LATEST NEWS
ಪ್ರಮೋದ್ ಮಧ್ವರಾಜ್ ಕಂಪನಿ ವಿರುದ್ಧ ಪಿಐಎಲ್ ಸಲ್ಲಿಸಿದ್ದ ಅರ್ಜಿದಾರರಿಗೆ 10 ಲಕ್ಷ ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು: ಉಡುಪಿಯ ‘ರಾಜ್ ಫಿಶ್ ಮೀಲ್ ಅಂಡ್ ಆಯಿಲ್ ಕಂಪನಿ’ಯು ಸತ್ತ ಮೀನುಗಳು ಮತ್ತು ತ್ಯಾಜ್ಯವನ್ನು ಉಡುಪಿಯ ಮಲ್ಪೆಯಲ್ಲಿ ನದಿ ಮತ್ತು ಸಮುದ್ರಕ್ಕೆ ಹರಿಬಿಡುತ್ತದೆ. ಈ ಮೂಲಕ ಪರಿಸರ ಮಾಲಿನ್ಯ ಉಂಟು ಮಾಡುತ್ತಿದೆ.
ಹೀಗಾಗಿ ಕಂಪನಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಉದ್ಯಮಿಗೆ ಹೈಕೋರ್ಟ್ ಬರೋಬ್ಬರಿ 10 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಕಾಂಗ್ರೆಸ್ ಮುಖಂಡ ಪ್ರಮೋದ್ ಮಧ್ವರಾಜ್ ಪಾಲುದಾರರಾಗಿರುವ ರಾಜ್ ಫಿಶ್ ಮೀಲ್ ವಿರುದ್ಧ ಆರೋಪ ಮಾಡಿ ಉದ್ಯಮಿ ಪ್ರಶಾಂತ್ ಅಮಿನ್ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಬಳಿಕ ಅರ್ಜಿ ವಜಾಗೊಳಿಸಿ, ಅರ್ಜಿ ಸಲ್ಲಿಸಿದ್ದ ಉದ್ಯಮಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿತು. ದಂಡದ ಮೊತ್ತವನ್ನು ಒಂದು ತಿಂಗಳಲ್ಲಿ ಪಾವತಿಸಬೇಕು.
ದಂಡ ಪಾವತಿಸದಿದ್ದರೆ ಉಡುಪಿ ಜಿಲ್ಲಾಧಿಕಾರಿ ವಸೂಲಿ ಮಾಡಬೇಕು. ದಂಡದ ಮೊತ್ತವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರ ಗುಮಾಸ್ತರಿಗೆ ನೆರವು ನೀಡಲು ಕರ್ನಾಟಕ ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ಜಮೆ ಮಾಡಬೇಕು ಎಂದು ಪೀಠ ಆದೇಶಿಸಿತು.
ಪೀಠ ತನ್ನ ಆದೇಶದಲ್ಲಿ, ಅರ್ಜಿದಾರರಾದ ಪ್ರಶಾಂತ್ ಅಮಿನ್ ಮಲ್ಪೆಯ ರಾಜ್ ಫಿಶ್ ಮೀಲ್ ಅಂಡ್ ಆಯಿಲ್ ಕಂಪನಿ ಜೊತೆ ವ್ಯವಹಾರ ನಡೆಸಿದ್ದಾರೆ.
ಈ ಹಿಂದೆ ಕಂಪನಿಗೆ ಪ್ರಶಾಂತ್ ಮೀನು ಪೂರೈಸುತ್ತಿದ್ದರು. 2013-2021ರ ಅವಧಿಯಲ್ಲಿ ಕಂಪನಿಯು ಅರ್ಜಿದಾರರಿಗೆ 95 ಕೋಟಿಗೂ ಅಧಿಕ ಹಣವನ್ನು ವ್ಯವಹಾರ ನಿಮಿತ್ತ ಪಾವತಿಸಿದೆ.
