ಕಡಬ: ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಸಂದರ್ಭದಲ್ಲಿ ಕುಸಿದು ಬಿದ್ದು ಹುತಾತ್ಮರಾದ ಕುಟ್ರುಪ್ಪಾಡಿ ಗ್ರಾಮದ ಹಳ್ಳಿ ನಿವಾಸಿ ನಿವೃತ್ತ ಯೋಧ ಗಂಗಾಧರ ಗೌಡರ ಪಾರ್ಥೀವ ಶರೀರದ ಅಂತಿಮ ಯಾತ್ರೆ ಕಡಬ ಪೇಟೆಯಲ್ಲಿ ನಿನ್ನೆ ಸಂಜೆ ನಡೆಯಿತು.
ಧ್ವಜಾರೋಹಣ ಮಾಡಲು ಸಿದ್ಧತೆ ಮಾಡುತ್ತಿದ್ದಾಗ ಇವರು ಕುಸಿದು ಬಿದ್ದ ಗಂಗಾಧರ ಗೌಡರನ್ನು ಆಸ್ಪತ್ರೆಗೆ ಸಾಗಿಸುವ ರಸ್ತೆ ಮಧ್ಯೆಯೇ ಮೃತಪಟ್ಟಿದ್ದರು.
ಬಳಿಕ ಮೃತದೇಹವನ್ನು ಪುತ್ತೂರಿಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಒಳಪಡಿಸಿಲಾಗಿತ್ತು. ಸಂಜೆ ಮೃತದೇಹ ಕಡಬಕ್ಕೆ ಆಗಮಿಸುತ್ತಿದ್ದಂತೆ ಕಡಬ ತಹಶಿಲ್ದಾರ್ ಕಛೇರಿ ಬಳಿ ಭಾರೀ ಜನಸ್ತೋಮ ಸೇರಿತ್ತು. ಆರಂಭದಲ್ಲಿ ಕಡಬ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಜೆ.ಪಿ.ಎಂ.ಚೆರಿಯನ್ ಅವರ ನೇತೃತ್ವದಲ್ಲಿ ಅಂತಿಮ ಗೌರವ ಸಲ್ಲಿಸಲಾಯಿತು.
ಬಳಿಕ ವಿವಿಧ ಗಣ್ಯರು ಅಂತಿಮ ದರ್ಶನ ಪಡೆದರು. ಬಳಿಕ ನೂರಾರು ವಾಹನಗಳೊಂದಿಗೆ ಕಡಬ ಪೇಟೆಯಾಧ್ಯಂತ ಅಂತಿಮ ಯಾತ್ರೆ ನಡೆಯಿತು.
ಮೃತರ ಅಂತ್ಯಕ್ರಿಯೆಯನ್ನು ಅವರ ಕುಟ್ರುಪ್ಪಾಡಿ ಗ್ರಾಮದ ಹಳ್ಳಿ ಮನೆಯಲ್ಲಿ ಗೌಡ ಸಂಪ್ರದಾಯದ ವಿಧಿವಿಧಾನದಂತೆ ನೆರವೇರಿಸಲಾಯಿತು.