ಮಂಗಳೂರು: ದ.ಕ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಾಗುತ್ತಿದೆ ಎಂಬ ಭೀತಿ ಬೇಡ. ಜಿಲ್ಲೆಯ ಕೊರೊನಾದ ಬಗ್ಗೆ ಆತಂಕ ಬಿಡಿ ಸಹಕಾರ ನೀಡಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಕು ಹೆಚ್ಚಾಗುತ್ತಿರುವ ಆತಂಕ ವ್ಯಕ್ತಪಡಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಜೂನ್ 10ಕ್ಕಿಂತ ಮೊದಲು ಪಾಸಿಟಿವಿಟಿ ರೇಟ್ ಶೇ. 18 ಇದ್ದು, ಈಗ ಅದು ಶೇ. 8.5ಕ್ಕೆ ಇಳಿದಿದೆ.
ಮೊದಲು ಪ್ರತಿದಿನ 2500-3500 ಮಂದಿಗೆ ಮಾತ್ರ ಸೋಂಕು ತಪಾಸಣೆ ಮಾಡಲಾಗುತ್ತಿತ್ತು. ನಿನ್ನೆ ದಾಖಲೆಯ 11 ಸಾವಿರ ಮಂದಿಗೆ ಸೋಂಕು ತಪಾಸಣೆ ಮಾಡಲಾಗಿದೆ. ಅಂದರೆ ನಾಲ್ಕು ದಿನಗಳ ಕಾಲ ನಡೆಯುವ ತಪಾಸಣೆ ಒಂದೇ ದಿನ ಮಾಡಲಾಗಿದೆ.
ಆದ್ದರಿಂದ ಸೋಂಕಿತರ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತಿರುವುದು ಸಹಜ ಎಂದ ಅವರು ಪಾಸಿಟಿವಿಟಿ ರೇಟ್ ಕಡಿಮೆ ಆಗುತ್ತಿರುವುದರಿಂದ ಯಾರೂ ಈ ಬಗ್ಗೆ ಭೀತಿಗೊಳಗಾಗುವ ಅವಶ್ಯಕತೆ ಇಲ್ಲ , ಕೊರೊನಾ ತಡೆಯಲು ಜನರ ಸಹಕಾರ ಬೇಕಿದೆ ಎಂದರು.
ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಕಠಿಣ ಲಾಕ್ಡೌನ್ ಜಾರಿಗೊಳಿಸುವ ಮಧ್ಯೆಯೇ ಮುಂದಿನ ದಿನಗಳಲ್ಲಿ ಅನ್ಲಾಕ್ ಮಾಡುವ ಚಿಂತನೆ ನಡೆಸಬೇಕಾಗಿದೆ.
ಆದ್ದರಿಂದ ಈ ಬಗ್ಗೆ ಇಂದು ಸಂಜೆ ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಲಾಗುತ್ತದೆ ಎಂದು ಹೇಳಿದರು.