DAKSHINA KANNADA
ಸುರತ್ಕಲ್ ಫಾಝಿಲ್ ಕೊಲೆಗೆ 2 ದಿನದ ಹಿಂದೆಯೇ Sketch: ಇಯೋನ್ ಕಾರು ನೀಡಿತ್ತು Hint.!
ಮಂಗಳೂರು: ಕರಾವಳಿಯಲ್ಲಿ ಕೋಮು ಸಂಘರ್ಷದ ದಳ್ಳುರಿಗೆ ಪೀಠಿಕೆ ಹಾಕಿದ್ದ ಸುಳ್ಯ ಬೆಳ್ಳಾರೆಯ ಮಸೂದ್, ಪ್ರವೀಣ್ ನೆಟ್ಟಾರು ಮತ್ತು ಸುರತ್ಕಲ್ನ ಫಾಝಿಲ್ ಹತ್ಯೆಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಮಂಗಳೂರು ನಗರ ಪೊಲೀಸರು ಭೇದಿಸಿದ್ದು, ಬಹುತೇಕ ತಾರ್ಕಿಕ ಅಂತ್ಯದತ್ತ ಸಾಗುತ್ತಿದೆ.
ಮಸೂದ್ ಪ್ರಕರಣದಲ್ಲಿ 8 ಆರೋಪಿಗಳು, ಪ್ರವೀಣ್ ಹತ್ಯೆ ಪ್ರಕರಣದಲ್ಲಿ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
ಈ ಮಧ್ಯೆ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮಂಗಳೂರು ನಗರ ಹೊರವಲಯದ ಸುರತ್ಕಲ್ನ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ಆದ್ರೆ ಈ ಫಾಝಿಲ್ ಹತ್ಯೆಗೆ ಎರಡು ದಿನಗಳ ಹಿಂದೆಯೇ ಈ ಕೃತ್ಯಕ್ಕೆ ಪ್ಲ್ಯಾನ್ ನಡೆದಿತ್ತು ಎಂಬುವುದು ಪೊಲಿಸ್ ತನಿಖೆಯಲ್ಲಿ ಧೃಡಪಟ್ಟಿದೆ.
ಜು.26ರಂದೇ ಮರ್ಡರ್ಗೆ ನಡೆದಿತ್ತು ಪ್ಲ್ಯಾನ್
ಜು.26 ರಂದು ಬಜ್ಪೆ ಮೂಲದ ಸುಹಾಸ್ ಶೆಟ್ಟಿ ಎಂಬಾತ ಅಭಿಷೇಕ್ಗೆ ಕರೆ ಮಾಡಿ ನಾಳೆಯೊಳಗೆ (ಜು.27) ಯಾರನ್ನಾದರೂ ಹೊಡೆಯಬೇಕು ಎಂದು ಹೇಳಿದಾಗ ನಾಳೆ ಸಿಗೋಣ ಎಂದು ಹೇಳಿ
ಜು.27 ರಂದು ಸುರತ್ಕಲ್ನ ಖಾಸಗಿ ಹೊಟೇಲ್ನಲ್ಲಿ ಇಬ್ಬರೂ ಸಿಕ್ಕಿದಾಗ ಸುಹಾಸ್ ತನ್ನ ಗೆಳೆಯ ಗಿರಿಧರ್ ಹಾಗೂ ಮೋಹನನ್ನು ಕರೆದು ವೆಪನ್ಗಳು ನನ್ನ ಬಳಿ ಇದೆ ಇದಕ್ಕೊಂದು ಕಾರು ಹಾಗೂ ಹುಡುಗರು ಬೇಕೆಂದು ಮೂವರಲ್ಲಿ ಚರ್ಚೆ ನಡೆಯುತ್ತದೆ.
ಆ ಮೂಲಕ ಮೋಹನ್ ತನ್ನ ಗೆಳೆಯರಾದ ಶ್ರೀನಿವಾಸ್ ಮೂಲಕ ಅಭಿಷೇಕ್ ಮತ್ತು ದೀಕ್ಷಿತ್ನನ್ನು ಗುಂಪಿಗೆ ಸೇರಿಸಿಕೊಳ್ಳುತ್ತಾರೆ. ಅಜಿತ್ ಕ್ರಾಸ್ತಾ ಮೂಲಕ ಕಾರನ್ನು ಮೋಹನ್ ಅರೇಂಜ್ ಮಾಡ್ತಾನೆ.
