ಶಿವಮೊಗ್ಗದಲ್ಲಿ ಸ್ಫೋಟ, ವಿಧ್ವಂಸಕ ಕೃತ್ಯಗಳನ್ನು ನಡೆಸಿದ ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿಯು ಚಾರ್ಜ್ಶೀಟ್ ಸಲ್ಲಿಸಿದೆ.
ಬೆಂಗಳೂರು: ಶಿವಮೊಗ್ಗದಲ್ಲಿ ಸ್ಫೋಟ, ವಿಧ್ವಂಸಕ ಕೃತ್ಯಗಳನ್ನು ನಡೆಸಿದ ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿಯು ಚಾರ್ಜ್ಶೀಟ್ ಸಲ್ಲಿಸಿದೆ.
ಶಿವಮೊಗ್ಗದ ಮಾಜ್ ಮುನೀರ್ ಅಹ್ಮದ್ ಹಾಗೂ ಸೈಯದ್ ಯಾಸಿನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ, 121 ಎ, 122ರ ಅಡಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
ಆರೋಪಿಗಳ ವಿರುದ್ಧ ಯುಎ(ಪಿ) ಕಾಯ್ದೆಯ ಸೆಕ್ಷನ್ 18, 18ಬಿ, 20, 38ರ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳಿಬ್ಬರೂ ಬಿಟೆಕ್ ಪದವೀಧರರಾಗಿದ್ದು, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳನ್ನು ಗುರಿಯಾಗಿಸಿ ವಿಧ್ವಸಂಕ ಕೃತ್ಯಗಳನ್ನೆಸಗಲು ವಿದೇಶಿ ಮೂಲದ ವ್ಯಕ್ತಿಯಿಂದ ಆನ್ಲೈನ್ ಮೂಲಕ ಪ್ರಚೋದನೆಗೊಳಪಟ್ಟಿದ್ದರು ಎಂಬುದು ಎನ್ಐಎ ತನಿಖೆಯಿಂದ ತಿಳಿದುಬಂದಿದೆ.
ಅವರು ಸ್ಫೋಟಕಗಳನ್ನು ಸಂಗ್ರಹಿಸಿ ಐಇಡಿ ತಯಾರಿಸಿದ್ದರು. ಸೈಯದ್ ಯಾಸಿನ್ ಶಿವಮೊಗ್ಗದ ವಾರಾಹಿ ನದಿ ದಡದಲ್ಲಿ ಐಇಡಿ ಸಾಧನಗಳ ಸ್ಫೋಟ ಪ್ರಯೋಗವನ್ನೂ ನಡೆಸಿದ್ದ.
ಆತ ತ್ರಿವರ್ಣ ಧ್ವಜವನ್ನು ಸುಟ್ಟುಹಾಕಿದ್ದ ಮತ್ತು ಅದರ ವೀಡಿಯೋ ಸಹ ರೆಕಾರ್ಡ್ ಮಾಡಿದ್ದ ಎಂದು ಎನ್ಐಎ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳು ಶಿವಮೊಗ್ಗ ಜಿಲ್ಲೆಯ ಆಗುಂಬೆ ಮತ್ತು ವಾರಾಹಿ ನದಿ ಹಿನ್ನೀರಿನ ಅರಣ್ಯ ಪ್ರದೇಶಗಳಲ್ಲಿ ಅಡಗುದಾಣ ಹುಡುಕಿದ್ದರು.
ಅವರ ಕೃತ್ಯಗಳಿಗೆ ವಿದೇಶಿ ವ್ಯಕ್ತಿಯು ಕ್ರಿಪ್ಟೋಕರೆನ್ಸಿಗಳ ಮೂಲಕ ಹಣವನ್ನು ಪಾವತಿಸಿದ್ದ. ಇಬ್ಬರೂ ತಮ್ಮ ಸ್ನೇಹಿತರ ಖಾತೆಯಿಂದ 2.12 ಲಕ್ಷ ರೂ. ಪಡೆದಿದ್ದರು ಎಂದು ಎನ್ಐಎ ತಿಳಿಸಿದೆ.
ಭಾರೀ ಸಂಚಿನ ಭಾಗವಾಗಿ, ಆರೋಪಿ ಮೊಹಮ್ಮದ್ ಶಾರಿಕ್ 2022ರ ನವೆಂಬರ್ 19ರಂದು ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ ಸ್ಫೋಟಕ್ಕೆ ಸಂಚು ಹೂಡಿದ್ದ.
ಆದರೆ, ಟೈಮರ್ ವೈಫಲ್ಯದಿಂದಾಗಿ ಅದು ಅಕಾಲಿಕವಾಗಿ ಸ್ಫೋಟಗೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಇತರ ಆರು ಆರೋಪಿಗಳ ವಿರುದ್ಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎನ್ಐ ತಿಳಿಸಿದೆ.
ಆರೋಪಿ ಜಬೀವುಲ್ಲಾ ಮತ್ತು ಇತರರು ಶಿವಮೊಗ್ಗದಲ್ಲಿ 2022ರ ಆಗಸ್ಟ್ 15 ರಂದು ಪ್ರೇಮ್ ಸಿಂಗ್ ಎಂಬಾತನಿಗೆ ಇರಿದ ನಂತರ ಕರ್ನಾಟಕ ಪೊಲೀಸರು ತನಿಖೆಯನ್ನು ಎನ್ಐಎಗೆ ವಹಿಸಿದ್ದರು. ನಂತರ ಐಎಸ್ ಜಾಲ ಬಯಲಿಗೆ ಬಂದಿತ್ತು.