ಪ್ರೀತಿಸಿದವಳನ್ನೇ ಪಾಳು ಬಾವಿಗೆ ದೂಡಿ ಕೊಲ್ಲಲು ಯತ್ನಿಸಿ ಜೈಲು ಸೇರಿದ ಅಶೋಕ…!
ಬೆಂಗಳೂರು : ಪ್ರಿಯಕರನ ಮಾತಿಗೆ ಮರುಳಾಗಿ ಗಂಡನ ಮನೆ ಬಿಟ್ಟು ಪರಾರಿಯಾಗಿದ್ದ ಗೃಹಿಣಿ 100 ಅಡಿ ಆಳದ ಪಾಳು ಬಾವಿಯಲ್ಲಿ 4 ರಾತ್ರಿ ಮತ್ತು 4 ಹಗಲುಗಳನ್ನು ಕಳೆದ ಘಟನೆ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ನಡೆದಿದೆ.
ನಾಪತ್ತೆಯಾದ ಗೃಹಿಣಿಯನ್ನು ಹುಡುಕಾಡಿದ ಪೊಲೀಸರಿಗೆ ಗೊನೆಗೂ ಪಾಳುಬಾವಿಯಲ್ಲಿ ಬಿದ್ದು ನರಳಾಡುತ್ತಿದ್ದ ಗೃಹಿಣಿ ಸಿಕ್ಕಿದ್ದಾಳೆ.
ಬಳಿಕ ಆಕೆಯನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಸಾವು ಬದುಕಿನ ನಡುವೆ ಹೋರಾಡುತ್ತಿರುವ ಆಕೆಯನ್ನ ಪ್ರಿಯಕರನೇ ಬಾವಿಗೆ ತಳ್ಳಿ, ಕೊಲ್ಲುವ ಯತ್ನ ನಡೆಸಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಇದೀಗ ಪ್ರಿಯಕರನ್ನು ಹಿಡಿದು ಲಾಕಪ್ ಗೆ ತಳ್ಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಎ. ರಂಗನಾಥಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮಾಲೂರು ತಾಲೂಕಿನ ಸೊಣ್ಣಹಳ್ಳಿ ಗ್ರಾಮದ 23 ವರ್ಷದ ಗೃಹಿಣಿ ಅಮೃತಾ ಎಂಬಾಕೆಯನ್ನು ಪಾಳು ಬಾವಿಯಿಂದ ರಕ್ಷಣೆ ಮಾಡಲಾಗಿದೆ.
ಅಮೃತಾಳಿಗೆ ಸೊಣ್ಣಹಳ್ಳಿಯ ಅಶೋಕ್ ಎಂಬ ಯುವಕನೊಂದಿಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು.
ಇವರಿಗೆ ಒಂದು ಗಂಡು ಮಗು ಸಹ ಇದೆ.
ಆದರೆ ಪ್ರಿಯಕರ ಇವರ ದಾಂಪತ್ಯ ಜೀವನದ ಮಧ್ಯೆ ಬಂದು ಹುಳಿ ಹಿಂಡಿ ಬಳಿಕ ಅಮೃತಾಳನ್ನು ಪಾಳುಬಾವಿಯಲ್ಲಿ ನರಳುವಂತೆ ಮಾಡಿದ್ದಾನೆ.
ಘಟನೆ ಹೇಗಾಯಿತು..!?
ಕಳೆದ ಶನಿವಾರ ಎಂದಿನಂತೆ ಅಮ್ರತಾಳ ಗಂಡ ಅಶೋಕ್ ಕೆಲಸಕ್ಕೆ ತೆರಳಿದ್ದಾನೆ. ಅತ್ತೆ- ಮಾವ ಹೊಲಕ್ಕೆ ಹೋಗಿದ್ದಾರೆ.
ಆಗ ಮಗುವನ್ನು ಪಕ್ಕದ ಮನೆಯವರಿಗೆ ಕೊಟ್ಟು ಮಾಲೂರಿಗೆ ಹೋಗುವುದ್ದಾಗಿ ಹೇಳಿದ ಅಮೃತಾ ಮಾಲೂರಿನ ಗಂಡನ ಮನೆ ಸೊಣ್ಣಹಳ್ಳಿ ಗ್ರಾಮದಿಂದ ನಾಪತ್ತೆಯಾಗಿದ್ದಳು.