ಆರೋಪಿ ಸುಹಾಸ್
ಜು.27 ರಂದು ರಾತ್ರಿ ಕೆಲವರ ಹಿಟ್ ಲಿಸ್ಟ್ ರೆಡಿ
ಸುಹಾಸ್ ಶೆಟ್ಟಿ ನೇತೃತ್ವದಲ್ಲಿ ಅದೇ ದಿನ ಸಂಜೆ ವೇಳೆಗೆ ಗಿರಿಧರ್ ಹಾಗೂ ಮೋಹನ್ ಜೊತೆ ಕೆಲ ವಿರೋಧಿಗಳ ಹಿಟ್ ಲಿಸ್ಟ್ ರೆಡಿ ಮಾಡುತ್ತಾರೆ.
ಆದ್ರೆ ಅದು ಫೈನಲ್ ಆಗಿರುವುದಿಲ್ಲ. ಮರುದಿನ ಜು.28 ರಂದು ಮುಂಜಾನೆ 5:30 ಗಂಟೆಗೆ ಸುಹಾಸ್ ಬಾಡಿಗೆ ಕಾರು ಸಹಿತ ಮೂರು ತಲ್ವಾರ್ ಹಾಗೂ ಡ್ರ್ಯಾಗರ್ ಜೊತೆ ಬಂಟ್ವಾಳದ ಕಾರಿಂಜೇಶ್ವರ ದೇವಸ್ಥಾನಕ್ಕೆ ಹೋಗಿ ಬರುತ್ತಾನೆ.
ಕೊಲೆ ನಡೆದ ಸ್ಥಳ
ಅಂದು ಸುಹಾಸ್ ಶೆಟ್ಟಿ ಸಹಿತ ಹಲವರಿಗೆ ಹಿಂದಿನ ಪ್ರಕರಣದ ಕೋರ್ಟ್ ವಿಚಾರಣೆ ಇದ್ದುದರಿಂದ ಕೋರ್ಟ್ ಆವರಣದ ಬಳಿ ಸೇರಿಕೊಂಡು ಅಲ್ಲಿಯೇ ಫಾಝಿಲ್ ಹೆಸರು ಫೈನಲ್ ಮಾಡಿಕೊಳ್ಳುತ್ತಾರೆ. 3-4 ಮಂಕಿ ಕ್ಯಾಪ್ ರೆಡಿಮಾಡಿಕೊಂಡು ಫಾಝಿಲ್ ನನ್ನು ಹಿಂಬಾಲಿಸುತ್ತಾರೆ.
ಸುರತ್ಕಲ್ ಪೇಟೆಯ ಅಂಗಡಿಯೊಂದರ ಎದುರು ಇದ್ದ ಬಗ್ಗೆ ಖಚಿತಪಡಿಸಿಕೊಂಡ ಆರೋಪಿಗಳು ಅಲ್ಲೇ ಎರಡು ಸುತ್ತು ಕಾರಿನಲ್ಲಿ ಸುತ್ತಾಡುತ್ತಾರೆ.
ಬಂಧಿತ ಆರೋಪಿಗಳು
ಮೂರು ಜನರಿಂದ ಕೃತ್ಯ
ಅದೇ ದಿನ ಸಂಜೆ 7 ಗಂಟೆಗೆ ಸುರತ್ಕಲ್ ನ ಅಂಗಡಿ ಎದುರು ಬಟ್ಟೆ ಹಾಗೂ ಚಪ್ಪಲ್ ಖರೀದಿಗೆ ಬಂದು ನಿಂತಿದ್ದ ಫಾಝಿಲ್ ನನ್ನು ಮುಗಿಸಲು ಸುಹಾಸ್, ಮೋಹನ್, ಅಭಿಷೇಕ್ ಮಾರಾಕಾಯುಧಗಳೊಂದಿಗೆ ಕಾರಿನಿಂದ ಕೆಳಗಿಳಿಯುತ್ತಾರೆ.
ಗಿರಿಧರ್ ಕಾರು ಡ್ರೈವ್ ಮಾಡಿಕೊಂಡಿರುತ್ತಾನೆ. ಮತ್ತೋರ್ವ ಆರೋಪಿ ಶ್ರೀನಿವಾಸ ಸಹ ಕಾರಿನಿಂದ ಕೆಳಗಿಳಿದಿರುತ್ತಾನೆ. ದೀಕ್ಷಿತ್ ಮಾತ್ರ ಕಾರಿನಲ್ಲೇ ಕುಳಿತುಕೊಂಡಿರುತ್ತಾನೆ.