ಆದರೆ, ಕಂಪೆನಿ ಮತ್ತು ಅರ್ಜಿದಾರರ ನಡುವೆ ಒಪ್ಪಂದ ಮುರಿದ ಬಿದ್ದ ಬಳಿಕ ರಾಜ್ ಫಿಶ್ ಮೀಲ್ ಸಾವನ್ನಪ್ಪಿದ ಮೀನು ಮತ್ತು ತ್ಯಾಜ್ಯವನ್ನು ನದಿಗೆ ಹರಿಬಿಡುತ್ತಿದೆ ಎಂದು ಆರೋಪಿಸಿದ್ದಾರೆ.
ಪರಿಸರಕ್ಕೆ ಹಾನಿ ಉಂಟು ಮಾಡಿದ ಆರೋಪ ಮಾಡಿದ್ದಾರೆ.
ಪಿಐಎಲ್ ಅರ್ಜಿ ವಿಚಾರಣೆ ವೇಳೆ ಆಕ್ಷೇಪಣೆ ಸಲ್ಲಿಸಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ ಫಿಶ್ ಮೀಲ್ ಕಂಪೆನಿ ವಿರುದ್ಧ ಯಾವುದೇ ಆಪಾದನೆ ಮಾಡಿಲ್ಲ.
ಇವೆಲ್ಲವನ್ನು ಗಮನಿಸಿದರೆ ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ.
ಬದಲಿಗೆ ವ್ಯಾಪಾರ ಮತ್ತು ವೈಯಕ್ತಿಕ ಹಿತಾಸಕ್ತಿ ಇದೆ. ಕಂಪೆನಿ ಜೊತೆ ವ್ಯವಹಾರ ಹೊಂದಿದ್ದ ವಿಚಾರವನ್ನು ಅರ್ಜಿದಾರರೂ ನಿರಾಕರಿಸಿಲ್ಲ.
ಆದರೆ, ಆ ಅಂಶವನ್ನೇ ಅರ್ಜಿಯಲ್ಲಿ ಮರೆಮಾಚಿದ್ದಾರೆ.
ಇದು ಕಾನೂನು ಪ್ರಕ್ರಿಯೆ ಸ್ಪಷ್ಟ ದುರ್ಬಳಕೆ.
ಹೀಗಾಗಿ ಅರ್ಜಿಯು ದಂಡ ವಿಧಿಸಿ ವಜಾಗೊಳಿಸುವುದಕ್ಕೆ ಅರ್ಹವಾಗಿದೆ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾ ಮಾಡಿ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.
LATEST NEWS
ಉಡುಪಿ : ಅಂಬಾಗಿಲಿನಲ್ಲಿ ಬೈಕ್ – ಟಿಪ್ಪರ್ ನಡುವೆ ಭೀಕರ ಅಪಘಾ*ತ; ಬೈಕ್ ಸವಾರ ಸಾ*ವು
ಉಡುಪಿ : ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾ*ವನ್ನಪ್ಪಿದ ಘಟನೆ ಉಡುಪಿಯ ಅಂಬಾಗಿಲಿನಲ್ಲಿ ನಡೆದಿದೆ. ಅಂಬಾಗಿಲು – ಉಡುಪಿ ಮುಖ್ಯ ರಸ್ತೆಯಲ್ಲಿ ಈ ದುರಂ*ತ ಸಂಭವಿಸಿದೆ.
ಬ್ರಹ್ಮಾವರ ಮಟಪಾಡಿ ಮೂಲದ ಪ್ರಭಾಕರ ಆಚಾರಿ ಮೃ*ತ ದುರ್ದೈವಿ. ಪ್ರಭಾಕರ ಅವರು ಪೆರಂಪಳ್ಳಿ ಕಡೆಯಿಂದ ಅಂಬಾಗಿಲು ಮುಖ್ಯರಸ್ತೆಗೆ ಬರುತ್ತಿದ್ದರು ಎನ್ನಲಾಗಿದೆ. ಅಪಘಾ*ತದ ರಭಸಕ್ಕೆ ಟಿಪ್ಪರ್ ನ ಅಡಿ ಭಾಗಕ್ಕೆ ಬೈಕ್ ಗುದ್ದಿದೆ.
