KADABA
ಉಪ್ಪಿನಂಗಡಿಯಲ್ಲಿ ರಾಶಿ ರಾಶಿ ತ್ಯಾಜ್ಯ: ವೃತ್ತನಿರೀಕ್ಷಕರಿಗೆ ಪತ್ರ
ಉಪ್ಪಿನಂಗಡಿ: ಇಲ್ಲಿನ ನೆಲ್ಯಾಡಿ ಸಮೀಪದ ಮಂಗಳೂರು -ಬೆಂಗಳೂರು ರಾಷ್ಟೀಯ ಹೆದ್ದಾರಿಯ ಗೊಳಿತೊಟ್ಟು ಎಂಬ ಪ್ರದೇಶದಲ್ಲಿ ಕಸದ ರಾಶಿಗಳೇ ಕಂಡುಬರುತ್ತಿದ್ದು, ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಕಾಡುವ ಭೀತಿ ಎದುರಾಗಿದೆ.
ಈ ಬಗ್ಗೆ ಉಪ್ಪಿನಂಗಡಿ ವಲಯ ವೃತ್ತನಿರೀಕ್ಷಕರಿಗೆ ಪತ್ರ ಬರೆದ ಸ್ಥಳೀಯ ಪಂಚಾಯತ್ ರಾಷ್ಟ್ರೀಯ ಅಕ್ಕಪಕ್ಕ ಗ್ರಾಮಪಂಚಾಯತ್ನ ಒಳರಸ್ತೆಗಳಲ್ಲಿ ತ್ಯಾಜ್ಯ ವಸ್ತು ಹಾಗೂ ಪಾರ್ಸೆಲ್ ಬಾಕ್ಸ್ ಅನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಕೆಎ 52 ಎ 3802 ವಾಹನವು ತ್ಯಾಜ್ಯ ಬಿಸಾಡುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದೆ.
ಮೀನಿನ ವ್ಯಾಪಾರಕ್ಕೆ ಬಳಸುವ ಪ್ಲಾಸ್ಟಿಕ್ ಹಾಗೂ ಥರ್ಮಾಕೋಲ್ ಬಾಕ್ಸಗಳನ್ನೂ ರಸ್ತೆಯಲ್ಲಿ ಎಸೆದು ಪರಿಸರಕ್ಕೆ ಹಾನಿಯುಂಟು ಮಾಡಲಾಗುತ್ತಿದೆ. ಗೋಳಿತೊಟ್ಟು, ಪೆರಿಯಶಾಂತಿ ಸೇರಿದಂತೆ ಐದಾರು ಕಡೆಗಳಲ್ಲಿ ರಾಶಿ ರಾಶಿ ಕಸ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ. ಸಮಸ್ಯೆಯ ಬಗ್ಗೆ ಗೋಳಿತೊಟ್ಟು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಆಕ್ರೋಶ ವ್ಯಕ್ತಪಡಿಸಿದ್ದು, ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.
DAKSHINA KANNADA
ತಾಯ್ನಾಡಿಗೆ ಬಂದು ಸೇರಿದ ಕಡಬದ ಚಂದ್ರಶೇಖರ್ – ಮಗನ ಕಂಡು ತುಂಬಿ ತುಲುಕಿದ ತಾಯಿಯ ಕಣ್ಣಾಲಿ
ಮಂಗಳೂರು: ದುರುದ್ದೇಶಪೂರ್ವಕವಾಗಿ ತನ್ನನ್ನು ಸಿಲುಕಿಸಿ ಹಾಕಲಾದ ಪ್ರಕರಣದಲ್ಲಿ ಸೌದಿ ಅರೇಬಿಯಾದಲ್ಲಿ ಜೈಲು ಪಾಲಾಗಿ ಕೊನೆಗೂ ಬಿಡುಗಡೆಯಾಗಿ ತಾಯ್ನಾಡಿಗೆ ಮರಳಿ ಬಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನಿವಾಸಿ ಚಂದ್ರಶೇಖರ್ಗೆ ಮನೆ ಮಂದಿ ಖುಷಿಯಿಂದ ಸ್ವಾಗತಿಸಿದರು.