ಕೊಲೆಯಾದ ಫಾಝಿಲ್
ಫಾಝಿಲ್ ನನ್ನು ಆರೋಪಿಗಳ ಗುಂಪು ಜನನಿಬಿಡ ಅಂಗಡಿಗಳು- ಸಾರ್ವಜನಿಕರ ಎದುರೇ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಯದ್ವಾತದ್ವಾ ತಿವಿದು ನೆಲಕ್ಕೆ ಉರುಳಿಸಿದ ತಕ್ಷಣ ಬಂದ ಕಾರಿನಲ್ಲೇ ಪಾಲಿಮಾರ್ ಮೂಲಕ ಕಾರ್ಕಳ ಇನ್ನಾ ಬಳಿ ಎಸ್ಕೇಪ್ ಆಗ್ತಾರೆ.
ಅಲ್ಲಿ ನಿರ್ಜನ ಪ್ರದೇಶದಲ್ಲಿ ಕಾರನ್ನು ಬಿಟ್ಟು ಆರೋಪಿ ಶ್ರೀನಿವಾಸ ಎಂಬಾತ ಸ್ನೇಹಿತನ ಮತ್ತೊಂದು ಕಾರಿನಲ್ಲಿ ಆರೋಪಿಗಳೆಲ್ಲರೂ ಮೂಡುಬಿದಿರೆ, ಕಾರ್ಕಳ ಮೂಲಕ ತೆರಳುತ್ತಾರೆ. (ಜು.2) ಇಂದು ಬೆಳಗ್ಗೆ 2 ಗಂಟೆ ಸುಮಾರಿಗೆ ಆರೋಪಿಗಳು ಉದ್ಯಾವರದಲ್ಲಿರುವ ಖಚಿತ ಮಾಹಿತಿ ಪೊಲೀಸರಿಗೆ ದೊರಕಿದಾಗ ಸಿಸಿಬಿ ಪೊಲೀಸರ ಸಹಿತ ಮಂಗಳೂರು ಉತ್ತರ ಪೊಲೀಸರು ತೆರಳಿ ಕಾರ್ಯಾಚರಣೆ ನಡೆಸಿ ಎಲ್ಲಾ ಆರೋಪಿಗಳನ್ನು ಬಂಧಿಸುತ್ತಾರೆ.
ಪ್ರೇಮ ಪ್ರಕರಣಕ್ಕೆ ಕೊಲೆಯಾಗಿಲ್ಲ
ಫಾಝಿಲ್ ಕೊಲೆ ಸಂದರ್ಭ ಇದೊಂದು ಪ್ರೇಮ ಪ್ರಕರಣ, ಒಳಪಂಗಡಗಳ ನಡುವಿನ ಹೊಡೆದಾಟ ಎಂಬ ರೀತಿಯ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದುವು. ಆದರೆ ಅದ್ಯಾವುದೂ ಈ ಕೊಲೆಗೆ ಕಾರಣವಲ್ಲ ಎಂದು ಮಂಗಳೂರು ಪೊಲೀಸ್ ಕಮೀಷನರ್ ಸ್ಪಷ್ಟಪಡಿಸಿದ್ದಾರೆ.
ವಾಹನ ಮಾಲಕ ಅಜಿತ್ ಕ್ರಾಸ್ತಾ
ಕೃತ್ಯ ಗೊತ್ತಿದ್ದರೂ ಹಣದ ಆಸೆಗೆ ಕಾರು ಕೊಟ್ಟ ಅಜಿತ್ ಕ್ರಾಸ್ತಾ
ಕಾರಿನ ಮಾಲೀಕ ಅಜಿತ್ ಬಳಿ ಹಲವು ಕಾರುಗಳಿವೆ. ಅದನ್ನು ಆತ ದಿನ ಹಣ ದರದಲ್ಲಿ ಬಾಡಿಗೆ ಕೊಡುತ್ತಿದ್ದನು. ಒಂದು ದಿನಕ್ಕೆ 1200-1300 ರೂಪಾಯಿಗಳಿಗೆ ಬಾಡಿಗೆಗೆ ಕೊಡುತ್ತಿದ್ದನು.
ಆರೋಪಿ ಮೋಹನ್ಗೆ ಅಜಿತ್ ಮೊದಲೇ ಪರಿಚಯ ಇದ್ದುದರಿಂದ ಸುರತ್ಕಲ್ನ ಕಾನ ಬಳಿ ತೆರಳಿ ಅಜಿತ್ ಬಳಿ ಮೂರು ದಿನಕ್ಕೆ ಕಾರು ಬೇಕೆಂದು ಕೇಳಿ 15 ಸಾವಿರಕ್ಕೆ ಡೀಲ್ ನಡೆದು 1,500 ರೂಪಾಯಿ ಅಡ್ವಾನ್ಸ್ ಕೊಟ್ಟು ಕಾರನ್ನು ತಂದು ಸುಹಾಸ್ ಶೆಟ್ಟಿ ಕೈಗೆ ಕೊಡುತ್ತಾನೆ.