ಇದನ್ನೂ ಓದಿ : ಉಡುಪಿಯಲ್ಲಿ ಭೀಕರ ಅಪಘಾ*ತ; ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವು
ಸಹಸವಾರ ಗಂಭೀ*ರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
bengaluru
ಹರ್ಷಿಕಾ ಪೂಣಚ್ಚ – ಭುವನ್ ಗೌಡ ದಂಪತಿ ಮೇಲೆ ಹ*ಲ್ಲೆ; ನಾವು ಪಾಕಿಸ್ತಾನದಲ್ಲಿ ಅಥವಾ ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದ್ದೇವೆಯೇ ? ಏಂದು ಕೇಳಿದ ನಟಿ
ಬೆಂಗಳೂರು : ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ಭುವನ್ ಪೊನ್ನಣ್ಣ ದಂಪತಿ ಮೇಲೆ ಹ*ಲ್ಲೆ ನಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪರಿಣಾಮ ಭುವನ್ ಗೆ ಗಾ*ಯವಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹರ್ಷಿಕಾ ಪೂಣಚ್ಚ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಗೆಳೆಯರೇ, ನಮ್ಮ ಬೆಂಗಳೂರಿನಲ್ಲಿ ನಾವು ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನನಗೆ ಮೂಡಿದೆ? ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಗ*ಲಾಟೆಯ ವೀಡಿಯೋವನ್ನೂ ಹರ್ಷಿಕಾ ಹಂಚಿಕೊಂಡಿದ್ದಾರೆ. ಒಂದಷ್ಟು ಯೋಚಿಸಿ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಭ*ಯಾನಕ ಅನುಭವ ಆಗಿದೆ ಎಂದು ಅವರು ಹೇಳಿದ್ದಾರೆ.
ಹರ್ಷಿಕಾ ಬರೆದ ಪೋಸ್ಟ್ ನಲ್ಲಿ ಏನಿದೆ?
ಗೆಳೆಯರೇ ,ನಮ್ಮ ಬೆಂಗಳೂರಿನಲ್ಲಿ ನಾವು ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನನಗೆ ಮೂಡಿದೆ? ನಮಸ್ಕಾರ, ಒಂದಷ್ಟು ಯೋಚಿಸಿ ಕೆಲವು ದಿನಗಳ ಹಿಂದೆ ನಮ್ಮ ಬೆಂಗಳೂರಿನಲ್ಲಿ ನನಗಾದ ಭಯಾನಕ ಅನುಭವವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದೇನೆ.
ನನ್ನ ಸ್ನೇಹಿತರು, ಕುಟುಂಬ ಮತ್ತು ಪೊಲೀಸ್ ಇಲಾಖೆಯಲ್ಲಿನ ಕೆಲವು ಪರಿಚಯಸ್ಥರೊಂದಿಗೆ ಮಾತನಾಡಿದ ನಂತರ ನಾನು ಈ ವಿಷಯವನ್ನು ಅಲ್ಲಿಗೇ ಬಿಟ್ಟು ಬಿಡುತ್ತೇನೆ ಎಂದು ಯೋಚಿಸಿದೆ ಆದರೆ ನನ್ನ ಅನುಭವದಿಂದ ಮತ್ತಿರರಿಗೆ ಸಹಾಯ ವಾಗ ಬಹುದು ಎಂದು ಯೋಚಿಸಿ ನಾನು ಅದರ ಬಗ್ಗೆ ಪೋಸ್ಟ್ ಮಾಡಲು ನಿರ್ಧರಿಸಿದೆ.