ರಿಯಾದ್ ನಿಂದ ಮುಂಬೈಗೆ ಬಂದು ಅಲ್ಲಿಂದ ಮಂಗಳೂರಿಗೆ ಆಗಮಿಸಿದ ಚಂದ್ರಶೇಖರ್ ತಾನು ಮಾಡದ ತಪ್ಪಿಗೆ 11 ತಿಂಗಳಿನಿಂದ ಸೌದಿ ಜೈಲಿನಲ್ಲಿ ಬಂಧಿಯಾಗಿದ್ದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೊರ ಬರುತ್ತಲೇ ಚಂದ್ರು ಭಾವುಕರಾಗಿದ್ದರು.
ಮಗನನ್ನು ಅಪ್ಪಿ ಹಿಡಿದು ಆನಂದ ಭಾಷ್ಪ ಸುರಿಸಿದ ತಾಯಿ ಹೇಮಾವತಿಯನ್ನು ಕಂಡ ಅಲ್ಲಿದ್ದವರ ಕಣ್ಣಾಲಿಗಳಲ್ಲಿಯೂ ನೀರು ತುಂಬಿಕೊಂಡಿತ್ತು.
ಸೌದಿ ಅರೇಬಿಯಾದಲ್ಲಿದ್ದ ವೇಳೆ ಸಿಮ್ ಖರೀದಿಸಲು ಹೋಗಿದ್ದ ಚಂದ್ರು ಬ್ಯಾಂಕ್ ಖಾತೆ ಹ್ಯಾಕ್ ಆಗಿತ್ತು. ಹ್ಯಾಕ್ ಆದ ಖಾತೆಗೆ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ಹಣ ಜಮೆಯಾಗಿತ್ತು. ಯಾರೋ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ಇದನ್ನು ಚಂದ್ರಶೇಖರ್ ಅವರ ತಲೆಗೆ ಕಟ್ಟಲಾಗಿತ್ತು.
ವಂಚನೆ ಪ್ರಕರಣ ಎಸಗಿದ್ದಾರೆ ಎಂದು ಆರೋಪಿಸಿ ಚಂದ್ರಶೇಖರ್ ಅವರನ್ನು ಸೌದಿ ಅರೇಬಿಯಾದ ಪೊಲೀಸರು ಬಂಧಿಸಿದ್ದರು. ಬಳಿಕ ಅವರು ಜೈಲು ಪಾಲಾಗಿದ್ದರು. ಭಾರತೀಯ ವಿದೇಶಾಂಗ ಇಲಾಖೆ ಸೇರಿದಂತೆ ಹಲವರ ಪ್ರಯತ್ನದಿಂದ ಜೈಲಿನಿಂದ ಬಿಡುಗಡೆಯಾಗಿ ಬಂದು ಇದೀಗ ಮರಳಿ ಅವರು ತಾಯ್ನಾಡಿಗೆ ಬಂದಿದ್ದಾರೆ.
DAKSHINA KANNADA
ಕಡಬದಲ್ಲಿ ಮಸೀದಿಗೆ ಕನ್ನ ಹಾಕಿದ ಕಳ್ಳರು..!