ಕೊಲೆಗೆ ಬಳಸಿದ ಕಾರು
ಆದ್ರೆ ಆರೋಪಿಗಳು ನಡೆಸಲು ಉದ್ದೇಶಿಸಿದ್ದ ಕೃತ್ಯದ ಬಗ್ಗೆ ಕಾರು ಮಾಲಿಕ ಅಜಿತ್ ಕ್ರಾಸ್ತಾಗೆ ಮೊದಲೇ ತಿಳಿದಿದ್ದರೂ ಆತನ ತನ್ನ ಕಾರಿನ ಚಹರೆ ತಿಳಿಯಬಾರದು ಎಂದು ಸಲಹೆಯನ್ನೂ ನೀಡುತ್ತಾನೆ.
ಎಲ್ಲಾ ಘಟನೆ ನಡೆದ ಬಳಿಕ ಕಾರ್ಕಳದಲ್ಲಿ ಸಿಕ್ಕ ಕಾರಿನ ಬಗ್ಗೆ ಪರಿಶೀಲಿಸಿದಾಗ ಈ ಕಾರು ಅಜಿತ್ ಪತ್ನಿ ಹೆಸರಿನಲ್ಲಿ ನೋಂದಣಿಯಾಗಿದ್ದು ತಿಳಿದು ಬಂದಿತ್ತು. ಇದೇ ಕಾರು ಎಲ್ಲಾ ಆರೋಪಿಗಳನ್ನು ಪೊಲೀಸರ ಖೆಡ್ಡಾಕ್ಕೆ ಕೆಡವಲು ಸಹಕಾರಿಯಾಯಿತು.
ಬಂಧಿತ ಮೂವರು ರೌಡಿಶೀಟರ್ಸ್
ಫಾಝಿಲ್ ಕೊಲೆಯಲ್ಲಿ ಬಂಧಿತ ಆರು ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದರು. ಸುಹಾಸ್ ಶೆಟ್ಟಿ ವಿರುದ್ಧ ಬಜಪೆಯಲ್ಲಿ ಕೊಲೆ ಸೇರಿ ಮೂರು ಪ್ರಕರಣ ಹಾಗೂ ಬೆಳ್ತಂಗಡಿಯಲ್ಲಿ ಒಂದು ಪ್ರಕರಣ, ಮೋಹನ್ ವಿರುದ್ಧ ಸುರತ್ಕಲ್ ಹಾಗೂ ಕಾವೂರಿನಲ್ಲಿ ತಲಾ ಒಂದು ಪ್ರಕರಣ,
ಗಿರಿಧರ್ ಹಾಗೂ ಅಭಿಷೇಕ್ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಎರಡು ಪ್ರಕರಣ, ಶ್ರೀನಿವಾಸ ವಿರುದ್ಧ ಉರ್ವ ಠಾಣೆಯಲ್ಲಿ ಒಂದು, ಸುರತ್ಕಲ್ ಠಾಣೆಯಲ್ಲಿ 3 ಸೇರಿ ಒಟ್ಟು 4 ಪ್ರಕರಣ ದಾಖಲಾಗಿದೆ.
ದೀಕ್ಷಿತ್ ವಿರುದ್ಧ ಕಾವೂರು ಠಾಣೆ, ಕದ್ರಿ ಠಾಣೆ, ಸುರತ್ಕಲ್ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
BELTHANGADY
ಸೈಕಲ್ ರಿಪೇರಿ ವಿಚಾರಕ್ಕೆ ಜೀ*ವಾಂತ್ಯಗೊಳಿಸಿದ ಬಾಲಕ..!
ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕೆ 8 ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಎಂಬಲ್ಲಿ ಏ.19ರಂದು ನಡೆದಿದೆ. ಉಪ್ಪಿನಂಗಡಿಯ ಖಾಸಗಿ ಶಾಲೆಯ ಮುಂದಿನ ಅವಧಿಯಲ್ಲಿ 8 ನೇ ತರಗತಿ ವಿದ್ಯಾರ್ಥಿಯಾಗಿದ್ದ ನಂದನ್ (13) ಎಂಬಾತ ಆತ್ಮಹತ್ಯೆಗೆ ಶರಣಾದ ಬಾಲಕ.