ಒಂದೆರಡು ದಿನಗಳ ಹಿಂದೆ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ “ಕರಾಮಾ” ಎಂಬ ರೆಸ್ಟೊರೆಂಟ್ನಲ್ಲಿ ಸಂಜೆ ಕುಟುಂಬದೊಂದಿಗೆ ಊಟ ಮಾಡಲು ತೆರಳಿದ್ದೆ. ಭೋಜನವನ್ನು ಮುಗಿಸಿದ ನಂತರ ನಾವು ವಾಲೆಟ್ ಪಾರ್ಕಿಂಗ್ನಿಂದ ನಮ್ಮ ವಾಹನವನ್ನು ಸ್ವೀಕರಿಸಿ ಹೊರಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಡ್ರೈವರ್ ಸೀಟ್ ಕಿಟಕಿಯ ಬಳಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡು, ನಿಮ್ಮ ವಾಹನವು ತುಂಬಾ ದೊಡ್ಡದಾಗಿದೆ, ಇದ್ದಕ್ಕಿದ್ದಂತೆ ಚಲಿಸಿದಲ್ಲಿ ಅದು ನಮ್ಮನ್ನು ಮುಟ್ಟಬಹುದು ಎಂದು ವಾದಿಸಲು ಪ್ರಾರಂಭಿಸಿದರು.
ನನ್ನ ಪತಿಯ ಚಿನ್ನದ ಸರ ಕಸಿಯಲು ಯತ್ನ :
ನನ್ನ ಪತಿ “ಇನ್ನು ವಾಹನ ಮೂವ್ ಮಾಡಿಲ್ವಲ್ಲ ಸೈಡು ಬಿಡಿ” ಎಂದು ಹೇಳಿದರು. ಏಕೆಂದರೆ ಅವರು ಸಂಭವನೀಯ ಘಟನೆ ಬಗ್ಗೆ ಮಾತನಾಡುತ್ತಿದ್ದು ಅದರಲ್ಲಿ ಅರ್ಥವಿರಲಿಲ್ಲ. ನಾವು ವಾಹನವನ್ನು ಸ್ವಲ್ಪ ಮುಂದಕ್ಕೆ ಸರಿಸಿದೆವು, ಅಷ್ಟರೊಳಗೆ ಈ ಇಬ್ಬರು ವ್ಯಕ್ತಿಗಳು ನಮ್ಮನ್ನು ಅವರ ಭಾಷೆಯಲ್ಲಿ ನಿಂದಿಸಲು ಪ್ರಾರಂಭಿಸಿದರು, ಈ ಲೋಕಲ್ ಕನ್ನಡಿಗರಿಗೆ ಪಾಠ ಕಲಿಸಬೇಕು ಎಂದು ಹೇಳಿ ನನ್ನ ಪತಿಯ ಮುಖದ ಮೇಲೆ ಹೊಡೆಯಲು ಸಹ ಪ್ರಯತ್ನಿಸಿದರು.
ನನ್ನ ಪತಿ ತುಂಬಾ ತಾಳ್ಮೆಯಿಂದಿದ್ದರು ಮತ್ತು ಹೆಚ್ಚು ಪ್ರತಿಕ್ರಿಯಿಸಲಿಲ್ಲ. ನನಗೆ ಆಶ್ಚರ್ಯವಾಯಿತು. ಏಕೆಂದರೆ ಅವರು ಸಾಮಾನ್ಯವಾಗಿ ತುಂಬಾ ಸಿಟ್ಟು ಸ್ವಭಾವದವರು. 2 – 3 ನಿಮಿಷಗಳಲ್ಲಿ ಅದೇ ಗ್ಯಾಂಗ್ನ 20 – 30 ಸದಸ್ಯರ ಗುಂಪು ಜಮಾಯಿಸಿತು ಮತ್ತು ಅವರಲ್ಲಿ 2 ಜನರು ನನ್ನ ಗಂಡನ ಚಿನ್ನದ ಸರವನ್ನು ಕಿತ್ತು, ಅದನ್ನು ಬಹಳ ಕೌಶಲ್ಯದಿಂದ ತಮ್ಮ ಕಡೆಗೆ ಎಳೆಯಲು ಪ್ರಯತ್ನಿಸಿದರು. ನನ್ನ ಪತಿ ಇದನ್ನು ಸಮಯಕ್ಕೆ ಸರಿಯಾಗಿ ಅರಿತುಕೊಂಡರು. ಅದನ್ನು ಹಿಡಿದಿಟ್ಟುಕೊಂಡು ನನಗೆ ಕೊಟ್ಟರು.
