ಭಾರತದ ಕೆಲ ಪ್ರದೇಶಗಳನ್ನು ಸೇರಿಸಿ ನಕ್ಷೆ ಬಿಡುಗೆ ಮಾಡಿದ ಪಾಕಿಸ್ತಾನಕ್ಕೆ ಭಾರತ ತೀಕ್ಷ ಪ್ರತಿಕ್ರೀಯೆ..!
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮತ್ತು ಗುಜರಾತ್ನ ಕೆಲವು ಭಾಗಗಳು ತನ್ನ ಪ್ರದೇಶದ ಭಾಗವೆಂದು ಹೇಳಿಕೊಂಡು ಪಾಕಿಸ್ಥಾನ “ಹೊಸ ರಾಜಕೀಯ ನಕ್ಷೆ” ಬಿಡುಗಡೆ ಮಾಡುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಇದನ್ನು ‘ರಾಜಕೀಯ ಮೂರ್ಖತನ’ ಎಂದು ಕರೆದ ಭಾರತ ಈ ಹಾಸ್ಯಾಸ್ಪದ ಹಕ್ಕುಗಳಿಗೆ ಕಾನೂನು ಮಾನ್ಯತೆ ಅಥವಾ ಅಂತರರಾಷ್ಟ್ರೀಯ ವಿಶ್ವಾಸಾರ್ಹತೆ ಇಲ್ಲ ಎಂದು ಖಡಕ್ ಸಂದೇಶ ರವಾನಿಸಿದೆ. ಪಾಕಿಸ್ತಾನದ ಫೆಡರಲ್ ಕ್ಯಾಬಿನೆಟ್ ಮಂಗಳವಾರ ನಕ್ಷೆಯನ್ನು ಅನುಮೋದಿಸಿದೆ ಎಂದು ಹೇಳಲಾಗಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ದೇಶದ ಹೊಸ ರಾಜಕೀಯ ನಕ್ಷೆಯನ್ನು ಇಸ್ಲಾಮಾಬಾದ್ನಲ್ಲಿ ಬಿಡುಗಡೆ ಮಾಡಿದ ಕೆಲವೇ ಗಂಟೆಗಳ ನಂತರ ನವದೆಹಲಿಯಿಂದ ಈ ಕಠಿಣ ಪ್ರತಿಕ್ರಿಯೆ ನೀಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಭಾರತ ಸರ್ಕಾರದ ಐತಿಹಾಸಿಕ ನಿರ್ಧಾರ ಒಂದು ವರ್ಷ ಪೂರ್ಣಗೊಳ್ಳುವ ಒಂದು ದಿನದ ಮೊದಲು ಪಾಕಿಸ್ತಾನ ನಕ್ಷೆಯಲ್ಲಿ ಈ ವಿವಾದಾತ್ಮಕ ಬದಲಾವಣೆಗಳನ್ನು ಮಾಡಲಾಗಿದೆ.
ನವದೆಹಲಿಯ ಸಂಕ್ಷಿಪ್ತ ಹೇಳಿಕೆಯಲ್ಲಿ ವಿದೇಶಾಂಗ ಸಚಿವಾಲಯವು “ಪಾಕಿಸ್ತಾನದ ರಾಜಕೀಯ ನಕ್ಷೆ” ಎಂದು ಕರೆಯಲ್ಪಡುವದನ್ನು ನಾವು ನೋಡಿದ್ದೇವೆ, ಅದನ್ನು ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆ ಮಾಡಿದ್ದಾರೆ.
ಇದು ರಾಜಕೀಯ ಮೂರ್ಖತನದ ಕೃತ್ಯವಾಗಿದ್ದು, ಇದರಲ್ಲಿ ಭಾರತದ ಗುಜರಾತ್ ರಾಜ್ಯಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನ ಕೇಂದ್ರಾಡಳಿತ ಪ್ರದೇಶಗಳ ಕೆಲ ಪ್ರದೇಶಗಳನ್ನು ಅಸಂಬದ್ಧವಾಗಿ ತನ್ನದೆಂದು ಹೇಳಿಕೊಳ್ಳುತ್ತಿದೆ.
ಇಂತಹ ಹಾಸ್ಯಾಸ್ಪದ ವಿಷಯಗಳಿಗೆ ಕಾನೂನು ಮಾನ್ಯತೆ ಅಥವಾ ಅಂತರರಾಷ್ಟ್ರೀಯ ವಿಶ್ವಾಸಾರ್ಹತೆ ಇಲ್ಲ.
ವಾಸ್ತವವಾಗಿ ಈ ಹೊಸ ಪ್ರಯತ್ನವು ಗಡಿಯಾಚೆಗಿನ ಭಯೋತ್ಪಾದನೆಯ ಮೂಲಕ ಈ ಪ್ರದೇಶವನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನವು ಆಸಕ್ತಿ ಹೊಂದಿದೆ ಎಂಬುದನ್ನು ಖಚಿತಪಡಿಸುತ್ತದೆ ಎಂದಿದ್ದಾರೆ.