ವರದಿ : ಗಣೇಶ್ ಪೂಜಾರಿ
ಮಂಗಳೂರು : ಬಂದರು ನಗರಿ ಮಂಗಳೂರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ದಿಯಾಗುತ್ತಿದೆ.
ಜೊತೆಗೆ ಸುಂದರ ನಗರವಾಗಿಯೂ ರೂಪುಗೊಳ್ಳುತ್ತಿದೆ. ಇಲ್ಲಿನ ರಸ್ತೆ, ಒಳ ಚರಂಡಿ, ವಿದ್ಯುತ್ ಎಲ್ಲವೂ ಮೇಲ್ದರ್ಜೆಗೆ ಏರಿರುವ ಕಾರ್ಯ ಭರದಿಂದ ನಡೆಯುತ್ತಿದ್ದು ಇದರ ಜೊತೆಗೆ ಮುಖ್ಯವಾಗಿ ಬೇಕಾಗಿರುವ ಮತ್ತು ನಗರದ ಅಂದವನ್ನು ಹೆಚ್ಚಿಸಲಿರುವ ಉದ್ಯಾನವನಗಳನ್ನು ಸುಂದರೀಕರಣಗೊಳಿಸುವ ಕಾರ್ಯವೂ ವೇಗವಾಗಿ ನಡೆಯುತ್ತಿದೆ, ಇವುಗಳಲ್ಲಿ ಒಂದು ಹೃದಯಭಾಗದಲ್ಲಿರುವ ಕದ್ರಿ ಉದ್ಯಾನವನ.
2025 ರ ಗುರಿಯನ್ನಿಟ್ಟು ಈ ವಿಶಾಲವಾದ ಪಾರ್ಕನ್ನು ಅಭಿವೃದ್ದಿ ಮಾಡುವ ಯೋಜನೆಯನ್ನು ಆರಂಭಿಸಲಾಗಿದ್ದು ಕಾಮಗಾರಿ ಭರದಿಂದ ಸಾಗುತ್ತಿದೆ. ಈಗಾಗಲೇ ಒಂದು ಹಂತದ ಕಾಮಗಾರಿ ನಡೆದಿದ್ದು ಪಾರ್ಕ್ ಪರಿಸರ ಒಂದು ಹೊಸ ನೋಟದಲ್ಲಿ ಕಂಗೊಳಿಸುತ್ತಿದೆ.
ಜನಾರ್ಷಣೆಯ ಕೇಂದ್ರ ಗಂಗನಪಳ್ಳ:
ಕದ್ರಿ ಪಾರ್ಕಿನ ಒಳಗಡೆ ಇರುವ ಗಂಗನಪಳ್ಳ ಮತ್ತು ಸಂಗೀತ ಕಾರಂಜಿಯನ್ನು ಸರಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚಲ್ಲಿ ಅಭಿವೃದ್ದಿ ಪಡಿಸಲಾಗಿದ್ದು ಈಗಾಗಲೇ ಲೋಕಾರ್ಪಣೆಗೊಂಡಿದೆ.
ಉದ್ಘಾಟನೆಗೊಂದ ದಿನದಿಂದಲೇ ಈ ಕದ್ರಿ ಪಾರ್ಕ್ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ,
ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್ ನೇತ್ರತ್ವದಲ್ಲಿ ಇಲ್ಲಿನ ಗಂಗನಪಳ್ಳ ಕೆರೆಯನ್ನು ಒಂದು ವಿಶೇಷ ವಿನ್ಯಾಸದಲ್ಲಿ ರೂಪಿಸಿದ್ದು ಇದಕ್ಕೆ ಅಗತ್ಯ ಇರುವ ಹಣಕಾಸಿನ ನೆರವನ್ನೂ ಪ್ರಾಧಿಕಾರದಿಂದ ನೀಡಿದ್ದಾರೆ.
ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರದೊಂದಿಗೆ ಉದ್ಯಾನವನ ಕಂಗೊಳಿಸುತ್ತಿದೆ.
ಇದರ ಜೊತೆಗೆ ಜಲಸಸ್ಯೆ ತಜ್ಞೆ ಸ್ನೇಹ ಉಳ್ಳಾಲರ ಮಾರ್ಗದರ್ಶನದಲ್ಲಿ ಗಂಗನಪಳ್ಳದಲ್ಲಿ ಆಕರ್ಷಕ ಜಲಸಸ್ಯಗಳನ್ನು ಬೆಳೆಸಲು ಯೋಜನೆ ರೂಪಿಸಲಾಗಿದೆ.
ಕೋಮಲೆ, ನೈದಿಲೆ, ತಾವರೆಗಳೊಂದಿಗೆ ವಾಟರ್ ಲಿಲ್ಲಿ ಹಿಗೇ ನೂರಕ್ಕೂ ಅಧಿಕ ಜಲಸಸ್ಯಗಳನ್ನು ಬೆಳೆಸಲಾಗುತ್ತಿದೆ.