ಕನ್ನಡ ಮಾತನಾಡಿದ್ದಕ್ಕೆ ನಿಂದನೆ :
ಅಷ್ಟೊತ್ತಿಗಾಗಲೇ ಇಡೀ ತಂಡವು ಚಿನ್ನದ ಸರ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕೈಗೆ ಸಿಗದೆ ರೊಚ್ಚಿಗೆದ್ದು ವಾಹನಕ್ಕೆ ಹಾನಿ ಮಾಡಿ ನಮಗೆ ಅಥವಾ ಯಾರಿಗೂ ಅರ್ಥವಾಗದ ವಿಷಯಗಳನ್ನು ಹೇಳಿ ನಮ್ಮನ್ನು ದೈಹಿಕವಾಗಿ ನಿಂದಿಸಲು ಪ್ರಯತ್ನಿಸಿದರು. ನಮ್ಮ ವಾಹನದಲ್ಲಿ ಮಹಿಳೆಯರು ಮತ್ತು ಕುಟುಂಬದವರು ಇದ್ದ ಕಾರಣ ನನ್ನ ಪತಿ ಹೆಚ್ಚು ಪ್ರತಿಕ್ರಿಯಿಸಲಿಲ್ಲ.
ಅಲ್ಲದೆ, ನಾನು ಗಮನಿಸಿದ್ದು ಏನೆಂದರೆ ಇವರಿಗೆ ನಾವು ಕನ್ನಡದಲ್ಲಿ ಮಾತನಾಡುತ್ತಿದ್ದೇವೆ ಎಂಬುದು ಸಮಸ್ಯೆ ಆಗಿತ್ತು. ಅವರು ನೀವು ನಮ್ಮ ಪ್ರದೇಶಕ್ಕೆ ಬಂದು ನಿಮಗೆ ಬೇಕಾದ ಭಾಷೆಗಳಲ್ಲಿ ಮಾತನಾಡುವುದನ್ನು ನಿಲ್ಲಿಸಿ. “ಯೇ ಲೋಕಲ್ ಕನ್ನಡ್ ವಾಲಾ ಹೇ” (ಈ ವ್ಯಕ್ತಿಗಳು ಸ್ಥಳೀಯ ಕನ್ನಡ ಜನರು) ನನ್ನ ಗಂಡ ಮತ್ತು ನಾನು ಕನ್ನಡದಲ್ಲಿ ಮಾತ್ರ ಮಾತನಾಡಿದಾಗ ಅದು ಅವರನ್ನು ಹೆಚ್ಚು ಕೆರಳಿಸಿತು.
ನಿಮ್ಮ “ಕನ್ನಡ ಸ್ಟೈಲ್”ಯನ್ನು ನೀವೇ ಇಟ್ಟುಕೊಳ್ಳಿ ಎಂದರು. ಆ ಗುಂಪಿನಲ್ಲಿ ಹೆಚ್ಚಿನವರು ಹಿಂದಿ, ಉರ್ದು ಮತ್ತು ಕೆಲವರು ಮುರಿದ ಕನ್ನಡದಲ್ಲಿ ಮಾತನಾಡುತ್ತಿದ್ದರು.
