ಉಡುಪಿ: ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಉಡುಪಿಯ ಕಾಪುವಿನಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ ನಡೆಯಿತು.
ಈ ವೇಳೆ ಜಾಥಾವನ್ನು ಉದ್ದೇಶಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಸ್ವಾತಂತ್ರ್ಯ ಸಂಗ್ರಾಮದ ವೀರ-ಯೋಧರ ತ್ಯಾಗ, ಬಲಿದಾನ ಮತ್ತು ಶಾಂತಿ, ಸಾಮರಸ್ಯ ಹಾಗೂ ದೇಶಪ್ರೇಮದ ಸಂದೇಶವನ್ನು ಸಾರುವ ನಿಟ್ಟಿನಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ದೇಶದಾದ್ಯಂತ ಕಾಲ್ನಡಿಗೆ-ಜಾಥಾ ಹಮ್ಮಿಕೊಂಡಿದೆ’ ಎಂದು ತಿಳಿಸಿದರು.
ಇನ್ನು ಕಾಪು ವಿಧಾನಸಭಾ ಕ್ಷೇತ್ರದಿಂದ ಆರಂಭಗೊಂಡ ಕಾಲ್ನಡಿಗೆ ಜಾಥಾವು ಕಟಪಾಡಿ, ಮಟ್ಟು, ಸುಭಾಸ್ ನಗರ, ಕುರ್ಕಾಲು – ಶಂಕರಪುರ – ಬಂಟಕಲ್ಲು – ಪಾಂಬೂರು – ಪಂಜಿಮಾರ್ ಮೂಲಕ ಸಾಗಿ ಶಿರ್ವ ಪೇಟೆಯಲ್ಲಿ ಕೊನೆಗೊಂಡಿತು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಅಭಯಚಂದ್ರ ಜೈನ್ ,ಮಯೂರ್ ಜಯಕುಮಾರ್ ,ಧ್ರುವ ನಾರಾಯಣ್, ಮಂಜುನಾಥ್ ಭಂಡಾರಿ, ನವೀನ್ ಚಂದ್ರ ಶೆಟ್ಟಿ, ಎಂ ಎ ಗಪೂರ್ ನವೀನ್ ಚಂದ್ರ ಸುವರ್ಣ, ಅಶೋಕ್ ಕುಮಾರ್ ಕೊಡವೂರು, ರಮೇಶ್ ಕಾಂಚನ್, ಹರೀಶ್ ನಾಯಕ್ ಕಾಪು ಉಪಸ್ಥಿತರಿದ್ದರು.