ಮಂಗಳೂರು: ಪಠ್ಯಪುಸ್ತಕದ ಬಗ್ಗೆ ಸುಳ್ಳು ಹೇಳಿಕೆ ನೀಡಿದ ಬಿಜೆಪಿಯವರು ವಿಶೇಷವಾಗಿ ಸಚಿವ ಕೋಟಾ ಹಾಗೂ ಸುನೀಲ್ ಕುಮಾರ್ ದ.ಕ ಜಿಲ್ಲೆಯರ ಬಳಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಠ್ಯಪುಸ್ತಕದಲ್ಲಿ ಬ್ರಹ್ಮರ್ಷಿ ನಾರಾಯಣ ಗುರು ಪಠ್ಯ ತೆಗೆದ ವಿಚಾರಕ್ಕೆ ಸಂಬಂಧಪಟ್ಟಂತೆ ವಿವಾದವೆದ್ದಾಗ ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಪಠ್ಯವನ್ನು ತೆಗೆದಿಲ್ಲ.
ಕಾಂಗ್ರೆಸ್ನವರು ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದರು. ಇದೀಗ ಶಿಕ್ಷಣ ಸಚಿವರು ಸಮಾಜ ವಿಜ್ಞಾನದ ನಾರಾಯಣ ಗುರು ಪಠ್ಯದಲ್ಲಿ ಸೇರಿಸುವಂತೆ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಸಚಿವ ಕೋಟಾ, ಸುನೀಲ್ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ ಜನರ ಭಾವನೆ ಜೊತೆಗೆ ಚೆಲ್ಲಾಟವಾಡಿದ್ದಾರೆ.
ಆದ್ದರಿಂದ ಅವರು ಜಿಲ್ಲೆಯ ಜನತೆಯ ಕ್ಷಮೆ ಕೇಳಬೇಕು ಎಂದರು. ಅಂದು ನಾವು ಮಾಡಿದ ಹೋರಾಟದ ಪ್ರತಿಫಲದಿಂದ ಸಮಾಜ ವಿಜ್ಞಾನ ಪಠ್ಯದಲ್ಲಿ ಬ್ರಹ್ಮರ್ಷಿ ನಾರಾಯಣಗುರು ಪಾಠ ಸೇರಿದೆ.
ಇನ್ನೂ ಕೂಡ ಪಠ್ಯಪುಸ್ತಕದಲ್ಲಿ ಹಲವಾರು ತಪ್ಪುಗಳಿವೆ. ಆ ತಪ್ಪುಗಳನ್ನು ಸದ್ಯದಲ್ಲೇ ಬಯಲು ಮಾಡುತ್ತೇವೆ. ನಿನ್ನೆ ಮಳೆ ಹಾನಿ ಪರಿಶೀಲಿಸಲು ಜಿಲ್ಲೆಗೆ ಭೇಟಿ ನೀಡಿದ ಸಿಎಂ ಮೂಲ್ಕಿ-ಮೂಡಬಿದ್ರೆ ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂದು ಇದೇ ವೇಳೆ ಆರೋಪಿಸಿದರು.