ಮಂಗಳೂರು: ರಾಜ್ಯದ ದೇವಸ್ಥಾನಗಳಲ್ಲಿ ಅಂಗಿ-ಬನಿಯನ್ ತೆಗೆದು ಪ್ರವೇಶ ಮಾಡಬೇಕು ಎಂಬ ನಿಯಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಅಕ್ಷೇಪ ವ್ಯಕ್ತಪಡಿಸಿದೆ.
ಕಳೆದ ಕೆಲ ದಿನಗಳ ಹಿಂದೆ ಈ ಒಕ್ಕೂಟದ ಸದಸ್ಯರು ಉಡುಪಿಯ ಕೊಲ್ಲೂರು ಮತ್ತು ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಅಲ್ಲಿ ಪುರುಷರು ಅಂಗಿ ಮತ್ತು ಬನಿಯನ್ ತೆಗೆದು ಒಳಗೆ ಪ್ರವೇಶ ಮಾಡಬೇಕು ಎಂಬ ನಿಯಮ ಇರುವುದು ಕಂಡುಬಂದಿತ್ತು.
ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಹಿಂದೂ ಧರ್ಮಗ್ರಂಥಗಳಲ್ಲಿ ಇಂಥ ನಿಯಮಗಳ ಉಲ್ಲೇಖ ಇರುವುದು ಕಂಡುಬಂದಿಲ್ಲ. ಮಾತ್ರವಲ್ಲ, ಈ ಕುರಿತು ಯಾವುದೇ ಸರ್ಕಾರಿ ಆದೇಶ ಕೂಡ ಇರುವುದಿಲ್ಲ.
ಅದಾಗ್ಯೂ ಯಾತ್ರಿಗಳಿಗೆ ಮುಜುಗರ ಆಗುವಂಥ ಈ ನಿಯಮ ವರ್ಷಗಳಿಂದ ಜಾರಿಯಲ್ಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಹೀಗೆ ಅಂಗಿ-ಬನಿಯನ್ ತೆಗೆದು ಪ್ರವೇಶಿಸುವವರಲ್ಲಿ ಚರ್ಮದ ಕಾಯಿಲೆಗಳು ಇದ್ದರೆ ಅದು ಇನ್ನೊಬ್ಬರಿಗೆ ಹರಡಲಿಕ್ಕೂ ಕಾರಣವಾಗಬಹುದು.
ಅಲ್ಲದೆ ವಿಕಲಚೇತನರಿಗೆ ದೇಹವನ್ನು ಅನಿವಾರ್ಯವಾಗಿ ತೆರೆದು ತೋರಿಸಬೇಕಾದ ಮುಜುಗರ ಉಂಟಾಗಬಹುದು, ಇದು ಅಮಾನನೀಯ.
ಅಷ್ಟೇ ಅಲ್ಲ, ಭಾರತದ ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳ ಉಲ್ಲಂಘನೆ ಕೂಡ. ಹೀಗಾಗಿ ದೇವಸ್ಥಾನಗಳಲ್ಲಿ ಹಾಕಿರುವ ‘ಕಡ್ಡಾಯವಾಗಿ ಅಂಗಿ-ಬನಿಯನ್ ತೆಗೆದು ಪ್ರವೇಶ ಮಾಡಬೇಕು’ ಎಂಬ ಫಲಕಗಳನ್ನು ತೆಗೆಸಬೇಕು.
ಅಲ್ಲದೆ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಲು ಕೆಲವರನ್ನು ಬೆತ್ತ ಹಿಡಿದು ನಿಲ್ಲಿಸುವುದನ್ನೂ ಕೂಡ ನಿಲ್ಲಿಸಬೇಕು ಎಂದು ಒತ್ತಾಯ ಮಾಡಿದೆ.