DAKSHINA KANNADA
ಪುತ್ತೂರು: ಮುಸ್ಲಿಂ ಸಹೋದರರ ಗೋ ಪ್ರೇಮ-ಯಾರಿಗೂ ಬೇಡವಾದ ಗಂಡು ಕರುಗಳಿಗೂ ಹಟ್ಟಿಯಲ್ಲೇ ಆಶ್ರಯ
ಪುತ್ತೂರು: ಗೋಹತ್ಯೆ ರಾಜ್ಯ-ದೇಶದಲ್ಲಿ ಚರ್ಚೆಯಾಗುತ್ತಿರುವ ಬಹುದೊಡ್ಡ ವಿಚಾರ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಗೋಹತ್ಯೆ ನಿಷೇಧ ಬಗ್ಗೆ ಕಾನೂನು ಜಾರಿ ಮಾಡಿವೆ.
ಆದರೂ ಅಕ್ರಮ ಗೋಸಾಗಾಟ, ಗೋಹತ್ಯೆ ನಡೆಯುತ್ತಿದೆ. ಈ ಮಧ್ಯೆ ಮುಸ್ಲಿಂ ಸಹೋದರರು ಜಾನುವಾರುಗಳನ್ನು ತಮ್ಮ ಕುಟುಂಬಸ್ಥರಂತೆ ಸಾಕಿ, ಸಲಹುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಆರ್ಲಪದವಿನ ನೆಲ್ಲಿತ್ತಿಮಾರು ಎಂಬಲ್ಲಿನ ಉಮ್ಮರ್ ಜನಪ್ರಿಯ, ಎನ್.ಎಸ್. ಇಸುಬು ಮತ್ತು ರಝಾಕ್ ಎಂಬ ಮೂವರು ಹೈನುಗಾರಿಕೆ ಮಾಡುವ ಸಹೋದರರು.
ಇವರು ತಮ್ಮ ಅಜ್ಜನ ಕಾಲದಿಂದಲೂ ಜಾನುವಾರುಗಳನ್ನು ಸಾಕುವುದನ್ನೇ ತಮ್ಮ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ಊರಿನವರಿಗೆ ಬೇಡವಾದ ಗಂಡು ಕರುಗಳಿಗೂ ಇವರೇ ಆಶ್ರಯದಾತರು.
ಈ ಸಹೋದರರು ಸದ್ಯ 14 ಜಾನುವಾರುಗಳನ್ನು ಸಾಕುತ್ತಿದ್ದಾರೆ.
ಇದರಲ್ಲಿ ಬಹುತೇಕ ಎತ್ತುಗಳೇ ಆಗಿವೆ. ಗಿರ್, ಕೊರಿಯನ್ ಮಿಕ್ಸ್, ಸಾಹೀವಾಲಾ, ಎಚ್.ಎಫ್., ದೇಶೀಯ ತಳಿಗಳ ಹತ್ತು ಹಲವು ಜಾನುವಾರುಗಳನ್ನು ಇವರು ಸಾಕುತ್ತಿದ್ದಾರೆ.
ಈ ಸಹೋದರರ ತಂದೆ ದಿ. ಮೊದು ಕುಂಞಿ ಹಿಂದೆ ಕಂಬಳಗಳಲ್ಲಿ ಕೋಣಗಳನ್ನು ಓಡಿಸುತ್ತಿದ್ದರು. ಅವರಿಗೆ ಜಾನುವಾರುಗಳೆಂದರೆ ಎಲ್ಲಿಲ್ಲದ ಪ್ರೀತಿ. ಅವರು ಕೂಡಾ ಅನೇಕ ಜಾನುವಾರುಗಳನ್ನು ಸಾಕಿ ಸಲಹುತ್ತಿದ್ದರು. ತಂದೆಯ ಹವ್ಯಾಸವನ್ನೇ ಈ ಸಹೋದರರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಎಲ್ಲಾ ಗೋವುಗಳಿಗೂ ಮುದ್ದಾದ ಹೆಸರುಗಳನ್ನಿಟ್ಟು, ಪ್ರತಿಯೊಂದಕ್ಕೂ ಅವುಗಳಿಗೆ ಬೇಕಾದ ವಿವಿಧ ಬಗೆಯ ಹಿಂಡಿ, ಹುಲ್ಲು, ಒಣಹುಲ್ಲು ಮುಂತಾದ ಆಹಾರಗಳನ್ನು ಪೂರೈಸುವುದರಲ್ಲೇ ಖುಷಿ ಕಾಣುತ್ತಿದ್ದಾರೆ.