ಜಲಚರಗಳೊಂದಿಗೆ, ಜಲಸಸ್ಯಗಳೊಂದಿಗೆ ದೋಣಿ ವಿಹಾರ ಕೂಡ ಆರಂಭಿಸಿದರೆ ಇನ್ನಷ್ಟು ಮೆರುಗು ಬರಲಿದೆ ಕದ್ರಿ ಉದ್ಯಾನವನಕ್ಕೆ ಅನ್ನುತ್ತಾರೆ ಪರಿಸರ ಪ್ರಿಯರು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ್ ಕಾಮತ್ ಅವರು ವಿಶೇಷ ಮುತುವರ್ಜಿ ವಹಿಸಿ ಪಾರ್ಕನ್ನು ಸಮಗ್ರ ಅಭಿವೃದ್ದಿ ಮಾಡಲು ಪಣತೊಟ್ಟಿದ್ದಾರೆ.
” ಸ್ಮಾರ್ಟ್ ಸಿಟಿ ಮೂಲಕ ದೊಡ್ಡ ಮಟ್ಟದಲ್ಲಿ ಕದ್ರಿ ಪಾರ್ಕ್ ಅಭಿವೃದ್ಧಿ ಪಡಿಸಲಾಗುತ್ತಿದೆ.
ತಿಂಡಿತಿನಸುಗಳ ಅಂಗಡಿ ಫುಡ್ ಕೋರ್ಟ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಕದ್ರಿ ಪಾರ್ಕಿನ ಒಳಗಡೆ ಇರುವ ಗಂಗನಪಳ್ಳ , ಸಂಗೀತ ಕಾರಂಜಿಯನ್ನು 97 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಆಸುಪಾಸಿನಲ್ಲಿ ಬಿಎಸ್ಎನ್ಎಲ್ 2 ಎಕರೆ ಜಾಗ ಮನಪಾಕ್ಕೆ ಪಾರ್ಕಿಂಗ್ಗೆ ಬಳಸಲು ನಾವು ಯೋಜನೆ ರೂಪಿಸಿದ್ದೇವೆ.
ಸಂಗೀತ ಕಾರಂಜಿ ಮತ್ತೆ ಚಾಲನೆ ನೀಡಲಿದ್ದೇವೆ.ಲೇಸರ್ ಶೋ ಕೂಡ ಮಾಡಲಿದ್ದೇವೆ. ಮೂಡಾದ ವತಿಯಿಂದ ಪಾರ್ಕಿನ ಒಳಭಾಗದಲ್ಲಿ ನೇಶನಲ್ ಹೈವೇಯಿಂದ ಅಂಡರ್ ಪಾರ್ಕಿಂಗ್ ವ್ಯವಸ್ಥೇ ಮಾಡಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ವ್ಯವಸ್ಥೆ ಮಾಡುವ ನನ್ನ ಕನಸಿದೆ.
ಅದನ್ನು 2025 ರೊಳಗೆ ಪೂರ್ಣಗೊಳಿಸುತ್ತೇನೆಂಬ ವಿಶ್ವಾಸವಿದೆ ಎನ್ನುತ್ತಾರೆ ಶಾಸಕ ವೇದವ್ಯಾಸ್ ಕಾಮತ್.
ಒಟ್ಟಿನಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರಾದಿಯಾಗಿ ಎಲ್ಲರಿಗೂ ಮನಸ್ಸನ್ನು ಉಲ್ಲಸಿತರನ್ನಾಗಿಡುವ ನಿಟ್ಟಿನಲ್ಲಿ ಕದ್ರಿ ಪಾರ್ಕಿನ ಅಭಿವೃದ್ಧಿ ಆಗುತ್ತಿರುವುದು ಸಂತಸದ ವಿಚಾರ.
ಕದ್ರಿ ಪಾರ್ಕ್ನ ಇನ್ನೂ ಹಲವು ಅಭಿವೃದ್ಧಿ ಕೆಲಸಗಳ ತ್ವರಿತಗತಿಯಲ್ಲಿ ಮುಗಿದು ಇನ್ನಷ್ಟು ಪ್ರವಾಸಿಗರು ಆಗಮಿಸಿ ತುಳುನಾಡಿನ ಸೌಂದರ್ಯದ ವೀಕ್ಷಣೆಯೊಂದಿಗೆ ಮಂಗಳೂರು ನಗರ ಅಭಿವೃದ್ದಿಯಾಗಲಿ ಅನ್ನುವುದೇ ಮಂಗಳೂರಿಗರ ಆಶಯ..