ಕಡಬ: ಕಡಬ ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ದರ್ಗಾದ ಬಾಗಿಲಿನ ಬೀಗ ಮುರಿದಿರುವ ಕಳ್ಳರು ಒಳಗಿದ್ದ ಹಣವನ್ನು ಕದ್ದು, ಪರಾರಿಯಾಗಿರುವ ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಸೋಮವಾರ ತಡರಾತ್ರಿ ಸುಮಾರು 2.20ರ ವೇಳೆಗೆ ಇಬ್ಬರು ಕಳ್ಳರು ಬಾಗಿಲಿನ ಬೀಗ ಮುರಿದು ಒಳ ನುಗ್ಗಿ ಹಣವನ್ನು ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ ವರ್ಷ ಕೂಡಾ ಇಲ್ಲಿನ ಬಾಗಿಲನ್ನು ಮುರಿದು ಕಳ್ಳತನ ಮಾಡಲಾಗಿದ್ದು, ಇದುವರೆಗೂ ಕಳ್ಳರ ಪತ್ತೆಯಾಗಿಲ್ಲ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
DAKSHINA KANNADA
ಸೌದಿಯ ಜೈಲಿನಲ್ಲಿದ್ದ ಕಡಬದ ಚಂದ್ರಶೇಖರ್ ಬಂಧಮುಕ್ತ – ಇಂದು ಮಂಗಳೂರಿಗೆ ಆಗಮಿಸುವ ನಿರೀಕ್ಷೆ
ಕಡಬ: ಬ್ಯಾಂಕ್ ಖಾತೆ ಹ್ಯಾಕರ್ಗಳ ಸುಳಿಗೆ ಸಿಲುಕಿ ವಂಚನೆ ಆರೋಪಕ್ಕೆ ಒಳಗಾಗಿ ಕಳೆದ 11 ತಿಂಗಳುಗಳಿಂದ ಸೌದಿ ಅರೇಬಿಯಾದ ರಿಯಾದ್ನ ಜೈಲಿನಲ್ಲಿ ಬಂಧಿಯಾಗಿದ್ದ ಕಡಬ ತಾಲೂಕು ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್ ಬಂಧಮುಕ್ತನಾಗಿದ್ದು, ಇಂದು ಸ್ವದೇಶಕ್ಕೆ ಆಗಮಿಸುವ ನಿರೀಕ್ಷೆ ಇದೆ.
ರಿಯಾದ್ ನ ಪೊಲೀಸರು ಚಂದ್ರಶೇಖರ್ ಅವರನ್ನು ವಿಮಾನದಲ್ಲಿ ಮುಂಬಯಿಗೆ ಕಳುಹಿಸಿಕೊಡಲಿದ್ದು, ಅಲ್ಲಿಂದ ಅವರು ಸಂಜೆ ವಿಮಾನದಲ್ಲಿ ಮಂಗಳೂರಿಗೆ ಪ್ರಯಾಣಿಸಲಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಅಲ್ಪಾನರ್ ಸೆರಾಮಿಕ್ಸ್ ಎಂಬ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಕೆಲಸದಲ್ಲಿ ಪದೋನ್ನತಿ ಪಡೆದು 2022ರಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ್ದರು. 2022ರ ನವೆಂಬರ್ನಲ್ಲಿ ಮೊಬೈಲ್ ಮತ್ತು ಸಿಮ್ ಖರೀದಿಗೆ ರಿಯಾದ್ನ ಅಂಗಡಿಗೆ ಭೇಟಿ ನೀಡಿ ಅರ್ಜಿಯೊಂದಕ್ಕೆ ಎರಡು ಬಾರಿ ಹೆಬ್ಬೆಟ್ಟು ಸಹಿ ನೀಡಿದ್ದರು. ವಾರದ ಬಳಿಕ ಅವರಿಗೆ ಅರೇಬಿಕ್ ಭಾಷೆಯಲ್ಲಿ ಹೊಸ ದೂರವಾಣಿ ಸಂಖ್ಯೆಗೆ ಸಂದೇಶ ಬಂದಿತ್ತು. ಅದನ್ನು ತೆರೆದು ಚಂದ್ರಶೇಖರ್ ನೋಡಿದ್ದರು. 2 ದಿನಗಳ ಬಳಿಕ ದೂರವಾಣಿ ಕರೆ ಬಂದು ಸಿಮ್ನ ಬಗ್ಗೆ ಮಾಹಿತಿ ಕೇಳಲಾಗಿತ್ತು. ಒಟಿಪಿ ತಿಳಿಸಿದ್ದರು. ವಾರದ ಬಳಿಕ ಅಲ್ಲಿನ ಪೊಲೀಸರು ಬಂದು ಚಂದ್ರಶೇಖರ್ ಅವರನ್ನು ಬಂಧಿಸಿದ್ದರು.