ಬಿಸಿಲಿನ ಝಳ ಹೆಚ್ಚಾದರೆ ಗೋವುಗಳಿಗೂ ತಣ್ಣೀರಿನ ಸ್ನಾನ ಮಾಡಿಸುತ್ತಾರೆ. ಪ್ರತಿನಿತ್ಯ ಪ್ರತಿಯೊಂದು ಗೋವಿನ ಆರೋಗ್ಯವನ್ನೂ ಪರೀಕ್ಷಿಸಿ, ರೋಗಗಳು ಬಾಧಿಸದಂತೆ ಮುನ್ನೆಚ್ಚರಿಕೆ ವಹಿಸುತ್ತಾರೆ.
ಅವುಗಳನ್ನೂ ತಮ್ಮ ಕುಟುಂಬದ ಸದಸ್ಯರಂತೆ ಅಕ್ಕರೆಯಿಂದ ಸಾಕುತ್ತಿರುವುದು ಜಾನುವಾರುಗಳ ಮೇಲೆ ಅವರಿಗಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಇಲ್ಲಿರುವ ಬೃಹತ್ ಗಾತ್ರದ ಗಿರ್ ಹೋರಿ, ಮುರುಗಾ, ಜಾನುವಾರು ಪ್ರದರ್ಶನಗಳಲ್ಲಿಯೂ ಜನಮನ ಸೆಳೆಯುತ್ತವೆ.
ಎರಡು ಜತೆ ಓಟದ ಕೋಣಗಳಿವೆ
ಉಮ್ಮರ್ ಜನಪ್ರಿಯ ಅವರು ವಿವಿಧ ತಳಿಯ ಜಾನುವಾರುಗಳೊಂದಿಗೆ ಕಂಬಳದ ಕೋಣಗಳನ್ನೂ ಸಾಕುತ್ತಿದ್ದಾರೆ.
ಪ್ರಸ್ತುತ ಅವರಲ್ಲಿ ಎರಡು ಜತೆ ಓಟದ ಕೋಣಗಳಿದ್ದು, ಯಾವುದೇ ಭಾಗದಲ್ಲಿ ಕಂಬಳ ನಡೆದರೂ ‘ಕಾಟಿ-ಕೊಕ್ಕೆ’ ಹೆಸರಿನ ಕೋಣಗಳ ಜೋಡಿ ಅಲ್ಲಿ ಭಾಗವಹಿಸುತ್ತದೆ.
ಕಂಬಳದ ಕೋಣಗಳನ್ನು ಸಾಕಲು ಹೆಚ್ಚು ಖರ್ಚಾಗುತ್ತದೆ. ಆದರೂ ಕಂಬಳದ ಕೋಣಗಳನ್ನು ಸಾಕುವುದರ ಜೊತೆ ಜೊತೆಗೆ ಜಾನುವಾರುಗಳ ಸಾಕಣೆಯನ್ನೂ ಮುಂದುವರಿಸಿದ್ದಾರೆ.
ಗಿರ್ ತಳಿಯ ಹೋರಿಯೊಂದನ್ನು ಪೇಟೆಗೆ ಬಿಟ್ಟಿದ್ದಾರೆ
ಉಮ್ಮರ್ ಜನಪ್ರಿಯ ಅವರ ಗೋ ಪ್ರೇಮ ಊರಿನ ಮಂದಿಗೆ ಅಚ್ಚುಮೆಚ್ಚು. ಅದಕ್ಕೆ ಉದಾಹರಣೆಯೆಂಬಂತೆ ಆರ್ಲಪದವಿನಲ್ಲಿರುವ ಹೊಟೇಲ್, ಅಂಗಡಿ ಮುಂಗಟ್ಟುಗಳ ಮಾಲಕರು ಒಂದು ಗೋವನ್ನು ಪೇಟೆಯಲ್ಲಿ ಬಿಡುವಂತೆ ಉಮ್ಮರ್ ಅವರನ್ನು ಒತ್ತಾಯಿಸಿದ್ದರು.
