ಚಾಮರಾಜನಗರದಲ್ಲಿ ನಡೆದ ಅಮಾನವೀಯ ಘಟನೆ…
ಚಾಮರಾಜನಗರ: ಪಾಪಿ ಪತಿಯೊಬ್ಬ ಪತ್ನಿಯನ್ನ ಬಾವಿಗೆ ತಳ್ಳಿ ಕೊಲೆಗೈದು, ಬಳಿಕ ಶವವನ್ನು ಹೂತಿಟ್ಟಿದ್ದ ಪ್ರಕರಣ ಚಾಮರಾಜನಗರದಲ್ಲಿ ನಡೆದಿದೆ.
ಆದರೆ ಈ ಕೃತ್ಯ ಎರಡು ತಿಂಗಳ ಬಳಿಕ ಬೆಳಕಿಗೆ ಬಂದಿದ್ದು, ಚಾಮರಾಜನಗರ ಪಟ್ಟಣದ ಹಾಜಿರಾಬಾನು ಕೊಲೆಯಾದ ದುರ್ಧೈವಿ ಮಹಿಳೆ.
ನಾಗವಳ್ಳಿ ಗ್ರಾಮದ ಅಬ್ದುಲ್ ಹಬೀಬ್ ಹತ್ಯೆಗೈದ ಆರೋಪಿಯಾಗಿದ್ದು ಕೊಲೆಯಾದ ಮಹಿಳೆಯ ಪತಿಯಾಗಿದ್ದಾನೆ.
ಕೊಲೆಯಾದ ಹಾಜಿರಾಬಾನು ಮಕ್ಕಳು, ತಾತನ ಮನೆಗೆ ಬಂದಾಗ ತಂದೆಯ ಕೃತ್ಯವನ್ನು ಬಯಲು ಮಾಡಿದ್ದಾರೆ.
ಹಾಜಿರಾಬಾನು ಹಾಗೂ ಅಬ್ದುಲ್ ಹಬೀಬ್ ದಂಪತಿಗೆ ನಾಲ್ವರು ಮಕ್ಕಳು ಇದ್ದಾರೆ. ಆದರೆ ಹಾಜಿರಾಬಾನು ಮಾಟ ಮಾಡಿಸುತ್ತಾಳೆ ಎಂಬುದು ಅಬ್ದುಲ್ ಮನೆಯವರ ಅನುಮಾನವಾಗಿತ್ತು.
ಜೊತೆಗೆ ಹಾಜಿರಾಬಾನುವನ್ನು ಕಂಡರೆ ಅಷ್ಟಕಷ್ಟೇ. ಈ ಹಿನ್ನಲೆಯಲ್ಲಿ ಅಬ್ದುಲ್ ಏಪ್ರಿಲ್ 20ರಂದು ತನ್ನ ಪತ್ನಿ ಹಾಜಿರಾಬಾನುನನ್ನು ತನ್ನ ಜಮೀನಿಗೆ ಕರೆದೊಯ್ದು ಬಾವಿಗೆ ತಳ್ಳಿ ಕೊಲೆ ಮಾಡಿದ್ದ.
ನಂತರ ಯಾರ ಗಮನಕ್ಕೂ ತರದೆ ಮೃತದೇಹವನ್ನು ಹೂತು ಹಾಕಿದ್ದ ಎನ್ನಲಾಗಿದೆ.
ಮೃತ ಹಾಜಿರಾಬಾನು ಮಕ್ಕಳು ಚಾಮರಾಜನಗರದಲ್ಲಿರುವ ತಮ್ಮ ತಾತನ ಮನೆಗೆ ಬಂದಿದ್ದಾಗ ತಾಯಿಯನ್ನು ಕೊಲೆ ಮಾಡಿ ಹೂತಿಟ್ಟಿರುವ ಬಗ್ಗೆ ತಿಳಿಸಿದ್ದಾರೆ.
ಈ ಸಂಬಂಧ ಹಾಜಿರಾಬಾನು ಪೋಷಕರು ಚಾಮರಾಜನಗರ ಪೂರ್ವ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೂತಿಟ್ಟ ಶವವನ್ನ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಸಾಗಿಸಿದ್ದಾರೆ.
ಆರೋಪಿ ಅಬ್ದುಲ್ ಹಬೀಬ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಜೊತೆಗೆ ಆರೋಪಿಯ ತಾಯಿ, ಸಹೋದರ, ಸಹೋದರಿಯರು ಸೇರಿದಂತೆ ಒಟ್ಟು 8 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.