ಲಾಕ್ ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಡಿವೈಎಫ್ಐ ಒತ್ತಾಯ
ಉಳ್ಳಾಲ: ಕೊರೊನಾ ಸಂಕಷ್ಟದ ಲಾಕ್ಡೌನ್ ಅವಧಿಯು ಜನಸಾಮಾನ್ಯರನ್ನೆಲ್ಲಾ ಕಷ್ಟದ ಕೂಪಕ್ಕೆ ತಳ್ಳಿದೆ.
ತಮ್ಮ ದೈನಂದಿನ ಖರ್ಚಿಗಾಗಿ ದಿನದ ದುಡಿಮೆಯಲ್ಲೇ ಜೀವನ ಸಾಗಿಸುತ್ತಿದ್ದ ಕುಟುಂಬಗಳು ಇಂದು ಒಂದೊತ್ತಿನ ಊಟಕ್ಕಾಗಿ ಕೈಚಾಚುವ ಸ್ಥಿತಿ ನಿರ್ಮಾಣಗೊಂಡಿದೆ.
ಇಂತಹ ಸಂಕಷ್ಟದ ಈ ಸಂದರ್ಭದಲ್ಲಿ ಲಾಕ್ ಡೌನ್ ಅವಧಿಯ ಮೂರು ತಿಂಗಳುಗಳ ಕಾಲದ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ
ಹಾಗೂ ಮೂಡಬಿದಿರೆ ವಲಯ ವತಿಯಿಂದ ಇಂದು ತೊಕ್ಕೊಟ್ಟು ಚಂಬುಗುಡ್ಡೆಯಲ್ಲಿರುವ ಮೆಸ್ಕಾಂ ಕಚೇರಿಯಲ್ಲಿ ಆಯುಕ್ತರನ್ನು ಹಾಗೂ
ಮೂಡಬಿದಿರೆಯ ಮೆಸ್ಕಾಂ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಭಿಯಂತರರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಈ ಕೊರೊನಾ ಕಷ್ಟ ಕಾಲದಲ್ಲಿ ಮೆಸ್ಕಾಂ ಸಂಸ್ಥೆ ಜನಸಾಮಾನ್ಯರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ.
ಜೀವನ ನಡೆಸುವ ಹೋರಾಟದಲ್ಲಿರುವ ಜನರ ಜೊತೆ ನಿಲ್ಲಬೇಕಾಗಿದೆ. ಮೆಸ್ಕಾಂ ಈವರೆಗೆ ಜಿಲ್ಲೆಯಲ್ಲಿ ಲಾಭದಾಯಕವಾಗಿ ಮುನ್ನಡೆದಿದೆ.
ವಿದ್ಯುತ್ ಅನ್ನೋದು ಸೇವಾಕ್ಷೇತ್ರ ಈ ಸಂದರ್ಭದಲ್ಲಾದರೂ ಮೆಸ್ಕಾಂ ಸೇವಾ ಮನೋಭಾವನೆಯಿಂದ ವರ್ತಿಸಬೇಕಾಗಿದೆ.
ಮೆಸ್ಕಾಂ ಸಂಸ್ಥೆಯು ಜನಸಾಮಾನ್ಯರ ಮೂರು ತಿಂಗಳ ವಿದ್ಯುತ್ ದರ ಮನ್ನಾ ಮಾಡಬೇಕು.
ಹಾಗೂ ಆರು ತಿಂಗಳವರೆಗೆ ಬಿಲ್ಲು ಪಾವತಿಸಲು ಬಲವಂತ ಪಡಿಸದೆ, ಸಮಯಾವಕಾಶ ನೀಡಬೇಕೆಂದು ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಹಾಗೂ ಮೂಡಬಿದ್ರೆಯಲ್ಲಿ ಅಧಿಕಾರಿಗಳನ್ನು ಒತ್ತಾಯಿಸಲಾಯಿತು.
ನಿಯೋಗದಲ್ಲಿ ಡಿವೈಎಫ್ಐ ಉಳ್ಳಾಲ ವಲಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ಕಾರ್ಯದರ್ಶಿ ಸುನಿಲ್ ತೇವುಲ, ಜಿಲ್ಲಾ ನಾಯಕ ನಿತಿನ್ ಕುತ್ತಾರ್, ವಲಯ ಉಪಾಧ್ಯಕ್ಷ ರಝಾಕ್ ಮೊಂಟೆಪದವು, ಸಹ ಕಾರ್ಯದರ್ಶಿ ಅಷ್ಫಾಕ್ ಅಳೇಕಲ ಉಪಸ್ಥಿತರಿದ್ದರು.
ಇನ್ನು ಮೂಡಬಿದ್ರೆಯಲ್ಲಿ DYFI ಮೂಡಬಿದ್ರೆ ವಲಯ ಕಾರ್ಯದರ್ಶಿ ರಿಯಾಝ್ ಮಾಂತೂರು, ರಿಝ್ವಾನ್, ಇರ್ಷಾದ್ ಮಾಂತೂರು, ಜಾವಿದ್ ಹುಸೇನ್, ಅಬ್ಬು ಕಾಯರ್ ಗುಂಡಿ, ನಿಝಾಮು ವಿಶಾಲ್ ನಗರ ಉಪಸ್ಥಿತರಿದ್ದರು.