ಎನ್ಎಂಪಿಟಿಯಿಂದ ಮಾನವೀಯ ಕಾರ್ಯ ಕುತ್ತಿಗೆಗೆ ಹಗ್ಗ ಬಿಗಿದು ನೋವು ಅನುಭವಿಸುತ್ತಿದ್ದ ಹೋರಿಯ ರಕ್ಷಣೆ..!
ಮಂಗಳೂರು : ಮಂಗಳೂರಿನ ಪಣಂಬೂರಿನ ಆಸುಪಾಸಿನಲ್ಲಿ ಕಳೆದ ಹಲವು ಸಮಯಗಳಿಂದ ಕುತ್ತಿಗೆಗೆ ಹಗ್ಗ ಸಿಲುಕಿಕೊಂಡು ನೋವಿನಿಂದ ಒದ್ದಾಡುತ್ತಾ, ಪರಿಸರದಲ್ಲಿ ಅಡ್ಡಾಡುತ್ತಿದ್ದ ಹೋರಿಯನ್ನು ರಕ್ಷಣೆ ಮಾಡಲಾಗಿದೆ.
ಈ ಹೋರಿ ಜಾನುವಾರು ಕಳ್ಳರಿಂದ ತಪ್ಪಿಸಿಕೊಂಡು ಬಂದಿರಬೇಕೆಂದು ಶಂಕಿಸಲಾಗಿದೆ. ಹಗ್ಗ ಕುತ್ತಿಗೆಗೆ ಬಿಗಿದ ಸ್ಥಿತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಬೃಹತ್ ಹೋರಿಯೊಂದನ್ನು ನವಮಂಗಳೂರು ಬಂದರಿನ ಅಗ್ನಿಶಾಮಕ ದಳ ರಕ್ಷಿಸಿದೆ.
ಹಗ್ಗವನ್ನು ಸಿಬ್ಬಂದಿಗಳು ತುಂಡರಿಸಿ ಹೋರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಿಟ್ಟುಬಿಡಲಾಗಿದೆ. ನೈಲನ್ ಹಗ್ಗ ಬಿಗಿದ ಕಾರಣ ಗಾಯವಾಗಿ ರಕ್ತ ಬರುತ್ತಿತ್ತು. ಎನ್ ಎಂಪಿಟಿ ಡಾಕ್ ಯಾರ್ಡ್ ಲ್ಲಿ ನರಳುತ್ತಿದ್ದ ಸಂದರ್ಭ ಅಗ್ನಿಶಾಮಕ ವಿಭಾಗದ ರಕ್ಷಕರು ಹೋರಿಯನ್ನು ಹಿಡಿದು ಹಗ್ಗ ಬಿಡಿಸಿದ್ದಾರೆ.
ವಿವಿಧ ಪ್ರಾಣಿ ರಕ್ಷಣಾ ಸಂಘ ಈ ಹೋರಿಯ ರಕ್ಷಣೆಗೆ ಧಾವಿಸಿದರೂ ಬಲಾಢ್ಯ ಹೋರಿ ತಪ್ಪಿಕೊಳ್ಳುತ್ತಲೇ ಇತ್ತು. ಪಣಂಬೂರು ಪ್ರದೇಶದಲ್ಲಿ ಹುಲ್ಲುಗಾವಲಿನಂತಹ ಸ್ಥಳವಿದ್ದು ಬಂದರು, ಕುದುರೆಮುಖ ಸಹಿತ ಬೀಡಾಡಿ ದನ, ಹೋರಿ, ಎಮ್ಮೆಗಳು ನೂರಾರು ಸಂಖ್ಯೆಯಲ್ಲಿವೆ.
ಇದನ್ನು ಮಾಂಸಕ್ಕಾಗಿ ಅಕ್ರಮವಾಗಿ ರಾತ್ರೋರಾತ್ರಿ ಭೇಟೆಯಾಡಿ ಹಣ ಮಾಡುವ ದಂಧೆ ನಡೆಯುತ್ತಿದೆ. ಆಸುಪಾಸಿನಲ್ಲಿ ಜಾನುವಾರು ಕಳ್ಳರು ತುಂಬಿದ್ದು, ಅವರಿಂದ ತಪ್ಪಿಸಿಕೊಂಡು ಈ ಹೋರಿ ಬಂದಿರುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗಿದೆ.