ಭಾರತೀಯ ಸೇನೆ ಮತ್ತು ಚೀನಾ ಸೇನೆಯಿಂದ ಗಾಲ್ವನ್ ಕಣಿವೆ ಸಂಘರ್ಷ ಪ್ರಕರಣ..!
ಬೀಜಿಂಗ್: ಇದೇ ಮೊದಲ ಬಾರಿಗೆ ಪೂರ್ವ ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಭಾರತೀಯ ಸೇನೆಯೊಂದಿಗೆ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ ಎಂಬುದನ್ನು ಒಪ್ಪಿಕೊಂಡಿರುವ ಚೀನಾ ಈಗ ಸಂಘರ್ಷಕ್ಕೆ ಸಂಬಂಧಪಟ್ಟಂತೆ ವಿಡಿಯೊ ಬಿಡುಗಡೆ ಮಾಡಿದೆ.
ಚೀನಾದ ಸ್ಟೇಟ್ ಮೀಡಿಯಾ ಈ ಕುರಿತು ಟ್ವೀಟ್ ಮಾಡಿದ್ದು, ಗಾಲ್ವನ್ ಕಣಿವೆಯಲ್ಲಿ ಭಾರತೀಯ ಯೋಧರ ವಿರುದ್ಧ ಎನ್ನಲಾದ ಸಂಘರ್ಷದ ದೃಶ್ಯಗಳನ್ನು ಬಿಡುಗಡೆ ಮಾಡಿದೆ.
ಚೀನಾದ ಸ್ಟೇಟ್ ಮೀಡಿಯಾ ಮಾಡಿದ ವರದಿಯಲ್ಲಿ, ಭಾರತೀಯ ಪಡೆ ಚೀನಾ ನೆಲೆಗೆ ಅತಿಕ್ರಮಿಸಿದೆ ಎಂದು ಆರೋಪಿಸಿದೆ. ವಿಡಿಯೊದಲ್ಲಿ ಎರಡು ಕಡೆಯ ಸೈನಿಕರ ಪಡೆ ಕೊರೆಯುವ ಚಳಿಯಲ್ಲೂ ನದಿಯನ್ನು ದಾಟಿ ಕಲ್ಲಿನ ದಂಡೆಯಲ್ಲಿ ಸಂಘರ್ಷಕ್ಕಿಳಿಯುತ್ತಾರೆ.
ಈ ಕಾವೇರಿದ ಕ್ಷಣದಲ್ಲಿ ಹಿಂದಕ್ಕೆ ಚದುರಿಸಲು ಒಬ್ಬರನ್ನೊಬ್ಬರು ತಳ್ಳುತ್ತಿದ್ದಾರೆ.ರಾತ್ರಿ ವೇಳೆಗೆ ಸೈನಿಕರು ಬಂಡೆಯ ಅಂಚಿನಲ್ಲಿ ಫ್ಲ್ಯಾಶ್ಲೈಟ್, ದಂಡ ಹಾಗೂ ಶೀಲ್ಡ್ ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಾ ಸಂಘರ್ಷಕ್ಕಿಳಿಯುತ್ತಾರೆ.
ಮಗದೊಂದು ಟ್ವೀಟ್ನಲ್ಲಿ ಸಂಘರ್ಷದ ಸಮಯದಲ್ಲಿ ಯೋಧರ ನಡುವಣ ಮಾತಿನ ಚಕಮಕಿಯ ವಿಡಿಯೊವನ್ನು ಬಿಡುಗಡೆ ಮಾಡಿದೆ.ಕಳೆದ ವರ್ಷ ಜೂನ್ ತಿಂಗಳಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು.
ಇದು ಕಳೆದ ನಾಲ್ಕು ದಶಕಗಳಲ್ಲಿ ಭಾರತ ಹಾಗೂ ಚೀನಾ ನಡುವೆ ನಡೆದ ಅತ್ಯಂತ ಹಿಂಸಾತ್ಮಕವಾದ ಮುಖಾಮುಖಿಯಾಗಿತ್ತು. ಪ್ರತಿದಾಳಿಯಲ್ಲಿ ಚೀನಾದ 43 ಸೈನಿಕರನ್ನು ಹತ್ಯೆಗೈಯಲಾಗಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿತ್ತು. ಇದನ್ನು ಚೀನಾ ನಿರಾಕರಿಸಿತ್ತು.