Read More..; ನಗರ ಸಭೆ ಉಪಾಧ್ಯಕ್ಷೆ ಮಗ ಸೇರಿ ನಾಲ್ವರ ಹ*ತ್ಯೆ! ಹಂ*ತಕರ ಪತ್ತೆಗೆ ವಿಶೇಷ ತಂಡ ರಚನೆ
ಪಂಜದ ದಿವಂಗತ ರೋಹಿತ್ ಗೌಡ ಎಂಬವರ ಮಗನಾಗಿದ್ದ ಈತ ತನ್ನ ತಂದೆಯ ನಿಧನದ ನಂತರ ದುಗಲಾಡಿಯ ಮಾವನ ಮನೆಯಲ್ಲಿದ್ದ. ಅಲ್ಲಿಂದಲೆ ಉಪ್ಪಿನಂಗಡಿಯ ಖಾಸಗಿ ಶಾಲೆಗೆ ಹೋಗುತ್ತಿದ್ದ. ಈತ ಈ ಬಾರಿ ಏಳನೇ ತರಗತಿ ಉತ್ತೀರ್ಣನಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ 8 ನೇ ತರಗತಿಗೆ ತೇರ್ಗಡೆ ಹೊಂದಿದ್ದ. ಏ.19ರಂದು ತನ್ನ ಕೆಟ್ಟು ಹೋಗಿದ್ದ ಸೈಕಲ್ ಅನ್ನು ರಿಪೇರಿ ಮಾಡಿಕೊಡಬೇಕೆಂದು ಮನೆಯಲ್ಲಿ ಒತ್ತಾಯಿಸಿದ್ದ. ಮನೆಯ ಇನ್ವಾರ್ಟರ್ ರಿಪೇರಿಗೆ ಬಂದಿರುವುದರಿಂದ ಇವತ್ತು ಬೇಡ ನಾಳೆ ಸೈಕಲ್ ರಿಪೇರಿ ಮಾಡಿಕೊಡಲಾಗುವುದೆಂದು ಮನೆಯವರು ಹೇಳಿದ್ದಾರೆ ಎನ್ನಲಾಗಿದೆ. ಇದೇ ನೆಪವನ್ನು ಇಟ್ಟುಕೊಂಡು ಮನನೊಂದ ಬಾಲಕ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಎಲ್ಲಾ ವಿಚಾರವನ್ನು ಮನೆಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
DAKSHINA KANNADA
ತ್ರಿಶೂರ್ ಪೂರಂ..! ದೇಶದ ಹೆಮ್ಮೆಯ ಉತ್ಸವ..!
ವಿವಿಧತೆಯಲ್ಲಿ ಏಕತೆ ಕಾಣುವ ನಮ್ಮ ದೇಶ ಹಲವು ಸಂಸ್ಕೃತಿ, ಕಲೆ, ಆಚರಣೆ, ಭಾಷೆ, ಜಾತಿ, ಧರ್ಮದ ಮೂಲಕ ವಿಶ್ವದ ಗಮನ ಸೆಳೆದಿದೆ. ದಿಪಾವಳಿ, ಹೋಳಿ, ಈದ್ , ಕ್ರಿಸ್ಮಸ್, ಹೀಗೆ ಹಲವು ಹಬ್ಬಗಳು ರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಆದ್ರೆ, ಇನ್ನೂ ಕೆಲವು ಹಬ್ಬಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿದೆ. ಅದರಲ್ಲಿ ವಿಶೇಷ ಹಬ್ಬವಾಗಿ ಕೇರಳದಲ್ಲಿ ಆಚರಿಸುವ ತ್ರಿಶೂರ್ ಪೂರಂ ಸದ್ಯ ಏಷ್ಯಾದಲ್ಲೇ ಅತೀ ಹೆಚ್ಚು ಜನರು ಭಾಗವಹಿಸುವ ಉತ್ಸವವಾಗಿ ಜಗತ್ಪ್ರಸಿದ್ದಿಯನ್ನು ಪಡೆದುಕೊಂಡಿದೆ.