ಪೊಲೀಸರೂ ಸಹಾಯ ಮಾಡಲಿಲ್ಲ :
ನಾನು ನಮಗೆ ಪರಿಚಯವಿದ್ದ ಒಬ್ಬರು ಇನ್ಸ್ಪೆಕ್ಟರ್ಗೆ ತುರ್ತು ಕರೆ ಮಾಡಿದಾಗ ಅವರೆಲ್ಲರೂ ಏನೂ ಆಗಿಲ್ಲ ಎಂಬಂತೆ ಕೆಲವೇ ಸೆಕೆಂಡುಗಳಲ್ಲಿ ಚದುರಿ ಹೋದರು. ನಾವು ಅವರನ್ನು ಹುಡುಕಲು ಪ್ರಯತ್ನಿಸಿದೆವು. ಆದರೆ ಅವರು ಮಾಯವಾಗಿದ್ದರು. ನಾವು ಸಮೀಪದಲ್ಲಿ ಹತ್ತಿರದ ಪೊಲೀಸ್ ಠಾಣೆಯ ಗಸ್ತು ಪೊಲೀಸ್ ವಾಹನವನ್ನು ಕಂಡು ಘಟನೆಯನ್ನು ASI ಶ್ರೀ ಉಮೇಶ್ ಅವರಿಗೆ ವಿವರಿಸಿದೆವು.
ಅವರು ನಮಗೆ ಸಹಾಯ ಮಾಡಲು ಹೆಚ್ಚು ಆಸಕ್ತಿ ತೋರಲಿಲ್ಲ. ಇಲಾಖೆಯ ಮೇಲಧಿಕಾರಿಗಳ ಜತೆ ಮಾತನಾಡಬೇಕು ಎಂದ ಅವರು, ಬಂದು ಏನಾಯಿತು ಎಂದು ತಿಳಿದುಕೊಳ್ಳುವ ಸೌಜನ್ಯವನ್ನು ತೋರಲಿಲ್ಲ. ಕೇವಲ 2 ಕಟ್ಟಡಗಳ ಮುಂದಿರುವ ರೆಸ್ಟೊರೆಂಟ್ನ ಮುಂದೆ ಮೂಸಂಬಿ ಜ್ಯೂಸ್ ಕುಡಿಯುತ್ತ ಕಾರ್ ನಲ್ಲಿ ಕುಳಿತಿದ್ದರು.
ಈ ಘಟನೆಯ ನಂತರ ನಾನು ಮಾನಸಿಕವಾಗಿ ಸಂಪೂರ್ಣ ಆಘಾತಕ್ಕೊಳಗಾಗಿದ್ದೇನೆ. ನಾನು ಹುಟ್ಟಿ ಬೆಳೆದ ನಗರದಲ್ಲಿ ಹೊರಗೆ ಹೋಗಲು ನನಗೆ ಇನ್ನೂ ಭಯವಾಗುತ್ತಿದೆ. ನನಗೆ ಜೀವನದಲ್ಲಿ ಎಲ್ಲವನ್ನು ಕೊಟ್ಟ ನಗರದಲ್ಲಿ ಇಂತಹ ಅನುಭವ ಆಗಿದ್ದು ಇದೇ ಮೊದಲು. ಇದನ್ನು ಪೊಲೀಸ್ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಗಮನಕ್ಕೆ ತರಲು ಮತ್ತು ಭವಿಷ್ಯದಲ್ಲಿ ಯಾವುದೇ ಮಹಿಳೆ ಅಥವಾ ಕುಟುಂಬಗಳು ಬೆಂಗಳೂರಿನಲ್ಲಿ ಇಂತಹ ಕೆಟ್ಟ ಅನುಭವಕ್ಕೆ ಒಳಗಾಗಬಾರದು ಎಂದು ನಾನು ಇದನ್ನು ಪೋಸ್ಟ್ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ನಾವು ಪಾಕಿಸ್ತಾನದಲ್ಲಿದ್ದೇವಾ?
ಬೆಂಗಳೂರಿನಲ್ಲಿ ಶಾಂತಿಯುತವಾಗಿ ಜೀವನ ನಡೆಸುತ್ತಿರುವ ಜನರೊಂದಿಗೆ ಇಂತಹ ಗ*ಲಾಟೆ ಸೃಷ್ಟಿಸುವ ಹಕ್ಕು ಯಾರಿಗೂ ಇಲ್ಲ! ಇದನ್ನು ಕಣ್ಣೆದುರು ನೋಡುತ್ತಿರುವಾಗ ನನ್ನ ಮನಸ್ಸಿನಲ್ಲಿ ಒಂದೆರಡು ಪ್ರಶ್ನೆಗಳು ಮೂಡಿದವು.