ಅಂದು ನಾಪತ್ತೆಯಾಗಿದ್ದ ಅಮೃತಾಳನ್ನು ಗಂಡನ ಮನೆ ಕಡೆಯವರು ಹುಡುಕಾಟ ನಡೆಸಿದ್ದರೂ ಆಕೆಯ ಪತ್ತೆಯಾಗಿರಲಿಲ್ಲ.
ಅಮೃತಾಳನ್ನು ಶನಿವಾರವೇ ಕರೆಸಿಕೊಂಡಿದ್ದ ರಂಗನಾಥಪುರದಲ್ಲಿದ್ದ ಪ್ರಿಯಕರ ಆದರ್ಶ ಆಕೆಯನ್ನು 100 ಅಡಿ ಆಳದ ಪಾಳು ಬಾವಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದಾನೆ.
ಕಳೆದ ನಾಲ್ಕು ದಿನಗಳಿಂದ ಬಾವಿಯಲ್ಲೆ ಬಿದ್ದಿದ್ದ ಅಮೃತಾ ಮೇಲೆ ಬರಲು ಆಗದೇ ಕಾಪಾಡಿ ಎಂದು ಕೂಗಿಕೊಂಡಿದ್ದಾಳೆ.
ಆದರೆ, ಯಾರೊಬ್ಬರೂ ಸಹಾಯಕ್ಕೆ ಬಂದಿರಲಿಲ್ಲ. ಪಾಳು ಬಾವಿಯಿಂದ ನಿರಂತರವಾಗಿ ಕೂಗಾಟದ ಶಬ್ದ ಕೇಳಿದ ಅಕ್ಕಪಕ್ಕದ ತೋಟದವರು ಭಯಗೊಂಡು ಹತ್ತಿರಕ್ಕೆ ಹೋಗದೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ನಿರ್ಜನ ಪ್ರದೇಶವಾದ್ದರಿಂದ ಬಾವಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಅರಣ್ಯ ಸಹ ಇದ್ದು ಮರ-ಗಿಡಗಳ ಮಧ್ಯೆ ದೊಡ್ಡ ಬಾವಿಯ ಸಮೀಪಕ್ಕೆ ಯಾರೂ ಹೋಗುತ್ತಿರಲಿಲ್ಲ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
ತೀವ್ರ ಅಸ್ವಸ್ಥವಾಗಿರುವ ಅಮೃತಾಳನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬಾವಿಗೆ ತಳ್ಳಿದ್ದ ಆದರ್ಶನ ಮಾಹಿತಿ ಪಡೆದಿರುವ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಪ್ರಕರಣವನ್ನ ದಾಖಲಿಸಿಕೊಂಡಿರುವ ವಿಜಯಪುರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಸುಖ ಸಂಸಾರಕ್ಕೆ ಸಾಕ್ಷಿಯಾಗಿದ್ದ ಪುಟ್ಟ ಮಗು, ಗಂಡನಿಗೆ ಕೈ ಕೊಟ್ಟು ಪ್ರಿಯತಮನ ಮಾತಿಗೆ ಮರುಳಾಗಿ ಮನೆ ಬಿಟ್ಟು ಹೋದ ಅಮೃತಾ ಬಾವಿಯಲ್ಲಿ ನರಳಿ, ಜೀವನದ ಪಾಠ ಕಲಿತಿದ್ದು ಎಷ್ಟೋ ಗೊತ್ತಿಲ್ಲ.
ಸಾಂಸಾರಿಕ ಜೀವನ ಬಿಟ್ಟು ಪರ ಪುರುಷರು, ಮಹಿಳೆಯರ ಹಿಂದೆ ಬೀಳುವರಿಗೆ ಮಾತ್ರ ಈ ಘಟನೆ ಒಂದು ಪಾಠವಾಗಿದೆ.