ಏನಿದು ತ್ರಿಶೂರ್ ಪೂರಂ ಹಬ್ಬ
ತ್ರಿಶೂರ್ ಪೂರಂ ಅನ್ನೋದು ತ್ರಿಶೂರಿನ ಶಿವ ದೇವಾಲಯದಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವ. ಮಲೆಯಾಳಂ ಕ್ಯಾಲೆಂಡರ್ ಪ್ರಕಾರ ಪೂರಂ ನಕ್ಷತ್ರದಲ್ಲಿ ಚಂದ್ರೋದಯದ ವೇಳೆಯಲ್ಲಿ ನಡೆಯುವ ಉತ್ಸವ ಇದು. ತ್ರಿಶೂರ್ ನಲ್ಲಿರೋ ವಡಕ್ಕುನಾಥನ್ ಅರ್ಥಾತ್ ಶಿವ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರೆ ಇದು. ಆನೆಗಳ ಮೂಲಕ ದೇವರನ್ನು ಹೊತ್ತುಕೊಂಡು ದೇವಸ್ಥಾನದ ಬಾಗಿಲು ಪ್ರವೇಶ ಮಾಡೋದು ಈ ಉತ್ಸವದ ವಿಶೇಷ. ಹೀಗಾಗಿ ಸಾವಿರಾರು ವಿದೇಶಿಗರು ಉತ್ಸವ ನೋಡಲು ಆಗಮಿಸ್ತಾರೆ ಅನ್ನೋದೇ ವಿಶೇಷ.
ತ್ರಿಶೂರ್ ಪೂರಂ ಹಬ್ಬದ ಹಿನ್ನೆಲೆ
ರಾಮವರ್ಮ ಕುಂಞಿಪಿಳ್ಳೆ ಎಂಬ ಕೊಚ್ಚಿನ್ ಮಹಾರಾಜ 17 ನೇ ಶತಮಾನದಲ್ಲಿ ಅರುಟ್ಟುಪುಳ ಪೂರಂ ಎಂಬ ಉತ್ಸವವನ್ನು ನಡೆಸಿಕೊಂಡು ಬಂದಿದ್ದರು. ಅರುಟ್ಟುಪುಳ ಪೂರಂ ಎಂಬ ಒಂದು ದಿನದ ಉತ್ಸವಕ್ಕೆ ತ್ರಿಶೂರು ಸೇರಿದಂತೆ ಸುತ್ತಮುತ್ತಲಿನ ದೇವಸ್ತಾನಗಳು ಇದರಲ್ಲಿ ಭಾಗಿ ಆಗುತ್ತಿದ್ದವು. 1796 ರಲ್ಲಿ ಮಳೆಯ ಕಾರಣಿದಿಂದ ತ್ರಿಶೂರ್ನಿಂದ ಹೊರಟಿದ್ದ ದೇವಾಲಯ ತಂಡಗಳಿಗೆ ಅರುಟ್ಟುಪುಳ ಪೂರಂ ಉತ್ಸವದಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಲಾಗಿತ್ತು. ಇದರಿಂದ ಕೋಪಗೊಂಡಿದ್ದ ತ್ರಿಶೂರಿನ ರಾಜ ಶಕ್ತನ್ 1796 ರಲ್ಲೇ ತ್ರಿಶೂರಿನಲ್ಲೇ ಈ ಪೂರಂ ಉತ್ಸವ ಆರಂಭಿಸಿದ್ರು ಅನ್ನೋ ಐತಿಹಾಸಿಕ ಕಥೆ ಇದೆ. ಅಂದಿನಿಂದ ತ್ರಿಶೂರಿನ ಹತ್ತು ದೇವಾಲಯಗಳು ಒಟ್ಟಾಗಿ ತ್ರಿಶೂರ್ ಪೂರಂ ಆಚರಿಸಲು ಆರಂಭವಾಯ್ತು ಅನ್ನೋ ದಾಖಲೆಗಳು ಸಿಗುತ್ತದೆ.
