರೀದಿಸಿರುವುದಾಗಿ ಬಿಎಸ್ಇಗೆ(ಬಾಂಬೆ ಸ್ಟಾಕ್ ಎಕ್ಸ್ಚೆಂಜ್)ಮಾಹಿತಿ ನೀಡಿದೆ.
1996 ರಲ್ಲಿ ಆರ್ಇಸಿ ಕಂಪನಿ ಸ್ಥಾಪನೆಯಾಗಿದ್ದು ಸಿಂಗಾಪುರದಲ್ಲಿ ತನ್ನ ಕಾರ್ಯಕಾರಿ ಕೇಂದ್ರವನ್ನು ಹೊಂದಿದೆ.
ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಮತ್ತು ಏಷ್ಯಾ ಪೆಸಿಫಿಕ್ ನಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದೆ. 2015 ರಲ್ಲಿ ಚೀನಾ 419 ದಶಲಕ್ಷ ಯುರೋಗೆ ಆರ್ಇಸಿ ಕಂಪನಿಯನ್ನು ಖರೀದಿಸಿತ್ತು.
ಕಂಪನಿ ಬಳಿ 600 ಕ್ಕೂ ಹೆಚ್ಚು ಯುಟಿಲಿಟಿ ಮತ್ತು ವಿನ್ಯಾಸದ ಪೇಟೆಂಟ್ಗಳನ್ನು ಹೊಂದಿದ್ದು, ಅದರಲ್ಲಿ 446 ಮಂಜೂರು ಮಾಡಲಾಗಿದೆ ಮತ್ತು ಉಳಿದವು ಮೌಲ್ಯಮಾಪನದಲ್ಲಿದೆ.
ಹೆಚ್ಚಾಗಿ ಈ ಕಂಪನಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ. ಪಾಲಿಸಿಲಿಕಾನ್, ಬಿಲ್ಲೆಗಳು, ಸೌರ ಕೋಶಗಳು(ಸೋಲಾರ್ ಸೆಲ್), ಸೌರ ಘಟಕಗಳನ್ನು(ಸೋಲಾರ್ ಮಾಡ್ಯೂಲ್ಸ್) ಆರ್ಇಸಿ ಕಂಪನಿ ತಯಾರಿಸುತ್ತದೆ.
ಮುಂದಿನ ಮೂರು ವರ್ಷದಲ್ಲಿ 10.1 ಶತಕೋಟಿ ಡಾಲರ್ ಅನ್ನು ನವೀಕರಿಸಬಹುದಾದ ಶಕ್ತಿಯ ಮೇಲೆ ಹೂಡಿಕೆ ಮಾಡುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಈ ಹಿಂದೆ ಘೋಷಿಸಿದ್ದು, ಇದರ ಭಾಗವಾಗಿ ಈ ಕಂಪನಿಯನ್ನು ಖರೀದಿ ಮಾಡಿದೆ.
ರಿಲಯನ್ಸ್ ಕಂಪನಿ ಸೌರ ಕೋಶಗಳು ಮತ್ತು ಮಾಡ್ಯೂಲ್ಗಳು, ಬ್ಯಾಟರಿಗಳು, ಇಂಧನ ಕೋಶಗಳು ಮತ್ತು ಹಸಿರು ಹೈಡ್ರೋಜನ್ ಉತ್ಪಾದನೆಯ ಸಂಬಂಧ ನಾಲ್ಕು ಗಿಗಾ ಫ್ಯಾಕ್ಟರಿಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
ಈ ಖರೀದಿ ಕುರಿತು ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮುಖೇಶ್ ಅಂಬಾನಿ ಮಾತನಾಡಿ: “ಆರ್ಇಸಿ ಖರೀದಿ ನನಗೆ ತುಂಬಾ ಸಂತೋಷವಾಗಿದೆ.
ಏಕೆಂದರೆ ಇದು ಸೂರ್ಯ ದೇವನ ಅನಿಯಮಿತ ಮತ್ತು ವರ್ಷಪೂರ್ತಿ ದೊರೆಯುವ ಸೌರ ಶಕ್ತಿಯನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ.
ಈ ದಶಕದ ಅಂತ್ಯಕ್ಕೆ ಈ ಒಪ್ಪಂದ ಜಾರಿಗೆ ಬರಲಿದ್ದು, 100 ಗಿಗಾ ವಾಟ್ಸ್ ಸ್ವಚ್ಚ ಮತ್ತು ಗ್ರೀನ್ ಎನರ್ಜಿ ಸೃಷ್ಟಿಸುವ ರಿಲಯನ್ಸ್ ಗುರಿಯನ್ನು ಸಾಧಿಸಲು, ಹೊಸ ಮತ್ತು ಸುಧಾರಿತ ತಂತ್ರಜ್ಞಾನಗಳು ಮತ್ತು ಕಾರ್ಯಾಚರಣೆಯ ದಕ್ಷತೆಗಳಲ್ಲಿ ಹೂಡಿಕೆ ಮಾಡುವ ನಮ್ಮ ಕಾರ್ಯತಂತ್ರಕ್ಕೆ ಅನುಗುಣವಾಗಿದೆ.
ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು 2030ರ ವೇಳೆಗೆ ಭಾರತದಲ್ಲಿ 450 ಗಿಗಾ ವಾಟ್ಸ್ನಷ್ಟು ನವೀಕರಿಸಬಹುದಾದ ಇಂಧನ ಉತ್ಪಾದನೆಯ ಗುರಿ ಹೊಂದಿದ್ದಾರೆ. ಇದನ್ನು ಸಾಧಿಸಲು ಯಾವುದೊ ಒಂದು ಕಂಪನಿಯ ಅತಿದೊಡ್ಡ ಕೊಡುಗೆಯಾಗಿರುತ್ತದೆ.
ಇದು ಭಾರತವು ಹವಾಮಾನ ಬಿಕ್ಕಟ್ಟನ್ನು ಜಯಿಸಲು ಮತ್ತು ಹಸಿರು ಶಕ್ತಿ ಕ್ಷೇತ್ರದಲ್ಲಿ ಭಾರತ ವಿಶ್ವ ನಾಯಕನಾಗಲು ಸಹಾಯ ಮಾಡುತ್ತದೆ” ಎಂದು ಹೇಳಿದರು.