ಸುಳ್ಯ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ)ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ, ಸುಳ್ಯ ತಾಲೂಕಿನ ಹಲವೆಡೆ ಮಾಹಿತಿಗಳನ್ನು ಪಡೆಯುತ್ತಿದೆ ಎಂದು ತಿಳಿದು ಬಂದಿದೆ.
ಶನಿವಾರ ಮಂಗಳೂರಿಗೆ ಆಗಮಿಸಿದ ಎನ್ಐಎ ಅಧಿಕಾರಿಗಳ ತಂಡವು ಭಾನುವಾರ ಮತ್ತು ಸೋಮವಾರದಂದು ಪುತ್ತೂರು, ಬೆಳ್ಳಾರೆ ಮತ್ತಿತರ ಕಡೆಗಳಿಗೆ ತೆರಳಿ ಪ್ರವೀಣ್ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ಕಲೆ ಹಾಕಿದೆ ಎನ್ನಲಾಗಿದೆ.
ಪ್ರವೀಣ್ ನೆಟ್ಟಾರು ಅವರ ಕೊಲೆ ಪ್ರಕರಣದಲ್ಲಿ ಕೇರಳದ ವ್ಯಕ್ತಿಗಳು ಕೂಡಾ ಶಾಮೀಲಾಗಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಈ ಪ್ರಕರಣವನ್ನು ಎನ್ಐಎ ತನಿಖೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು.
ನಂತರ ಎರಡೇ ದಿನದಲ್ಲಿ ತನಿಖಾ ತಂಡ ಆಗಮಿಸಿ, ಪ್ರಾಥಮಿಕ ತನಿಖೆ ಆರಂಭ ಮಾಡಿದೆ ಎನ್ನುವ ಮಾಹಿತಿ ಲಭಿಸಿದೆ.
ಎನ್ಐಎ ತನಿಖಾ ತಂಡವು ಸಮಗ್ರ ರೀತಿಯ ತನಿಖೆಗೆ ಸಹಕರಿಸುವ ಪ್ರವೀಣ್ ಹತ್ಯೆಯಾದ ಸ್ಥಳ, ಅಂಗಡಿ ಬಳಿಯಲ್ಲಿ, ಮತ್ತು ಪೊಲೀಸ್ ಠಾಣೆಗಳಿಂದ ಕೆಲವು ಮಾಹಿತಿಗಳನ್ನು ಪಡೆದಿದೆ ಎಂದು ಹೇಳಲಾಗಿದ್ದು, ಪೊಲೀಸ್ ಹಾಗೂ ಇತರ ಅಧಿಕಾರಿಗಳಿಂದ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಮುಂದೆ ಈ ಎನ್ಐಎ ತಂಡವು ಪ್ರವೀಣ್ ಅವರ ಅಂಗಡಿ ವ್ಯವಹಾರಗಳು, ಸ್ನೇಹಿತರ ಸಂಪರ್ಕ, ಸ್ಥಳೀಯ ಹಿಂದೂ ಮುಸ್ಲಿಂ ಹಾಗೂ ಇತರ ಸಂಘಟನೆಗಳು, ಹಾಗೂ ಪ್ರವೀಣ್ ಅವರ ಕುಟುಂಬದ ಜತೆ ಮಾತನಾಡಿ ವಿವರವಾದ ಮಾಹಿತಿಗಳನ್ನು ಸಂಗ್ರಹಿಸಲಿದೆ ಎಂದು ಹೇಳಲಾಗುತ್ತಿದೆ.
ಅಲ್ಲದೇ ಈಗಾಗಲೇ ತನಿಖೆ ಕೈಗೊಂಡ ಇಲ್ಲಿನ ಪೊಲೀಸ್ ತನಿಖಾ ತಂಡದ ಜತೆಯೂ ಮಾಹಿತಿ ಪಡೆದು ಈಗಾಗಲೇ ಬಂಧಿತರಾಗಿರುವ ಆರೋಪಿಗಳನ್ನೂ ವಿಚಾರಣೆಗೆ ಒಳಪಡಿಸಲಿದೆ ಎಂದು ತಿಳಿದು ಬಂದಿದೆ.