1. ನಾವು ಪಾಕಿಸ್ತಾನದಲ್ಲಿ ಅಥವಾ ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದ್ದೇವೆಯೇ ?
2. ಹಾಗಿದ್ದರೆ ನಾವು ನಮ್ಮ ಊರಿನಲ್ಲಿ ಕನ್ನಡ ಮಾತನಾಡುವುದೇ ತಪ್ಪಾ?
3. ನಮ್ಮ ಸ್ವಂತ ನಗರದಲ್ಲಿ ನಾವು ಎಷ್ಟು ಸುರಕ್ಷಿತವಾಗಿರುತ್ತೇವೆ?
4. ನಮ್ಮ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಇಂತಹ ದೀರ್ಘಾವಧಿಯ ಮಾನಸಿಕ ಆಘಾತಕ್ಕೆ ಕಾರಣವಾಗುವ ಇಂತಹ ಘಟನೆಗಳನ್ನು ಮುಚ್ಚಿ ಹಾಕಬೇಕೆ ?
‘ಕರ್ನಾಟಕದ ಮಾನ್ಯ ಮುಖ್ಯ ಮಂತ್ರಿಗಳು ಹಾಗು ಕರ್ನಾಟಕದ ರಾಜ್ಯ ಪೊಲೀಸ್ ಇಲಾಖೆಯವರು ಈ ಬಗ್ಗೆ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ. ಇಂತಿ , ಹರ್ಷಿಕಾ ಪೂಣಚ್ಚ [ಚಿತ್ರನಟಿ]ಬೆಂಗಳೂರು. (ಈ ಇಡೀ ಘಟನೆಯ ನಡುವೆ ನನ್ನ ಕುಟುಂಬದ ಸದಸ್ಯರು ಚಿತ್ರೀಕರಿಸಿದ ವೀಡಿಯೊವನ್ನು ಪೋಸ್ಟ್ ಮಾಡುತ್ತಿದ್ದೇನೆ. ಅಷ್ಟು ಸ್ಪಷ್ಟವಾಗಿಲ್ಲ ಹಾಗು ಘಟನೆಯ ಮದ್ಯದಿಂದ ಅವರಿಗೆ ತಿಳಿದಷ್ಟು ಚಿತ್ರೀಕರಿಸಿದ್ದಾರೆ) ಎಂದು ಹರ್ಷಿಕಾ ಪೋಸ್ಟ್ ಮಾಡಿದ್ದಾರೆ.
ಇನ್ನು ಈ ಪೋಸ್ಟ್ ಗೆ ಹಲವರು ಕಮೆಂಟ್ಸ್ ಮಾಡಿದ್ದು, ಕಮಿಷನರ್ ಗೆ ಈ ಪೋಸ್ಟ್ ಟ್ಯಾಗ್ ಮಾಡಿ ಎಂದಿದ್ದಾರೆ. ಇನ್ನು ಕೆಲವರು, ಕಾನೂನು ಕ್ರಮ ಕೈಗೊಳ್ಳಿ ಎಂದಿದ್ದಾರೆ. ಇಂತಹ ಹೋಟೆಲ್ ಹಾಗೂ ಸ್ಥಳಗಳಿಗೆ ಭೇಟಿ ನೀಡಬೇಡಿ ಎಂದು ಸಲಹೆ ನೀಡಿದ್ದಾರೆ.