ಅಂತೆಯೇ, ಗಿರ್ ತಳಿಯ ಹೋರಿಯೊಂದನ್ನು ಪೇಟೆಯಲ್ಲಿ ಬೀಡು ಬಿಟ್ಟಿದ್ದಾರೆ. ಈ ಹೋರಿ ಊರಿನವರು ನೀಡುವ ಆಹಾರಗಳನ್ನು ತಿಂದುಕೊಂಡು ಹಾಯಾಗಿದೆ. ಈ ಹೋರಿ ಪ್ರತೀ ಎರಡು ದಿನಗಳಿಗೊಮ್ಮೆ ಉಮ್ಮರ್ ಅವರ ಮನೆಗೆ ತಪ್ಪದೆ ಬಂದು ಹೊಟ್ಟೆ ತುಂಬಾ ತಿಂದು ಮರಳುತ್ತದೆ.
ಗೋಹತ್ಯೆಗೆ ಒಯ್ಯುವ ಜಾನುವಾರುಗಳನ್ನು ರಕ್ಷಿಸಿದರಷ್ಟೇ ಸಾಲದು. ಅವುಗಳನ್ನು ಈ ರೀತಿ ಅಕ್ಕರೆಯಿಂದ ಪೋಷಿಸುವುದೂ ಕೂಡ ಅತ್ಯಗತ್ಯ ಎಂಬುದನ್ನು ಉಮ್ಮರ್ ಸಹೋದರರು ತೋರಿಸಿಕೊಟ್ಟಿದ್ದಾರೆ.
ಇವರ ದನವನ್ನೂ ಕದ್ದೊಯ್ದ ಖದೀಮರು
ಉಮ್ಮರ್ ಅವರ ಮನೆಯಲ್ಲಿ ಸಾಕುತ್ತಿದ್ದ ದನವೊಂದನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದ ಸಂದರ್ಭ ಅವರ ತಾಯಿ ಬೀಪಾತುಮ್ಮ ಚಿಂತೆಗೀಡಾಗಿದ್ದರು. ಅದು ಅವರ ತಾಯಿಯ ಪ್ರೀತಿಯ ಗೋವು ಆಗಿತ್ತು.
ಸುಮಾರು ಒಂದು ವಾರ ಊಟವನ್ನೂ ಮಾಡದೆ ಕಳೆದುಹೋದ ಗೋವಿನ ಕುರಿತು ವಿಚಾರಿಸುತ್ತಾ, ದುಃಖ ತೋಡಿಕೊಳ್ಳುತ್ತಿದ್ದರು ಎಂದು ಗೋವಿನ ಮೇಲಿನ ತಾಯಿಯ ಪ್ರೀತಿಯನ್ನು ಉಮ್ಮರ್ ಸ್ಮರಿಸುತ್ತಾರೆ.
