ಪಡುಬಿದ್ರಿ: ಇಲ್ಲಿಯ ಪುರಾಣ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಇಂದು ವಿಶೇಷ ಕಟ್ಟದಪ್ಪ ಸೇವೆ ಜರಗಿತು.
ಅವಿಭಜಿತ ಜಿಲ್ಲೆಯಲ್ಲದೆ ದೇಶ ವಿದೇಶಗಳ ಭಕ್ತರು ಇಲ್ಲಿ ನಡೆಯುವ ವಿಶೇಷ ಕಟ್ಟದಪ್ಪ ಸೇವೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷತೆ. ಶ್ರೀ ಮಹಾಗಣಪತಿ ದೇವರ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿ ನಡೆಯುವ ಕಟ್ಟದಪ್ಪ ಮತ್ತು ಪೊಟ್ಟಪ್ಪ ಸೇವೆಗಳು ಜಗತ್ಪ್ರಸಿದ್ಧ.
ಪಡುಬಿದ್ರಿ ಗ್ರಾಮದ ಕಲ್ಲಟ್ಟೆ ಎಂಬಲ್ಲಿ ಜನರು ಎಷ್ಟೇ ಪ್ರಯತ್ನ ಪಟ್ಟರೂ, ಕಟ್ಟಪುಣಿ ಸುದೃಢವಾಗಿ ನಿಲ್ಲುತ್ತಿರಲಿಲ್ಲ. ಪಡುಬಿದ್ರಿ ಮಹಾಗಣಪತಿಗೆ ಕಟ್ಟದಪ್ಪ ಹರಕೆ ಹೇಳಿದ್ದರಂತೆ. ಹರಕೆ ಸಲ್ಲಿಸಿದ ಬಳಿಕ ಕಟ್ಟಪುಣಿ ಸುದೃಢವಾಗಿ ನಿಂತಿತು ಎಂದು ಇಲ್ಲಿನ ಭಕ್ತರ ನಂಬಿಕೆ.
ಅಂದು ೫-೬ ಸೇರು ಅಕ್ಕಿ ಹಿಟ್ಟು ಮೂಲಕ ಮಧ್ಯಾಹ್ನ ನಡೆಯುತ್ತಿದ್ದ ಸೇವೆ ಇಂದು ಜಗದಗಲ ಹರಡಿ ೧೦೦ ಮುಡಿ ವರೆಗೆ ಬಂದು ತಲುಪಿದೆ.
ಕಳೆದ ೨೦ ವರ್ಷಗಳಿಂದ ಶ್ರೀ ದೇವಳದಲ್ಲಿ ಯೋಗೀಶ್ ಭಟ್ ಕರ್ಕಟೆ ಹೌಸ್ ರವರ ೮೫ ಜನರ ತಂಡ ಇಲ್ಲಿ ಕಟ್ಟದಪ್ಪ ತಯಾರಿಸುವ ಕಾಯಕ ಮಾಡುತ್ತಾ ಬಂದಿದೆ.
೧೬ ವರ್ಷಗಳ ಹಿಂದೆ ೨೦ ಮುಡಿ ಅಕ್ಕಿ ಹಿಟ್ಟಿನಿಂದ ಕಟ್ಟದಪ್ಪ ತಯಾರಿಸಲಾಗುತ್ತಿತ್ತು ಎನ್ನುವ ಯೋಗಿಶ್ ಭಟ್, ಈ ವರ್ಷ ೧೦೦ ಮುಡಿ ಅಕ್ಕಿ ಹಿಟ್ಟು ಉಪಯೋಗಿಸಿ ಕಟ್ಟದಪ್ಪ ತಯಾರಿಸಲಾಗುತ್ತಿದೆ. ಇದರಿಂದ ಇದರ ಜನಪ್ರಿಯತೆ ಹಾಗೂ ಭಕ್ತರ ಭಕ್ತಿ ಭಾವದ ಬಗ್ಗೆ ಅರಿಯಬಹುದು ಎನ್ನುತ್ತಾರೆ.
ಈ ಬಾರಿ ಕಟ್ಟದಪ್ಪಕ್ಕೆ ೧೦೦ ಮುಡಿ ಅಕ್ಕಿ ಹಿಟ್ಟು, ೧೫೦೦ ತೆಂಗಿನ ಕಾಯಿ, ೩೫೦೦ ಬಾಳೆ ಹಣ್ಣು, ೩೭೦೦ ಕೆಜಿ ಬೆಲ್ಲ, ೩೦ ಗೋಣಿ ಚೀಲ ಅರಳು, ೧೫ ಕೆಜಿ ಏಲಕ್ಕಿ ಮತ್ತು ೮೦ ಟಬ್ಬಿ ಕೊಬ್ಬರಿ ಎಣ್ಣೆ ಬಳಸಿ ಈ ಕಟ್ಟದಪ್ಪ ತಯಾರಿಸಲಾಗುತ್ತದೆ.
೮೫ ಜನರ ಅಡುಗೆಯಾಳುಗಳ ತಂಡ ಸೇರಿ ೮ ಬಾಣಲೆ, ೨ ಕೊಪ್ಪರಿಗೆ, ೨೨ ಅಪ್ಪದ ಕಾವಲಿ ಮೂಲಕ ಬೆಳಗಿನ ಜಾವ ೧.೩೦ ಗಂಟೆಯಿAದ ಆರಂಭಿಸಿ ರಾತ್ರಿ ೬, ೭ ಗಂಟೆ ತನಕ ಸುಮಾರು ೨ ಲಕ್ಷ ಅಪ್ಪಗಳನ್ನು ತಯಾರಿಸಿದ್ದಾರೆ.
ದೇವಳದ ಆಡಳಿತಾಧಿಕಾರಿ ಪ್ರಶಾಂತ್ ಶೆಟ್ಟಿ, ಅನುವಂಶೀಯ ಮೊಕ್ತೇಸರ ರತ್ನಾಕರ ರಾಜ್ ಕಿನ್ನಕ್ಕ ಬಳ್ಳಾಲ್ ಮತ್ತು ರವಿ ಬಟ್ರವರು ಸಮಗ್ರ್ರ ಮಾಹಿತಿ ನೀಡಿದರು.