DAKSHINA KANNADA
MANGALURU : ಪೆಟ್ರೋಲ್ ಬಂಕ್ ಸಿಬ್ಬಂದಿ ಎಡವಟ್ಟು; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿ ಅನಾಹುತ
ಮಂಗಳೂರು : ಪೆಟ್ರೋಲ್ ಬಂಕ್ ಸಿಬ್ಬಂದಿ ಎಡವಟ್ಟಿನಿಂದ ಕಾರಿಗೆ ಪೆಟ್ರೋಲ್ ತುಂಬಿಸುವ ಬದಲು ಡೀಸೆಲ್ ತುಂಬಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪರಿಣಾಮ ಕಾರು ಇಂಜಿನ್ ಸಂಪೂರ್ಣ ಹಾಳಾಗಿ ಲಕ್ಷಾಂತರ ರೂ.ನಷ್ಟವಾಗಿದೆ ಎಂದು ಕಾರು ಮಾಲಕ ಆರೋಪಿಸಿದ್ದಾರೆ.
ಹೊಟೇಲ್ ಉದ್ಯಮಿ ಜೀವನ್ ಶೆಟ್ಟಿ ಎಂಬವರು ತಮ್ಮ ಹುಂಡೈ ಐ 10 ಗ್ರ್ಯಾಂಡ್ ಕಾರ್ ಗೆ ಪೆಟ್ರೋಲ್ ತುಂಬಿಸುವ ಸಲುವಾಗಿ, ಎಪ್ರಿಲ್ 5 ರಂದು ಮಧ್ಯಾಹ್ನ 12 ರ ಸುಮಾರಿಗೆ ಬಲ್ಮಠದ ಜ್ಯೂಸ್ ಜಂಕ್ಷನ್ ಮುಂಭಾಗದ ಹೆಚ್ ಪಿ ಪೆಟ್ರೋಲ್ ಬಂಕ್ ಗೆ ಬಂದಿದ್ದರು. ಕ್ಯಾಪ್ ಮೇಲೆ ಪೆಟ್ರೋಲ್ ಎಂದು ಬರೆದಿದ್ದರೂ, ಸಿಬ್ಬಂದಿ ಮಾತ್ರ ಕಾರಿಗೆ ಡೀಸೆಲ್ ತುಂಬಿಸಿದ್ದಾರೆ.
ಪರಿಣಾಮ ಕಾರು ಕೆಲವೇ ಕಿಲೋ ಮೀಟರ್ ಸಂಚರಿಸಿ ಮುಂದಕ್ಕೆ ಹೋಗದೆ ನಿಂತಿದೆ. ಪರಿಶೀಲಿಸಿದಾಗ ಬಂಕ್ ಸಿಬ್ಬಂದಿ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಪೆಟ್ರೋಲ್ ಬಂಕ್ ಮ್ಯಾನೇಜರ್ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾರು ಇಂಜಿನ್ ದುರಸ್ಥಿಗೆ 2 ಲಕ್ಷಕ್ಕೂ ಅಧಿಕ ಖರ್ಚು ಆಗಲಿದೆ. ಆದರೆ, ಪೆಟ್ರೋಲ್ ಬಂಕ್ ಮಾಲಕ ಬರೀ 30 ಸಾವಿರ ಕೊಟ್ಟು ಸುಮ್ಮನಾಗಿದ್ದಾರೆ ಎಂದು ಜೀವನ್ ಶೆಟ್ಟಿ ದೂರಿದ್ದಾರೆ. ಕಡಿಮೆ ಸಂಬಳಕ್ಕೆ ಅನುಭವವಿಲ್ಲದ ಕಾರ್ಮಿಕರನ್ನು ನೇಮಿಸುತ್ತಾರೆ. ಇಂತಹ ಸಮಸ್ಯೆಯಾದಾಗ ತಮ್ಮ ಇನ್ಶೂರೆನ್ಸ್ ನಲ್ಲಿ ಪರಿಹಾರ ನೀಡುವ ಅವಕಾಶವಿದ್ದರೂ ಬಂಕ್ ಮಾಲಕರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ತಾನು ಪರಿಹಾರಕ್ಕಾಗಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗುವುದಾಗಿ ಜೀವನ್ ಶೆಟ್ಟಿ ಹೇಳಿದ್ದಾರೆ.