ಧರ್ಮಾತೀತವಾಗಿ ನಡೆಯುವ ಪೂರಂ ಉತ್ಸವ
ತ್ರಿಶೂರ್ ಪೂರಂ ಅಂದ ತಕ್ಷಣ ನೆನಪಾಗುವುದು ಅಲ್ಲಿ ಕಾಣಸಿಗುವ ಸರ್ವಧರ್ಮ ಸಮನ್ವಯತೆ. ಇಂತಹ ದೃಶ್ಯ ಬಹುಶಃ ದೇಶದ ಬೇರೆಲ್ಲೂ ಕಾಣಲು ಸಿಗಲಾರದು. ತ್ರಿಶೂರ್ ಪೂರಂ ಉತ್ಸವದಲ್ಲಿ ಪ್ರತಿ ವರ್ಷ ಹೊಸ ಕೊಡೆಗಳನ್ನು ತಯಾರಿಸಲಾಗುತ್ತದೆ. ಕುಡವಟ್ಟಂ ಎಂದು ಕರೆಯುವ ಈ ಕೊಡೆಗಳ ವಿಶೇಷ ಆಕರ್ಷಣೆಗೆ ಕ್ರೈಸ್ತ ಸಮೂದಾಯದವರ ಕೊಡುಗೆ ಇದ್ರೆ, ಪೂರಂಗೆ ಬೇಕಾದ ಪೆಂಡಾಲ್ ಹಾಕೋದು ಇಲ್ಲಿನ ಮುಸ್ಲಿಂ ಸಮೂದಾಯದವರು. ಇನ್ನು ಉತ್ಸವ ನೋಡಲು ಹಿಂದೂ ಮುಸ್ಲಿಂ ಕ್ರೈಸ್ತ ಹೀಗೆ ಎಲ್ಲಾ ಧರ್ಮದವರೂ ಆಗಮಿಸುವುದು ಇಲ್ಲಿನ ವಿಶೇಷ. ಇದೇ ಕಾರಣಕ್ಕೆ ಈ ತ್ರಿಶೂರ್ ಪೂರಂ ಇಂದು ಜಗತ್ಪ್ರಸಿದ್ಧಿಯನ್ನು ಪಡೆದುಕೊಂಡಿದೆ.
ತ್ರಿಶೂರ್ ಪೂರಂ ಹಬ್ಬ ಹೇಗೆ ನಡೆಯುತ್ತದೆ
ತ್ರಿಶೂರು ಹಾಗೂ ಸುತ್ತಮುತ್ತಲಿನ ಹತ್ತು ದೇವಲಾಯಗಳಿಂದ ಆನೆಯ ಮೂಲಕ ದೇವರನ್ನು ಹೊತ್ತು ಶಿವ ದೇವಾಲಯಕ್ಕೆ ತರಲಾಗುತ್ತದೆ. ಒಂದೊಂದು ದೇವಸ್ಥಾನದಿಂದ ದೇವರನ್ನು ಹೊತ್ತು ಬಾಗಿಲು ದಾಟಿ ಬರುವ ಆನೆಗಳನ್ನು ನೋಡಲು ಸಾವಿರಾರು ಭಕ್ತರು ಕಾತರದಿಂದ ಕಾಯುತ್ತಿರುತ್ತಾರೆ. ಈ ವೇಳೆ ಮೊಳಗುವ ಪಂಚ ವಾದ್ಯಗಳನ್ನು ಕೇಳಲೆಂದೇ ಕೆಲವರು ಬರುವುದಿದೆ. ಕಣಿಮಂಗಲಂ ಶಾಸ್ತಾವು ದೇವಾಲಯದಿಂದ ಆರಂಭವಾಗುವ ಈ ಉತ್ಸವ ಬಳಿಕ ಒಂದೊಂದೆ ದೇವಸ್ಥಾನದಿಂದ ಬರಲು ಆರಂಭವಾಗುತ್ತದೆ. ಚಂಡೆ, ಮದ್ದಳೆ, ಕಹಳೆ,ತಾಳ ಹಾಗೂ ಎಡಕ್ಕ ಹೀಗೆ ಪಂಚವಾದ್ಯದ ಮೆರವಣಿಗೆ ನಡೆಯುತ್ತದೆ. ಹತ್ತು ಆನೆಗಳು ದೇವಾಲಯದ ಮುಂದೆ ನಿಂತಿದ್ದರೆ , ಐವತ್ತಕ್ಕೂ ಹೆಚ್ಚು ಆನೆಗಳು ಉತ್ಸವದಲ್ಲಿ ಭಾಗಿಯಾಗುತ್ತದೆ. ಚಿನ್ನದ ಹಣೆಪಟ್ಟಿ, ಚಿನ್ನದ ಪ್ರಭಾವಳಿಯನ್ನು ಹಿಡಿದು , ಪಾರೆಮೆಕ್ಕಾವು ಮತ್ತು ತಿರುವಂಬಾಡಿ ಎಂಬ ಎರಡು ತಂಡಗಳು ಪೂರಂ ನಡೆಯುವ ಸ್ಥಳದಲ್ಲಿ ಮುಖಾಮುಖಿಯಾಗಿ ನಿಂತು ಛತ್ರಿ ವಿನಿಯಮ ಮಾಡಿಕೊಳ್ಳುವ ದೃಶ್ಯ ಪೂರಂನಲ್ಲಿ ವಿಶೇಷ ಅನುಭವ ನೀಡುವ ದೃಶ್ಯ ಕೂಡಾ ಹೌದು. ಕುಡಮಟ್ಟಂ ಅಂತ ಇದನ್ನು ಕರೆಯಲಾಗುತ್ತಿದ್ದು ಶಿವದೇವಲಾಯದ ಪಶ್ಚಿಮ ಗೋಪುರದ ಬಳಿ ಇದು ಸಂಪನ್ನಗೊಳ್ಳುತ್ತದೆ.