DAKSHINA KANNADA
ಮತದಾನದ ವೇಳೆ ಮತಗಟ್ಟೆಗೆ ಮೊಬೈಲ್ ಕೊಂಡುಯ್ಯುತ್ತೀರಾ? ಹಾಗಿದ್ರೆ ಇದನ್ನು ಗಮನಿಸಿ
ಮಂಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆ ಕರ್ನಾಟಕದ 14 ಕ್ಷೇತ್ರಗಳಲ್ಲಿ ಎ.26ರಂದು ಮತದಾನ ನಡೆಯಲಿದೆ. ಈ ಬಾರಿ ಚುನಾವಣೆಯ ಸಂದರ್ಭ ಮೊಬೈಲ್ ಫೋನ್ಗಳನ್ನು ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗುವ ಮೊದಲು ಯೋಚಿಸಿ. ಏಕೆಂದರೆ, ಬೂತ್ಗಳ ಆವರಣದಲ್ಲಿ ಅವುಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಬೂತ್ಗಳಿಗೆ ಹೋಗುವ ಜನರನ್ನು ಕೂಲಂಕುಷವಾಗಿ ತಪಾಸಣೆ ಮಾಡಲಾಗುವುದು. ಮತದಾರರು ಮತ ಚಲಾಯಿಸಲು ಹೋಗುವ ಮೊದಲು ಫೋನ್ಗಳನ್ನು ಇಡಲು ವಿಶೇಷ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಮತಗಟ್ಟೆಗೆ ಮೊಬೈಲ್ ಕೊಂಡೊಯ್ದು ಫೊಟೊ ಹಾಗೂ ವೀಡಿಯೋಗಳನ್ನು ಮಾಡಿದ್ದ ಘಟನೆ ನಡೆದಿತ್ತು. ಹಾಗಾಗಿ ಈ ಬಾರಿ ಮೊಬೈಲ್ ಫೋನ್ ಗಳನ್ನು ಮತಗಟ್ಟೆಯ ಒಳಗಡೆ ಪ್ರವೇಶಿಸುವ ಮೊದಲು ಪ್ರಿಸೈಡಿಂಗ್ ಆಫೀಸರ್ ಬಳಿ ಟ್ರೇಯಲ್ಲಿ ಇಡುವ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಆ ಟ್ರೇಯನ್ನು ಪೊಲೀಸರು ಅಥವಾ ಚುನಾವಣಾ ಅಧಿಕಾರಿಗಳು ಕಾವಲು ಕಾಯುತ್ತಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮುಂದೆ ಓದಿ..; ಚುನಾವಣಾ ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ ಮೂರು ದಿನ ಮದ್ಯ ನಿಷೇಧ
ಮತದಾನ ಮಾಡುವಾಗ ಫೋನ್ಗಳನ್ನು ಟ್ರೇನಲ್ಲಿ ಇಡಲು ಸೂಚಿಸಬೇಕೇ ಅಥವಾ ಅವುಗಳನ್ನು ಸೈಲೆಂಟ್ ಮೋಡ್ನಲ್ಲಿ ಇಡುವಂತೆ ಹೇಳಬೇಕೇ ಎಂಬ ನಿರ್ಧಾರ ಕೈಗೊಳ್ಳುವುದನ್ನು ಪ್ರಿಸೈಡಿಂಗ್ ಆಫೀಸರ್ ವಿವೇಚನೆಗೆ ಬಿಡಲಾಗಿದೆ. ಕೆಲವು ಸಂದರ್ಭಗಳಲ್ಲಿ, ಮತಗಟ್ಟೆಯೊಳಗೆ ಫೋನ್ಗಳನ್ನು ಅನುಮತಿಸದಿರಲು ಚುನಾವಣಾಧಿಕಾರಿಗಳು ನಿರ್ಧರಿಸಿದ್ದಾರೆ. ಇದು ಕೆಲವೇ ಸೆಕೆಂಡುಗಳ ವಿಷಯವಷ್ಟೆ. ಮತದಾನದ ಸಮಯದಲ್ಲಿ ಗೋಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮತದಾರರು ಮತದಾನ ಮಾಡುವಾಗ ಅವುಗಳನ್ನು ಬಳಸಬಾರದು ಎಂದು ಮಾತ್ರ ನಾವು ಹೇಳುತ್ತಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ. ಸಿಇಒ, ಜಿಲ್ಲಾಧಿಕಾರಿಗಳು ಮತ್ತು ಇತರ ಚುನಾವಣಾಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಈ ವಿಷಯ ಚರ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
BELTHANGADY
ಸಾಕುನಾಯಿಯನ್ನು ಹೊತ್ತೊಯ್ದ ಚಿರತೆ..!! ಭಯ ಭೀತರಾದ ಜನತೆ
ಬೆಳ್ತಂಗಡಿ: ಇತ್ತೀಚೆಗೆ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರೋದು ಕಾಮನ್ ಆಗಿ ಬಿಟ್ಟಿದೆ. ಹೆಚ್ಚಾಗಿ ಕಾಡಾನೆಗಳು ಊರಿಗೆ ಬಂದು ಕೃಷಿಗಳನ್ನು ನಾಶ ಮಾಡ್ತಾಇತ್ತು. ಆದರೆ ಈಗೀಗ ಹುಲಿ ಚಿರತೆಗಳು ಕೂಡ ನಾಡಿನತ್ತ ಮುಖ ಮಾಡ್ತಾ ಇದೆ.
