ಕುಂದಾಪುರ: ಬೀಡಾಡಿ ಗೋವುಗಳನ್ನು ಕಳವು ಗೈಯುತ್ತಿದ್ದ ತಂಡದ ಓರ್ವ ಆರೋಪಿಯನ್ನು ಕುಂದಾಪುರದ ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಗಂಗೊಳ್ಳಿ ಪೊಲೀಸರು ಬಂಧಿಸಿದ್ದು, ಮೂವರು ಪರಾರಿಯಾಗಿದ್ದಾರೆ.
ಕಂಡ್ಲೂರು ನಿವಾಸಿ ಮುಜಾಫರ್ ಅಹಮ್ಮದ್ ಬಂಧಿತ ಆರೋಪಿ. ತಂಡದಲ್ಲಿ ಇದ್ದ ಇತರ ಆರೋಪಿಗಳಾದ ಕಾರು ಚಾಲಕ ಸದಾಫ್, ವಾಯಿದ್, ಸಿಯಾನ್ ಪರಾರಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಕೆಂಪು ಬಣ್ಣದ ಝೆನ್ ಕಾರೊಂದನ್ನು ಬೆನ್ನು ಹತ್ತಿದ್ದರು. ಈ ನಡುವೆ ಸಿಪಿಐ ಅವರು ಗಂಗೊಳ್ಳಿ ಪೊಲೀಸ್ ಠಾಣೆ ಹಾಗೂ ಹೈವೇ ಪಟ್ರೋಲ್ ವಾಹನಕ್ಕೆ ಮಾಹಿತಿ ನೀಡಿ ನಾಕಾಬಂದಿ ಹಾಕಿದ್ದರು.
ಜಾನುವಾರು ಕಳವುಗೈದು ಅತಿ ವೇಗವಾಗಿ ಬಂದ ಝೆನ್ ಕಾರು ನಿಯಂತ್ರಣ ತಪ್ಪಿ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೊವಾಡಿ ಕ್ರಾಸ್ ಬಳಿ ರಸ್ತೆ ಬದಿಯ ಡಿವೈಡರಿಗೆ ಡಿಕ್ಕಿ ಹೊಡೆದಿತ್ತು.
ಕಾರಿನಲ್ಲಿದ್ದ ಮೂವರು ಪರಾರಿಯಾಗಿದ್ದು ಮುಜಾಫರ್ ನನ್ನು ಬಂಧಿಸಲಾಗಿದೆ. ತಾವು ಮಾಂಸ ಮಾಡಿ ಮಾರಾಟ ಮಾಡುವ ಸಲುವಾಗಿ ಜಾನುವಾರು ಕದ್ದು ಸಾಗಿಸುತ್ತಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಇವರು ಬ್ರೆಡ್ ಪೀಸ್ ಹಾಕಿ ಜಾನುವಾರು ಕಳವು ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದು ಎರಡು ಜಾನುವಾರು ರಕ್ಷಿಸಲಾಗಿದೆ.