ಮಂಗಳೂರು: ಉಪ್ಪಿನಂಗಡಿ ಲಾಠಿಚಾರ್ಜ್ನಲ್ಲಿ ಸೋಡಾ ಬಾಟಲಿ ಮೂಲಕ ಪೊಲೀಸ್ ಅಧಿಕಾರಿಯ ಕೊಲೆಗೆ ಯತ್ನಿಸಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆ ಉಪನಿರೀಕ್ಷಕ ಪ್ರಸನ್ನ ಕುಮಾರ್ ದೂರು ದಾಖಲಿಸಿದ್ದಾರೆ.
ಇದನ್ನು ಎಸ್ಡಿಪಿಐ ಮತ್ತು ಪಿಎಫ್ಐ ನಾಯಕರು ಸಂಪೂರ್ಣ ಸುಳ್ಳು ಎಂದಿದ್ದಾರೆ. ಜೊತೆಗೆ ಘಟನೆಯ ಸಿಸಿಟಿವಿ ದೃಶ್ಯಾವಳಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಹಾಗಾದರೆ ಪ್ರಸನ್ನ ಕುಮಾರ್ ನೀಡಿದ ದೂರಿನಲ್ಲಿ ಏನಿದೆ?
ದೂರಿನ ಅಂಶ
ಬಂಟ್ವಾಳ ಗ್ರಾಮಾಂತರ ಠಾಣೆ ಉಪನಿರೀಕ್ಷಕ ಪ್ರಸನ್ನ ಕುಮಾರ್ ಎಂಬವರು ದೂರು ನೀಡಿದ್ದು, ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ಪಿಎಫ್ಐ ಮುಖಂಡರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದ್ದ ಗುಂಪು ಪೊಲೀಸರ ಮೇಲೆ ಹಲ್ಲೆನಡೆಸಿ,
ಠಾಣೆಯೊಳಗೆ ನುಗ್ಗಲು ಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸನ್ನಿವೇಶ ಅರಿತು ಅವರನ್ನು ಚದುರಿಸಲು ತಾನು ಸೇರಿದಂತೆ ಬಂದೋಬಸ್ತ್ನಲ್ಲಿ ನಿರತರಾಗಿದ್ದ ಇತರರು ತೆರಳಿದಾಗ ಮೊದಲೇ ಪಿತೂರಿ ನಡೆಸಿ ತಂದಿರಿಸಿದ್ದ ಸೋಡಾ ಬಾಟ್ಲಿಗಳನ್ನು ಆಂಬ್ಯುಲೆನ್ಸ್ ವಾಹನದಿಂದ ತೆಗೆದು ಪೊಲೀಸರ ಮೇಲೆಯೇ ಗುಂಪಲ್ಲಿದ್ದವರು ದಾಳಿ ನಡೆಸಿದ್ದರು.
ಈ ಸಂದರ್ಭ ವ್ಯಕ್ತಿಯೊಬ್ಬ ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಚೂರಿಯಿಂದ ಹೊಟ್ಟೆಗೆ ತಿವಿಯಲು ಬಂದಿದ್ದು, ಅದನ್ನು ತಾನು ತಡೆದಿದ್ದರಿಂದ ಅಂಗೈಗೆ ಗಾಯವಾಗಿದೆ. ಅಲ್ಲದೇ, ಡಿವೈಎಸ್ಪಿಯವರ ಮೇಲೆಯೂ ಕಲ್ಲುತೂರಾಟ ನಡೆಸಿದ್ದಾರೆ.
ಆಗ ಆತ್ಮರಕ್ಷಣೆಗಾಗಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಗುಂಪು ಸೇರಿದ್ದ ಜನರು ಸ್ಥಳದಿಂದ ಒಮ್ಮೆಲೆ ಒಬ್ಬರ ಮೇಲೊಬ್ಬರಂತೆ ಬಿದ್ದು ಓಡುತ್ತಾ ಮಸೀದಿಯ ಕಾಂಪೌಂಡ್ ಗೋಡೆ ಹಾರಿ ಮಸೀದಿಯೊಳಗೆ ಹೋಗಿರುವುದಲ್ಲದೆ, ಪೊಲೀಸರ ಮೇಲೆ ಕಲ್ಲು, ಸೋಡಾ ಬಾಟ್ಲಿಗಳನ್ನು ತೂರಿದ್ದಾರೆ.
ಅಲ್ಲದೇ, ಪೊಲೀಸ್ ವಾಹನಕ್ಕೆ, ಇಲಾಖಾ ಸೊತ್ತಿಗೆ ಹಾನಿಗೊಳಿಸಿ, ಸುಮಾರು 25 ಸಾವಿರ ರೂ. ನಷ್ಟವುಂಟುಮಾಡಿದ್ದಾರೆ ಎಂದು ದೂರಿದ್ದಾರೆ.ಈ ಬಗ್ಗೆ ಪೊಲೀಸರು ಕಲಂ 143, 147, 148, 332, 504, 427, 353, 307, 149 ಭಾದಂಸಂ ಮತ್ತು ಕಲಂ 2(ಎ) ಕೆಪಿಡಿಎಲ್ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.