ಚಂದ್ರಶೇಖರ್ಗೆ ತಿಳಿಯದಂತೆ ಅಲ್ಲಿನ ಬ್ಯಾಂಕೊಂದರಲ್ಲಿ ಅವರದೇ ಹೆಸರಿನಲ್ಲಿ ಹ್ಯಾಕರ್ಗಳು ಖಾತೆ ತೆರೆದಿದ್ದರು. ಅಲ್ಲಿನ ಮಹಿಳೆಯೊಬ್ಬರ ಖಾತೆಯಿಂದ ಚಂದ್ರಶೇಖರ್ ಖಾತೆಗೆ 22 ಸಾವಿರ ಸೌದಿ ರಿಯಾಲ್ ಜಮೆಯಾಗಿ, ಅದರಿಂದ ಕೂಡಲೇ ಬೇರೆ ಯಾವುದೋ ದೇಶಕ್ಕೆ ಆ ಹಣ ವರ್ಗಾವಣೆಯಾಗಿತ್ತು. ಹಣ ಕಳೆದುಕೊಂಡ ಮಹಿಳೆಯು ಚಂದ್ರ ಶೇಖರ್ ಅವರ ಖಾತೆಗೆ ಹಣ ಜಮೆಯಾಗಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಚಂದ್ರಶೇಖರ್ ಬಂಧನವಾಗಿರುವ ಬಗ್ಗೆ ಅವರ ಗೆಳೆಯರು ಮನೆಮಂದಿಗೆ ಮಾಹಿತಿ ನೀಡಿದ್ದರು.
ಜೈಲಿನಲ್ಲಿ ಇರುವ ವೇಳೆ ದಿನದಲ್ಲಿ ಕೇವಲ 2 ನಿಮಿಷ ಮಾತ್ರ ದೂರವಾಣಿ ಕರೆ ಮಾಡಲು ಚಂದ್ರಶೇಖರ್ ಅವರಿಗೆ ಅವಕಾಶ ನೀಡಲಾಗಿತ್ತು. ಅಲ್ಲಿನ ಸ್ನೇಹಿತರಿಗೂ ಅವರನ್ನು ಭೇಟಿಯಾಗಲು ಅವಕಾಶ ಇರಲಿಲ್ಲ. ಐತ್ತೂರು ಗ್ರಾಮದ ಮೂಜೂರು ನಿವಾಸಿ ದಿ| ಕೆಂಚಪ್ಪ ಗೌಡ – ಹೇಮಾವತಿ ದಂಪತಿಯ ಕೊನೆಯ ಪುತ್ರ ಚಂದ್ರ ಶೇಖರ್ ಅವರಿಗೆ ಜನವರಿಯಲ್ಲಿ ಊರಿನಲ್ಲಿ ಮದುವೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಮದುವೆಯ ದಿನಾಂಕವೂ ಅಂತಿಮವಾಗಿತ್ತು. ಆ ಸಿದ್ಧತೆ ಯಲ್ಲಿ ಇರುವಾಗಲೇ ಅವರ ಬಂಧನವಾಗಿತ್ತು. ಚಂದ್ರಶೇಖರ್ ಅವರ ಸ್ನೇಹಿತರು 10 ಲಕ್ಷ ರೂಪಾಯಿ ಸಂಗ್ರಹಿಸಿ ಅಲ್ಲಿನ ವಕೀಲರಿಗೆ ನೀಡಿದ್ದರು. ಹಣ ಕಳೆದುಕೊಂಡ ಮಹಿಳೆಗೆ ಸುಮಾರು 6 ಲಕ್ಷ ರೂ. ಹಣವನ್ನು ಪಾವತಿಸಲಾಗಿತ್ತು. ಆದರೂ ಬಿಡುಗಡೆ ಸಾಧ್ಯವಾಗಿರಲಿಲ್ಲ, ಮಾಧ್ಯಮ ವರದಿಯ ಬಳಿಕ ಅಲ್ಲಿನ ಕಂಪೆನಿ ಎಚ್ಚೆತ್ತುಕೊಂಡು ನಿರಪರಾಧಿ ಚಂದ್ರಶೇಖರ್ ಅವರ ಬಿಡುಗಡೆಗೆ ಸಹಕರಿಸಿತ್ತು. ಚಂದ್ರಶೇಖರ್ ಬಿಡುಗಡೆಗೆ ಮಡಿಕೇರಿಯ ಬಿ.ಆರ್.ಅರುಣ್ಕುಮಾರ್ ಮತ್ತು ಮಂಗಳೂರಿನ ಕಬೀರ್ ನಿರಂತರವಾಗಿ ಪ್ರಯತ್ನಿಸಿದ್ದರು.