DAKSHINA KANNADA
MANGALURU : ಪೆಟ್ರೋಲ್ ಬಂಕ್ ಸಿಬ್ಬಂದಿ ಎಡವಟ್ಟು; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿ ಅನಾಹುತ
ಮಂಗಳೂರು : ಪೆಟ್ರೋಲ್ ಬಂಕ್ ಸಿಬ್ಬಂದಿ ಎಡವಟ್ಟಿನಿಂದ ಕಾರಿಗೆ ಪೆಟ್ರೋಲ್ ತುಂಬಿಸುವ ಬದಲು ಡೀಸೆಲ್ ತುಂಬಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪರಿಣಾಮ ಕಾರು ಇಂಜಿನ್ ಸಂಪೂರ್ಣ ಹಾಳಾಗಿ ಲಕ್ಷಾಂತರ ರೂ.ನಷ್ಟವಾಗಿದೆ ಎಂದು ಕಾರು ಮಾಲಕ ಆರೋಪಿಸಿದ್ದಾರೆ.
ಹೊಟೇಲ್ ಉದ್ಯಮಿ ಜೀವನ್ ಶೆಟ್ಟಿ ಎಂಬವರು ತಮ್ಮ ಹುಂಡೈ ಐ 10 ಗ್ರ್ಯಾಂಡ್ ಕಾರ್ ಗೆ ಪೆಟ್ರೋಲ್ ತುಂಬಿಸುವ ಸಲುವಾಗಿ, ಎಪ್ರಿಲ್ 5 ರಂದು ಮಧ್ಯಾಹ್ನ 12 ರ ಸುಮಾರಿಗೆ ಬಲ್ಮಠದ ಜ್ಯೂಸ್ ಜಂಕ್ಷನ್ ಮುಂಭಾಗದ ಹೆಚ್ ಪಿ ಪೆಟ್ರೋಲ್ ಬಂಕ್ ಗೆ ಬಂದಿದ್ದರು. ಕ್ಯಾಪ್ ಮೇಲೆ ಪೆಟ್ರೋಲ್ ಎಂದು ಬರೆದಿದ್ದರೂ, ಸಿಬ್ಬಂದಿ ಮಾತ್ರ ಕಾರಿಗೆ ಡೀಸೆಲ್ ತುಂಬಿಸಿದ್ದಾರೆ.
ಪರಿಣಾಮ ಕಾರು ಕೆಲವೇ ಕಿಲೋ ಮೀಟರ್ ಸಂಚರಿಸಿ ಮುಂದಕ್ಕೆ ಹೋಗದೆ ನಿಂತಿದೆ. ಪರಿಶೀಲಿಸಿದಾಗ ಬಂಕ್ ಸಿಬ್ಬಂದಿ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಪೆಟ್ರೋಲ್ ಬಂಕ್ ಮ್ಯಾನೇಜರ್ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾರು ಇಂಜಿನ್ ದುರಸ್ಥಿಗೆ 2 ಲಕ್ಷಕ್ಕೂ ಅಧಿಕ ಖರ್ಚು ಆಗಲಿದೆ. ಆದರೆ, ಪೆಟ್ರೋಲ್ ಬಂಕ್ ಮಾಲಕ ಬರೀ 30 ಸಾವಿರ ಕೊಟ್ಟು ಸುಮ್ಮನಾಗಿದ್ದಾರೆ ಎಂದು ಜೀವನ್ ಶೆಟ್ಟಿ ದೂರಿದ್ದಾರೆ. ಕಡಿಮೆ ಸಂಬಳಕ್ಕೆ ಅನುಭವವಿಲ್ಲದ ಕಾರ್ಮಿಕರನ್ನು ನೇಮಿಸುತ್ತಾರೆ. ಇಂತಹ ಸಮಸ್ಯೆಯಾದಾಗ ತಮ್ಮ ಇನ್ಶೂರೆನ್ಸ್ ನಲ್ಲಿ ಪರಿಹಾರ ನೀಡುವ ಅವಕಾಶವಿದ್ದರೂ ಬಂಕ್ ಮಾಲಕರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ತಾನು ಪರಿಹಾರಕ್ಕಾಗಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗುವುದಾಗಿ ಜೀವನ್ ಶೆಟ್ಟಿ ಹೇಳಿದ್ದಾರೆ.