ವಿದ್ಯುತ್ ಬಿಲ್ ವಿಚಾರಣಾ ಸಭೆಯಲ್ಲಿ ಭಾಗವಹಿಸಿ ಸಮಾಲೋಚನೆ ನಡೆಸಿದ ಶಾಸಕ ಖಾದರ್….
ಮಂಗಳೂರು: ಕೋವಿಡ್ ಸೋಂಕು ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿದ್ದ ಎರಡು ತಿಂಗಳ ವಿದ್ಯುತ್ ಬಿಲ್ ಸಮಸ್ಯೆಗೆ ಪರಿಹಾರವಾಗಿ ಜನಪ್ರತಿನಿಧಿಗಳು,
ಮೆಸ್ಕಾಂ ಅಧಿಕಾರಿಗಳು ಮತ್ತು ಬಳಕೆದಾರರು ಮುಖಾಮುಖಿಯಾಗಿ ಸಮಾಲೋಚನೆ ನಡೆಸಿ ಚರ್ಚೆ ನಡೆಸಿದರೆ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯವಿದ್ದು,
ಗ್ರಾಹಕರಲ್ಲಿ ಇರುವ ಕೆಲವೊಂದು ಗೊಂದಲ ಇಲ್ಲಿ ಬಗೆಹರಿಸಿದ್ದು ಉಳಿದ ಗೊಂದಲಗಳಿಗೆ ಸರಕಾರಿ ಮಟ್ಟದಲ್ಲಿ ಪರಿಹಾರ ನೀಡಲಾಗುವುದು ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ.
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ಉಳ್ಳಾಲ ಉಪ ವಿಭಾಗ ಕಚೇರಿಯ ಆವರಣದಲ್ಲಿ ವಿದ್ಯುತ್ ಬಳಕೆದಾರರ ವಿದ್ಯುತ್ ಬಿಲ್ ವಿಚಾರಣೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಸರಕಾರ ವಿದ್ಯುತ್ ಬಿಲ್ ಪಾವತಿಗೆ ಜೂನ್ ವರೆಗೆ ಆವಕಾಶ ನೀಡಿದ್ದು, ಎರಡು ತಿಂಗಳಲ್ಲಿ ಸೋಂಕು ಹರಡುವ ಭೀತಿಯಲ್ಲಿ ವಿದ್ಯುತ್ ಬಿಲ್ ರೀಡರ್ ಗಳು ರೀಡಿಂಗ್ ಮಾಡಿರಲಿಲ್ಲ.
ಆದರೆ ಎರಡು ತಿಂಗಳ ಬಿಲ್ ರೀಡಿಂಗ್ ಮಾಡುವಾಗ ತಿಂಗಳ ಲೆಕ್ಕಾಚಾರದಲ್ಲಿ ರೀಡಿಂಗ್ ಮಾಡಬೇಕಾಗಿತ್ತು.
ಈ ನಿಟ್ಟಿನಲ್ಲಿ ಮೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಪರಿಹಾರ ನೀಡುವ ಭರವಸೆ ನೀಡಿದ್ದರು.
ಬಿಲ್ ಡಿಪಾಸಿಟ್ ಕಡಿಮೆ ಮಾಡುವ ವಿಚಾರದಲ್ಲೂ ಮಾತುಕತೆ ನಡೆಸಿದ್ದು, ಜನರಲ್ಲಿ ಇರುವ ಗೊಂದಲ ನಿವಾರಣೆಗೆ ಅಧಿಕಾರಿಗಳು ಮುಂದಾಗಬೇಕು ಎಂದರು.