ಮುಂದೆ ಓದಿ..; ಕಾಗೆ ನಿಜಕ್ಕೂ ನಮ್ಮ ಪಿತೃನಾ..?
ಬೆಳ್ತಂಗಡಿಯ ವೇಣೂರು ಪಚ್ಚೇರಿ ಪರಿಸರದಲ್ಲಿ ಚಿರತೆಯೊಂದು ರಾತ್ರಿ ಹೊತ್ತು ಓಡಾಡುವುದು ಕಂಡು ಬಂದಿದೆ. ಈ ಘಟನೆಯಿಂದ ಊರಿನ ಜನ ಭಯಭೀತರಾಗಿದ್ದಾರೆ. ಹಚ್ಚೇರಿ ಗೋಳಿದಡ್ಕ ನಿವಾಸಿ ಕೃಷ್ಣಾನಂದ ಭಟ್ ಅವರ ಸಾಕುನಾಯಿಯನ್ನು ಚಿರತೆ ಕಚ್ಚಿ ಕೊಂಡೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೃಷ್ಣಾನಂದ ಅವರು ಚಿರತೆಯಿಂದ ರಕ್ಷಣೆ ಕೋರಿ ವೇಣೂರು ಅರಣ್ಯ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
BANTWAL
ಚುನಾವಣಾ ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ ಮೂರು ದಿನ ಮದ್ಯ ನಿಷೇಧ
ದ.ಕ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೊದಲ ಹಂತದ ಮತದಾನ ಹಾಗೂ ಚುನಾವಣಾ ಮತ ಎಣಿಕಾ ಕಾರ್ಯ ನಡೆಯಲಿರುವ ಹಿನ್ನೆಲೆ ದ.ಕ ಕ್ಷೇತ್ರ ಸೇರಿದಂತೆ 14 ಕ್ಷೇತ್ರಗಳಲ್ಲಿ ಎ.24ರ ಸಂಜೆ 6 ಗಂಟೆಯಿಂದ ಮದ್ಯ ನಿಷೇಧ ಮಾಡಲಾಗಿದೆ.
ಮುಂದೆ ಓದಿ..; ಉಡುಪಿ : ಕರಾವಳಿ ಜನರ ರಕ್ತದಲ್ಲೇ ಹಿಂದುತ್ವ ಇದೆ : ಬಿ.ವೈ.ವಿಜಯೇಂದ್ರ
ಏ. 24ರ ಸಂಜೆ 6ಗಂಟೆಯಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಿಗೆ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯಪಾನ, ಮಾರಾಟವನ್ನು ನಿಷೇಧ ಮಾಡಲಾಗಿದೆ, ಪರವಾನಗಿ ಪಡೆಯದ ಆವರಣಗಳಲ್ಲಿ ಮದ್ಯ ಶೇಖರಣೆಯನ್ನು ನಿಷೇಧ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸಿಆರ್ಪಿಸಿ ಕಲಂ 144ರ ಅನ್ವಯ ಏಪ್ರಿಲ್ 24ರ ಸಂಜೆ 6ರಿಂದ ಪ್ರಾರಂಭಿಸಿ ಏಪ್ರಿಲ್ 26ರ ಮತದಾನ ಮುಕ್ತಾಯದ ವರೆಗೂ ಸೆಕ್ಷನ್ 144 ರಡಿ ಪ್ರತಿಬಂಧಕಾಜ್ಞೆಯನ್ನು ಜಿಲ್ಲೆಯಾದ್ಯಂತ ಹೊರಡಿಸಲಾಗಿದೆ. ಅದೇ ರೀತಿ ಏ. 24ರ ಸಂಜೆ 6 ರಿಂದ ಮತದಾನ ಕೊನೆಗೊಳ್ಳುವ ಏ.26ರ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನಿಡಿದ್ದಾರೆ.